Advertisement

ಘಟ್ಟ ನಗರಿಯಲ್ಲಿಕೈ- ಕಮಲ ಸಮರ

04:47 PM Apr 07, 2018 | |

ಶಿವಮೊಗ್ಗ: ರಾಜ್ಯ ರಾಜಕೀಯದಲ್ಲಿ ಅತ್ಯಂತ ಮಹತ್ವದ ಕ್ಷೇತ್ರ ಎಂದು ಗುರುತಿಸಿಕೊಂಡ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರ ಭೌಗೋಳಿಕವಾಗಿ ಜಿಲ್ಲೆಯ ಅತ್ಯಂತ ಚಿಕ್ಕ ಕ್ಷೇತ್ರವೂ ಹೌದು. ಸಮಾಜವಾದಿ ರಾಜಕಾರಣದ ಕೇಂದ್ರ ಸ್ಥಾನವಾಗಿ, ಹಲವು ಹೋರಾಟಗಳಿಗೆ ರೂಪು ಕೊಟ್ಟ ಕೇಂದ್ರವೂ ಆಗಿದ್ದ ಈ ಕ್ಷೇತ್ರ 1978 ರವರೆಗೆ ಕಾಂಗ್ರೆಸ್‌ ಪಕ್ಷದ ಮಡಿಲಲ್ಲಿ ಇತ್ತು. 1983 ರಲ್ಲಿ ಮೊದಲ ಬಾರಿಗೆ ಬಿಜೆಪಿಗೆ ಮನಸ್ಸು ಕೊಟ್ಟ ಬಳಿಕ ಬಹುತೇಕ ಬಿಜೆಪಿಯದ್ದೇ ಕಾರುಬಾರು.

Advertisement

1985, 99 ಮತ್ತು 2013ರಲ್ಲಿ ಮಾತ್ರ ಇಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಗೆದ್ದಿದ್ದಾರೆ. ಘಟಾನುಘಟಿ ನಾಯಕರುಗಳೆಲ್ಲ ಈ ಕ್ಷೇತ್ರವನ್ನು ಕೇಂದ್ರವಾಗಿರಿಸಿಕೊಂಡಿದ್ದರೂ, ನಾಲ್ಕು ಮಂದಿ ಮುಖ್ಯಮಂತ್ರಿಯಾಗಿ, ಮೂರು ಮಂದಿ ಉಪ ಮುಖ್ಯಮಂತ್ರಿಯಾಗಿದ್ದರೂ ಜಿಲ್ಲೆಯ ಕೇಂದ್ರ ಸ್ಥಾನವಾದ ಶಿವಮೊಗ್ಗ ನಗರ ಮಾತ್ರ ಅಭಿವೃದ್ಧಿಯ ದೃಷ್ಟಿಯಿಂದ ದೂರವೇ ಉಳಿದಿತ್ತು. ಆದರೆ ಯಡಿಯೂರಪ್ಪ
ಮಾತ್ರ ಇದಕ್ಕೆ ಅಪವಾದವಾಗಿ ಉಪಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿಯಾದ ಅವಧಿಯಲ್ಲಿ ಅಭಿವೃದ್ಧಿಯ ಮಹಾಪೂರವನ್ನೇ ಹರಿಸಿದರು. ನಗರದ ಚಿತ್ರಣವನ್ನೇ ಬದಲು ಮಾಡಿದರು. ಬೇಕು ಎಂಬ ಬೇಡಿಕೆ ಹೊರ ಬಂದರೆ ಸಾಕು ಮಂಜೂರಾತಿ ಗ್ಯಾರಂಟಿ ಎಂಬ ಮಾತು ಜನಜನಿತವಾಗಿತ್ತು.

ಹೀಗಾಗಿ ಕಳೆದ ಚುನಾವಣೆಯಲ್ಲಿಯೂ ಇಲ್ಲಿ ಅಭಿವೃದ್ಧಿಯ ವಿಷಯ ಪ್ರಮುಖ ಪಾತ್ರ ವಹಿಸಿತ್ತು. ಈ ಬಾರಿಯೂ ಅದೇ ವಿಷಯ ಮುನ್ನೆಲೆಗೆ ಬರಲಿದೆ. ಕೋಮು ಸಂಘರ್ಷದ ವಿಚಾರದಲ್ಲಿಯೂ ಈ ಕ್ಷೇತ್ರ ಅತ್ಯಂತ ಸೂಕ್ಷ್ಮವಾಗಿದೆ.
 
