Advertisement

ಬಾಗಲಕೋಟೆ ಬಾನಾಡಿಗಳು

05:25 AM Dec 22, 2018 | |

ಚಳಿಗಾಲ ಶುರುವಾಗಿದೆ. ಬಾಗಲಕೋಟೆಯ ಘಟಪ್ರಭೆಯ ಹಿನ್ನೀರಿನ ಹರ್ಕಲ್‌ನಲ್ಲಿ ರಾಜಹಂಸಗಳ ಸಮ್ಮೇಳನ ನಡೆಯುತ್ತಿದೆ. ಪ್ರಶಾಂತ ವಾತಾವರಣ , ಕಿಲೋಮೀಟರ್‌ ಗಟ್ಟಲೇ ಹರಡಿರುವ ಹಿನ್ನೀರು, ಅದರ ಮೇಲೆ ಸುಯ್ಯನೆ ಬೀಸುವ ತಂಗಾಳಿ ಸವಿಯಲು  ನೀವೂ ಒಂದು ಸಲ ಹೋಗಿ ಬನ್ನಿ. 

Advertisement

ಕಣ್ಣರಳಿದಷ್ಟು ಉದ್ದಕ್ಕೂ ನೀರು, ಇನ್ನೂ ಸ್ವಲ್ಪ ಜೂಮ್‌ ಮಾಡಿ ನೋಡಿದರೆ  ಅದರ ಮೇಲೆ ಒಂದಷ್ಟು ಬೆಳ್ಳಿ ಚುಕ್ಕಿಗಳು ಕಂಡವು.  ಹತ್ತಿರವಾದಂತೆ ಆ ಚುಕ್ಕಿಗಳ ಚಿತ್ರ ದೊಡ್ಡದಾಗುತ್ತಾ ಹೋಯಿತು. ನೀಳಕಾಯ, ಉದ್ದವಾಗಿ, ಹಿಮ್ಮುಖವಾಗಿ ಮಡಚಬಹುದಾದ ಕೆಂಪು ಬಣ್ಣದ ಉದ್ದನೆಯ ಕಾಲುಗಳು, ಇಂಗ್ಲಿಷ ಅಕ್ಷರ “ಎಸ್‌’ ನಂತೆ ಕಾಣುವ ಕೊರಳು , ಗುಲಾಬಿ ದೇಹದ ಬಹುಭಾಗವನ್ನಾವರಿಸಿಕೊಂಡ ಕೆನೆಮಿಶ್ರಿತ ಬಿಳಿ, ಕೆಲವೊಮ್ಮೆ ಕಿತ್ತಳೆ ಬಣ್ಣಗಳ ಗರಿ… ಥೇಟ್‌ ನೌಕಾ ಸೇನೆಯಂತೆ ಕಂಡ  ಈ ಶ್ವೇತಧಾರಿಗಳ ನಡುವೆ  ನಾನೂ ನನ್ನ ಗೆಳೆಯ ಅಲ್ಪಸಂಖ್ಯಾತರಾದೆವು. 

ದಡದಲ್ಲಿ ಸುಮಾರು ದೂರದವರೆವಿಗೂ ಹೂಳಿತ್ತು. ಅದೇ ಪಕ್ಷಿಗಳ ಪಾಲಿಗೆ ವರ. ನೋಡುಗರಿಗೆ ಒಂಥರಾ ಶಾಪ. ಏಕೆಂದರೆ, ಹೂಳು ಇರುವ ಜಾಗಕ್ಕೆ ಮನುಷ್ಯರು ಹೋಗಲು ಆಗುವುದಿಲ್ಲ. ಹೋದರೂ ಅಲ್ಲಿನ ಮಣ್ಣಿನಲ್ಲಿ ಹೂತುಹೋಗುವ ಅಪಾಯ ಇಲ್ಲದಿಲ್ಲ. 

ಅಂದಹಾಗೆ, ನೀವೇನಾದರೂ ಬಾಗಲಕೋಟೆಗೆ ಹೋದರೆ ಈ ರಾಜರನ್ನು ನೋಡಲು ಮರೆಯದಿರಿ. ರಾಜರು ಅಂದರೆ ಯಾರು ಅಂತೀರ? ಈ ರಾಜಹಂಸಗಳು.  ನಿಜ, ಇವು ಬಾಗಲಕೋಟೆಯ ಮಹಾರಾಜರೇ. ಆಗಾಗ ದೇಶ-ವಿದೇಶಗಳಿಂದ ಹಾರಿ ಇಲ್ಲಿಗೆ ಬರುತ್ತವೆ. ಎಲ್ಲರಿಗೂ ದರ್ಶನ ಕೊಟ್ಟು ಮತ್ತೆ ಪುರ್‌ ಅಂತ ಹಾರಿಹೋಗುತ್ತವೆ. 

