Advertisement

ಪಚ್ಚನಾಡಿ ಪಾರಂಪರಿಕ ತ್ಯಾಜ್ಯ ಕರಗಿಸಲು “ಬಯೋ ಮೈನಿಂಗ್‌’ವ್ಯವಸ್ಥೆ

08:48 PM Aug 05, 2021 | Team Udayavani |

ಮಹಾನಗರ: ತ್ಯಾಜ್ಯ ದುರಂತ ದಿಂದಾಗಿ ಪಚ್ಚನಾಡಿಯಲ್ಲಿ ರಾಶಿಬಿದ್ದಿರುವ “ಪಾರಂಪರಿಕ ತ್ಯಾಜ್ಯ’ ಕರಗಿಸಲು ಮಂಗಳೂರು ಮಹಾನಗರ ಪಾಲಿಕೆ ಇದೀಗ ಮುಂದಾಗಿದ್ದು, ಸುಮಾರು 53 ಕೋಟಿ ರೂ. ವೆಚ್ಚದಲ್ಲಿ ಬಯೋಮೈನಿಂಗ್‌ ವಿಧಾನದ ಮೂಲಕ ಈ ತ್ಯಾಜ್ಯವನ್ನು ಸಂಸ್ಕರಣೆ ಮಾಡಲು ನಿರ್ಧರಿಸಲಾಗಿದೆ.

Advertisement

2019ರ ಪಚ್ಚನಾಡಿ ತ್ಯಾಜ್ಯ ದುರಂತದಿಂದಾಗಿ ಸುಮಾರು 10 ಲಕ್ಷ ಟನ್‌ ಕಸ ಒಂದೆಡೆ ಶೇಖರಣೆಯಾಗಿತ್ತು. ಇದರ ಸಂಸ್ಕರಣೆ ಪಾಲಿಕೆ ಸವಾಲಾಗಿದ್ದು, ನ್ಯಾಯಾಲಯ ಕೂಡ ಈ ಕುರಿತಂತೆ ಕಟ್ಟುನಿಟ್ಟಿನ ಕ್ರಮಕ್ಕೆ ಒತ್ತಾಯಿಸಿತ್ತು. ಸಂಸ್ಕರಣೆಯ ಉದ್ದೇಶಕ್ಕೆಂದು ಹಲವಾರು ವಿಧಾನಗಳ ಬಗ್ಗೆ ಚಿಂತಿಸಲಾಗಿತ್ತೇ ವಿನಾ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಇದೀಗ ಬಯೋಮೈನಿಂಗ್‌ ವಿಧಾನಕ್ಕೆ ಒಪ್ಪಿಗೆ ನೀಡಲಾಗಿದೆ.

ಹಣಕಾಸಿನ ನೆರವಿಗೆಂದು ಈಗಾಗಲೇ ಕೆಯುಐಡಿಎಫ್‌ಸಿಗೆ ಪಾಲಿಕೆ ಪತ್ರ ಬರೆದಿದ್ದು, ಅಲ್ಲಿಂದಲೂ ಪೂರಕ ಸ್ಪಂದನೆ ವ್ಯಕ್ತವಾಗಿದೆ. ಸುಮಾರು 4ರಿಂದ 5 ವರ್ಷಗಳವರೆಗಿನ ಯೋಜನೆ ಇದಾಗಿದ್ದು, ಟೆಂಡರ್‌ ಕರೆಯಲಾಗಿದೆ. ಆ. 9ಕ್ಕೆ ಟೆಂಡರ್‌ ಅವಧಿ ಕೊನೆಗೊಳ್ಳಲಿದೆ. ಈಗಾಗಲೇ ಅನೇಕ ಸಂಸ್ಥೆಗಳು ಟೆಂಡರ್‌ ವಹಿಸಿಕೊಳ್ಳಲು ಉತ್ಸುಕವಾಗಿದ್ದು, ಅಂತಿಮವಾದ ಬಳಿಕ ಈ ಯೋಜನೆಗೆ ಮತ್ತಷ್ಟು ವೇಗ ನೀಡಲು ನಿರ್ಧರಿಸಲಾಗಿದೆ.