ಕಾಂಗ್ರೆಸ್‌ ಮತ್ತು ಬಿಜೆಪಿಯ ಹೊರತಾಗಿ ಜೆಡಿಎಸ್‌ ಇನ್ನೂ ಇಲ್ಲಿ ಪ್ರಬಲವಾಗಿ ಸಂಘಟಿತವಾಗಿಲ್ಲ. ಆದಾಗ್ಯೂ ಪಕ್ಷದ ನಿಕಟಪೂರ್ವ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್‌ ಪಕ್ಷಕ್ಕೊಂದು ಸ್ಪಷ್ಟ ಅಸ್ತಿತ್ವ ನೀಡಿದರು. ಈ ಬಾರಿ ಕಾಂಗ್ರೆಸ್‌ ಮತ್ತು ಬಿಜೆಪಿ ನೇರ ಮುಖಾಮುಖೀಯಾಗಲಿವೆ. 

ಆದರೆ ಕಳೆದ ಕೆಲ ದಶಕಗಳಿಂದ ಬಿಜೆಪಿಯನ್ನು ಬೆಂಬಲಿಸಿಕೊಂಡು ಬಂದ ಲಿಂಗಾಯತ ಸಮುದಾಯ ಈ ಬಾರಿಯೂ ಬಿಜೆಪಿಯನ್ನು ಬೆಂಬಲಿಸಿದರೆ ಗೆಲುವು ಸುಲಭವಾಗುತ್ತದೆ. ಈಶ್ವರಪ್ಪ ಮತ್ತು ಯಡಿಯೂರಪ್ಪ ನಡುವಿನ ಮುನಿಸಿನ ಪರಿಣಾಮ ವೀರಶೈವ  ಸಮುದಾಯ ತಮ್ಮದೇ ಸಮುದಾಯದ ಜೆಡಿಎಸ್‌ ಅಭ್ಯರ್ಥಿ ನಿರಂಜನ ಅವರಿಗೆ ಬೆಂಬಲ ನೀಡಿದರೆ ಜೆಡಿಎಸ್‌ ಕಠಿಣ ಸ್ಪರ್ಧೆ ಒಡ್ಡುವುದು ಖಚಿತ. ಕಾಂಗ್ರೆಸ್‌ ಅಭ್ಯರ್ಥಿಯಾಗುವ ಸಾಧ್ಯತೆ ಇರುವ ಬ್ರಾಹ್ಮಣ ಸಮುದಾಯದ ಕೆ. ಬಿ. ಪ್ರಸನ್ನಕುಮಾರ್‌ ತಮ್ಮ ಸಮುದಾಯದ ಮತಗಳ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದಾರೆ. ಜೊತೆಗೆ ಮುಸ್ಲಿಂ ಮತ್ತು ಹಿಂದುಳಿದ ವರ್ಗದ ಮತಗಳನ್ನು ಕ್ರೋಢೀಕರಿಸುವ ಪ್ರಯತ್ನದಲ್ಲಿ ಯಶಸ್ವಿಯಾಗುತ್ತಿದ್ದಾರೆ. ಬಿಜೆಪಿ ಬ್ರಾಹ್ಮಣ ಮತ್ತು ವೀರಶೈವ ಲಿಂಗಾಯಿತ ಮತಗಳನ್ನು ನಂಬಿಕೊಂಡಿದೆ. ಬಿಜೆಪಿ ನಾಯಕರ ನಡುವಿನ ಬೂದಿ ಮುಚ್ಚಿದ ಕೆಂಡದಂತಹ ಅಸಮಾಧಾನ, ಸಿಟ್ಟು ಯಾವ ರೀತಿ ಹೊರ ಬರುತ್ತದೆ ಎಂಬುದರ ಮೇಲೆ ಫಲಿತಾಂಶ ನಿರ್ಧಾರವಾಗುತ್ತದೆ. ಬ್ರಾಹ್ಮಣರು, ಲಿಂಗಾಯತರು, ಮುಸ್ಲಿಂರು ಬಹುತೇಕ ಸರಿ ಸಂಖ್ಯೆಯಲ್ಲಿ ಇರುವ ಈ ಕ್ಷೇತ್ರದಲ್ಲಿ ಉಳಿದಂತೆ ಒಕ್ಕಲಿಗರು, ಕುರುಬರು, ದಲಿತರು, ಕ್ರೈಸ್ತರು, ಕ್ಷತ್ರಿಯ ಮರಾಠಿಗರು ಮೊದಲಾದವರಿದ್ದಾರೆ.

