Advertisement

BJP ಈಗ ಹಿರಿಯರಿಲ್ಲದ ಮನೆ, ಹೊಸ ನಾಯಕತ್ವಕ್ಕೆ ಸಿಕ್ಕಿತು ಮಣೆ!

11:39 PM Apr 16, 2023 | Team Udayavani |

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಈಗ ಹೊಸಮುಖಗಳಿಗೆ ಮನ್ನಣೆ ಕೊಟ್ಟು ಮುನ್ನೆಲೆಗೆ ತರುವ ಪ್ರಕ್ರಿಯೆ ಚುರುಕುಗೊಂಡಿದ್ದು, ಹಳೆತಲೆಗಳನ್ನು ನೇಪಥ್ಯಕ್ಕೆ ಸರಿಸಲಾಗುತ್ತಿದೆ. ಬದಲಾವಣೆ “ಯುಗಧರ್ಮ” ಎಂದು ಬಿಜೆಪಿಯ ಚಿಂತಕರ ಚಾವಡಿ ನೀಡುತ್ತಿದ್ದ “ಬೌದ್ಧಿಕ್‌” ಈಗ ಸತ್ಯವಾಗುತ್ತಿದ್ದು, ಹಿರಿಯರಿಲ್ಲದ ಮನೆಯಲ್ಲಿ ಪಕ್ಷದ ಎರಡನೇ ತಲೆಮಾರಿನ ನಾಯಕರಿಗೆ ಹೊಣೆಗಾರಿಕೆ ವಹಿಸುವುದಕ್ಕೆ ಸಿದ್ಧತೆ ಪ್ರಾರಂಭವಾಗಿದೆ.

Advertisement

ಬಿಜೆಪಿಯ ಭೀಷ್ಮ ಬಿ.ಎಸ್‌.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕಿಳಿಸಿದಾಗಲೇ ಈ ಚರ್ಚೆ ಪ್ರಾರಂಭವಾಗಿತ್ತು. ಜಗದೀಶ್‌ ಶೆಟ್ಟರ್‌, ಕೆ.ಎಸ್‌.ಈಶ್ವರಪ್ಪ, ಗೋವಿಂದ ಕಾರಜೋಳ, ವಿ.ಸೋಮಣ್ಣ ಸಹಿತ ಅನೇಕ ರಾಜ್ಯ ನಾಯಕರಿಗೆ, ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕೆಲ ಸಂಸದರಿಗೆ ಕೊಕ್‌ ನೀಡುವುದು ಪಕ್ಕಾ ಎಂದೇ ಹೇಳಲಾಗುತ್ತಿತ್ತು. ಕಾರಜೋಳ ಹಾಗೂ ಸೋಮಣ್ಣ ತುರ್ತು ಅನಿವಾರ್ಯತೆಯಿಂದ ಸದ್ಯಕ್ಕೆ ಬಚಾವ್‌ ಆಗಿದ್ದಾರೆ. ಆದಾಗಿಯೂ ಮೇ 13ರ ಅನಂತರ ಅಸ್ಥಿತ್ವಕ್ಕೆ ಬರುವ 16ನೇ ವಿಧಾನಸಭೆಯ ಬಿಜೆಪಿ ಆಸನ ವ್ಯವಸ್ಥೆ ಸಂಪೂರ್ಣ ಬದಲಾವಣೆಯಾಗಲಿದೆ. 1999 ಮತ್ತು 2004ರ ವಿಧಾನ ಸಭೆಯಲ್ಲಿ ಗೆದ್ದು ಶಾಸಕರಾದ ಬಿಜೆಪಿ ನಾಯಕರು ಈ ಬಾರಿ ಮುಂದಿನ ಸಾಲನ್ನು ಅಲಂಕರಿಸಲಿದ್ದಾರೆ.

