Advertisement

ಬಳ್ಳಾರಿಯಿಂದಲೇ ಕಾಂಗ್ರೆಸ್‌ ಮುಕ್ತಕ್ಕೆ ಬಿಜೆಪಿ ಸನ್ನದ್ಧ

03:45 AM May 09, 2017 | |

ಕೊಪ್ಪಳ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಜುಲೈ 22 ರಂದು ಬಳ್ಳಾರಿಯಲ್ಲಿ ರಾಜ್ಯ ಕಾರ್ಯಕಾರಿಣಿ ನಡೆಸಲು ನಿರ್ಧರಿಸಿದ್ದು, ಬಳ್ಳಾರಿಯಿಂದಲೇ ಕಾಂಗ್ರೆಸ್‌ ಮುಕ್ತ ಕರ್ನಾಟಕಕ್ಕೆ ಬಿಜೆಪಿ ಸನ್ನದ್ಧವಾಗಿದೆ ಎಂದು ಸಂಸದ ಬಿ.ಶ್ರೀರಾಮುಲು ಹೇಳಿದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಮಾಡಿದ್ದ ಸಿಎಂ ಸಿದ್ದರಾಮಯ್ಯ ಆಡಳಿತ ವೈಖರಿ, ಹೈದ್ರಾಬಾದ್‌ ಕರ್ನಾಟಕಕ್ಕೆ ರಾಜ್ಯ ಸರ್ಕಾರ ಮಾಡಿದ ಅನ್ಯಾಯ ತಿಳಿಸುವುದು ಸೇರಿದಂತೆ ಬಳ್ಳಾರಿಯಿಂದಲೇ ಕಾಂಗ್ರೆಸ್‌ ಮುಕ್ತ ರಾಜ್ಯಕ್ಕೆ ಬಿಜೆಪಿ ಸಿದ್ಧತೆ ನಡೆಸಿದೆ ಎಂದರು.

ಈಶ್ವರಪ್ಪ ಹಾಗೂ ಬಿಎಸ್‌ವೈ ಅವರ ನಡುವಿನ ಗೊಂದಲ ಈಗಾಗಲೇ ಮೈಸೂರಿನಲ್ಲಿ ನಡೆದ ಕಾರ್ಯಕಾರಿಣಿಯಲ್ಲಿ ಸುಖಾಂತ್ಯಗೊಂಡಿದೆ. ಬ್ರಿಗೇಡ್‌ ಬಿಜೆಪಿಯಲ್ಲಿ ವಿಲೀನವಾಗುವುದಿಲ್ಲ. ಬ್ರಿಗೇಡ್‌ನ‌ಲ್ಲಿರುವ ಕಾರ್ಯಕರ್ತರೇ ಬಿಜೆಪಿ ಕಾರ್ಯಕರ್ತರು. ಎಲ್ಲರೂ ಒಟ್ಟಾಗಿ ಪಕ್ಷ ಸಂಘಟನೆ ಮಾಡಲು ಇಬ್ಬರು ನಾಯಕರಿಗೂ ಹೈಕಮಾಂಡ್‌ ಸೂಚನೆ ನೀಡಿದೆ ಎಂದರು.

ರಾಜ್ಯದಲ್ಲಿ ಬರ ಆವರಿಸಿದೆ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಅನುದಾನ, ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಅನುದಾನ ಕುರಿತು ಜನರಿಗೆ ವಾಸ್ತವ ವರದಿ ತಿಳಿಸಲು ಮೇ 18 ರಿಂದ ಬಿ.ಎಸ್‌.ಯಡಿಯೂರಪ್ಪನವರು ರಾಜ್ಯ ಪ್ರವಾಸ ಮಾಡಲಿದ್ದಾರೆ ಎಂದರು. ಹಾಲಿ ಸಂಸದರಿಗೆ ಮುಂದಿನ ವಿಧಾನಸಭೆ ಟಿಕೆಟ್‌ ನೀಡುವ ವಿಚಾರ ಹೈಕಮಾಂಡ್‌ಗೆ ಬಿಟ್ಟಿದ್ದು. ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರೇ ಅಂತಿಮ. ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಕೊರತೆಯಿದೆ. ಇದನ್ನು ಸರಿದೂಗಿಸಲು ಹಿರಿಯರ ಮಾರ್ಗದರ್ಶನದಲ್ಲಿ ಹೊಸ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡುವ ಕುರಿತು ಬಿಎಸ್‌ವೈ ಚಿಂತನೆ ನಡೆಸಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next