Advertisement

ಮನೆಯಲ್ಲಿ ಹೊತ್ತಿದ ಬೆಂಕಿಗೆ ಬಿಜೆಪಿ ಮುಖಂಡ ಬಲಿ

11:10 AM Jun 17, 2019 | Team Udayavani |

ಬಂಗಾರಪೇಟೆ: ವಿದ್ಯುತ್‌ ಶಾರ್ಟ್‌ ಸರ್ಕ್ನೂಟ್ನಿಂದ ಮನೆಗೆ ಬೆಂಕಿ ಬಿದ್ದು ಬಿಜೆಪಿ ಹಿರಿಯ ಮುಖಂಡ ಆಹುತಿಯಾಗಿರುವ ಘಟನೆ ಪಟ್ಟಣದಲ್ಲಿ ಭಾನುವಾರ ಬೆಳಗಿನ ಜಾವ 5 ಗಂಟೆಯಲ್ಲಿ ಸಂಭವಿಸಿದೆ.

Advertisement

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಟಿ.ಎಸ್‌.ನಾಗಪ್ರಕಾಶ್‌ (58) ಮೃತರು. ಭಾನುವಾರ ಮುಂಜಾನೆ 4 ಗಂಟೆಯಲ್ಲಿ ಮನೆಯಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಸುಟ್ಟ ವಾಸನೆ ಬಂದಿದ್ದರಿಂದ ನಿದ್ರೆಯಲ್ಲಿದ್ದ ನಾಗಪ್ರಕಾಶ್‌, ಎದ್ದು ಮನೆಯ ಹಾಲ್ನಲ್ಲಿ ಬೆಂಕಿ ಹೊತ್ತಿಕೊಂಡಿದ್ದು ನೋಡಿ, ಗಾಬರಿಗೊಂಡು ಬಾಗಿಲು ತೆಗೆಯಲು ಹೋದಾಗ ಉಸಿರುಗಟ್ಟಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ.

ಪೀಠೊಪಕರಣಗಳು ಭಸ್ಮ: ನಂತರ ಮೊಬೈಲ್ ಮೂಲಕ ಮನೆಯವರನ್ನು ಸಂಪರ್ಕ ಮಾಡಲು ಪ್ರಯತ್ನ ಮಾಡಿದ್ದರೂ ಪ್ರಯೋಜವಾಗಿಲ್ಲ. ಮನೆಯವರು ಗಾಢನಿದ್ರೆಗೆ ಜಾರಿದ್ದರಿಂದ ಯಾರಿಗೂ ತಕ್ಷಣಕ್ಕೆ ತಿಳಿಯಲಿಲ್ಲ. ನಂತರ ಪತ್ನಿ ಶೋಭಾ ಬಂದು ನೋಡಿ, ತನ್ನ ಮಗ ಸ್ವರೂಪ್‌ನನ್ನು ಕರೆದಿದ್ದಾರೆ. ಅಷ್ಟರಲ್ಲಿ ಟಿ.ಎಸ್‌.ನಾಗಪ್ರಕಾಶ್‌ ಮೃತಪಟ್ಟಿದ್ದರು. ಮನೆ ಹಾಲ್ನಲ್ಲಿದ್ದ ಪೀಠೊ ಪಕರಣಗಳು, ಸಾಮಾನು ಗಳು ಸುಟ್ಟು ಕರಕಲಾಗಿವೆ.

