Advertisement

ಬಿಜೆಪಿ ಅಧಿಕಾರಕ್ಕೆ ಬರುವುದಕ್ಕೆ ಸುಳ್ಳಿನ ಸಿದ್ಧರಾಮಯ್ಯ ಕಾರಣ: ಹೆಚ್ ಡಿಕೆ ಕಿಡಿ

03:34 PM Feb 13, 2023 | Team Udayavani |

ಹುಬ್ಬಳ್ಳಿ: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಕ್ಕೆ ಸುಳ್ಳಿನ ಸಿದ್ಧರಾಮಯ್ಯ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹರಿಹಾಯ್ದರು.

Advertisement

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ಎರಡು ತಿಂಗಳಲ್ಲಿಯೇ ಸರ್ಕಾರದ ಪತನದ ಮಾತನ್ನಾಡಿದ್ದರು. ಬಿಜೆಪಿಯ ಅಕ್ರಮಗಳನ್ನು ಹೊರ ತಂದಿದ್ದೆ ನಾನು ವಿನಹ ಸಿದ್ಧರಾಮಯ್ಯ ಅಲ್ಲ. ನಿಮ್ಮ ಯೋಗ್ಯತೆಗೆ ಸರಿಯಾದ ರೀತಿಯಲ್ಲಿ ಮಾತನಾಡಿ. ಚೇರ್ ಗಾಗಿ ಕುತಂತ್ರದ ರಾಜಕಾರಣ ಮಾಡಿದರು. ಬಿಜೆಪಿಯವರು ನನಗೆ ಸಿಎಂ ಸ್ಥಾ‌ನ ಕೊಡೋಕೆ ರೆಡಿಯಾಗಿದ್ದರು. ಸಿದ್ಧರಾಮಯ್ಯಗೆ ನಾಚಿಕೆಯಾಗಬೇಕು ಎಂದು ಹರಿಹಾಯ್ದರು.

ಕಾಂಗ್ರೆಸ್ ನಿಂದ ಇನ್ನು ಹತ್ತು ವರ್ಷಗಳಾದರೂ ಬಿಜೆಪಿಯನ್ನು ತೆಗೆಯೋಕೆ ಆಗಲ್ಲ. ಜೆಡಿಎಸ್ ನಿಂದ ಮಾತ್ರ ಅಸು ಸಾಧ್ಯ ಎಂದರು.

ಬ್ರಾಹ್ಮಣ ಸಿಎಂ ಹೇಳಿಕೆ ವಿಚಾರವಾಗಿ ಇಡೀ ಬ್ರಾಹ್ಮಣ ಸಮುದಾಯ ನನ್ನ ವಿರುದ್ಧ ತಿರುಗಿ ಬಿದ್ದಿಲ್ಲ. ನನ್ನ ಪ್ರಶ್ನೆಗೆ ಯಾರೂ ಉತ್ತರ ಕೊಡುತ್ತಿಲ್ಲ. ನಾನು ಪೇಶ್ವೆ ಡಿಎನ್ ಎ ಮೂಲದ ಬಗ್ಗೆ ಪ್ರಶ್ನಿಸಿದ್ದು, ಅದಕ್ಕೆ ಉತ್ತರ ಕೊಡುವವರು ಕೊಡಲಿ. ನಾನು ಬ್ರಾಹ್ಮಣರು ಸಿಎಂ ಆಗಬಾರದು ಎಂದಿಲ್ಲ. ಪೇಶ್ವೆ ಡಿಎನ್ಎ ಸಿಎಂ ಆಗಬಾರದು ಅಂದಿದ್ದೇನೆ. ಈಗಲೂ ನನ್ನ ಈ ಹೇಳಿಕೆಗೆ ಬದ್ಧ. ಬ್ರಾಹ್ಮಣರ ಯಾವುದೇ ಸಮಾಜದವರು ಸಿಎಂ ಆಗಲಿ. ಆದರೆ ಪೇಶ್ವೆ ಡಿಎನ್‌ಎ ಇರೋರು ಆಗಬಾರದು ಎಂದು ಮತ್ತೊಮ್ಮೆ ಪುನರುಚ್ಚರಿಸಿದರು.