ಹಾಗೆ ನೋಡಿದರೆ ಯಡಿಯೂರಪ್ಪ, ಶೆಟ್ಟರ್‌, ಕಾರಜೋಳ, ಈಶ್ವರಪ್ಪ ಸಹಿತ ಹಿರಿಯರು ಅನೇಕ ವಿಚಾರದಲ್ಲಿ ಮೌನಕ್ಕೆ ಶರಣಾದಾಗ ಸೈದ್ಧಾಂತಿಕವಾಗಿ ಧ್ವನಿ ಎತ್ತಿದ್ದು, 1999 ಹಾಗೂ 2004ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಶಾಸನಸಭೆ ಪ್ರವೇಶಿಸಿದ ಶಾಸಕರೇ ಆಗಿದ್ದಾರೆ. ವಿಶ್ವೇಶ್ವರ ಹೆಗಡೆ ಕಾಗೇರಿ, ಜೀವರಾಜ್‌, ಸಿ.ಟಿ.ರವಿ, ಸುನಿಲ್‌ ಕುಮಾರ್‌, ಬಸನಗೌಡ ಪಾಟೀಲ್‌ ಯತ್ನಾಳ್‌, ಅಭಯ್‌ ಪಾಟೀಲ್‌, ಸಿ.ಸಿ.ಪಾಟೀಲ್‌, ಮುರುಗೇಶ್‌ ನಿರಾಣಿ, ಈ ಸಾಲಿನಲ್ಲಿ ನಿಲ್ಲುತ್ತಿದ್ದು, ಸದ್ಯಕ್ಕೆ ಬಸವರಾಜ ಬೊಮ್ಮಾಯಿ ಹಾಗೂ ಆರ್‌.ಅಶೋಕ್‌, ಸುರೇಶ್‌ ಕುಮಾರ್‌, ಕೆ.ಜಿ.ಬೋಪಯ್ಯ ವಿಧಾನಸಭೆಯಲ್ಲಿ ಬಿಜೆಪಿಯ ಅತಿ ಹಿರಿಯ ಸದಸ್ಯರಾಗಲಿದ್ದಾರೆ. ಇದೇ ಶ್ರೇಣಿಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಪ್ರಹ್ಲಾದ್‌ ಜೋಶಿ, ಅನಂತಕುಮಾರ್‌ ಹೆಗಡೆ, ನಳಿನ್‌ ಕುಮಾರ್‌ ಕಟೀಲು ಕೂಡಾ ಇದ್ದಾರೆ. ಹಿರಿತನ ಹಾಗೂ ಪಕ್ಷದ ಮೇಲಿನ ಹಿಡಿತದ ವಿಚಾರದಲ್ಲಿ ಶೋಭಾ ಹಾಗೂ ಪ್ರಹ್ಲಾದ್‌ ಜೋಶಿ ಒಟ್ಟಾರೆಯಾಗಿ ಪಕ್ಷದ ಮುಂಚೂಣಿಗೆ ಬರಬಹುದು ಎಂಬ ಮಾತುಗಳು ಬಿಜೆಪಿಯಲ್ಲಿ ಕೇಳಿ ಬರುತ್ತಿದೆ.

ಫ‌ಸ್ಟ್‌ ಜನರೇಷನ್‌ ಔಟ್‌ :ಪಕ್ಷದ ಫ‌ಸ್ಟ್‌ ಜನರೇಷನ್‌ ನಾಯಕರನ್ನು ಸಕ್ರಿಯ ರಾಜಕಾರಣದಿಂದ ಹೊರಗೆ ಕಳುಹಿಸಬೇಕೆಂಬುದು ಬಿಜೆಪಿ ರಾಷ್ಟ್ರೀಯ ನಾಯಕರ ಮೊದಲ ಆದ್ಯತೆಯಾಗಿತ್ತೆಂಬುದು ಬಿಜೆಪಿ ಮೂಲಗಳ ಮಾಹಿತಿ. ಈ ಕಾರಣಕ್ಕಾಗಿಯೇ ಟಿಕೆಟ್‌ ಆಯ್ಕೆ ಕಸರತ್ತು ಆರಂಭವಾದಾಗ ಮಾಜಿ ಸಿಎಂ ಯಡಿಯೂರಪ್ಪ ಕೊಟ್ಟ ಪಟ್ಟಿ (ಪುತ್ರನಿಗೆ ಟಿಕೆಟ್‌ ಸೇರಿದಂತೆ )ಯನ್ನು ಒಪ್ಪಿ ವರಿಷ್ಠರು ಅವರನ್ನು ದಿಲ್ಲಿಯಿಂದ ಬೆಂಗಳೂರಿಗೆ ಕಳುಹಿಸಿದರು. ಹಿರಿ ಯ ರನ್ನು ಪಕ್ಕಕ್ಕೆ ಸರಿಸಲು ಹೋದಾಗ ಯಡಿಯೂರಪ್ಪ ಅಪಸ್ವರ ಎತ್ತಬಾರದೆಂಬುದು ಇದರ ಉದ್ದೇಶವಾಗಿತ್ತು.