  ಬಾಗಲಕೋಟೆಯಲ್ಲಿ ಹರ್ಕಲ್‌ ಅನ್ನೋ ಪ್ರದೇಶವಿದೆ. ಹರ್ಕಲ್‌ನ ಮುಖ್ಯರಸ್ತೆಯಿಂದ ಒಳಗೆ ಹೋಗದರೆ,  ಘಟಪ್ರಭೆಯ ಹಿನ್ನೀರಿನ ತೀರ ಸಿಗುತ್ತದೆ. ಅಂದಹಾಗೆ, ಈ ಜಾಗ ತಲುಪಲು ಗದ್ದೆಯಲ್ಲಿ ಸುಮಾರು ಮೂರು ಕಿ.ಮೀ. ನಡೆಯಬೇಕು. ಈ ಭಾಗದಲ್ಲಿ ಜನವಸತಿಯೂ ಕಡಿಮೆ. ಅಂತೂ ಅಲ್ಲಿಗೆ ತಲುಪಿದಾಗ ವಾಹ್‌, ಬ್ಯೂಟಿಫ‌ುಲ್‌ ಅದ್ಬುತ…. ಎಂಬ ಉದ್ಗಾರ ತಂತಾನೇ ಹೊರಬರುತ್ತದೆ.  

Advertisement

ನಾವು ಅಲ್ಲಿಗೆ ಹೋದ ತಕ್ಷಣವೇ  “ಸಾರ್‌, ಅಲ್ನೋಡಿ.. ಅದೇ ಇದು ರಾಜಹಂಸ’ ಅಂದವರೇ ಗೆಳೆಯ ಬಯ್ಯಣ್ಣ ಕ್ಯಾಮರವನ್ನು ತೆಗೆದು ಪಟ, ಪಟ ಫೋಟೋ ತೆಗೆಯಲು ಶುರುಮಾಡಿದರು. ಕ್ಯಾಮರಕ್ಕೆ ಕಣ್ಣಿಟ್ಟಿದ್ದೇ ಅವರು ಅರೆ ಪ್ರಜ್ಞಾವಸ್ಥೆಗೆ ಜಾರಿದರು. ಒಮ್ಮೆಲೇ ಸುಮಾರು 700ರಿಂದ ಸಾವಿರದಷ್ಟು ರಾಜಹಂಸಗಳು ವಿಹರಿಸುತ್ತಿದ್ದವು.  

 ನೀರಿನಲ್ಲೇ ಹೆಚ್ಚು ಕಾಲಕಳೆಯುವ ಈ ರಾಜಹಂಸಗಳು ಸೂರ್ಯ ಇಳಿಯುತ್ತಿದ್ದಂತೆ  ತಟಕ್ಕೆ ಬಂದು, ಕೆಸರಿನಲ್ಲಿ ಸಿಗುವ ತಮ್ಮ ಆಹಾರವನ್ನು ಹೆಕ್ಕಿತಿಂದು, ಮತ್ತೆ ನೀರಿಗೆ ಇಳಿಯುತ್ತಿದ್ದವು.   ಈ ಹಕ್ಕಿಗಳು ಬಂದದ್ದು ಎಲ್ಲಿಂದ? ಅಂತ ಹುಡುಕಹೊರಟರೆ ಘಟಪ್ರಭೆಯ ಹಿನ್ನೀರಿನ ಪ್ರದೇಶಗಳು ಕಾಣುತ್ತವೆ.  ಇಲ್ಲಿ ರಾಜಹಂಸಗಳ ಸಂಬಂಧಿಗಳು ಬಿಡಾರ ಹೂಡಿರುವುದರಿಂದ ಹಿನ್ನೀರಿನ ಹಕ್ಕಿಗಳು ಆಗಾಗ ಅಲ್ಲಿಗೆ ಹೋಗಿ, ಯೋಗಕ್ಷೇಮ ವಿಚಾರಿಸಿ ಮತ್ತೆ ಇಲ್ಲಿಗೆ ವಾಪಸ್ಸಾಗುವುದುಂಟು. 

