Advertisement

ತ್ರಿಶಂಕು ಸರ್ಕಾರ ಬಂದರೆ ರಾಜ್ಯಕ್ಕೆ ದೊಡ್ಡ ಅಪಾಯ: ಸುಧೀಂದ್ರ ಕುಲಕರ್ಣಿ

06:18 PM May 07, 2023 | keerthan |

ವಿಜಯಪುರ: ರಾಜ್ಯದಲ್ಲಿ ತ್ರಿಶಂಕು ಸರ್ಕಾರಕ್ಕೆ ಅವಕಾಶ ನೀಡಿದಲ್ಲಿ ದೊಡ್ಡ ಅಪಾಯ ಕಾದಿದೆ. ಹೀಗಾಗಿ ಕಾಂಗ್ರೆಸ್ ಪಕ್ಷಕ್ಕೆ ರಾಜಕೀಯ ಅನೈತಿಕತೆ ಹಾಗೂ ಭ್ರಷ್ಟಾಚಾರಕ್ಕೆ ಕಾರಣವಾದ ಆಪರೇಶನ್ ಕಮಲ ಎಂಬ ದುರವಸ್ಥೆಗೆ ಅವಕಾಶ ನೀಡಬೇಡಿ ಎಂದು ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಸಲಹೆಗಾರರಾಗಿದ್ದ ಸುಧೀಂದ್ರ ಕುಲಕರ್ಣಿ ಮನವಿ ಮಾಡಿದರು.

Advertisement

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಪರೇಷನ್ ಕಮಲ್ ಎನ್ನುವುದು ಪ್ರಜಾತಂತ್ರ ವ್ಯವಸ್ಥಗೆ ಮಾಡುವ ಅಪಚಾರ. ಒಂದರ್ಥದಲ್ಲಿ ಪ್ರಜಾತಂತ್ರ ಹಾಗೂ ಜನಾದೇಶವನ್ನೇ ಅಪಹರಣ ಮಾಡುವ ಅಪಾಯಕಾರಿ ಬೆಳವಣಿಗೆ. ಇಂಥ ದುಸ್ಥಿತಿಗೆ ರಾಜ್ಯ ವಿಧಾನಸಬೆ ಚುನಾವಣೆ ಮೂಲಕವೇ ರಾಷ್ಟ್ರ ಮಟ್ಟದಲ್ಲಿ 2024 ರಲ್ಲಿ ಪ್ರಜಾಪ್ರಭುತ್ವ ರಕ್ಷಣೆಗೆ ನಾಂದಿ ಹಾಡಬೇಕು ಎಂದು ಕೋರಿದರು.

ಹಲವು ವರ್ಷಗಳ ಹಿಂದೆಯೇ ಬಿಜೆಪಿ ತೊರೆದಿರುವ ನಾನೀಗ ಯಾವ ಪಕ್ಷದಲ್ಲೂ ಇಲ್ಲ. ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ ಅವರು ಆದರ್ಶ ರಾಜಕೀಯ ನಾಯಕರು. ಇಂದಿನವರು ಅವರ ಹೆಸರನ್ನೇ ಪ್ರಸ್ತಾನ ಮಾಡುತ್ತಿಲ್ಲ, ಇಡೀ ಬಿಜೆಪಿ ಪಕ್ಷ ಇದೀಗ ಇಬ್ಬರ ಕೈಯಲ್ಲಿ ನಲುಗುತ್ತಿದೆ ಎಂದು ಹೆಸರು ಪ್ರಸ್ತಾಪಿಸದೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದರು.

ಶೇ.40 ಲಂಚದ ಆರೋಪಕ್ಕೆ ಪ್ರಧಾನಿ ಹಾಗೂ ಗೃಹ ಸಚಿವ ಅಮಿತ್ ಶಾ ಉತ್ತರ ನೀಡುತ್ತಿಲ್ಲ. ಬದಲಾಗಿ ಗೃಹ ಸಚಿವ ಅಮಿತ್ ಶಾ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿದರೆ ದಂಗೆಗಳಾಗುತ್ತವೆ ಎಂದು ರಾಜ್ಯದ ಜನರಿಗೆ ಭಯ ಹಾಕುವ ಹಾಗೂ ರಾಜ್ಯದ ಮತದಾರರನ್ನು ಅವಮಾನ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.

ಪ್ರಸ್ತುತ ಡಬಲ್ ಇಂಜಿನ್ ಸರ್ಕಾರದ ಬಗ್ಗೆ ಮಾತನಾಡುವ ಬಿಜೆಪಿ ನಾಯಕರು ಇದೀಗ ಕೇಂದ್ರ-ರಾಜ್ಯದಲ್ಲಿ ಡಬಲ್ ಎಂಜಿನ್ ಸರ್ಕಾರವೇ ಇದ್ದರೂ ರಾಜ್ಯದಲ್ಲಿ ಬೆಲೆ ಏರಿಕೆ ಏಕೆ ನಿಯಂತ್ರಿಸಲಿಲ್ಲ, ಅಡುಗೆ ಅನಿಲ ದರ 1200 ರೂ. ಗಡಿ ದಾಡಲು ಬಿಟ್ಟಿದ್ದೇಕೆ. ನಾನು ಲಂಚ ತಿನ್ನುವುದಿಲ್ಲ, ಇತರರು ಲಂಚ ತಿನ್ನಲು ಬಿಡುವುದಿಲ್ಲವೆಂದು ದೇಶದ ಜನರಿಗೆ ಭರವಸೆ ನೀಡಿದ್ದ ಪ್ರಧಾನಿ ರಾಜ್ಯದಲ್ಲಿ ಭ್ರಷ್ಟಚಾರ ನಿಗ್ರಹಿಸಲು ಏಕೆ ಆಸಕ್ತಿ ತೋರಲಿಲ್ಲ ಎಂದು ಪ್ರಶ್ನಿಸಿದರು.