ಆ ಬಳಿಕ ತನ್ನದೇ ಆಂತರಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿ ಆಧಾರದ ಮೇಲೆ ಸಿದ್ದಪಡಿಸಿದ ಪಟ್ಟಿ ಹಾಗೂ ಕ್ಷೇತ್ರಗಳ ಬಗ್ಗೆ ಬಿ.ಎಲ್‌.ಸಂತೋಷ್‌, ಪ್ರಹ್ಲಾದ್‌ ಜೋಶಿ, ಸಿಎಂ ಬೊಮ್ಮಾಯಿ ಸಹಿತ ರಾಜ್ಯದ ನಾಯಕರ ಜತೆಗೆ ಅಮಿತ್‌ ಶಾ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದರು. ಯಡಿಯೂರಪ್ಪ ಹೊರಗಿಟ್ಟು ಬಿಜೆಪಿ ನಾಯಕರ ಜತೆ “ಒನ್‌ ಟು ಒನ್‌ ಮೀಟಿಂಗ್‌ ನಡೆಸಿದ ಷಾ’ ಎಂಬ ಬ್ರೇಕಿಂಗ್‌ ನ್ಯೂಸ್‌ಗಳು ಹೊರಬಿದ್ದಾಗಲೇ ಶೆಟ್ಟರ್‌, ಈಶ್ವರಪ್ಪ, ಅಂಗಾರರಂಥ ಹಿರಿಯ ನಾಯಕರ ಜತೆಗೆ “ಸಿಡಿತಲೆ’ ಆಟಗಾರರಿಗೆ ಟಿಕೆಟ್‌ ತಪ್ಪಿಸಲಾಗುವುದು ಎಂಬ ಚರ್ಚೆ ಪ್ರಾರಂಭವಾಗಿದ್ದು. ಆದರೆ ಈ ಬದಲಾವಣೆ ಬಗ್ಗೆ ವಿರೋಧ ವ್ಯಕ್ತಪಡಿಸುವ ಹಂತದಲ್ಲಿ ರಾಜ್ಯದ ಯಾವ ನಾಯಕರಿಗೂ ಇರಲಿಲ್ಲ. ಏಕೆಂದರೆ ಈ ಪ್ರಭಾವಿಗಳು ಕೊಟ್ಟ ಪಟ್ಟಿಯನ್ನೇ ವರಿಷ್ಠರು ಸಾರಾಸಗಟಾಗಿ ತಿರಸ್ಕರಿಸಲಾಗಿತ್ತು. ಹೀಗಾಗಿ ವರಿಷ್ಠರ ಭೇಟಿ ಮಾಡಿ ಬಂದು ತಮ್ಮ ಜತೆಗೆ ಜಗದೀಶ್‌ ಶೆಟ್ಟರ್‌ ಚರ್ಚೆ ನಡೆಸಿದರೂ ಭರವಸೆ ಕೊಡುವ ಸ್ಥಿತಿಯಲ್ಲಿ ಯಡಿಯೂರಪ್ಪನವರೇ ಇರಲಿಲ್ಲ. ಅರವಿಂದ ಲಿಂಬಾವಳಿ, ರಾಮದಾಸ್‌, ರಘುಪತಿ ಭಟ್‌, ಕಳಕಪ್ಪ ಬಂಡಿ, ಮಾಡಾಳ್‌ ವಿರೂಪಾಕ್ಷಪ್ಪ, ನೆಹರು ಓಲೇಕಾರ್‌, ಎಂ.ಪಿ.ಕುಮಾರಸ್ವಾಮಿ, ಈಶ್ವರಪ್ಪ, ಜಗದೀಶ್‌ ಶೆಟ್ಟರ್‌ ಹೆಸರನ್ನು ವರಿಷ್ಠರೇ ಹೊರಗಿಟ್ಟಿದ್ದರು.

Advertisement

ಬಿಜೆಪಿ ರಾಜ್ಯ ಘಟಕದಲ್ಲಿ ಮಧ್ಯ ವಯಸ್ಕ ನಾಯಕರನ್ನು ಹಿರಿಯರ ಸಾಲಿಗೆ ತಂದು, 56 ಹೊಸಮುಖಗಳಿಗೆ ಅವಕಾಶ ಕಲ್ಪಿಸಿರುವುದು ವರಿಷ್ಠರ ಪ್ರಜ್ಞಾಪೂರ್ವಕ ನಿಲುವಾಗಿದ್ದು, ಎಷ್ಟೇ ಒತ್ತಡ ಬಂದರೂ ಮಣಿಯದೇ ಇರಲು ತೀರ್ಮಾನಿಸಿದೆ. ಹೀಗಾಗಿ ಕೇಸರಿ ಪಾಳಯದಲ್ಲಿ ಸದ್ಯಕ್ಕೆ ಹಿರಿಯರ ರೋದನೆ ಮಾತ್ರ ಮಾರ್ದನಿಸುತ್ತಿದೆ.

~ ರಾಘವೇಂದ್ರ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next