ಪಚ್ಚನಾಡಿಯ ತ್ಯಾಜ್ಯ ದುರಂತ ಸಂಭವಿಸಿದ ಸ್ಥಳದಲ್ಲಿ ಮತ್ತಷ್ಟು ಅನಾಹುತ ಸಂಭವಿಸದಂತೆ ತಡೆಯಲು ಸುಮಾರು 7 ಮೀಟರ್‌ ಎತ್ತರದ ತಡೆಗೋಡೆ ನಿರ್ಮಿಸಲಾಗಿದ್ದು, ತ್ಯಾಜ್ಯದ ನೀರು ಶೇಖರಣೆಗೆ ಟ್ಯಾಂಕ್‌ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ ಸುತ್ತಮುತ್ತಲೂ ಸಿ.ಸಿ. ಕೆಮರಾ ಅಳವಡಿಸಲಾಗಿದೆ. ಅನಧಿಕೃತವಾಗಿ ಕಸ ವಿಲೇವಾರಿ ಮಾಡುವವರ ಬಗ್ಗೆ ನಿಗಾ ವಹಿಸಲಾಗಿದೆ.

ತ್ಯಾಜ್ಯ ದುರಂತಕ್ಕೆ ಎರಡು ವರ್ಷ:

Advertisement

ಪಚ್ಚನಾಡಿ ತ್ಯಾಜ್ಯರಾಶಿ ಜರಿದು ಮಂದಾರ ಪ್ರದೇಶವನ್ನು ತ್ಯಾಜ್ಯಮಯವಾಗಿ ಬದಲಾಯಿಸಿದ ಘಟನೆಗೆ ಆ. 6ಕ್ಕೆ ಎರಡು ವರ್ಷ ಪೂರ್ಣವಾಗುತ್ತಿದೆ. ಆದರೆ ಹರಡಿರುವ ತ್ಯಾಜ್ಯ ಇನ್ನೂ ಹಾಗೇ ಇದೆ. ಎರಡು ವರ್ಷಗಳ ಹಿಂದೆ ಪಚ್ಚನಾಡಿಯ ತ್ಯಾಜ್ಯರಾಶಿ ಜರಿದು ಮಂದಾರ ಭಾಗಕ್ಕೆ ಕುಸಿದು ಸುಮಾರು 2 ಕಿ.ಮೀ.ನಷ್ಟು ದೂರ, 50 ಮೀ. ಗಳಷ್ಟು ಎತ್ತರಕ್ಕೆ ವ್ಯಾಪಿಸಿತ್ತು. ಒಂದು ಮನೆಯನ್ನೂ ಮೀರಿಸುವಷ್ಟು ಎತ್ತರದಲ್ಲಿ ತ್ಯಾಜ್ಯ ರಾಶಿ ಹೊರಳಿಕೊಂಡು ಹೋಗಿತ್ತು. ಮಂದಾರ ಮನೆ, ಅದರ ಪಕ್ಕದ ಇಬ್ಬರ ಮನೆ ಕೂಡ ತ್ಯಾಜ್ಯರಾಶಿಗೆ ಸಿಲುಕಿದೆ. ಇಲ್ಲಿನ ಸುಮಾರು 27 ಮನೆಯವರಿಗೆ ಪ್ರತ್ಯೇಕ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. 14.8 ಕೋಟಿ ರೂ. ಮಧ್ಯಂತರ ಪರಿಹಾರ ಬಿಡುಗಡೆಯಾಗಿದೆ.

ಏನಿದು ಬಯೋಮೈನಿಂಗ್‌? :

