Advertisement

ಬಿಜೆಪಿ ಮುಖಂಡ-ವೈದ್ಯ ಡಾ|ಟಿ.ಟಿ. ಹೆಗಡೆ ಇನ್ನಿಲ್ಲ

09:29 AM Jul 29, 2019 | Team Udayavani |

ಕುಮಟಾ: ಕುಮಟಾ ಹವ್ಯಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಹವ್ಯಕ ರತ್ನ, ಹಿರಿಯ ವೈದ್ಯ ಡಾ| ಟಿ.ಟಿ. ಹೆಗಡೆ (86) ಭಾನುವಾರ ಬೆಳಗಿನ ಜಾವ ನಿಧನರಾಗಿದ್ದಾರೆ.

Advertisement

ತೀವ್ರ ಅನಾರೋಗ್ಯದ ಕಾರಣ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಚೇತರಿಸಿಕೊಂಡು ಮನೆಗೆ ಮರಳುವ ಹಂತದಲ್ಲಿರುವಾಗ ರಾತ್ರಿ ನಿದ್ರೆಯಲ್ಲೇ ಕೋಮಾಕ್ಕೆ ತೆರಳಿ ಬೆಳಗ್ಗೆ 7ಕ್ಕೆ ಕೊನೆಯುಸಿರೆಳೆದಿದ್ದಾರೆ.

ಇವರು ಮುಂಬೈನಲ್ಲಿ ಎಂಬಿಬಿಎಸ್‌ ಮಾಡಿ ವೈದ್ಯರಾಗಿ ಸತತ ಆರು ದಶಕಗಳಿಗೂ ಹೆಚ್ಚು ಕಾಲ ಕುಮಟಾ ಹಾಗೂ ಇತರ ತಾಲೂಕಿನ ಜನರ ಸೇವೆ ಮಾಡಿದ್ದಾರೆ. ಮುಖ್ಯವಾಗಿ ಸಂಪರ್ಕ ವ್ಯವಸ್ಥೆಯೇ ಇಲ್ಲದ ದೂರದ ಕುಗ್ರಾಮಗಳಿಗೂ ತಡರಾತ್ರಿಯಲ್ಲೂ ತಮ್ಮ ರಾಜದೂತ್‌ ಬೈಕ್‌ನಲ್ಲಿ ಒಬ್ಬರೇ ರೋಗಿಯ ಮನೆ ಬಾಗಿಲಿಗೆ ತೆರಳಿ ಚಿಕಿತ್ಸೆ ನೀಡುವ ಮೂಲಕ ಎಲ್ಲರಿಗೂ ತೀರಾ ಆಪ್ತರಾಗಿದ್ದ ಡಾ| ಹೆಗಡೆ, ವಿವಿಧ ಸಂಘಸಂಸ್ಥೆ, ಸಾಮಾಜಿಕ ಚಟುವಟಿಕೆಗಳಲ್ಲೂ ಕ್ರಿಯಾಶೀಲರಾಗಿ ಜನರಿಗೆ ಬೇಕಾದವರಾಗಿದ್ದರು. ಎಪಿಎಂಸಿ ಅಧ್ಯಕ್ಷರಾಗಿ ಸಾಕಷ್ಟು ಸುಧಾರಣೆಗಳಿಗೆ ಕಾರಣರಾಗಿದ್ದ ಡಾ| ಹೆಗಡೆಯವರು ರೈತಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದರು. ಅದಲ್ಲದೇ, ಆರ್‌ಎಸ್‌ಎಸ್‌ನಲ್ಲಿ ಸಕ್ರಿಯ ಕಾರ್ಯಕರ್ತರಾಗಿ ಕುಮಟಾದಲ್ಲಿ ಬಿಜೆಪಿಯನ್ನು ಸಂಘಟಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ರಾಜಕೀಯದಲ್ಲಿದ್ದರೂ ನಿಷ್ಠುರವಾದಿಯಾಗಿ ಹೆಸರು ಮಾಡಿದ್ದರು.

ಹವ್ಯಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ ಹವ್ಯಕ ಸಭಾಭವನ, ವೃದ್ಧಾಶ್ರಮ, ವಿದ್ಯಾರ್ಥಿಗಳಿಗೆ ವಸತಿಗೃಹ, ಬಡ ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ನೆರವು ಮುಂತಾದ ಸೇವೆ ಸಲ್ಲಿಸುತ್ತಲೇ ಜೀವನದ ಪಯಣ ಸಾರ್ಥಕವಾಗಿ ಮುಗಿಸಿದ್ದಾರೆ. ಡಾ| ಹೆಗಡೆಯವರು ಪುತ್ರ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧುಬಳಗ ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ.

