Advertisement

ಗ್ರಾಪಂ ಕ್ರೆಡಿಟ್‌ಗೆ ಬಿಜೆಪಿ-ಕಾಂಗ್ರೆಸ್‌ ಗುದ್ದಾಟ

05:51 PM Feb 10, 2021 | Nagendra Trasi |

ಮುದ್ದೇಬಿಹಾಳ: ತಾಲೂಕಿನ ರಾಜಕೀಯ ಇತಿಹಾಸದಲ್ಲಿ ಮೊದಲ ಬಾರಿ ಬಿಜೆಪಿ ಶಾಸಕರು ಅಧಿಕಾರದ ಚುಕ್ಕಾಣಿ ಹಿಡಿದು ಈ ಭಾಗದ ಮೊದಲ ಬಿಜೆಪಿ ಶಾಸಕ ಕೀರ್ತಿಗೆ ಪಾತ್ರರಾಗಿದ್ದರು. ಇದೀಗ 20 ಗ್ರಾಪಂಗಳ ಪೈಕಿ 9 ಗ್ರಾಪಂಗಳ ಆಡಳಿತ ಚುಕ್ಕಾಣಿ ಹಿಡಿದವರು ಯಾವುದೇ ಪಕ್ಷದ ಚಿಹ್ನೆಯಡಿ ಆಯ್ಕೆಯಾಗಿರದಿದ್ದರೂ ನಾವು ಬಿಜೆಪಿ ಬೆಂಬಲಿತರು, ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿಯವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತೇವೆ ಎಂದು ಹೇಳಿ ನಡಹಳ್ಳಿ, ಬಿಜೆಪಿಯ ಶಕ್ತಿ ಹೆಚ್ಚಿಸಿ ಎದುರಾಳಿಗಳಲ್ಲಿ ನಡುಕ ಹುಟ್ಟುವಂತೆ ಮಾಡಿದ್ದಾರೆ ಎನ್ನುವ ಮಾತು ಇಲ್ಲಿ ಕೇಳಿ ಬರತೊಡಗಿದೆ.

Advertisement

9 ಗ್ರಾಪಂಗಳ ಜೊತೆಗೆ ಇನ್ನೂ 3 ಗ್ರಾಪಂಗಳಲ್ಲಿ ಪೈಪೋಟಿ ನಡೆದು ಅದೃಷ್ಟ ಕೈ ಕೊಟ್ಟಿದ್ದರೂ ಬಿಜೆಪಿ ಬೆಂಬಲಿತರು ಸಾಕಷ್ಟು ಪ್ರಾಬಲ್ಯ ಸಾಧಿ ಸಿ, ಕಾಂಗ್ರೆಸ್‌ಗೆ
ಭಾರೀ ಪೈಪೋಟಿ ನೀಡಿದ್ದಾರೆ. ತಾಲೂಕಿನ ರಾಜಕೀಯ ಇತಿಹಾಸದಲ್ಲಿ ಶಾಸ್ವತವಾಗಿ ನೆನಪಲ್ಲುಳಿಯುವ ಸಾಧನೆ ಮಾಡಿ ತೋರಿಸುವ ಮಟ್ಟಕ್ಕೆ ಬೆಳವಣಿಗೆ
ಹೊಂದಿರುವುದು ಸಾಮಾನ್ಯದ ಮಾತಲ್ಲ ಎನ್ನುವುದು ರಾಜಕೀಯ ವಲಯದ ಲೆಕ್ಕಾಚಾರವಾಗಿದೆ.

ಸ್ವಪಕ್ಷೀಯರೇ ಆದ ಕೆಲವು ನಾಯಕರ ಅಸಹಕಾರದ ನಡುವೆಯೂ ಬಿಜೆಪಿಯ ಈ ಯಶಸ್ಸಿನ ಕೀರ್ತಿ ಸಂಪೂರ್ಣವಾಗಿ ಶಾಸಕ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್‌. ಪಾಟೀಲ ನಡಹಳ್ಳಿಯವರಿಗೆ ಸಲ್ಲುತ್ತದೆ ಎಂದು ರಾಜಕೀಯ ಪಂಡಿತರು ಹೇಳುತ್ತಿರುವುದು ಅತಿಶಯೋಕ್ತಿಯೇನಲ್ಲ.

