Advertisement

Politics: “ರಾಹುಲ್‌ ಬಗ್ಗೆ ಬಿಜೆಪಿಗೆ ಭಯ”- ಡಿ.ಕೆ.ಶಿವಕುಮಾರ್‌

12:25 AM Oct 08, 2023 | Team Udayavani |

ಬೆಂಗಳೂರು: ರಾಹುಲ್‌ ಗಾಂಧಿ ನಾಯಕತ್ವದ ಬಗ್ಗೆ ಬೆದರಿರುವ ಕಾರಣದಿಂದಲೇ ಬಿಜೆಪಿಯು ರಾವಣನ ಹೆಸರನ್ನು ತಂದಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.
ರಾಹುಲ್‌ ಗಾಂಧಿ ಅವರನ್ನು ರಾವಣನನ್ನಾಗಿ ಬಿಂಬಿಸಿರುವ ಬಿಜೆಪಿ ಪೋಸ್ಟರ್‌ ಬಗ್ಗೆ ಶನಿವಾರ ಪ್ರತಿಕ್ರಿಯೆ ನೀಡಿದು ಅವರು, ರಾಹುಲ್‌ ಜನಪ್ರಿಯತೆ ಹಾಗೂ ನಾಯಕತ್ವಕ್ಕೆ ಹೆದರಿ ಅವರನ್ನು ರಾವಣನಂತೆ ಬಿಜೆಪಿಯವರು ಬಿಂಬಿಸಿದ್ದಾರೆ. ಬಿಜೆಪಿಗೆ ರಾಮ ಮತ್ತು ರಾವಣನ ಯುದ್ಧದ ಪುರಾಣ ಸಂಪೂರ್ಣವಾಗಿ ತಿಳಿದಿಲ್ಲ ಎಂದು ದೂರಿದರು.

Advertisement

ಉತ್ತರ ಭಾರತದಲ್ಲಿ ರಾವಣನನ್ನು ಪೂಜಿಸುವ ಪದ್ಧತಿಯಿದೆ. ನಮ್ಮ ಸಂಸ್ಕೃತಿ ಅನ್ನು ಸರಿಯಾಗಿ ತಿಳಿದುಕೊಂಡಿದ್ದರೆ ಈ ಮಟ್ಟಕ್ಕೆ ಬಿಜೆಪಿ ಮುಖಂಡರು ಇಳಿಯುತ್ತಿರಲಿಲ್ಲ. ಭಾರತ್‌ ಜೋಡೋ ಯಾತ್ರೆ ಬಳಿಕ ಇಂಡಿಯಾ ಮೈತ್ರಿಕೂಟ ಪ್ರಾರಂಭವಾಯಿತು. ಇಂಡಿಯಾ ಮೈತ್ರಿಕೂಟ ಬಲಿಷ್ಠವಾಗಿ ರೂಪುಗೊಳ್ಳುತ್ತಿದೆ, ಇಂಡಿಯಾ ಒಂದಾಗುತ್ತಿದೆ. ಹೀಗಾಗಿ ಬಿಜೆಪಿ ಮುಖಂಡರು ರಾಹುಲ್‌ ಗಾಂಧಿ ಪಾದಯಾತ್ರೆ ಹಾಗೂ ಮೈತ್ರಿಗೆ ಹೆದರಿಕೊಂಡಿದ್ದಾರೆ ಎಂದು ಟೀಕಿಸಿದರು.

ಪ್ರತಿ ಹಳ್ಳಿಯಲ್ಲಿ ಮದ್ಯದಂಗಡಿ ತೆರೆಯುವುದಿಲ್ಲ
ಹೊಸ ಮದ್ಯದಂಗಡಿಗಳಿಗೆ ಅನುಮತಿ ನೀಡುವುದಿಲ್ಲ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ಕುರಿ ತಂತೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಶಿವಕುಮಾರ್‌, ಮದ್ಯದಂಗಡಿ ತೆರೆಯಲು ಅನೇಕ ನಿಯಮಗಳಿವೆ. ಹೀಗಾಗಿ ಪ್ರತಿ ಹಳ್ಳಿ ಹಳ್ಳಿಯಲ್ಲಿ ಮದ್ಯದಂಗಡಿ ತೆರೆಯಲು ಆಗುವುದಿಲ್ಲ. ಇವುಗಳನ್ನು ಒಂದು ವ್ಯವಸ್ಥಿತ ರೂಪದಲ್ಲಿ ತರಬೇಕಿದೆ ಎಂದು ಹೇಳಿದರು.

ರಾಜ್ಯದ ಜನರಿಂದ ಅಧಿಕಾರಕ್ಕೆ
ಲಿಂಗಾಯತರ ಶೇ.20ರಷ್ಟು ಹಾಗೂ ಇತರರ ಶೇ.80ರಷ್ಟು ಮತಗಳು ಕಾಂಗ್ರೆಸ್‌ ಪಕ್ಷಕ್ಕೆ ಬಂದಿವೆ ಎಂಬ ಕಾಂಗ್ರೆಸ್‌ ಮುಖಂಡ ಪ್ರಕಾಶ್‌ ರಾಥೋಡ್‌ ಹೇಳಿಕೆಗೆ ಉತ್ತರಿಸಿದ ಅವರು, ಅಂತಹ ಯಾವುದೇ ಲೆಕ್ಕ ಇಲ್ಲ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಗೌಪ್ಯ ಮತದಾನ ವ್ಯವಸ್ಥೆ ಅಳವಡಿಸಿಕೊಂಡಿದ್ದೇವೆ. ಯಾರ್ಯಾರು ಯಾರಿಗೆ ಮತ ಹಾಕುತ್ತಾರೆ ಎಂದು ಹೇಗೆ ತಿಳಿಯುವುದು? ಇಡೀ ರಾಜ್ಯದ ಜನ ನಮಗೆ 136 ಸೀಟು ಕೊಟ್ಟು ಅಧಿಕಾರಕ್ಕೆ ತಂದಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next