ಕ್ಷೇತ್ರದ ಬೆಸ್ಟ್‌ ಏನು?
ನಗರದ ಬಡ ಜನರ ಮೂಲ ಸೌಕರ್ಯಕ್ಕೆ ಒತ್ತು. ಬಡಾವಣೆಗಳ ರಸ್ತೆ ಅಭಿವೃದ್ಧಿ. ಕುಡಿಯುವ ನೀರು ಪೂರೈಸುವ ಮಂಡ್ಲಿ ವಾಟರ್‌ ವರ್ಕ್ಸ, ಬಸ್‌ ನಿಲ್ದಾಣ ಮತ್ತು ಮೆಗ್ಗಾನ್‌ ಆಸ್ಪತ್ರೆಗೆ ಭೂಗತ ಕೇಬಲ್‌ ಅಳವಡಿಸಿ ನಿರಂತರ ವಿದ್ಯುತ್‌ ಪೂರೈಕೆಗೆ ಕ್ರಮ. ಕೆಎಸ್‌ಆರ್‌ಟಿಸಿ ವಿಭಾಗೀಯ ಕಚೇರಿ ಆರಂಭ.

Advertisement

ಕ್ಷೇತ್ರದ ದೊಡ್ಡ  ಸಮಸ್ಯೆ?
ಹೊರ ವರ್ತುಲ ರಸ್ತೆ ಕಾಮಗಾರಿಯ ನಿರೀಕ್ಷೆ ಈಡೇರಿಲ್ಲ. ನೆನೆಗುದಿಗೆ ಬಿದ್ದಿರುವ ವಿಮಾನ ನಿಲ್ದಾಣ ಕಾಮಗಾರಿ ಟೇಕಾಫ್‌ ಆಗಿಯೇ ಇಲ್ಲ 

ಶಾಸಕರು ಏನಂತಾರೆ?
ಕಳೆದ 20 ವರ್ಷದಿಂದ ಆಗದ ಎಲ್ಲ ಕೆಲಸಗಳು ಈಗ ಆಗಿದೆ. 20 ವರ್ಷದಿಂದ ಶಾಸಕರಾಗಿದ್ದವರು, ಕೊನೆಗೆ ಸಚಿವರಾಗಿ
ಯಾವ ಖಾತೆಯನ್ನು ನಿರ್ವಹಿಸಿದ್ದರೋ ಆ ಇಲಾಖೆಯ ಕೆಲಸಗಳು ಕೂಡ ನನ್ನ ಅವಧಿಯಲ್ಲಿಯೇ ಆಗಿದೆ. ಇಡೀ ನಗರದಲ್ಲಿ ಜನರಿಗೆ ಮೂಲ ಸೌಕರ್ಯ ಒದಗಿಸಲು ಆದ್ಯತೆ ನೀಡಿ ಕೆಲಸ ಮಾಡಿದ್ದೇನೆ. ಈ ಹಿಂದೆ ಮುಖ್ಯ ರಸ್ತೆಗಳು ಮಾತ್ರ ಅಭಿವೃದ್ಧಿಯಾಗಿದ್ದರೆ, ನಾನು ಬಡಾವಣೆಯ ಒಳರಸ್ತೆಗಳನ್ನು ಅಭಿವೃದ್ಧಿ ಪಡಿಸಿರುವೆ. ಪಶು ವೈದ್ಯಕೀಯ ಕಾಲೇಜಿನ ಸಮಸ್ಯೆ ಬಗೆಹರಿಸಲಾಗಿದೆ. ಜೈಲ್‌ ಸ್ಥಳಾಂತರಕ್ಕೆ ಹಣ ಒದಗಿಸಿ ಕಾಮಗಾರಿ ಪೂರ್ತಿಗೊಳಿಸಿದ್ದೇನೆ. ಬಡವರಿಗೆ ಮನೆ ನೀಡಲು ಕ್ರಮ ಕೈಗೊಂಡಿದ್ದು, ಬಹುತೇಕ ಫಲಾನುಭವಿಗಳ ಪಟ್ಟಿ ಸಿದ್ಧವಾಗಿದೆ. ಇದರ ಜೊತೆಗೆ ಬಡವರ ಪರವಾದ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಜಾರಿಯಾಗಿವೆ. ಒಟ್ಟಾರೆ ಧೈರ್ಯವಾಗಿ ಮತ ಕೇಳಲು ಜನ ಬಳಿ ಹೋಗಬಹುದು. ಇದು ನನಗೆ ತೃಪ್ತಿ ತಂದಿದೆ..
ಕೆ.ಬಿ.ಪ್ರಸನ್ನಕುಮಾರ್‌