ಜಾತಿ ವ್ಯವಸ್ಥೆ ಹುಟ್ಟು ಹಾಕಿದ್ದೇ ಪಂಡಿತರು ಎಂಬ ಆರ್ ಎಸ್ ಎಸ್ ಮುಖಂಡ ಮೋಹನ ಭಾಗವತರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಭಾಗವತರು ನನಗಿಂತ ಗಂಭೀರವಾಗಿ ಹೇಳಿದ್ದಾರೆ. ಆದರೆ ನಾನು ಆ ಮಟ್ಟಕ್ಕೆ ಹೋಗಿಲ್ಲ. ಪೇಶ್ವೆ ಡಿಎನ್ಎ ಬಗ್ಗೆ ಮಾತ್ರ ಮಾತನಾಡಿದ್ದೇನೆ. ಬಿಜೆಪಿ ಹುನ್ನಾರಗಳ ಬಗ್ಗೆ ಜನಕ್ಕೆ ತಿಳಿಸುತ್ತೇನೆ ಎಂದರು.

Advertisement

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಎಷ್ಟು ಬಾರಿ ಬೇಕಾದರೂ ರಾಜ್ಯಕ್ಕೆ ಬರಲಿ. ಅವರು ಬ್ರಹ್ಮಾಸ್ತ್ರ, ಸುದರ್ಶನ ಚಕ್ರ ಹಿಡಿದು ಬರುತ್ತಾರೆ. ಪ್ರತಿಪಕ್ಷಗಳನ್ನು ಮಲಗಿಸುತ್ತಾರೆ ಅನ್ನುತ್ತಾರೆ.‌ ಇವರಿಬ್ಬರನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋದರೆ ಬಿಜೆಪಿ ಅಧಿಕಾರಕ್ಕೆ ಬರೋಕೆ ಸಾಧ್ಯವಿಲ್ಲ. ನಮಗೆ ಟಿಪ್ಪು ಸುಲ್ತಾನ ಬೇಕು, ರಾಣಿ ಅಬ್ಬಕ್ಕ ಬೇಕು. ಸರ್ವಜನಾಂಗದ ಶಾಂತಿಯ ತೋಟ ಬೇಕೊ, ಅಶಾಂತಿಯ ತೋಟ ಬೇಕೊ‌ ಅಂತ ಜನತೆ ತೀರ್ಮಾನಿಸಲಿ ಎಂದರು.

ಗೌಡರ ಕುಟುಂಬದಲ್ಲಿ ಟಿಕೆಟ್ ವಿವಾದ
ನಾವೆಲ್ಲಾ ಕುಳಿತು ಬಗೆಹರಿಸಿಕೊಳ್ಳುತ್ತೇವೆ. ಶಾಸಕ‌ ಶಿವಲಿಂಗೇ ಗೌಡ ನಮ್ಮನ್ನು ಬಿಟ್ಟು ಹೋಗಿಯೇ ಮೂರು ವರ್ಷವಾಯಿತು ಎಂದರು. ಮುಂಬೈ ಕರ್ನಾಟಕದ ಪಂಚ ರತ್ನ ಯಾತ್ರೆ ನಡೆಸಿದ್ದೇನೆ. ಮಾರ್ಚ್ 23ರ ವರೆಗೆ ರಥ ಯಾತ್ರೆ ಮುಂದುವರಿಸುತ್ತೇನೆ. ಯಾತ್ರೆ ಮೂಲಕ ನಮ್ಮ ಯೋಜನೆ ಕುರಿತು ಜನತೆಗೆ ಮನವರಿಕೆ ಮಾಡುವೆ. ಜನತೆಗೆ ಹೊಸ ಬದಲಾವಣೆ ತರಬೇಕೆಂದಿದೆ ಎಂದರು.

ಮಹಾದಾಯಿ ನೀರಿನ ವಿಚಾರದಲ್ಲಿ ಕಾನೂನಾತ್ಮಕ, ತಾಂತ್ರಿಕ ದೋಷ ಸರಿಪಡಿಸಿಕೊಳ್ಳಲು ಹೇಳಿದ್ದೆ. ಆದರೆ ಬಿಜೆಪಿಯವರು ಪ್ರಚಾರವಾದರೆ ಸಾಕು ಅಂದರು. ಈಗಲೂ ಬಿಜೆಪಿ ನಾಯಕರು ಅದನ್ನೇ ಮಾಡುತ್ತಿದ್ದಾರೆ. ಉತ್ತರ ಕರ್ನಾಟಕಕ್ಕೆ ಮಲತಾಯಿ ಧೋರಣೆ ಆಗುತ್ತಿದೆ ಅನ್ನುತ್ತಾರೆ. ಅದು ಯಾರಿಂದ ಆಗಿದೆ. ನೀರಾವರಿ ಯೋಜನೆ ಹೆಸರಲ್ಲಿ ಈ ಭಾಗದ ನಾಯಕರೇ ದುಡ್ಡು ಹೊಡೆಯೋ ಕೆಲಸ ಮಾಡುತ್ತಿದೆ. ಬಡವರ ಜೊತೆ ರಾಷ್ಟ್ರೀಯ ಪಕ್ಷಗಳು ಚೆಲ್ಲಾಟವಾಡುತ್ತಿವೆ ಎಂದರು.

ಡಬಲ್ ಎಂಜಿನ್ ಸರ್ಕಾರವಲ್ಲ. ಟ್ರಿಪಲ್ ಎಂಜಿನ್ ಸರ್ಕಾರ ಮಹಾದಾಯಿ ಯೋಜನೆ ಜಾರಿ ಕುರಿತು ಸಿಹಿ ಹಂಚಿ ಮೂರು ತಿಂಗಳೇ ಆದವು. ಗೋವಾದಲ್ಲಿ ಬಿಜೆಪಿ ನಾಯಕರು ಕ್ಯಾತೆ ತೆಗೆದಿದ್ದಾರೆ. ಚುನಾವಣೆ ನೆಪದಲ್ಲಿ ಜನರನ್ನು ದಾರಿ ತಪ್ಪಿಸೋ ಯತ್ನ ರಾಜ್ಯದಲ್ಲಿನ ಬಿಜೆಪಿಯವರು ನಡೆಸಿದ್ದಾರೆ ಎಂದರು.

ಕಲ್ಯಾಣ ಮತ್ತು ಕಿತ್ತೂರ ಕರ್ನಾಟಕ ಭಾಗದಲ್ಲಿ ಕನಿಷ್ಟ 40 ಕ್ಷೇತ್ರಗಳಲ್ಲಿ ಪಕ್ಷದಿಂದ ಅಭ್ಯರ್ಥಿಗಳು ಆರಿಸಿ ಬರಲಿದ್ದಾರೆ. ಪಕ್ಷವು ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ಬಿಜೆಪಿಯ ಬಹಳಷ್ಟು ಬಂಡಾಯ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ ಎಂದರು.

ಏರ್ ಶೋ ಬಡತನ ಓಡಿಸೋ ಕಾರ್ಯಕ್ರಮವಾ..? ಇದು 14ನೇ ಏರ್ ಶೋ ಆಗಿದೆ. ಹಿಂದೆ ಇದನ್ನು ಮೋದಿ ಆರಂಭಿಸಿದ್ದರಾ. ಅವರು ಏರ್ ಶೋ ಗೆ ಬರೋದ್ರಿಂದ ಬಡತನ ನಿವಾರಣೆಯಾಗುತ್ತಾ ಎಂದು ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು.

ಮಾಜಿ ಶಾಸಕ ಭೇಟಿ
ನಗರದ ಹೊಟೇಲ್ ವೊಂದರಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಭೇಟಿ ಮಾಡಿದ ಬಿಜೆಪಿಯ ಹು-ಧಾ ಪೂರ್ವ ಕ್ಷೇತ್ರದ ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ.

ಬಿಜೆಪಿಯಿಂದ ಟಿಕೇಟ್ ಕೈ ತಪ್ಪುವ ಭೀತಿಯಲ್ಲಿ ಹೆಚ್ ಡಿ.ಕೆ ಅವರನ್ನು ಭೇಟಿ ಮಾಡಿ ತೆರಳಿದ ಬಿಜೆಪಿ ಮಾಜಿ ಶಾಸಕ ಹಾಲಹರವಿ. ಜನವರಿ 17ರಂದು ನಗರದಲ್ಲಿ ತಬರೇಜ್ ಸಂಶಿ ನಿವಾಸದಲ್ಲಿ ಕುಮಾರಸ್ವಾಮಿ ಭೇಟಿಯಾಗಿದ್ದ ಹಾಲಹರವಿ. ಮೊದಲ ಹಂತದಲ್ಲಿ ಭೇಟಿಯಾಗಿ ಚರ್ಚೆ ಮಾಡಿದ್ದರು. ಇಂದು ಮತ್ತೆ ಭೇಟಿಯಾಗಲು ಖಾಸಗಿ ಹೊಟೇಲ್ ಗೆ ಆಗಮಿಸಿ ಅವರು ತಂಗಿದ್ದ ಕೊಠಡಿಯಲ್ಲಿ ಸುಮಾರು ಅರ್ಧ ತಾಸು ಚರ್ಚಿಸಿ ತೆರಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next