Advertisement

ಗಾಂಧಿಗೆ ಅವಹೇಳನ: ಕ್ಷಮೆ ಕೋರಲು ಹೆಗಡೆಗೆ ಸೂಚನೆ

10:02 AM Feb 04, 2020 | sudhir |

ಸಂಸತ್‌ನಲ್ಲಿ ಪ್ರಧಾನಿ ಮೋದಿಯೇ ಹೇಳಿಕೆ ನೀಡಲಿ: ಕಾಂಗ್ರೆಸ್‌

Advertisement

ಬೆಂಗಳೂರು: ಮಹಾತ್ಮಾ ಗಾಂಧಿ ಕುರಿತು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಅನಂತ ಕುಮಾರ್‌ ಹೆಗಡೆ ಅವರು ನೀಡಿರುವ ಹೇಳಿಕೆಗಳಿಗೆ ಪಕ್ಷದ ವರಿಷ್ಠರು ಅತೃಪ್ತಿ ವ್ಯಕ್ತಪಡಿಸಿದ್ದಾರೆ. ವಿವಾದಿತ ಹೇಳಿಕೆ ನೀಡಿದ್ದಕ್ಕಾಗಿ ಕ್ಷಮೆ ಯಾಚಿಸುವಂತೆ ಅವರಿಗೆ ಸೂಚನೆ ನೀಡಲಾಗಿದೆ ಎಂದು ಬಿಜೆಪಿ ಮೂಲಗಳು ಸೋಮವಾರ ಹೊಸದಿಲ್ಲಿಯಲ್ಲಿ ಖಚಿತಪಡಿಸಿವೆ.

ಬಿಜೆಪಿಯ ಹಿರಿಯ ನಾಯಕರೊಬ್ಬರು ಪ್ರತಿಕ್ರಿಯೆ ನೀಡಿ ಅನಂತ ಕುಮಾರ್‌ ಹೆಗಡೆ ಹೇಳಿಕೆ ಖಂಡನೀಯ. ಮಹಾತ್ಮಾ ಗಾಂಧಿಯವರಿಗೆ ಮಾಡುವ ಯಾವುದೇ ರೀತಿಯ ಅವಮಾನವನ್ನು ಪಕ್ಷ ಒಪ್ಪುವುದಿಲ್ಲ ಎಂದಿದ್ದಾರೆ.

ಬೆಂಗಳೂರಿನಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಈ ಮಾತುಗಳನ್ನು ಹೇಳಿದ್ದಾರೆಂದು ಆರೋಪಿಸಲಾಗಿದೆ.

ಪ್ರಧಾನಿಯೇ ಹೇಳಿಕೆ ನೀಡಲಿ
ಕೇಂದ್ರದ ಮಾಜಿ ಸಚಿವರು ಹೇಳಿದ್ದಾರೆ ಎನ್ನಲಾಗಿರುವ ಮಾತುಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಸ್ಪಷ್ಟನೆ ನೀಡಬೇಕೆಂದು ಕಾಂಗ್ರೆಸ್‌ ನಾಯಕ ಆನಂದ ಶರ್ಮಾ ಆಗ್ರಹಿಸಿದ್ದಾರೆ. ಬಿಜೆಪಿ ನಾಯಕರು ರಾಷ್ಟ್ರೀಯ ಹೋರಾಟಕ್ಕೆ ಅವಮಾನ ಮಾಡುತ್ತಿದ್ದಾರೆ. ಮಹಾತ್ಮಾ ಗಾಂಧಿಯವರ 150ನೇ ಜನ್ಮ ವರ್ಷಾಚರಣೆ ಕಾರ್ಯಕ್ರಮಗಳನ್ನು ಅತ್ಯಂತ ಗಂಭೀರತೆಯಿಂದ ನಡೆಸುವುದೇ ಆಗಿದ್ದರೆ ಖುದ್ದಾಗಿ ಪ್ರಧಾನಿ ನರೇಂದ್ರ ಮೋದಿ ಅವರೇ ಸಂಸತ್‌ನಲ್ಲಿ ಹೆಗಡೆ ಮಾತುಗಳಿಗೆ ಸ್ಪಷ್ಟನೆ ನೀಡಲಿ ಎಂದು ಆಗ್ರಹಿಸಿದ್ದಾರೆ.

Advertisement

ಪ್ರಮಾಣ ಪತ್ರ ಬೇಕಾಗಿಲ್ಲ
ಇದೇ ವೇಳೆ ಮಹಾತ್ಮ ಗಾಂಧಿ ನೇತೃತ್ವದ ಸ್ವಾತಂತ್ರ್ಯ ಹೋರಾಟ “ನಾಟಕ’ ಎಂದು ಸಂಸದ ಅನಂತ ಕುಮಾರ್‌ ಹೆಗಡೆ ಹೇಳಿದ್ದಾರೆಂಬ ಮಾತುಗಳಿಗೆ ಕಾಂಗ್ರೆಸ್‌ ಖಂಡನೆ ವ್ಯಕ್ತಪಡಿಸಿದೆ. ರಾಷ್ಟ್ರಪಿತ ನಡೆಸಿರುವ ಹೋರಾಟಕ್ಕೆ ಬ್ರಿಟಿಷರ ಮನಃಸ್ಥಿತಿ ಹೊಂದಿದ ಚಮಚಾಗಳು ಮತ್ತು ಬೇಹುಗಾರರ ಪ್ರಮಾಣ ಪತ್ರ ಅಗತ್ಯವಿಲ್ಲ ಎಂದು ಕಾಂಗ್ರೆಸ್‌ ನಾಯಕ ಜೈವೀರ್‌ ಶೆರ್ಗಿಲ್‌ ಟ್ವೀಟ್‌ ಮಾಡಿದ್ದಾರೆ. ಜತೆಗೆ ನಳಿನ್‌ ವಿರುದ್ಧ ದೇಶದ್ರೋಹದ ಕೇಸು ದಾಖಲಿಸಬೇಕು ಎಂದು ಕಾಂಗ್ರೆಸ್‌ ಆಗ್ರಹಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next