Advertisement

ರಾಹುಲ್‌ ಗಾಂಧಿ ಕಾಂಗ್ರೆಸ್‌ ಪಾಲಿನ ರಾಹು: ಆರ್‌.ಅಶೋಕ್‌ ವ್ಯಂಗ್ಯ

09:10 AM Mar 06, 2018 | Team Udayavani |

ಬೆಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಕಾಂಗ್ರೆಸ್‌ ಪಾಲಿಗೆ ರಾಹು ಇದ್ದಂತೆ ಎಂದು ವ್ಯಂಗ್ಯವಾಡಿರುವ ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌, ರಾಹುಲ್‌ ಪ್ರಚಾರ ಮಾಡಿದಲ್ಲೆಲ್ಲ ಬಿಜೆಪಿ ಗೆದ್ದಿದ್ದು, ಕರ್ನಾಟಕದಲ್ಲೂ ಅದೇ ಫ‌ಲಿತಾಂಶ ಮರುಕಳಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ರಾಜ್ಯದ ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿ ಹಮ್ಮಿಕೊಂಡಿರುವ ಬೆಂಗಳೂರು ರಕ್ಷಿಸಿ ಪಾದಯಾತ್ರೆ ವೇಳೆ ನ್ಯೂ ತಿಪ್ಪಸಂದ್ರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ರಾಹುಲ್‌ ಗಾಂಧಿ ಪ್ರಚಾರ ಮಾಡಿದ ಕಡೆಗಳಲ್ಲಿ ಕಾಂಗ್ರೆಸ್‌ ಹೀನಾಯವಾಗಿ ಸೋತು ಬಿಜೆಪಿ ಗೆದ್ದಿದ್ದು, ಹೀಗಾಗಿ ಕಾಂಗ್ರೆಸ್‌ ಪಾಲಿಗೆ ಅವರು ರಾಹುವಿನಂತಾಗಿದ್ದಾರೆ. ಅಂತಹ ರಾಹುಲ್‌ ಗಾಂಧಿ ಕರ್ನಾಟಕದಲ್ಲಿ ಬಂದು ಪ್ರಚಾರ ಮಾಡಿದರೆ ಕಾಂಗ್ರೆಸ್‌ ಗೆಲ್ಲಲು ಸಾಧ್ಯವೇ ಎಂದು ಪ್ರಶ್ನಿಸಿದರು.

Advertisement

ಬಿಜೆಪಿ ಆಡಳಿತದಲ್ಲಿದ್ದಾಗ ಬಿಬಿಎಂಪಿಯನ್ನೂ ಅಡಮಾನ ಇಟ್ಟಿತ್ತು ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಮೇಲೆ ಸಾಲದ ಮೇಲೆ ಸಾಲ ಮಾಡಿ ಹುಟ್ಟುವ ಪ್ರತಿ ಮಗುವಿನ ತಲೆ ಮೇಲೂ 38 ಸಾವಿರ ಕೋಟಿ ರೂ. ಸಾಲದ ಹೊರೆ ಹೊರಿಸುತ್ತಿದ್ದಾರೆ. ಅಂಥವರು ಬಿಜೆಪಿಯವರಿಗೆ ಪಾಠ ಮಾಡುವ ಅಗತ್ಯವಿಲ್ಲ ಎಂದರು.

ಅಶೋಕ್‌ ಗೃಹ ಸಚಿವರಾಗಿದ್ದಾಗ ನಾಯಿ ಹಿಡಿಯಲೂ ಸಾಧ್ಯವಾಗಿರಲಿಲ್ಲ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೂ ಪ್ರತಿಕ್ರಿಯಿಸಿದ ಅಶೋಕ್‌, ನಾನು ಮಂತ್ರಿಯಾಗಿದ್ದು ನಾಯಿ ಹಿಡಿಯಲು ಅಲ್ಲ, ಜನರ ಸೇವೆ ಮಾಡಲು. ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರು ತಮ್ಮ ಜವಾಬ್ದಾರಿ ನಿರ್ವಹಿಸಿ ಮಾತನಾಡಬೇಕೇ ಹೊರತು ನೆರೆದಿದ್ದವರ ಚಪ್ಪಾಳೆ ಗಿಟ್ಟಿಸಲು ಭಾಷಣ ಮಾಡುವುದು ಸರಿಯಲ್ಲ ಎಂದು ಕಿಡಿ ಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next