ಎಲ್ಲೆಲ್ಲಿ ಬಿಜೆಪಿ ಬೆಂಬಲಿತರು?: ಕವಡಿಮಟ್ಟಿ, ಢವಳಗಿ, ರೂಢಗಿ, ಕುಂಟೋಜಿ, ಅಡವಿ ಸೋಮನಾಳ, ಮಡಿಕೇಶ್ವರ, ಬಿದರಕುಂದಿ, ನಾಗಬೇನಾಳ, ನಾಗರಬೆಟ್ಟ
ಗ್ರಾಪಂಗಳ ಆಡಳಿತ ಚುಕ್ಕಾಣಿ ಬಿಜೆಪಿ ಬೆಂಬಲಿತರ ಕೈಗೆ ದಕ್ಕಿದೆ. ಆಲೂರು, ಕೋಳೂರು ಗ್ರಾಪಂಗಳಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಏರ್ಪಟ್ಟು ಸಮ ಮತ ಪಡೆದು
ಲಾಟರಿಯಲ್ಲಿ ಅದೃಷ್ಟ ಕೈ ಕೊಟ್ಟರೆ, ಕಾಳಗಿಯಲ್ಲಿ ಬಿಜೆಪಿ ಬೆಂಬಲಿತ ಕೆಲ ಸದಸ್ಯರು ಮತದಾನ ನಡೆದ ಕೊನೆ ಕ್ಷಣದಲ್ಲಿ ಕಾಂಗ್ರೆಸ್‌ ಕಡೆ ಒಲಿದಿದ್ದರಿಂದ
ಸೋಲನುಭವಿಸಿದ್ದಾರೆ. ಹುಲ್ಲೂರಲ್ಲಿ ಜಾತಿ ಲಾಬಿಗೆ ಕೈ ಜೋಡಿಸಿ ಬಿಜೆಪಿ ಬೆಂಬಲಿತರಿಗೆ ಅ ಧಿಕಾರ ತಪ್ಪಿಸಿದರು ಎನ್ನುವ ಮಾತು ಚರ್ಚೆಯಲ್ಲಿದೆ. ಬಸರಕೋಡದಲ್ಲಿ ಅಧಿಕಾರಕ್ಕೆ ಬಹುಮತ ಇಲ್ಲದೆ ಸೊರಗಿದ್ದಾರೆ.

ಪ್ರಭಾವ ಉಳಿಸಿಕೊಂಡ ಕಾಂಗ್ರೆಸ್‌: 25 ವರ್ಷ ಈ ತಾಲೂಕಿನಲ್ಲಿ ನಿರಂತರ ಅಧಿಕಾರ ನಡೆಸಿದ್ದ ಕಾಂಗ್ರೆಸ್‌ ಈ ಬಾರಿ ಅ ಧಿಕಾರದಿಂದ ದೂರ ಉಳಿದಿದೆ. ಬಿಜೆಪಿ
ಪ್ರಭಾವ ಹೆಚ್ಚಾಗುತ್ತಿರುವುದರ ನಡುವೆಯೂ ತನ್ನ ಹಿಂದಿನ ಪ್ರಭಾವವನ್ನು ಶೇ. 50-55ರಷ್ಟಾದರೂ ಉಳಿಸಿಕೊಳ್ಳುವಲ್ಲಿ ಸಾಕಷ್ಟು ತಿಣುಕಾಡಿದೆ. ಮಾಜಿ ಶಾಸಕ
ಸಿ.ಎಸ್‌. ನಾಡಗೌಡರು, ಅವರ ಬೆಂಬಲಿಗರು ಕಾಂಗ್ರೆಸ್‌ ಗೆ ಇನ್ನೂ ಅಸ್ತಿತ್ವ ಇದೆ ಎನ್ನುವುದನ್ನು ತೋರಿಸಿಕೊಡಲು ಗ್ರಾಪಂಗಳಲ್ಲಿ ತಮ್ಮ ಬೆಂಬಲಿಗರ ಪರ ನಿಂತು ಸಾಕಷ್ಟು ಕೆಲಸ ಮಾಡಿರುವುದನ್ನು ಈ ಫಲಿತಾಂಶ ಹೊರಹಾಕಿದೆ. ನಾಡಗೌಡರಂತೂ ಇದನ್ನು ದೇವರ ನ್ಯಾಯ ಎಂದು ಬಣ್ಣಿಸಿ ಸಂತಸ ತೋರ್ಪಡಿಸಿಕೊಂಡಿದ್ದಾರೆ.

