Advertisement

BJP: ಅಬ್ಬಯ್ಯ ಮನೆಗೆ ಟಿಪ್ಪು ಹೆಸರಿಟ್ಟುಕೊಳ್ಳಲಿ- ಸಿ.ಟಿ. ರವಿ

11:52 PM Dec 17, 2023 | Team Udayavani |

ಚಿಕ್ಕಮಗಳೂರು: ಕಾಂಗ್ರೆಸ್‌ ಶಾಸಕ ಅಬ್ಬಯ್ಯ ಮನೆಗೆ ಅಥವಾ ಕಾಂಗ್ರೆಸ್‌ ಕಚೇರಿಗೆ ಟಿಪ್ಪು ಸುಲ್ತಾನ್‌ ಹೆಸರಿಟ್ಟುಕೊಳ್ಳಲಿ. ಆದರೆ ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್‌ ಹೆಸರಿಡಬೇಕು ಎಂದು ಮಾಜಿ ಸಚಿವ ಸಿ.ಟಿ. ರವಿ ಹೇಳಿದರು.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ವಿಧಾನಸಭೆಯಲ್ಲಿ ಕಾಂಗ್ರೆಸ್‌ ಶಾಸಕ ಅಬ್ಬಯ್ಯ ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್‌ ಹೆಸರಿಡಬೇಕೆಂದು ಪ್ರಸ್ತಾವಿಸಿದ್ದಾರೆ. ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಟ ಮಾಡಿರುವುದು ನಿಜ. ಅದೇ ರೀತಿ ಹಿಂದೂಗಳ ಮಾರಣಹೋಮ ಮಾಡಿದ್ದೂ ಸತ್ಯ. ಟಿಪ್ಪು ಮತ್ತು ಹೈದರಲಿ ಮೋಸದಿಂದ ಮೈಸೂರು ಅರಸರ ರಾಜತ್ವವನ್ನು ಕಬಳಿಸುವ ಹುನ್ನಾರ ಮಾಡಿದ್ದು ಸತ್ಯ. ಮೈಸೂರು ಸಾಮ್ರಾಜ್ಯಕ್ಕೆ ಕೊಡುಗೆ ನೀಡಿದ್ದು ನಾಲ್ವಡಿ ಕೃಷ್ಣರಾಜ ಒಡೆಯರ್‌. ಕೆಆರ್‌ಎಸ್‌ ಅಣೆಕಟ್ಟು, ಮೈಸೂರು ಬ್ಯಾಂಕ್‌, ಮೈಸೂರು ಮೈ ಶುಗರ್‌ ಕಂಪೆನಿ, ಮೈಸೂರು ಪೇಪರ್‌ ಮಿಲ್‌, ಮೈಸೂರು ಸಿಲ್ಕ್ ಕಾರ್ಖಾನೆ ಸ್ಥಾಪನೆ, ಮೈಸೂರು ವಿಶ್ವವಿದ್ಯಾಲಯದ ನಿರ್ಮಾಣದ ಕೀರ್ತಿ ನಾಲ್ವಡಿ ಕೃಷ್ಣರಾಜ ಒಡೆಯರ್‌ಗೆ ಸಲ್ಲುತ್ತದೆ. ಕೊಡವರ ಮಾರಣಹೋಮ, ದೇಗುಲಗಳನ್ನು ಮಸೀದಿಯಾಗಿಸಿದ್ದು, ಮೇಲುಕೋಟೆ ಅಯ್ಯಂಗಾರ್‌ ಮೇಲೆ ದೌರ್ಜನ್ಯ ನಡೆ ಸಿದ್ದು ಮುಂತಾದುವೆಲ್ಲ ಟಿಪ್ಪು ಮಾಡಿದ ಸಾಧನೆ. ದೌರ್ಜನ್ಯ ನಡೆಸಿದವರ ಹೆಸರನ್ನು ಯಾರೂ ಇಟ್ಟುಕೊಳ್ಳುವುದಿಲ್ಲ ಎಂದರು.

ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು³ ಹೆಸರಿಡಲು ಬಿಡುವುದಿಲ್ಲ. ಬೇಕಿದ್ದರೆ ಕಾಂಗ್ರೆಸ್‌ ಸಚಿವರು ತಮ್ಮ ಮನೆಗಳಿಗೆ ಟಿಪ್ಪು, ಔರಂಗಜೇಬ್‌ ಮಂಜಿಲ್‌ ಅಥವಾ ನಿವಾಸ ಎಂದು ಹೆಸರಿಟ್ಟುಕೊಳ್ಳಲಿ. ಕಾಂಗ್ರೆಸ್‌ನವರಿಗೆ ಸದಾ ಟಿಪ್ಪು, ಬಾಬರ್‌, ಔರಂಗಜೇಬ್‌, ಘಜ್ನಿ ಮಹಮ್ಮದ್‌ ಹೆಸರು ಮಾತ್ರ ನೆನಪಿಗೆ ಬರುತ್ತವೆ. ವೋಟ್‌ ಬ್ಯಾಂಕ್‌ ಹಾಗೂ ಅಲ್ಪಸಂಖ್ಯಾಕರ ಓಲೈಕೆಗಾಗಿ ಟಿಪ್ಪು ಜಪ ಮಾಡುತ್ತಿದ್ದಾರೆ. ಮೈಸೂರು ವಿಮಾನ ನಿಲ್ದಾಣಕ್ಕೆ ಮೈಸೂರು ಮಹಾರಾಜ ಅಥವಾ ಸುತ್ತೂರು ಸ್ವಾಮೀಜಿಗಳ ಹೆಸರಿಡಲಿ.
-ಎಂ.ಪಿ. ರೇಣುಕಾಚಾರ್ಯ, ಮಾಜಿ ಸಚಿವ

ಮೈಸೂರು ಸಂಸ್ಥಾನವನ್ನು ಅಭಿವೃದ್ಧಿ ಮಾಡಿದ ಟಿಪ್ಪು ಸುಲ್ತಾನ್‌ ಹೆಸರನ್ನು ಮೈಸೂರು ವಿಮಾನ ನಿಲ್ದಾಣಕ್ಕೆ ಇರಿಸುವುದು ತಪ್ಪಲ್ಲ.
-ವಿಶ್ವನಾಥ್‌, ಬಿಜೆಪಿ ಮೇಲ್ಮನೆ ಸದಸ್ಯ

 

Advertisement
Advertisement

Udayavani is now on Telegram. Click here to join our channel and stay updated with the latest news.

Next