ಕ್ಷೇತ್ರ ಮಹಿಮೆ 
ದೂರ್ವಾಸ ಮುನಿಯ ತಪೋವನ ಎಂಬ ಪುರಾಣ ಖ್ಯಾತಿಯ ಈ ನಗರಕ್ಕಿದ್ದ ಸಿಹಿಮೊಗೆ ಎಂಬ ಹೆಸರು ಕಾಲಾಂತರದಲ್ಲಿ ಶಿವಮೊಗ್ಗವಾಯಿತು. ತ್ರೇತಾಯುಗದಲ್ಲಿ ಶ್ರೀರಾಮ ಮತ್ತು ಮಹಾಭಾರತದಲ್ಲಿ ಪಾಂಡವರು ನಡೆದಾಡಿದ ಜಾಗ. ಮೂರನೇ ಶತಮಾನದಲ್ಲಿ ಮೌರ್ಯರ, ನಾಲ್ಕನೇ ಶತಮಾನದಲ್ಲಿ ಕದಂಬ ಮತ್ತು ಗಂಗರ, ಆರನೇ ಶತಮಾನದಲ್ಲಿ ಬಾದಾಮಿ ಚಾಲುಕ್ಯರ, ಎಂಟನೇ ಶತಮಾನದಲ್ಲಿ ರಾಷ್ಟ್ರಕೂಟರ, 10 ನೇ ಶತಮಾನದಲ್ಲಿ ಗಂಗರ, 11 ನೇ ಶತಮಾನದಲ್ಲಿ ಹೊಯ್ಸಳರ, 12 ನೇ ಶತಮಾನದಲ್ಲಿ ಕಾಳಚೂರಿ ಎಂಬ ಅರಸರ, 14 ನೇ ಶತಮಾನದ ಹೊತ್ತಿಗೆ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಗೆ ಒಳಪಟ್ಟಿತ್ತು. 

16 ನೇ ಶತಮಾನದಲ್ಲಿ ಕೆಳದಿ ಅರಸರು ರಾಜರಾಗಿ ಕಾರ್ಯಭಾರ ಆರಂಭಿಸಿದರು. ಬಳಿಕ ಮೈಸೂರು ಆಡಳಿತಕ್ಕೆ ಒಳಪಟ್ಟಿತು. ಶಿವಪ್ಪನಾಯಕನ ಬೇಸಿಗೆ ಅರಮನೆ, ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಇಲ್ಲಿನ ಆಕರ್ಷಕ ಸ್ಥಳಗಳು. ತುಂಗಾ ನದಿಯ ದಂಡೆಯ ಮೇಲಿನ ಈ ನಗರ ಘಟ್ಟನಗರಿ ಎಂದೇ ಖ್ಯಾತವಾಗಿದೆ.  