ಗುಡ್ಡೆಯಂತೆ ಬೆಳೆದಿರುವ ಡಂಪಿಂಗ್‌ ಯಾರ್ಡ್‌ನ ತ್ಯಾಜ್ಯವನ್ನು ಜೈವಿಕ ವಿಧಾನದ ಮುಖೇನ ಕರಗಿಸುವ ವ್ಯವಸ್ಥೆಗೆ ಬಯೋಮೈನಿಂಗ್‌ ಎನ್ನಲಾಗುತ್ತದೆ. ಈ ವಿಧಾನದಲ್ಲಿ ತ್ಯಾಜ್ಯವನ್ನು ಪ್ರತ್ಯೇಕವಾಗಿ ಬೇರ್ಪಡಿಸಲಾಗುತ್ತದೆ. ಪ್ರಕೃತಿಯಲ್ಲಿ ಕರಗುವ, ಕರಗದಿರುವ ತ್ಯಾಜ್ಯವನ್ನು ಬೇರ್ಪಡಿಸಿ ಉತ್ಪತ್ತಿಯಾಗುವ ಗೊಬ್ಬರ ವನ್ನು ರೈತರಿಗೆ ನೀಡಬಹುದು. ಅದೇ ರೀತಿ, ಪ್ಲಾಸ್ಟಿಕ್‌, ರಬ್ಬರ್‌, ಗಾಜು ಮರು ಬಳಕೆಗಾಗಿ ಸಿಮೆಂಟ್‌ ಕಾರ್ಖಾನೆಗೆ ನೀಡಬಹುದಾಗಿದೆ. ಹಸಿ ತ್ಯಾಜ್ಯವನ್ನು ಸಂಸ್ಕರಣೆ ಮಾಡಲಾಗುತ್ತದೆ. ಉಳಿದ ತ್ಯಾಜ್ಯ ನಾಶಪಡಿಸಲಾಗುತ್ತದೆ. ಇನ್ನು, ಮರಳನ್ನು ಸಂಸ್ಕರಿಸಿ ಮರು ಬಳಕೆ ಮಾಡಲು ಅವಕಾಶ ಇದೆ.

ತ್ಯಾಜ್ಯ ದುರಂತದಿಂದಾಗಿ ಪಚ್ಚನಾಡಿಯಲ್ಲಿ ರಾಶಿ ಬಿದ್ದಿರುವ ಸುಮಾರು 10 ಲಕ್ಷ ಟನ್‌ ಕಸವನ್ನು ಬಯೋಮೈನಿಂಗ್‌ ವಿಧಾನದ ಮುಖೇನ ಕರಗಿಸಲಾಗುವುದು. ಈಗಾಗಲೇ 53 ಕೋಟಿ ರೂ. ವೆಚ್ಚದಲ್ಲಿ ಟೆಂಡರ್‌ ಕರೆಯಲಾಗಿದೆ. ನಾಲ್ಕು ವರ್ಷಗಳಲ್ಲಿ ಈ ವಿಧಾನ ಪೂರ್ಣಗೊಳ್ಳಲಿದೆ. ಇದರಿಂದ ಸಮಸ್ಯೆ ಬಗೆಹರಿಯುವ ನಿರೀಕ್ಷೆ ಇದೆ.-ಅಕ್ಷಯ್‌ ಶ್ರೀಧರ್‌, ಮನಪಾ ಆಯುಕ್ತ

ಪಚ್ಚನಾಡಿ ತ್ಯಾಜ್ಯ ದುರಂತ ಸಂಭವಿಸಿದ ಸ್ಥಳದಲ್ಲಿ ಸಮರ್ಪಕ ವ್ಯವಸ್ಥೆ ಅಳವಡಿಸಲಾಗಿದೆ. ಸುಮಾರು 7 ಮೀ. ಎತ್ತರದಲ್ಲಿ ತಡೆಗೋಡೆ ನಿರ್ಮಿಸಲಾಗಿದ್ದು, ತ್ಯಾಜ್ಯದ ನೀರು ಶೇಖರಣೆಗೆ ಟ್ಯಾಂಕ್‌ ವ್ಯವಸ್ಥೆ ಅಳವಡಿಸಲಾಗಿದೆ. ಅನಧಿಕೃತವಾಗಿ ಕಸ ವಿಲೇವಾರಿ ಮಾಡದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಇದೀಗ ಬಯೋ ಮೈನಿಂಗ್‌ ವಿಧಾನದಲ್ಲಿ ಕಸ ಕರಗಿಸಲು ಉದ್ದೇಶಿಸಲಾಗಿದೆ. ಪ್ರೇಮಾನಂದ ಶೆಟ್ಟಿ, ಮನಪಾ ಮೇಯರ್‌

 

ನವೀನ್‌ ಭಟ್‌ ಇಳಂತಿಲ

 

Advertisement

Udayavani is now on Telegram. Click here to join our channel and stay updated with the latest news.

Next