ಪತ್ನಿ, ಮಗ ಸೇರಿ ಮೂವರಿಗೆ ಗಾಯ: ಬೆಂಗಳೂರಿಗೆ ಬರುವ 4.30ರ ರೈಲು ಹತ್ತಲು ಹೋಗುತ್ತಿದ್ದ ಪ್ರಯಾಣಿಕರು ಮನೆಯಿಂದ ಸುಟ್ಟ ವಾಸನೆ ಬಂದಿದ್ದನ್ನು ನೋಡಿ ಅಗ್ನಿ ಶಾಮಕ ದಳ, ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಉಸಿರುಗಟ್ಟಿ ಒದ್ದಾಡುತ್ತಿದ್ದ ಮನೆಯ ಮೂವರನ್ನು ಕೋಲಾರದ ಆರ್‌.ಎಲ್.ಜಾಲಪ್ಪ ಆಸ್ಪತ್ರೆಗೆ ಸೇರಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತಾಲೂಕಲ್ಲಿ ಬಿಜೆಪಿ ಬುಡಮಟ್ಟದಿಂದ ಕಟ್ಟಿದವರು: ಬಂಗಾರಪೇಟೆ ತಾಲೂಕಿನಲ್ಲಿ 1986 ವರ್ಷದಿಂದಲೂ ಬಿಜೆಪಿ ಸಂಘಟನೆಗೆ ಶ್ರಮಿಸಿದ್ದ ಮೃತ ಟಿ.ಎಸ್‌.ನಾಗಪ್ರಕಾಶ್‌, ಆರ್‌ಎಸ್‌ಎಸ್‌ನಲ್ಲಿ ತೊಡಗಿಸಿಕೊಂಡಿದ್ದರು. ಮೂಲತಃ ಅಕ್ಕಿ ವ್ಯಾಪಾರಿಯಾಗಿದ್ದು, ಮಾಜಿ ಪ್ರಧಾನಿ ವಾಜಪೇಯಿ ಹಾಗೂ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರ ಕಟ್ಟಾ ಅಭಿಮಾನಿಯಾಗಿದ್ದರು.

Advertisement

ಮೊನ್ನೆ ಸಂಸದ ಕಾರ್ಯಕ್ರಮದಲ್ಲಿ ಭಾಗಿ: ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ, ಕಳೆದ ತಿಂಗಳು ಪುರಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. ತಾಲೂಕಿನಲ್ಲಿ ಬಿಜೆಪಿ ಸಂಘಟನೆ ಮಾಡಿದವರಲ್ಲಿ ಮೃತರು ಮೊದಲಿಗರಾಗಿದ್ದರು. ಶನಿವಾರ ಸಂಸದ ಎಸ್‌.ಮುನಿಸ್ವಾಮಿ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿದ್ದರು.

ಸಂಸದ ಎಸ್‌.ಮುನಿಸ್ವಾಮಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ, ಹಾಲಿ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ, ಮಾಜಿ ಸಚಿವ ಮಾಲೂರಿನ ಎಸ್‌.ಎನ್‌.ಕೃಷ್ಣಯ್ಯಶೆಟ್ಟಿ, ಮಾಜಿ ಶಾಸಕ ಎಂ.ನಾರಾಯಣಸ್ವಾಮಿ, ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಸಚ್ಚದಾನಂದ ಮೂರ್ತಿ, ಬಿಜೆಪಿ ಮಾಜಿ ಅಧ್ಯಕ್ಷರಾದ ಎಟ್ಟುಕೋಡಿ ಕೃಷ್ಣಾರೆಡ್ಡಿ, ಶ್ರೀರಾಮ್‌, ಚಿಂತಾಮಣಿ ಮಹೇಶ್‌, ತಾಲೂಕು ಬಿಜೆಪಿ ಅಧ್ಯಕ್ಷ ಹನುಮಪ್ಪ, ಶಶಿಕುಮಾರ್‌ ಸೇರಿದಂತೆ ಜಿಲ್ಲೆಯಲ್ಲಿನ ಬಿಜೆಪಿ ಹಿರಿಯ ಮುಖಂಡರು, ಕಾರ್ಯಕರ್ತರು ಮೃತರಿಗೆ ಅಂತಿಮ ನಮನ ಸಲ್ಲಿಸಿದರು.

ಮೃತ ನಾಗಪ್ರಕಾಶ್‌ ಅಕಾಲಿಕ ಮರಣದಿಂದ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬ ಸದಸ್ಯರಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಸಂಸದ ಎಸ್‌.ಮುನಿಸ್ವಾಮಿ, ಮಾಜಿ ಶಾಸಕ ವೈ.ಸಂಪಂಗಿ ಕಂಬನಿ ಮಿಡಿದರು.

