ಸುರಪುರ: ಸಮಾಜವನ್ನು ಎಸ್ಟಿ ಮೀಸಲಾತಿಗೆ ಒಳಪಡಿಸುವಂತೆ ಒತ್ತಾಯಿಸಿ ಮಾ. 10ರಂದು ತಿಂಥಣಿ ಮೌನೇಶ್ವರ ದೇವಸ್ಥಾನದಿಂದ ಯಾದಗಿರಿ ಜಿಲ್ಲಾಧಿಕಾರಿ ಕಚೇರಿಯವರೆಗೆ 81ಕಿಮೀ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ವಿಶ್ವಕರ್ಮ ಮಹಾಸಭಾ ತಾಲೂಕು ಘಟಕ ಅಧ್ಯಕ್ಷ ಪ್ರಭುದೇವ ಚನ್ನಪಟ್ಟಣ ತಿಳಿಸಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸಮಾಜ ತೀರಾ ಹಿಂದುಳಿದಿದ್ದು, ಸರಕಾರದ ಸೌಲಭ್ಯಗಳಿಂದ ವಂಚಿತವಾಗಿದೆ.
ಸರಕಾರ ಸಮಾಜಕ್ಕೆ ನ್ಯಾಯ ಒದಗಿಸಿಕೊಡಬೇಕು. ಸಮಾಜಕ್ಕೆ ಎಸ್ಟಿ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿ ನಾಲ್ಕು ದಿನಗಳವರೆಗೆ ಈ ಪಾದಯಾತ್ರೆ ಆಯೋಜಿಸಲಾಗಿದ್ದು, ಪ್ರತಿದಿನ ನೂರಾರು ಸಂಖ್ಯೆಯಲ್ಲಿ ಕುