Advertisement

Mangaluru ಸಿದ್ಧಾಂತದಲ್ಲಿ ಬಿಜೆಪಿ ಎಂದೂ ರಾಜಿ ಮಾಡಿಲ್ಲ : ನಳಿನ್‌ ಕುಮಾರ್‌

11:33 PM Nov 21, 2023 | Team Udayavani |

ಮಂಗಳೂರು: ಜನಸಂಘದಿಂದ ಆರಂಭಗೊಂಡು ಇಂದಿನ ಬಿಜೆಪಿಯ ಸುವರ್ಣಯುಗದ ವರೆಗೆ ಪಕ್ಷ ಅಧಿಕಾರದಲ್ಲಿ ಇರಲಿ ಅಥವಾ ಇಲ್ಲದಿರಲಿ ಪಕ್ಷದ ಸಿದ್ಧಾಂತ ಮತ್ತು ಕಾರ್ಯಪದ್ಧತಿಯಲ್ಲಿ ಎಂದೂ ರಾಜಿ ಮಾಡಿಲ್ಲ. ಆಡಳಿತದಲ್ಲಿ ಪರಿವರ್ತನೆ ಬಿಜೆಪಿಯ ಲಕ್ಷಣವಾಗಿದೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು.

Advertisement

ಮಂಗಳವಾರ ನಗರದ ಸಂಘನಿಕೇತನದಲ್ಲಿ ಮಂಗಳೂರು ಮತ್ತು ಶಿವಮೊಗ್ಗ ವಿಭಾಗದ ನಗರಸಭಾ ಸದಸ್ಯರ ಪ್ರಶಿಕ್ಷಣ ವರ್ಗವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣ ಎನ್ನುವ ಪರಿಕಲ್ಪನೆಯಡಿ ಪಕ್ಷದ ಕಾರ್ಯಪದ್ಧತಿಯಲ್ಲಿ ಒಂದಾಗಿರುವ ಪ್ರಶಿಕ್ಷಣ ವರ್ಗವನ್ನು ನಿರಂತರವಾಗಿ ಆಯೋಜಿಸಲಾಗುತ್ತಿದೆ. ಕಾರ್ಯಕರ್ತನನ್ನು ಬೆಳೆಸಿ ನಾಯಕನನ್ನಾಗಿ ಮಾಡುವುದು, ಆತನ ಮೂಲಕ ರಾಷ್ಟ್ರ ನಿರ್ಮಾಣ ಮಾಡುವುದು ಬಿಜೆಪಿಯ ವೈಶಿಷ್ಟ್ಯ. ಆತನಿಗೆ ಗೊತ್ತಿಲ್ಲದ ವಿಚಾರಗಳನ್ನು ಹೇಳುವುದರ ಜತೆಗೆ ಪಕ್ಷದ ವಿಚಾರಧಾರೆಯನ್ನು ತಿಳಿಸಿ ಮತ್ತಷ್ಟು ಗಟ್ಟಿಗೊಳಿಸುವ ಕಾರ್ಯವನ್ನು ಪ್ರಶಿಕ್ಷಣದ ವರ್ಗದ ಮೂಲಕ ಮಾಡಲಾಗುತ್ತದೆ ಎಂದು ಹೇಳಿದರು.

ದೇಶ ಪರಿವರ್ತನೆ
ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಆಯ್ಕೆಯಾಗಿರುವ ಜನಪ್ರತಿನಿಧಿಗಳನ್ನು ಟೀಕಿಸುವ ಹಕ್ಕು ಮತದಾರನಿಗೆ ಇದ್ದೇ ಇದೆ. ವಾಜಪೇಯಿ ಅವರ ಕಾಲದಲ್ಲಿ ಭಾರತ ಎತ್ತರದ ಸ್ಥಾನಕ್ಕೆ ಏರಿತ್ತು. ಕಳೆದ 9 ವರ್ಷಗಳಲ್ಲಿ ಜಗತ್ತು ಭಾರತದ ಕಡೆಗೆ ನೋಡುವಂತೆ ಪ್ರಧಾನಿ ಮೋದಿ ಮಾಡಿದ್ದಾರೆ. ಸಾಮಾನ್ಯದಿಂದ ಅಸಾಮಾನ್ಯದ ವರೆಗೆ ದೇಶ ಪರಿವರ್ತನೆಯಾಗಿದೆ ಎಂದರು.