Advertisement

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿದರೆ ದಂಗೆಯಾಗುತ್ತವೆ ಎನ್ನುವ ಗೃಹ ಸಚಿವ ಅಮಿತ್ ಶಾ, ಮಣಿಪುರ ರಾಜ್ಯದಲ್ಲಿ ತಮ್ಮದೇ ಪಕ್ಷದ ಸರ್ಕಾರ ಇದ್ದರೂ ಹಿಂಸಾಚಾರ ತಡೆಯಲು ಏಕೆ ಸಾಧ್ಯವಾಗಿಲ್ಲ. ಅಲ್ಲಿನ ಡಬಲ್ ಎಂಜಿನ್ ಸರ್ಕಾರ ಏನು ಮಾಡುತ್ತಿದೆ ಎಂದು ಕುಟುಕಿದರು.

ಭ್ರಷ್ಟಾಚಾರ ಎನ್ನುವುದು ಮಹಾರೋಗ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಕ್ಷಣ ಭ್ರಷ್ಟಾಚಾರ ನಿಂತುಬಿಡುತ್ತದೆ ಎಂದು ನಾನು ಹೇಳಲಾರೆ. ಆದರೆ ಭ್ರಷ್ಟಾಚಾರ ಮಾತ್ರವಲ್ಲ ದುರಾಡಳಿತದ ವಿರುದ್ಧ ಸರ್ಕಾರಕ್ಕೆ ಚಾಟಿ ಬೀಸುವಲ್ಲಿ ಹಿರಿಯರ ತಂಡವೊಂದು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಬಿಜೆಪಿ ಇದೀಗ ಆರ್ಎಸ್‍ಎಸ್ ಹಿಡಿತದಲ್ಲೂ ಇಲ್ಲ. ವಾಜಪೇಯಿ, ಅಡ್ವಾಣಿ ಅವರ ಕಾಲದಲ್ಲಿ ಬಿಜೆಪಿ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದ್ದದ್ದು, ಇದೀಗ ಮಾಯವಾಗಿದ್ದು, ಆರ್‍ಎಸ್‍ಎಸ್ ಮಾನ ವಹಿಸಿದ್ದೇಕೆ ಎಂದು ಪ್ರಶ್ನಿಸಿದರು.

ಒಂದು ನಿರ್ದಿಷ್ಟ ಪಕ್ಷವನ್ನು ವೀರೋಧಿಸಿದವರ ವಿರುದ್ಧ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸುವ ಮಟ್ಟಕ್ಕೆ ಆಡಳಿತ ವ್ಯವಸ್ಥೆ ಪ್ರಜಾಸತ್ತೆಯನ್ನು ಕಳೆದುಕೊಂಡಿದೆ. ಇಡಿ, ಐಟಿ, ಸಿಬಿಐ ಹೀಗೆ ರಾಷ್ಟ್ರೀಯ ಸ್ವಾಯತ್ತ ತನಿಖಾ ಸಂಸ್ಥೆಗಳನ್ನು ತನಿಖೆಯ ಹೆಸರಿನಲ್ಲಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಹೀಗೆ ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಆಡಿತ ವಿರೋಧಿ ಅಲೆ ಜೋರಾಗಿರುವ ಹಂತದಲ್ಲಿ ಕಾಂಗ್ರೆಸ್ ಭಜರಂಗದಳ ನಿಷೇಧ ಪ್ರಸ್ತಾಪಿಸಿದ್ದೇ ದೊಡ್ಡ ತಪ್ಪು ಎಂದು ಬೇಸರ ವ್ಯಕ್ತಪಡಿಸಿದರು.

ನಾನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧೀ ಸಲಹೆಗಾರನಲ್ಲ ಎಂದು ಸ್ಪಷ್ಟಪಡಿಸಿದ ಸುಧೀಂದ್ರ ಕುಲಕರ್ಣಿ, ಆದರೆ ರಾಹುಲ್ ಒಳ್ಳೆ ಹೃದಯವಂತ ಎಂದು ಶ್ಲಾಘಿಸಿದರು.

ನಾನು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನವನು. ಅಥಣಿಗೆ ಹೊಂದಿಕೊಂಡಿರುವ ಬಬಲೇಶ್ವರ ಕ್ಷೇತ್ರದಲ್ಲಿ ನೀರಿನ ದುಸ್ಥಿತಿ ಹೇಳತೀರದಾಗಿತ್ತು. ಇಂಥ ದಯನೀಯ ಸ್ಥಿತಿಯ ನೆಲಕ್ಕೆ ನೀರಾವರಿ ಕ್ರಾಂತಿ ಮಾಡಿರುವ ಎಂ.ಬಿ.ಪಾಟೀಲ ಈ ಭಾಗದ ವಿಕಾಸ ಶಿಲ್ಪಿ. ಅವರನ್ನು ಗೆಲ್ಲಿಸುವ ಮೂಲಕ ಬಬಲೇಶ್ವರ ಕ್ಷೇತ್ರದ ಜನರು ಪಾಟೀಲ ಅವರಿಗೆ ಇನ್ನೂ ಹೆಚ್ಚಿನ ಅವಕಾಶ, ಅಧಿಕಾರ ಸಿಗುವಂತೆ ಮಾಡಬೇಕು ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next