ಈ ಹೊಸ ನೆಲೆಯಲ್ಲಿ ನವಜೀವನ ಕಟ್ಟಿಕೊಂಡ ಪಟ್ಟಿಯಲ್ಲಿ ಈ ಪಕ್ಷಿ$ಸಂಕುಲವೂ ಸೇರಿದೆ. ಗ್ರಾಮಗಳು ಹಿನ್ನೀರಿನಲ್ಲಿ ಮುಳುಗಿದ್ದರಿಂದ ಜನ ಗುಳೆ ಹೋದರು. ಈಗ ಆ ಜಾಗಗಳು ಪಕ್ಷಿಗಳಿಗೆ ಹೊಸ ಸಾಧ್ಯತೆಗಳನ್ನು ಹುಟ್ಟುಹಾಕಿವೆ.  ಕಳೆದ ಹತ್ತುವರ್ಷಗಳಲ್ಲಿ ಬಾಗಲಕೋಟೆಯ ಭಾಗದಲ್ಲಿ ಪಕ್ಷಿಗಳ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ  ಇವೆಲ್ಲ ತಿಳಿಯುತ್ತದೆ. ವಿಜಯಪುರ ಜಿಲ್ಲೆಗೆ ಹೊಂದಿಕೊಂಡಂತೆ ಇರುವ ಚಿಕ್ಕಸಂಗಮ , ಬೀಳಗಿ , ಹೆರ್ಕಲ್‌ , ಕೋಲ್ಹಾರ್‌ , ಆಲಮಟ್ಟಿ , ಹಿಪ್ಪರಗಿ ಭಾಗಗಳಲ್ಲಿ ಬಂದು ಬಿಡಾರಹೂಡುವ ಪಕ್ಷಿಗಳ ಸಂಖ್ಯೆ ಈಗ ಗಣನೀಯವಾಗಿ ಏರಿಕೆಯಾಗಿದೆ. 

ಹೀಗೆ ಬರುವ ಪಕ್ಷಿಗಳಲ್ಲಿ ಪ್ರಮುಖವಾಗಿ ಕರಿಕೆಂಬರ್ಲ , ರಾಜಹಂಸ ಮತ್ತು ಬಣ್ಣದ ಕೊಕ್ಕರೆಗಳ ಪಾಲು ದೊಡ್ಡದಿದೆ. ಅದರಲ್ಲೂ ಪ್ರಮುಖವಾಗಿ ರಾಜಹಂಸಗಳಂತೂ ತುಸು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದರಿಂದ ಹಿನ್ನೀರಿಗೆ ಹೊಸ ಮೆರುಗು ಬಂದಿದೆ. 

ಗುಂಪಿನಲ್ಲಿ ವಾಸಿಸುವ ಆಕರ್ಷಕ ಬಣ್ಣಗಳ ಈ ರಾಜಹಂಸಗಳ ಜೀವನಶೈಲಿಯೇ ವಿಶಿಷ್ಟ. ಹಿನ್ನೀರಿನ ದಂಡೆಯ ಮೇಲೆ ಯುದ್ಧಮಾಡಲು ಹಾಕಿದ ಡೇರೆಗಳಂತೆ ಕಾಣುವ ಇವು, ಬಾತುಗಳ್ಳೋ, ಕೊಕ್ಕರೆಯೋ ಎಂಬುವುದರ ಬಗ್ಗೆ ಪಕ್ಷಿ$ತಜ್ಞರಲ್ಲಿ ಸಾಕಷ್ಟು ಜಿಜ್ಞಾಸೆಗಳು ಎದ್ದಿದ್ದವು.  ಕೊನೆಗೆ, ಇವುಗಳನ್ನು ರಾಜಹಂಸ ಎಂಬ ಪ್ರತ್ಯೆಕ ಪ್ರಭೇಧವಾಗಿ ಗುರುತಿಸಲಾಯಿತು. 