Advertisement

ಎಲ್ಲೆಲ್ಲಿ ಕಾಂಗ್ರೆಸ್‌ ಬೆಂಬಲಿತರು?: ಆಲೂರು, ರಕ್ಕಸಗಿ, ತಂಗಡಗಿ, ಹಡಲಗೇರಿ, ಬಸರಕೋಡ, ಕೋಳೂರು, ಹುಲ್ಲೂರು, ಹಿರೇಮುರಾಳ, ಕಾಳಗಿ, ಬಿಜೂರ
ಗ್ರಾಪಂಗಳ ಆಡಳಿತ ಚುಕ್ಕಾಣಿ ಕಾಂಗ್ರೆಸ್‌ ಬೆಂಬಲಿತರ ಕೈಗೆ ದಕ್ಕಿದೆ. ಆಲೂರು, ಕೋಳೂರಲ್ಲಿ ಲಾಟರಿ ಮೂಲಕ ಅದೃಷ್ಟ ಒಲಿದಿದೆ. ಹುಲ್ಲೂರಲ್ಲಿ ಪ್ರಯಾಸದ ಗೆಲುವು ಎನ್ನಿಸಿಕೊಂಡಿದೆ. ಬಸರಕೋಡದಲ್ಲಿ ಸ್ಪರ್ಧೆ ನಡೆದರೂ ಬಹುಮತದಿಂದ ಆಯ್ಕೆಯಾಗಿದ್ದಾರೆ.

ಜೆಡಿಎಸ್‌ಗೆ ಹಿನ್ನೆಡೆ: ಈ ಗ್ರಾಪಂ ಚುನಾವಣೆಯಲ್ಲಿ ಕಡೆಗೂ ಜೆಡಿಎಸ್‌ ಹೆಸರು ಹೆಚ್ಚು ಕೇಳಿ ಬರಲಿಲ್ಲ. ಕೆಲವೆಡೆ ಹೊರತುಪಡಿಸಿ ಬಹುತೇಕ ಕಡೆ ಆ ಪಕ್ಷದ
ಪ್ರಭಾವ ಕಾಣಿಸಲೇ ಇಲ್ಲ. ಬಹುಮತ ಇಲ್ಲದ್ದರಿಂದ ಆಯ್ಕೆಯೊಂದವರೆಲ್ಲ ತಮ್ಮ ಮಟ್ಟದಲ್ಲೇ ತೀರ್ಮಾನಿಸಿ ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಹೊಂದಾಣಿಕೆ
ಮಾಡಿಕೊಂಡಿದ್ದಾರೆ. ಇದು ಈ ತಾಲೂಕಿನ ಗ್ರಾಮೀಣ ಭಾಗದಲ್ಲಿ ಜೆಡಿಎಸ್‌ ಪ್ರಭಾವದ ಕುರಿತು ಟೀಕಿಸುವ ರಾಜಕೀಯ ನಾಯಕರ ಮಾತನ್ನು ನಿಜವಾಗಿಸಿದಂತೆ ಕಾಣುತ್ತದೆ ಎನ್ನುವ ಮಾತಿಗೆ ಆ ಪಕ್ಷದ ಹಿನ್ನೆಡೆ ಪುಷ್ಟಿ ನೀಡಿದಂತಾಗಿದೆ.

