Advertisement

ಹಳೇ ಮೈಸೂರು ಪ್ರಾಂತದಲ್ಲಿ ಜೆಡಿಎಸ್‌ಗೆ ಟಕ್ಕರ್‌ ಕೊಟ್ಟ BJP

11:44 PM Apr 16, 2023 | Team Udayavani |

ಮೈಸೂರು: ಭಾರತೀಯ ಜನತಾಪಕ್ಷದ ಪಾಲಿಗೆ ಇದು ಕಳೆದ ಬಾರಿಯ ಚಿತ್ರಣವಂತೂ ಖಂಡಿತ ಅಲ್ಲವೇ ಅಲ್ಲ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್‌ ಮಣಿಸಲು ಹಳೇ ಮೈಸೂರು ಪ್ರಾಂತದಲ್ಲಿ  ಜೆಡಿಎಸ್‌ ಬೆನ್ನಿಗೆ ಬಿಜೆಪಿ ನಿಂತಿತ್ತು. ಈ ಬಾರಿ ಈ ಪ್ರದೇಶದ ಅನೇಕ ಕ್ಷೇತ್ರಗಳಲ್ಲಿ ತನ್ನಲ್ಲಿರುವ ಪ್ರಬಲ ಅಭ್ಯರ್ಥಿಗಳನ್ನೇ ಕಣಕ್ಕೆ ಹೂಡಿ ಅಖಾಡದಲ್ಲಿ ಸೆಟೆದು ನಿಂತಿದೆ.

Advertisement

ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಈ ಬಾರಿ ಹಳೇ ಮೈಸೂರು ಪ್ರಾಂತದಲ್ಲಿ ಕಳೆದ ಬಾರಿಯಂತೆ ದುರ್ಬಲ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದೆಯೇ ಎಂಬ ಗಹನವಾದ ಚರ್ಚೆ ಅನೇಕ ತಿಂಗಳಿನಿಂದ ನಡೆದಿತ್ತು. ಬಿಜೆಪಿ ಹುರಿಯಾಳುಗಳ ಮೊದಲ ಎರಡು ಪಟ್ಟಿಗಳ ಬಿಡುಗಡೆ ಅನಂತರ ಬಹಳ ಸ್ಪಷ್ಟವಾಗಿ ಗೋಚರವಾಗುವುದು ಕಾಂಗ್ರೆಸ್‌-ಜೆಡಿಎಸ್‌ ಮಧ್ಯೆ ನೇರ ಪೈಪೋಟಿ ಇರುವ ಅನೇಕ ಕ್ಷೇತ್ರಗಳಲ್ಲಿ ಈಗ ತ್ರಿಕೋನ ಸ್ಪರ್ಧೆ ಕಂಡು ಬರಲಿದೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಎರಡನ್ನೂ ಎದುರಿಸಿ ಬಿಜೆಪಿ ನಿಂತಿದೆ.

ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ರಾಮನಗರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಬಿಜೆಪಿ ತನ್ನಲ್ಲಿರುವ ಬಲಶಾಲಿ ಅಭ್ಯರ್ಥಿಗಳನ್ನೇ ಅನೇಕ ಕ್ಷೇತ್ರಗಳಲ್ಲಿ ಕಣಕ್ಕೆ ಇಳಿಸಿದೆ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಉದ್ದೇಶಪೂರ್ವಕವಾಗಿಯೇ ದುರ್ಬಲ ಅಭ್ಯರ್ಥಿಗಳನ್ನೇ ಕಣಕ್ಕೆ ಇಳಿಸಿತ್ತು. ಇದಕ್ಕೆ ಕಾರಣವೂ ಸ್ಪಷ್ಟವಾಗಿತ್ತು. ಆಗ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ಪಕ್ಷವನ್ನು ಮಣಿಸಲು ಹಳೇ ಮೈಸೂರು ಭಾಗದಲ್ಲಿ ಬಲಿಷ್ಠವಾಗಿರುವ ಜೆಡಿಎಸ್‌ಗೆ ತನ್ನ ಶಕ್ತಿಯನ್ನು ಬಿಜೆಪಿ ಧಾರೆ ಎರೆದಿತ್ತು. ಬಿಜೆಪಿ ಮತಗಳು ಜೆಡಿಎಸ್‌ಗೆ ವರ್ಗವಾಗುವಂತೆ ಬಿಜೆಪಿ ನೋಡಿಕೊಂಡಿತು. ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಸ್ಪರ್ಧಿಸಿದ್ದ ಚಾಮುಂಡೇಶ್ವರಿ ಕ್ಷೇತ್ರದಲ್ಲಂತೂ ಬಿಜೆಪಿ ಮತಗಳು ಜೆಡಿಎಸ್‌ಗೆ ಶಿಫ್ಟ್ ಆಗಿದ್ದವು. ಸಿದ್ದರಾಮಯ್ಯ ಅವರ ಸುಮಾರು 36 ಸಾವಿರ ಮತಗಳ ಅಂತರದ ಹೀನಾಯ ಸೋಲಿಗೆ ಇದೂ ಒಂದು ಪ್ರಮುಖ ಕಾರಣವಾಗಿತ್ತು.

