ನವದೆಹಲಿ/ಡಾರ್ಜಿಲಿಂಗ್: ಪಶ್ಚಿಮ ಬಂಗಾಳದಲ್ಲಿ ಚುನಾಯಿತ ಸರ್ಕಾರದ ಬದಲಿದೆ ಮಾಫಿಯಾ ಆಡಳಿತ ಇದೆ. ಹೀಗಾಗಿ, ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶ ಮಾಡಬೇಕು ಎಂದು ಬಿಜೆಪಿಯ ಸತ್ಯ ಶೋಧನಾ ಸಮಿತಿ ಅಭಿಪ್ರಾಯಪಟ್ಟಿದೆ.
ಮಾ.21ರಂದು ಬಿರ್ಭೂಮ್ ಜಿಲ್ಲೆಯಲ್ಲಿ ಟಿಎಂಸಿ ಮುಖಂಡನ ಹತ್ಯೆ ಮತ್ತು ಅದಕ್ಕೆ ಪ್ರತೀಕಾರವಾಗಿ ನಡೆದ ಎಂಟು ಮಂದಿಯನ್ನು ಸುಟ್ಟು ಹಾಕಿದ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಸಲ್ಲಿಸಿದ ವರದಿಯಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.
ಕರ್ನಾಟಕದ ರಾಜ್ಯಸಭಾ ಸದಸ್ಯ ಮತ್ತು ನಿವೃತ್ತ ಐಪಿಎಸ್ ಅಧಿಕಾರಿ ಕೆ.ಸಿ.ರಾಮಮೂರ್ತಿಯವರೂ ಇರುವ ಈ ಸಮಿತಿ, ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದು ಹೋಗಿದೆ. ರಾಜ್ಯದಲ್ಲಿ ಸರ್ಕಾರ ಆಡಳಿತ ನಡೆಸುವುವದರ ಬದಲಾಗಿ ಮಾಫಿಯಾ ಗುಂಪುಗಳು ಆಡಳಿತ ನಡೆಸುತ್ತಿವೆ. ಪೊಲೀಸ್ ಇಲಾಖೆ ಮತ್ತು ರಾಜಕೀಯ ನಾಯಕತ್ವದ ಜತೆಗೆ ಮಾಫಿಯಾ ಕೈಜೋಡಿಸಿದೆ.
ಇದನ್ನೂ ಓದಿ:ಭಾರತಕ್ಕೆ ಪ್ರಯಾಣಿಸುವ ಅಮೆರಿಕದ ಪ್ರಜೆಗಳು ಕಾಶ್ಮೀರಕ್ಕೆ ತೆರಳದಿರಿ: ಅಮೆರಿಕ ಎಚ್ಚರಿಕೆ
ರಾಜ್ಯ ಸರ್ಕಾರ ಪ್ರಾಯೋಜಿತ ವಸೂಲಿ, ತೋಳ್ಬಲ ವ್ಯವಸ್ಥೆಯ ಆಡಳಿತ, ನಿಗದಿತ ಮೊತ್ತ ಪಾವತಿ (ಕಟ್ ಮನಿ) ವ್ಯವಸ್ಥೆ ಇದೆ ಎಂದು ಸತ್ಯಶೋಧನಾ ಸಮಿತಿ ಆರೋಪಿಸಿದೆ. ಹೀಗಾಗಿ, ಕೇಂದ್ರ ಸರ್ಕಾರ ಮಧ್ಯಪ್ರವೇಶ ನಡೆಸಿ ಪರಿಸ್ಥಿತಿ ಅವಲೋಕಿಸಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದೆ.
ಬಿಜೆಪಿ ತನ್ನ ಅಧ್ಯಕ್ಷರಿಗೆ ಸಲ್ಲಿಸಿದ ವರದಿಯಿಂದ ಸಿಬಿಐ ತನಿಖೆಗೆ ಹಸ್ತಕ್ಷೇಪ ಮಾಡಿದಂತಾಗುತ್ತದೆ. ಆ ಪಕ್ಷ ಹೊಂದಿರುವ ಧೋರಣೆ ಬಗ್ಗೆ ನನ್ನ ಆಕ್ಷೇಪವಿದೆ. ತನಿಖೆ ಪ್ರಗತಿಯಲ್ಲಿರುವಾಗ ರಾಜಕೀಯ ಹಸ್ತಕ್ಷೇಪ ಸಲ್ಲದು.
– ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