ಜಾಣ ನಡೆ: ಬಹುತೇಕರು ತಾವು ಬಿಜೆಪಿ ಬೆಂಬಲಿತರು, ಕಾಂಗ್ರೆಸ್‌ ಬೆಂಬಲಿತರು ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಆದರೆ ಯರಝರಿ ಗ್ರಾಪಂನವರು
ಮಾತ್ರ ತಾವು ಯಾರ ಬೆಂಬಲಿತರು ಎನ್ನುವ ಗುಟ್ಟು ಬಹಿರಂಗಪಡಿಸಿಲ್ಲ. ಇಲ್ಲಿ ಬಿಜೆಪಿ, ಕಾಂಗ್ರೆಸ್‌ನವರು ಜೊತೆಯಾಗಿ ಕೆಲಸ ಮಾಡಿದ್ದಾರೆ. ನಾವು ಯಾವುದೇ
ಪಕ್ಷದ ಬೆಂಬಲಿತರೆಂದು ಹೇಳಿಕೊಳ್ಳುವುದಿಲ್ಲ. ನಾವು ಪಕ್ಷೇತರರು. ಪಕ್ಷೇತರರಾಗಿಯೇ ಇರುತ್ತೇವೆ ಎಂದು ಬಹಿರಂಗವಾಗಿಯೇ ಹೇಳಿದ್ದು ಸಾಕಷ್ಟು ಪ್ರಶಂಶೆಗೆ
ಕಾರಣವಾಗಿದ್ದರೂ ಆಯಾ ಪಕ್ಷ ಪ್ರತಿನಿಧಿಸುವ ಮುಖಂಡರ ಮೇಲೆ ಆಯಾ ಪಕ್ಷಗಳ ರಾಜಕೀಯ ನಾಯಕರ ಸಂಶಯ ಇಮ್ಮಡಿಗೊಂಡಂತಾಗಿದೆ.

ಅಧ್ಯಕ್ಷ-ಉಪಾಧ್ಯಕ್ಷೆ ಬೇರೆ ಬೇರೆ: ಇವೆಲ್ಲದರ ನಡುವೆ ಇನ್ನೊಂದು ಕುತೂಹಲಕಾರಿ ಬೆಳವಣಿಗೆಯೂ ಇಲ್ಲಿ ಕಂಡು ಬಂದಿದೆ. ಬಿದರಕುಂದಿ ಗ್ರಾಪಂನಲ್ಲಿ
ಅಧ್ಯಕ್ಷರಾದವರು ಬಿಜೆಪಿ ಬೆಂಬಲಿತರೆಂದಿದ್ದರೆ ಉಪಾಧ್ಯಕ್ಷರಾದವರು ಪಕ್ಷೇತರರೆಂದು, ಹಿರೇಮುರಾಳದಲ್ಲಿ ಅಧ್ಯಕ್ಷರಾದವರು ಕಾಂಗ್ರೆಸ್‌ ಬೆಂಬಲಿತರೆಂದಿದ್ದರೆ ಉಪಾಧ್ಯಕ್ಷರಾದವರು ಬಿಜೆಪಿ ಬೆಂಬಲಿತರೆಂದು ಹೇಳಿಕೊಂಡಿದ್ದಾರೆ.

ಕುಂಟೋಜಿಯಲ್ಲಿ ಅಧ್ಯಕ್ಷರಾದವರು ಬಿಜೆಪಿ ಬೆಂಬಲಿತರೆಂದಿದ್ದರೂ ಉಪಾಧ್ಯಕ್ಷರಾದವರು ಯಾರ ಬೆಂಬಲಿತರು ಎನ್ನುವುದು ಸ್ಪಷ್ಟಗೊಂಡಿಲ್ಲ. ರಕ್ಕಸಗಿಯಲ್ಲಿ
ಅಧ್ಯಕ್ಷರಾದವರು ಕಾಂಗ್ರೆಸ್‌ ಬೆಂಬಲಿತರೆಂದು ಹೇಳಿಕೊಂಡಿದ್ದರೂ ಉಪಾಧ್ಯಕ್ಷರಾದವರು ತಾವು ಪಕ್ಷೇತರು ಎಂದು ಸ್ಪಷ್ಟಪಡಿಸಿದ್ದಾರೆ.