ಡಾ| ಹೆಗಡೆಯವರ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ಕುಮಟಾಕ್ಕೆ ತಂದ ಬಳಿಕ ಸಂಜೆ 7ರಿಂದ 10ರ ವರೆಗೆ ಅಂತಿಮ ದರ್ಶನಕ್ಕಾಗಿ ಇಡಲಾಗಿತ್ತು. ಅವರ ಅಪಾರ ಬಂಧುಬಳಗ ಹಾಗೂ ಅಭಿಮಾನಿಗಳು ಅಂತಿಮ ದರ್ಶನ ಪಡೆದು ನುಡಿನಮನ ಸಲ್ಲಿಸಿದರು. ಹಲವಾರು ಗಣ್ಯರು, ಸಾರ್ವಜನಿಕರು, ಜನಪ್ರತಿನಿಧಿಗಳು ಸಂತಾಪ ಸೂಚಿಸಿದ್ದಾರೆ.

Advertisement

ಕುಮಟಾದ ಪ್ರಸಿದ್ಧ ವೈದ್ಯ ಡಾ| ಟಿ.ಟಿ. ಹೆಗಡೆ ಅಗಲಿಕೆಗೆ ಸಂಸದ ಅನಂತಕುಮಾರ ಹೆಗಡೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಡಾ| ಟಿ.ಟಿ. ಹೆಗಡೆ ವೃತ್ತಿಯಲ್ಲಿ ವೈದ್ಯರಾಗಿದ್ದು, ಸಾಮಾಜಿಕ ಕಳಕಳಿ ಉಳ್ಳವರಾಗಿದ್ದವರು. ಅನೇಕ ಬಡವರಿಗೆ ಶುಲ್ಕವಿಲ್ಲದೆಯೇ ಚಿಕಿತ್ಸೆ ನೀಡಿರುವ ಅಪರೂಪದ ವೈದ್ಯರಾಗಿದ್ದರು. ಜನ ಸಂಘದ ಕಾಯದಿಂದಲೂ ಕಾರ್ಯಕರ್ತರಾಗಿದ್ದು, ನಂತರದ ದಿನಗಳಲ್ಲಿ ಭಾರತೀಯ ಜನತಾ ಪಾರ್ಟಿಯ ಬೆನ್ನೆಲುಬಾಗಿ ಕಾರ್ಯನಿರ್ವಹಿಸಿದ್ದಲ್ಲದೇ ಮಾರ್ಗದರ್ಶನ ಸಹ ನೀಡಿದವರು. ಬಿಜೆಪಿಯಿಂದ ಕುಮಟಾ ವಿಧಾನ ಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ನಿಲ್ಲುವಂತೆ ಪಕ್ಷ ಕೇಳಿಕೊಂಡಾಗ ನಯವಾಗಿಯೇ ತಿರಸ್ಕರಿಸಿದ ಮಹಾನ್‌ ಚೈತನ್ಯ ಅವರು ಎಂದು ಸಂತಾಪ ಹೇಳಿಕೆಯಲ್ಲಿ ನೆನಪಿಸಿಕೊಂಡಿದ್ದಾರೆ.

ಡಾ| ಟಿ.ಟಿ. ಹೆಗಡೆ ಅಗಲಿಕೆಗೆ ಸಂತಾಪ:

ಶಿರಸಿ: ಕುಮಟಾದ ಪ್ರಸಿದ್ಧ ವೈದ್ಯ ಡಾ| ಟಿ.ಟಿ. ಹೆಗಡೆ ಅಗಲಿಕೆಗೆ ಸಂಸದ ಅನಂತಕುಮಾರ ಹೆಗಡೆ ಸಂತಾಪ ವ್ಯಕ್ತಪಡಿಸಿದ್ದಾರೆ. ಡಾ| ಟಿ.ಟಿ. ಹೆಗಡೆ ವೃತ್ತಿಯಲ್ಲಿ ವೈದ್ಯರಾಗಿದ್ದು, ಸಾಮಾಜಿಕ ಕಳಕಳಿ ಉಳ್ಳವರಾಗಿದ್ದವರು. ಅನೇಕ ಬಡವರಿಗೆ ಶುಲ್ಕವಿಲ್ಲದೆಯೇ ಚಿಕಿತ್ಸೆ ನೀಡಿರುವ ಅಪರೂಪದ ವೈದ್ಯರಾಗಿದ್ದರು. ಜನ ಸಂಘದ ಕಾಯದಿಂದಲೂ ಕಾರ್ಯಕರ್ತರಾಗಿದ್ದು, ನಂತರದ ದಿನಗಳಲ್ಲಿ ಭಾರತೀಯ ಜನತಾ ಪಾರ್ಟಿಯ ಬೆನ್ನೆಲುಬಾಗಿ ಕಾರ್ಯನಿರ್ವಹಿಸಿದ್ದಲ್ಲದೇ ಮಾರ್ಗದರ್ಶನ ಸಹ ನೀಡಿದವರು. ಬಿಜೆಪಿಯಿಂದ ಕುಮಟಾ ವಿಧಾನ ಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ನಿಲ್ಲುವಂತೆ ಪಕ್ಷ ಕೇಳಿಕೊಂಡಾಗ ನಯವಾಗಿಯೇ ತಿರಸ್ಕರಿಸಿದ ಮಹಾನ್‌ ಚೈತನ್ಯ ಅವರು ಎಂದು ಸಂತಾಪ ಹೇಳಿಕೆಯಲ್ಲಿ ನೆನಪಿಸಿಕೊಂಡಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next