Advertisement

ಹಾಡಹಗಲೇ ದ್ವಿಚಕ್ರ ವಾಹನ ಕದ್ದ ಕದೀಮ

07:32 PM Jul 17, 2021 | Team Udayavani |

ಹುಬ್ಬಳ್ಳಿ: ವಿದ್ಯಾನಗರ ಗುರುದತ್ತ ಭವನ ಎದುರಿನ ಗಾರ್ಡನ್‌ ಬಳಿಯ ಕೆನರಾ ಬ್ಯಾಂಕ್‌ ಸನಿಹ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಕದೀಮನೊಬ್ಬ ಹಾಡಹಗಲೇ ಕದ್ದುಕೊಂಡು ಹೋಗಿದ್ದಾನೆ.

Advertisement

ಶಿವಾಜಿ ಕಾಂಬಳೆ ಎಂಬುವರು ಬ್ಯಾಂಕಿನ ಎಟಿಎಂ ಎದುರು ವಾಹನ ನಿಲ್ಲಿಸಿ ಬ್ಯಾಂಕಿಗೆ ಹೋಗಿ ಬರುವಷ್ಟರಲ್ಲಿ ಕಳ್ಳನು ಕೈಚಳಕ ತೋರಿದ್ದು, ಇದರ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಬೈಕ್‌ ಕಳ್ಳನ ಶೋಧ ನಡೆಸಿದ್ದಾರೆ.

­ಗಾಯಾಳು ವೃದ್ಧ ಸಾವು: ಕುಸುಗಲ್ಲ ಗ್ರಾಮದ ಶ್ರೀನಿಧಿ ಡಾಭಾ ಬಳಿ ಬುಧವಾರ ಸಂಜೆ ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ವೃದ್ಧರೊಬ್ಬರು ಚಿಕಿತ್ಸೆ ಫಲಿಸದೆ ಗುರುವಾರ ಮೃತಪಟ್ಟಿದ್ದಾರೆ. ಕೂಲಿ ಕೆಲಸ ಮಾಡಿಕೊಂಡಿದ್ದ ಮೂಲತಃ ಕಿರೇಸೂರ ಗ್ರಾಮದ, ಹೆಬಸೂರಿನ ಬಾಬು ಈರಯ್ಯ ಕನಕಣ್ಣವರ (62) ಮೃತಪಟ್ಟಿದ್ದಾರೆ. ಇವರು ರಸ್ತೆ ದಾಟುತ್ತಿದ್ದ ವೇಳೆ ನವಲಗುಂದ ಕಡೆಯಿಂದ ಹುಬ್ಬಳ್ಳಿಯತ್ತ ವೇಗವಾಗಿ ಬರುತ್ತಿದ್ದ ಕಾರು ಚಾಲಕ ನಿಯಂತ್ರಣ ಕಳೆದುಕೊಂಡು ಡಿಕ್ಕಿ ಹೊಡೆದುಕೊಂಡು ಕಾರು ಸಮೇತ ಪರಾರಿಯಾಗಿದ್ದಾನೆ. ಗಂಭೀರ ಗಾಯಗೊಂಡಿದ್ದ ಈರಯ್ಯ ಅವರು ಕಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಸ್ಪಂದಿಸದೆ ಗುರುವಾರ ಮೃತಪಟ್ಟಿದ್ದಾರೆ. ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ­

ಮಟ್ಕಾ ಬುಕ್ಕಿ ಬಂಧನ: ಗೋಕುಲ ರಸ್ತೆ ಶಕ್ತಿ ನಗರದ ಶಕ್ತಿದೇವಿ ಗುಡಿ ಸಮೀಪ ಗುರುವಾರ ಮಟ್ಕಾ ಚೀಟಿ ಬರೆದುಕೊಳ್ಳುತ್ತಿದ್ದವನನ್ನು ಗೋಕುಲ ರಸ್ತೆ ಪೊಲೀಸರು ಬಂಧಿಸಿ, 9,200 ನಗದು ಹಾಗೂ ಒಂದು ಮೊಬೈಲ್‌ ವಶಪಡಿಸಿಕೊಂಡಿದ್ದಾರೆ. ಹಳೇಹುಬ್ಬಳ್ಳಿ ಆನಂದ ನಗರದ ಮಲ್ಲಪ್ಪ ಎಂಬುವನು ಮಟ್ಕಾ ಚೀಟಿ ಬರೆದುಕೊಳ್ಳುತ್ತಿದ್ದಾಗ ಪೊಲೀಸರು ದಾಳಿ ಮಾಡಿ ನಗದು ಮತ್ತು ಮೊಬೈಲ್‌ ವಶಪಡಿಸಿಕೊಂಡಿದ್ದಾರೆ. ಗೋಕುಲ ರಸ್ತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next