ಗ್ರಾಮದ ಬಸ್‌ ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ವಿದ್ಯುತ್‌ ಶಾರ್ಟ್‌ ಸರ್ಕ್ನೂಟ್ನಿಂದ ಮನೆಗೆ ಬೆಂಕಿ ಬಿದ್ದು ಮೃತಪಟ್ಟ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ನಾಗಪ್ರಕಾಶ್‌ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಸಂಸದರು, 2 ನಿಮಿಷ ಮೌನಾಚರಣೆ ಮಾಡಿ ನಂತರ ಯಾವುದೇ ಸನ್ಮಾನ, ಇತರೆ ಪುರಸ್ಕಾರ ಪಡೆದುಕೊಳ್ಳದೇ, ಸ್ಥಳೀಯ ಮುಖಂಡರೊಂದಿಗೆ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಿದರು.

ನಂತರ ಮಾತನಾಡಿ, ಪಕ್ಷದ ಮುಖಂಡರೊಬ್ಬರನ್ನು ಕಳೆದುಕೊಂಡಿದ್ದೇವೆ. ಕುಟುಂಬದ ಸದಸ್ಯನೊಬ್ಬನನ್ನು ಕಳೆದುಕೊಂಡಂತೆ ಎಲ್ಲರಲ್ಲೂ ಭಾಸವಾಗುತ್ತಿದೆ ಎಂದರು.

ವಿದ್ಯುತ್‌ ಶಾರ್ಟ್‌ ಸರ್ಕ್ನೂನಿಂದ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೃತನ ಪತ್ನಿ ಹಾಗೂ ಪುತ್ರ ಶೀಘ್ರ ಗುಣಮಖರಾಗಲಿ ಎಂದು ಪ್ರಾರ್ಥಿಸಿದರು.

ಮಾಜಿ ಶಾಸಕ ವೈ.ಸಂಪಂಗಿ, ಮಾಲೂರು ಮಾಜಿ ಶಾಸಕ ಎ.ನಾಗರಾಜು, ಜಿಪಂ ಸದಸ್ಯೆ ಅಶ್ವಿ‌ನಿ, ಜಿಲ್ಲಾ ಎಸ್ಸಿ ಮೋರ್ಚಾಧ್ಯಕ್ಷ ಹನುಮಂತಪ್ಪ, ಗ್ರಾಮಾಂತರ ಅಧ್ಯಕ್ಷ ಎಸ್‌.ಧರಣಿ, ತಾಪಂ ಸದಸ್ಯ ಡಾ.ಕೃಷ್ಣಮೂರ್ತಿ, ಮುಖಂಡರಾದ ಡಾ.ಅಮರೇಂದ್ರ ಮೌನಿ, ಮುನಿಸ್ವಾಮಿ ರೆಡ್ಡಿ, ಹಂಗಳ ರಮೇಶ್‌, ವೆಂಕಟರೆಡ್ಡಿ, ಕಮಲ್, ಹುಲ್ಕೂರು ಗ್ರಾಪಂ ಅಧ್ಯಕ್ಷ ಶ್ರೀನಿವಾಸ್‌, ಕೆಜಿಎಫ್ ನಗರಸಭೆ ಸದಸ್ಯರು, ಗ್ರಾಪಂ ಸದಸ್ಯ ವಿಜಿಕುಮಾರ್‌, ಯುವ ಮುಖಂಡ ಸುನಿಲ್, ಕಾರ್ಯಕರ್ತರು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಮನೆಯಲ್ಲಿ ಹೊತ್ತಿದ ಬೆಂಕಿಗೆ ಬಲಿಯಾದ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ನಾಗಪ್ರಕಾಶ್‌ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬೇತಮಂಗಲ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಂಸದರ ಅಭಿನಂದನಾ ಸಮಾರಂಭದಲ್ಲಿ ಕೆಲವು ನಿಮಿಷಗಳ ಕಾಲಮೌನಚರಣೆ ಮಾಡಲಾಯಿತು. ಮಾಜಿ ಶಾಸಕ ವೈ.ಸಂಪಂಗಿ, ಮಾಲೂರು ಮಾಜಿ ಶಾಸಕ ಎ.ನಾಗರಾಜು, ಜಿಪಂ ಸದಸ್ಯೆ ಅಶ್ವಿ‌ನಿ, ಜಿಲ್ಲಾ ಎಸ್ಸಿ ಮೋರ್ಚಾಧ್ಯಕ್ಷ ಹನುಮಂತಪ್ಪ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next