ಪಟ್ನಾ: ಬಿಹಾರದಲ್ಲಿ ಬಿಜೆಪಿ-ಜೆಡಿಯು ಮುಂದಿನ ಲೋಕಸಭೆ ಚುನಾವಣೆಗೆ ಮೊದಲ ಹಂತದಲ್ಲಿ ಸೀಟು ಹಂಚಿಕೆ ಕರಡು ಸಿದ್ಧಗೊಂಡಿದೆ. ಬಿಜೆಪಿ ರಚಿಸಿದ ಈ ಸೂತ್ರಕ್ಕೆ ಜೆಡಿಯು ಅನುಮತಿ ನೀಡಿಲ್ಲ ಎನ್ನಲಾಗಿದೆ. ಬಿಜೆಪಿ ತನಗೆ 20 ಕ್ಷೇತ್ರಗಳನ್ನು ಇಟ್ಟುಕೊಂಡು, ಜೆಡಿಯುಗೆ 12, ರಾಮ್ವಿಲಾಸ್ ಪಾಸ್ವಾನರ ಲೋಕ ಜನಶಕ್ತಿ ಪಾರ್ಟಿಗೆ ಆರು ಹಾಗೂ ಉಪೇಂದ್ರ ಖುಷಾÌಹ ಅವರ ರಾಷ್ಟ್ರೀಯ ಲೋಕ ಸಮತಾ ಪಾರ್ಟಿಗೆ ಎರಡು ಸೀಟುಗಳನ್ನು ನೀಡಿದೆ. 2014ರಲ್ಲಿ ಬಿಜೆಪಿ 22 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಆಗ ಆರ್ಜೆಡಿ ಸಖ್ಯ ಬೆಳೆಸಿದ್ದ ಜೆಡಿಯು ಕೇವಲ ಎರಡು ಕ್ಷೇತ್ರಗಳಲ್ಲಿ ಗೆದ್ದಿತ್ತು. ಎನ್ಡಿಎ 31 ಕ್ಷೇತ್ರಗಳನ್ನು ಗೆದ್ದಿತ್ತು.
ಮೂಲಗಳ ಪ್ರಕಾರ ಜೆಡಿಯು ಮುಖಂಡ ನಿತೀಶ್ ಕುಮಾರ್ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಇತ್ತೀಚೆಗೆ ಪಾಟ್ನಾದಲ್ಲಿ ನಡೆಸಿದ ಸಭೆಯಲ್ಲಿ ಸೀಟು ಹಂಚಿಕೆ ವಿಚಾರ ಅಂತಿಮಗೊಂಡಿದೆ. ಆದರೆ ಬಿಹಾರ ಬಿಜೆಪಿ ಮುಖಂಡರು ಇನ್ನೂ ಇದನ್ನು ಒಪ್ಪಿಕೊಳ್ಳಲು ತಯಾರಿದ್ದಂತಿಲ್ಲ. ಒಪ್ಪುತ್ತಿಲ್ಲ. ಎರಡೂ ಪಕ್ಷಗಳಿಗೆ ಸಮಾನವಾಗಿ ಸೀಟುಗಳನ್ನು ಹಂಚಬೇಕು. ತಲಾ 17 ಸೀಟುಗಳನ್ನು ನೀಡಬೇಕು. ಉಳಿದವುಗಳನ್ನು ಎಲ್ಜೆಪಿ ಹಾಗೂ ಆರ್ಎಲ್ಎಸ್ಪಿಗೆ ನೀಡಬೇಕು ಎಂದು ಅವರು ಬೇಡಿಕೆ ಇಟ್ಟಿದ್ದಾರೆ.
ಈ ಮಧ್ಯೆ ಆರ್ಎಲ್ಎಸ್ಪಿ ಮುಖ್ಯಸ್ಥ ಹಾಗೂ ಕೇಂದ್ರ ಸಚಿವ ಉಪೇಂದ್ರ ಖುಷಾÌಹ ಎನ್ಡಿಎ ಜೊತೆಗೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸದಿರುವ ಅನುಮಾನ ವ್ಯಕ್ತಪಡಿಸಿದ್ದಾರೆ. ಆರ್ಜೆಡಿ ಜೊತೆಗೆ ಸ್ಪರ್ಧಿಸುವ ಇಂಗಿತವನ್ನು ಅವರು ವ್ಯಕ್ತಪಡಿಸಿದ್ದರು. ಖುಷಾÌಹ ಪಕ್ಷ ಎನ್ಡಿಎ ಜೊತೆಗೆ ಗುರುತಿಸಿಕೊಳ್ಳದೇ ಇದ್ದರೆ ಸೀಟು ಹಂಚಿಕೆಯಲ್ಲಿ ಬದಲಾವಣೆಯಾಗಲಿದೆ.
ಐದು ನಿಮಿಷದ ಕೆಲಸ: ಚುನಾವಣೆಗೆ ಮುನ್ನ ಪ್ರತಿಪಕ್ಷಗಳ ಮೈತ್ರಿ ಕೂಟ ಪ್ರಧಾನಿ ಅಭ್ಯರ್ಥಿ ಘೋಷಣೆ ಮಾಡುವುದು ಬೇಡ ಎಂಬ ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ ನಿಲುವಿಗೆ ಆರ್ಜೆಡಿ ನಾಯಕ ಲಾಲು ಯಾದವ್ ಸಹಮತ ವ್ಯಕ್ತಪಡಿಸಿದ್ದಾರೆ. ಚುನಾವಣೆ ಮುಕ್ತಾಯವಾದ ಬಳಿಕ ಪ್ರಧಾನಿ ಹುದ್ದೆಗೆ ಅಭ್ಯರ್ಥಿ ಆಯ್ಕೆ ಕೇವಲ 5 ನಿಮಿಷ ಎಂದಿದ್ದಾರೆ.
ಕೋರ್ಟ್ಗೆ ಲಾಲು ಶರಣು
ಆರ್ಜೆಡಿ ಮುಖಂಡ ಲಾಲು ಪ್ರಸಾದ್ ಯಾದವ್ ಪೆರೋಲ್ ಅವಧಿ ಮುಗಿದಿದ್ದರಿಂದ ಗುರುವಾರ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಶರಣಾಗಿದ್ದಾರೆ. ಮೇವು ಹಗರಣದಲ್ಲಿ ಅಪರಾಧ ಸಾಬೀತಾಗಿ ಕಳೆದ ಡಿಸೆಂಬರ್ನಲ್ಲಿ ಜೈಲು ಸೇರಿದ್ದ ಲಾಲು, ಅನಾರೋಗ್ಯದಿಂದಾಗಿ ರಾಂಚಿಯಲ್ಲಿರುವ ರಿಮ್ಸ್ ಮತ್ತು ಮುಂಬೈನಲ್ಲಿ ಚಿಕಿತ್ಸೆ ಪಡೆದಿದ್ದರು.