Advertisement

ಪೆಗಾಸಸ್ ಹಗರಣದ ಕುರಿತು ತನಿಖೆ ನಡೆಯಲೇಬೇಕೆಂದ ಬಿಹಾರ್ ಸಿಎಂ ನಿತೀಶ್ ಕುಮಾರ್

05:55 PM Aug 02, 2021 | Team Udayavani |

ಪಾಟ್ನಾ: ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿರುವ ಪೆಗಾಸಸ್ ಹಗರಣದ ಕುರಿತು ತನಿಖೆ ನಡೆಸುವಂತೆ ನಡೆಯುತ್ತಿರುವ ವಿರೋಧ ಪಕ್ಷಗಳ ಹೋರಾಟಕ್ಕೆ ಇದೀಗ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಬೆಂಬಲ ಸೂಚಿಸಿದ್ದಾರೆ.

Advertisement

ಇಂದು ‘ಪೆಗಾಸಸ್ ಸ್ನೂಪಿಂಗ್ ಹಗರಣ’ದ ಕುರಿತು ಮಾತನಾಡಿರುವ ಅವರು, ‘ಜನರನ್ನು ತೊಂದರೆಗೊಳಿಸಲು ಹಾಗೂ ಕಿರುಕುಳ ನೀಡಲು ಇಂತಹ ಕೆಲಸಗಳನ್ನು ಮಾಡಬಾರದು. ಇಡೀ ವಿಷಯವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು” ಎಂದು ಒತ್ತಾಯಿಸಿದ್ದಾರೆ.

ಪೆಗಾಸಸ್ ಪ್ರಕರಣವನ್ನು ತನಿಖೆ ಮಾಡಬೇಕೇ ಎಂದು ಕೇಳಿದಾಗ, “ಖಂಡಿತವಾಗಿಯೂ ಇದು ತನಿಖೆ ಆಗಬೇಕು” ಎಂದು ಹೇಳಿರುವ ನಿತೀಶ್ ಕುಮಾರ್, ತುಂಬಾ ದಿನದಿಂದ ದೂರವಾಣಿ ಕದ್ದಾಲಿಕೆ ಬಗ್ಗೆ ಚರ್ಚೆ ನಡೆಯುತ್ತಿದೆ. ಸಂಸತ್ತಿನಲ್ಲಿ ಈ ವಿಷಯ ಪ್ರಸ್ತಾಪವಾಗುತ್ತಿದೆ ಹಾಗೂ ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ.ಹಾಗಾಗಿ ಖಂಡಿತವಾಗಿಯೂ ಇದನ್ನು ಚರ್ಚಿಸಬೇಕು ಹಾಗೂ ಅದರತ್ತ ಗಮನ ನೀಡಬೇಕು. ಎಲ್ಲವನ್ನೂ ಬಹಿರಂಗಪಡಿಸಬೇಕು”ಎಂದು ಅವರು ಆಗ್ರಹಿಸಿದ್ದಾರೆ.

ಇನ್ನು ಪೆಗಾಸಸ್ ತಂತ್ರಾಂಶ ಮೂಲಕ ಬೇಹುಗಾರಿಕೆ ನಡೆಸಲಾಗಿದೆ ಎನ್ನುವ ಆರೋಪ ಕೇಂದ್ರ ಸರ್ಕಾರ ವಿರುದ್ಧ ಕೇಳಿ ಬಂದಿದೆ. ಕಾಂಗ್ರೆಸ್ ಸೇರಿದಂತೆ ಹಲವು ವಿರೋಧ ಪಕ್ಷಗಳು ಈ ಕುರಿತು ಕೇಂದ್ರದ ವಿರುದ್ಧ ಹೋರಾಟ ನಡೆಸಿವೆ. ಪೆಗಾಸಸ್ ಕುರಿತು ತನಿಖೆ ನಡೆಯಬೇಕೆಂದು ಒತ್ತಾಯಿಸುತ್ತಿವೆ. ಇದೀಗ ಬಿಜೆಪಿ ಜೊತೆ ಕೈ ಜೋಡಿಸಿ ಬಿಹಾರದಲ್ಲಿ ಸರ್ಕಾರ ರಚಿಸಿರುವ ನಿತೀಶ್ ಕುಮಾರ್ ಅವರೂ ತನಿಖೆ ನಡೆಯಬೇಕೆಂದು ಆಗ್ರಹಿಸಿರುವುದು ಗಮನ ಸೆಳೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next