ಶಾಸಕರಾಗಿ ಮಾಡಬಹುದಾದ ಕೆಲಸಗಳನ್ನು ಕೆ.ಬಿ. ಪ್ರಸನ್ನಕುಮಾರ್‌ ತಮ್ಮ ಅವಧಿಯಲ್ಲಿ ನಡೆಸಿದ್ದಾರೆ. ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾದರೂ ನಗರದಲ್ಲಿ ಹಲವು ಅಭಿವೃದ್ಧಿ ಕೆಲಸಗಳಿಗೆ ಅನುದಾನ ತರುವಲ್ಲಿ ಯಶಸ್ವಿಯಾಗಿದ್ದಾರೆ. ಆದರೂ ಹಲವು ಕಾಮಗಾರಿ ನಡೆಯಬೇಕಿದೆ. ಪ್ರಮುಖವಾಗಿ ಹೊರ ವರ್ತುಲ ರಸ್ತೆ ನನೆಗುದಿಗೆ ಬಿದ್ದಿದೆ. 24ಗಿ7 ಕುಡಿಯುವ ನೀರು ಯೋಜನೆ,
ಯುಜಿಡಿ ಕಾಮಗಾರಿ ಪೂರ್ಣಗೊಳ್ಳಬೇಕು. ಮೂಲಸೌಕರ್ಯ ಒದಗಿಸಲು ಇನ್ನೂ ಹೆಚ್ಚಿನ ಗಮನ ನೀಡಬೇಕಿದೆ..
ಮಹೇಶ್‌ ಆರ್‌. ಪೈ, ಶಿವಮೊಗ್ಗ

ಕ್ಷೇತ್ರದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ. ಮೂಲ ಸೌಲಭ್ಯ ಕೊರತೆ ಇದೆ. ರಸ್ತೆಗಳು ಸಂಪೂರ್ಣ ಹಾಳಾಗಿದೆ. ಎನ್‌.ಟಿ. ರಸ್ತೆ, ಸಾಗರ ರಸ್ತೆ
ವಿಸ್ತರಣಾ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ವಿಮಾನ ನಿಲ್ದಾಣ ಕಾಮಗಾರಿ ಶುರುವಾಗುವ ಲಕ್ಷಣವಿಲ್ಲ. ಕೈಗಾರಿಕೆಗಳು ಸ್ಥಾಪನೆಯಾಗಿದ್ದರೆ ಉದ್ಯೋಗ ಸೃಷ್ಟಿಯಾಗುತ್ತಿತ್ತು. ಆ ಪ್ರಯತ್ನ ನಡೆದಿಲ್ಲ. ಸರ್ಕಾರಿ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಹಲವು ನ್ಯೂನತೆಗಳಿವೆ.
ವಿನೋಬರಾವ್‌, ನ್ಯೂಮಂಡ್ಲಿ, ಶಿವಮೊಗ

ಸಾಕಷ್ಟು ಅಭಿವೃದ್ಧಿಯಾಗಿದ್ದರೂ, ನಗರದಲ್ಲಿ ಇನ್ನೂ ಕೆಲವು
ಕುಂದುಕೊರತೆಗಳು ಇವೆ. ಪ್ರಮುಖವಾಗಿ ರಸ್ತೆಗಳ
ಅಭಿವೃದ್ಧಿಯಾಗಬೇಕು. ನಗರದಲ್ಲಿ ಮೂಲ ಸೌಕರ್ಯ
ಸಿಕ್ಕಿದ್ದರೂ ಹೊರವಲಯದಲ್ಲಿ ಇನ್ನಷ್ಟು ಆಗಬೇಕಾಗಿದೆ. ಸವಳಂಗ ಹಾಗೂ ಹೊಳೆಹೊನ್ನೂರು ರಸ್ತೆಯಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣವಾಗಬೇಕು.
ಸಿ.ಎ. ನಾಗರಾಜ್‌, ತೇವರಚಟ್ನಳ್ಳಿ , ಶಿವಮೊಗ್ಗ

 ಗೋಪಾಲ್‌ ಯಡಗೆರೆ

Advertisement

Udayavani is now on Telegram. Click here to join our channel and stay updated with the latest news.

Next