ಆದರೆ ಈ ಬಾರಿ ಪರಿಸ್ಥಿತಿ ಭಿನ್ನವಾಗಿದೆ. ಬಿಜೆಪಿಯೇ ರಾಜ್ಯದಲ್ಲಿ ಅಧಿಕಾರದಲ್ಲಿದೆ. ತನ್ನ ಕಟುಟೀಕಾಕಾರನಾದ ಜೆಡಿಎಸ್‌ಗೆ ಬಿಜೆಪಿಯ ಸಾಥ್‌ ಇಲ್ಲವಾಗಿದೆ. ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಇಬ್ಬರಿಗೂ ಟಕ್ಕರ್‌ ಕೊಡಲು ಬಹುತೇಕ ಕ್ಷೇತ್ರಗಳಲ್ಲಿ ಹೋರಾಟ ನಡೆಸುವ ಅಭ್ಯರ್ಥಿಗಳನ್ನೇ ಬಿಜೆಪಿ ಕಣಕ್ಕಿಳಿಸಿದೆ. ಈ ಕಸರತ್ತು ನಡೆಸಿದ್ದರೂ ಹಳೇ ಮೈಸೂರು ಪ್ರಾಂತದ ಭಾಗದ ಅನೇಕ  ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲದಿರಬಹುದು. ಇದರಿಂದ ಕಾಂಗ್ರೆಸಿಗೆ ಅನುಕೂಲವೂ ಆಗಬಹುದು. ಆದರೆ  ಸಮರದ ಅಂಗಳದಲ್ಲಿ ಸೆಣಸಾಟದ  ಮೂಲಕ ತನ್ನ ಪಕ್ಷದ ಬಲವನ್ನು ಹೆಚ್ಚಿಸಿಕೊಳ್ಳಬಹುದು. ಕಾರ್ಯಕರ್ತರಲ್ಲಿ ಉತ್ಸಾಹ, ಚೈತನ್ಯವನ್ನು  ತುಂಬಬಹುದು. ಬಿಜೆಪಿಯ ಈ ಹೋರಾಟ  ಪಕ್ಷದ ಬಲವರ್ಧನೆಗೆ ನೆರವಾಗಬಹುದು. ಗ್ರಾಮೀಣ ಪ್ರದೇಶದಲ್ಲಿ ತಳಮಟ್ಟದಲ್ಲಿ ಬಿಜೆಪಿಯ ಬೇರುಗಳನ್ನು ಗಟ್ಟಿ ಮಾಡಿಕೊಳ್ಳಬಹುದು ಎಂಬುದು ಬಿಜೆಪಿಯ ದೂರದೃಷ್ಟಿ ಚಿಂತನೆ.  ಬಿಜೆಪಿಯ ಈ ಸಮರ ಕಾಂಗ್ರೆಸಿಗಿಂತ ಜೆಡಿಎಸ್‌ಗೆ ಹೆಚ್ಚು ಪೆಟ್ಟು.  ಜೆಡಿಎಸ್‌ಗೆ ಕಾಂಗ್ರೆಸ್‌ ಜೊತೆ ನೇರ ಹಣಾಹಣಿ ಬೇಕಿತ್ತು.

ಮೈಸೂರು ಜಿಲ್ಲೆಯ ತಿ.ನರಸೀಪುರ (ಪರಿಶಿಷ್ಟ ಜಾತಿ-ಮೀಸಲು), ಹುಣಸೂರು, ಎಚ್‌.ಡಿ.ಕೋಟೆ (ಪರಿಶಿಷ್ಟ ಪಂಗಡ-ಮೀಸಲು), ಪಿರಿಯಾಪಟ್ಟಣ, ಕೆ.ಆರ್‌.ನಗರ, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ, ಮೇಲುಕೋಟೆ, ಮಂಡ್ಯ, ನಾಗಮಂಗಲ, ಹಾಸನ ಜಿಲ್ಲೆಯ ಬೇಲೂರು, ಸಕಲೇಶಪುರ, ಕನಕಪುರ, ಚನ್ನಪಟ್ಟಣ, ಚಿಕ್ಕಬಳ್ಳಾಪುರ ಜಿಲ್ಲೆಯ ಕ್ಷೇತ್ರಗಳಲ್ಲಿ ಬಿಜೆಪಿ ಬಲಿಷ್ಟ ಅಭ್ಯರ್ಥಿಗಳನ್ನೇ ಅಖಾಡಕ್ಕೆ ಇಳಿಸಿದೆ. ಹಾಸನ ಜಿಲ್ಲೆಯ ಬೇಲೂರು, ಅರಕಲಗೂಡು, ಸಕಲೇಶಪುರ, ಮೈಸೂರು ಜಿಲ್ಲೆಯ ತಿ.ನರಸೀಪುರ, ಹುಣಸೂರು, ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರಗಳು ಈ ಹಿಂದೆ ಒಮ್ಮೆ ಬಿಜೆಪಿ ಗೆದ್ದ ಕ್ಷೇತ್ರಗಳೇ.

Advertisement

ಹಳೇ ಮೈಸೂರು ಭಾಗದ ವಿಚಾರಕ್ಕೆ ಸಂಬಂಧಪಟ್ಟಂತೆ ಬಿಜೆಪಿ ವರಿಷ್ಠರಿಗೆ ಈಗ ಒಂದು ಸಂಗತಿ ಮನವರಿಕೆಯಾಗಿದೆ. ಅದು-ಬಿಜೆಪಿ ಬೆಳೆಯಬೇಕಿದ್ದರೆ ಮೊದಲು ಜೆಡಿಎಸ್‌ ಮಣಿಸಬೇಕು.

~ ಕೂಡ್ಲಿ ಗುರುರಾಜ

Advertisement

Udayavani is now on Telegram. Click here to join our channel and stay updated with the latest news.

Next