ಎಲ್ಲೆಲ್ಲಿ ಅವಿರೋಧ, ಚುನಾವಣೆ?: ಕವಡಿಮಟ್ಟಿ, ಢವಳಗಿ, ರೂಢಗಿ, ಅಡವಿ ಸೋಮನಾಳ, ನಾಗರಬೆಟ್ಟ, ಹಡಲಗೇರಿ, ಹುಲ್ಲೂರ, ಬಿಜೂರ, ಹಿರೇಮುರಾಳ,
ರಕ್ಕಸಗಿ, ಯರಝರಿ ಗ್ರಾಪಂಗಳಲ್ಲಿ ಅವಿರೋಧ ಆಯ್ಕೆಯಾಗಿದೆ. ಕುಂಟೋಜಿ, ಕೋಳೂರು, ಮಡಿಕೇಶ್ವರ, ತಂಗಡಗಿ, ಆಲೂರು, ಬಸರಕೋಡ, ಕಾಳಗಿ, ಬಿದರಕುಂದಿ, ನಾಗಬೇನಾಳದಲ್ಲಿ ಚುನಾವಣೆ ನಡೆದಿದೆ. ಕೋಳೂರು, ಆಲೂರು ಗ್ರಾಪಂಗಳಲ್ಲಿ ಸ್ಪರ್ಧಿಗಳು ಪಡೆದ ಮತಗಳು ಸಮವಾಗಿದ್ದರಿಂದ ಲಾಟರಿ
ಮೂಲಕ ಆಯ್ಕೆ ನಡೆದಿದೆ.

ಗ್ರಾಪಂ ಚುನಾವಣೆ ಪಕ್ಷಾತೀತವಾಗಿ ನಡೆದಿವೆ. ಎಲ್ಲರೂ ನಮ್ಮವರೇ. ಶಾಸಕನಾಗಿ ಎಲ್ಲರನ್ನೂ ಸಮನಾಗಿ ಕಾಣುತ್ತೇನೆ. ಬಲಾಬಲದ ಶಕ್ತಿ ಪ್ರದರ್ಶನಕ್ಕಿಂತ
ಅಭಿವೃದ್ಧಿಯಲ್ಲಿ ಸಹಕಾರ ಮುಖ್ಯವಾಗಿದೆ. ನನ್ನ ಬೆಂಬಲಿಗರು ಆಯ್ಕೆಯಾಗಿದ್ದರೂ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡೆ ಅಭಿವೃದ್ಧಿ ಪರ ಕೆಲಸ ಮಾಡುವಂತೆ
ತಿಳಿ ಹೇಳುತ್ತೇನೆ. ಪಕ್ಷಾತೀತವಾಗಿ ಎಲ್ಲರನ್ನೂ ಕರೆದು ಸನ್ಮಾನಿಸುತ್ತೇನೆ.
ಎ.ಎಸ್‌. ಪಾಟೀಲ ನಡಹಳ್ಳಿ, ಶಾಸಕರು

ಗ್ರಾಮ ಪಂಚಾಯತ್‌ ವ್ಯವಸ್ಥೆ ಜಾರಿಗೊಳಿಸಿದ್ದೇ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ. ಅಧಿಕಾರ ವಿಕೇಂದ್ರೀಕರಣ ಮಾಡಿದ ಶ್ರೇಯಸ್ಸು ನಮ್ಮ ಪಕ್ಷಕ್ಕೆ ಸಲ್ಲುತ್ತದೆ. ಗ್ರಾಪಂ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿತರೇ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದಾರೆ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್‌ಗೆ ಉಜ್ವಲ ಭವಿಷ್ಯ ಇದೆ.
ಸಿ.ಎಸ್‌. ನಾಡಗೌಡ,
ಮಾಜಿ ಶಾಸಕರು

ಜೆಡಿಎಸ್‌ ಬೆಂಬಲಿತ 50-60 ಸದಸ್ಯರು ಆಯ್ಕೆಯಾಗಿದ್ದರು. ಜೆಡಿಎಸ್‌ಗೆ ಬಹುಮತ ಇಲ್ಲದ್ದರಿಂದ ಸ್ಥಳೀಯ ಮಟ್ಟದಲ್ಲಿ ಅವರೆಲ್ಲ ತಮಗೆ ತಿಳಿದವರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಆದರೂ ಅವರ ಮನಸ್ಸು ಜೆಡಿಎಸ್‌ ಪರ ಇದೆ. ಅಂಥವರೆಲ್ಲರನ್ನೂ ಅಭಿನಂದಿಸುತ್ತೇನೆ.
ಮಂಗಳಾದೇವಿ ಬಿರಾದಾರ, ಕಾರ್ಯಾಧ್ಯಕ್ಷೆ,
ಜೆಡಿಎಸ್‌ ರಾಜ್ಯ ಮಹಿಳಾ ಘಟಕ

*ಡಿಬಿ ವಡವಡಗಿ

Advertisement

Udayavani is now on Telegram. Click here to join our channel and stay updated with the latest news.

Next