ಅಷ್ಟಕ್ಕೂ, ಇವುಗಳು ಇಷ್ಟೊಂದು ಸಂಖ್ಯೆಯಲ್ಲಿ ಬಾಗಲಕೋಟೆಗೇ ಬರುತ್ತಿರುವುದು ಏಕೆ ಎಂಬುದರ ಕಾರಣವನ್ನೂ ಪಕ್ಷಿ$ತಜ್ಞರು ಹುಡುಕಿದ್ದಾರೆ. ಅದು ಹೀಗಿದೆ- ಭಾರತದಲ್ಲಿ ರಾಜಹಂಸಗಳು ಹೆಚ್ಚಾಗಿ ಕಂಡುಬರುವುದು ಗುಜರಾತಿನ ಕಛ… ಪ್ರದೇಶದಲ್ಲಿ . ನಗರೀಕರಣದಿಂದಾಗಿ ಅವುಗಳ ವಾಸಸ್ಥಾನ, ಸಂತಾನ ನೆಲೆಗಳು ನಾಶವಾಗಿವೆ.  ರಾಜಹಂಸಗಳು ಹೀಗೆ ಬದಲಿ ನೆಲೆಯ ಹುಡುಕಾಟದಲ್ಲಿರುವಾಗ ಸೇಫ್ ಅನಿಸಿದ್ದು ಬಾಗಲಕೋಟೆಯ ಈ ಹಿನ್ನೀರು ಪ್ರದೇಶವಂತೆ. ಹಾಗಾಗಿ, ಬಾಗಲಕೋಟೆಯಲ್ಲಿ ಪಕ್ಷಿಗಳ ಕಲರವ ಹೆಚ್ಚು.  ಇದೇ ಮಾಹಿತಿಯನ್ನು 
ಬೀಳಗಿಯ ಪಕ್ಷಿವೀಕ್ಷಕ ದಾವಲ್‌ ನದಾಫ‌ ಕೂಡ ಎತ್ತಿಹಿಡಿಯುತ್ತಾರೆ. 

“2016 ರಲ್ಲಿ ಕೇವಲ ಬೀಳಗಿಯ ಪ್ರದೇಶದಲ್ಲೇ ನಾವು ಸುಮಾರು 2,000 ಪಕ್ಷಿಗಳನ್ನು ಪತ್ತೆ ಹಚ್ಚಿದ್ದೆವು. ಆದರೆ 2017ರಲ್ಲಿ ಮಳೆ ಹೆಚ್ಚಾದ್ದರಿಂದ ಇವುಗಳ ಸಂಖ್ಯೆ ಸುಮಾರು ನಾಲ್ಕುನೂರಕ್ಕೆ ಕುಸಿಯಿತು ಎನ್ನುತ್ತಾರೆ ನದಾಫ‌. ರಾಜಹಂಸಗಳು ಬಾಗಲಕೋಟೆ ಕಡೆ ಮುಖಮಾಡುವುದು ನವೆಂಬರ್‌ ತಿಂಗಳಲ್ಲಿ. ಹೆಚ್ಚುಕಮ್ಮಿ ಮೇ ವರೆಗೆ ಇಲ್ಲೇ ಮೊಕ್ಕಾಂ ಹೂಡುತ್ತವೆ. ಪಕ್ಷಿಗಳು ಬರುತ್ತಿದ್ದಂತೆ, ಅವುಗಳನ್ನು ನೋಡಲು ಬೆಂಗಳೂರು,ಮೈಸೂರುಗಳಿಂದೆಲ್ಲ ಪಕ್ಷಿವೀಕ್ಷಕರು ಬರುತ್ತಾರೆ.

ಪ್ರಶಾಂತ ವಾತಾವರಣ , ಕಿಲೋಮೀಟರ್‌ ಗಟ್ಟಲೇ ಹರಡಿರುವ ಘಟಪ್ರಭೆಯ ಹಿನ್ನೀರು, ಅದರ ಮೇಲೆ ಸುಯ್ಯನೆ ಬೀಸುವ ತಂಗಾಳಿ… ಹಾಗೇ ಕಣ್ಣು ಮುಚ್ಚಿದರೆ ಮನಮೆಚ್ಚಿದ ಹಂಸಗಳ ಪಟ ಪಟ ಸದ್ದಿನ ಗಾನ. 

ಕೈಯಲ್ಲಿ ಕ್ಯಾಮರ ಇದ್ದರೆ ಸ್ವರ್ಗಕ್ಕೆ ಕಿಚ್ಚೆಂದ ಸರ್ವಜ್ಞ.

ಸುನೀಲ್‌ ಬಾರಕೂರ್‌ 
ಚಿತ್ರಗಳು:ಆರ್‌.ಬೈಯ್ಯಣ್ಣ 

Advertisement

Udayavani is now on Telegram. Click here to join our channel and stay updated with the latest news.

Next