ಸೂಕ್ತ ಮಾರ್ಗದರ್ಶನ
ರಾಜ್ಯ ಪ್ರಶಿಕ್ಷಣ ಪ್ರಕೋಷ್ಠದ ಸಂಚಾಲಕ ಶ್ರೀಕಾಂತ್‌ ಕುಲಕರ್ಣಿ ಮಾತನಾಡಿ, ಪಕ್ಷದ ಆತ್ಮವೇ ಸಂಘಟನೆ. ಸಂಘಟನೆಯಲ್ಲಿ ಕೆಲಸ ಮಾಡುವ ಕಾರ್ಯಕರ್ತರಿಗೆ ಸರಿಯಾದ ಸಂಸ್ಕಾರ ಕೊಟ್ಟು ಸರಿಯಾದ ದಿಕ್ಕಿನಲ್ಲಿ ಕೆಲಸ ಮಾಡುವ ನಿಟ್ಟಿನಲ್ಲಿ ಪ್ರೇರೇಪಿಸುವುದು ಪ್ರಶಿಕ್ಷಣ ವರ್ಗದ ಉದ್ದೇಶ. ಚುನಾವಣೆಯಲ್ಲಿ ಗೆಲುವು ಸೋಲು ಸಾಮಾನ್ಯ. ಇದರ ಹೊರತಾಗಿಯೂ ಸಂಘಟನೆಯನ್ನು ಗಟ್ಟಿ ಮಾಡುವುದು ಪಕ್ಷದ ವಿಶೇಷತೆಯಾಗಿದ್ದು, ಪ್ರಶಿಕ್ಷಣ ವರ್ಗದ ಮೂಲಕ ಆಗಿಂದಾಗ್ಗೆ ಈ ಪ್ರಕ್ರಿಯೆ ನಡೆಯುತ್ತದೆ ಎಂದರು.

Advertisement

ಕನಸು ನನಸು
ಅಧ್ಯಕ್ಷತೆ ವಹಿಸಿದ್ದ ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಮೂಡುಬಿದಿರೆ ಮಾತನಾಡಿ, ಬಿಜೆಪಿ ರಾಷ್ಟ್ರದ ಪುನರ್‌ ನಿರ್ಮಾಣ ಸಂಕಲ್ಪದಿಂದ ಕೆಲಸ ಮಾಡುವ ಪಕ್ಷವಾಗಿದ್ದು, ವ್ಯಕ್ತಿಯ ಪರಿವರ್ತನೆಯಿಂದ ಸಮಾಜದ ಪರಿವರ್ತನೆ, ಅದರಿಂದ ರಾಷ್ಟ್ರ ಪರಿವರ್ತನೆ ಎಂದು ನಂಬಿ, ಕಾರ್ಯಕರ್ತರನ್ನು ವ್ಯವಸ್ಥಿತವಾಗಿ ನಿರ್ಮಾಣ ಮಾಡುವ ವ್ಯವಸ್ಥೆಯೇ ಪ್ರಶಿಕ್ಷಣ. ಇಂದು ರಾಷ್ಟ್ರೀಯ ವಿಚಾರಧಾರೆಯನ್ನು ಬಿಟ್ಟ ಪಕ್ಷಗಳು ನೆಲಕಚ್ಚಿವೆ. ಜನಸಂಘದ ಕಾಲದ ಸಂಕಲ್ಪ, ಕನಸುಗಳು ಇಂದು ಸುವರ್ಣಯುಗದಲ್ಲಿ ನನಸಾಗುತ್ತಿದೆ ಎಂದರು.

ರಾಷ್ಟ್ರೀಯ ಪ್ರಶಿಕ್ಷಣ ಪ್ರಕೋಷ್ಠದ ಸದಸ್ಯ ರವೀಂದ್ರ ಸಾಠೆ, ರಾಜ್ಯ ಪ್ರಶಿಕ್ಷಣ ಪ್ರಕೋಷ್ಠದ ಸಹ ಸಂಚಾಲಕಿ ಡಾ| ಮಂಜುಳಾ ರಾವ್‌, ಮಂಗಳೂರು ವಿಭಾಗ ಪ್ರಭಾರಿ ಉದಯ ಕುಮಾರ್‌ ಶೆಟ್ಟಿ, ಶಾಸಕರಾದ ಡಿ. ವೇದವ್ಯಾಸ ಕಾಮತ್‌, ಉಮಾನಾಥ ಕೋಟ್ಯಾನ್‌, ಡಾ| ವೈ. ಭರತ್‌ ಶೆಟ್ಟಿ ಉಪಸ್ಥಿತರಿದ್ದರು.

ಮಂಗಳೂರು ಉತ್ತರ ಮಂಡಲ ಅಧ್ಯಕ್ಷ ತಿಲಕ್‌ರಾಜ್‌ ಕೃಷ್ಣಾಪುರ ಸ್ವಾಗತಿಸಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ ನಿರೂಪಿಸಿ, ಕಾರ್ಯದರ್ಶಿ ಭರತ್‌ ಕುಮಾರ್‌ ಕಾರ್ಯಕ್ರಮ ನಿರೂಪಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next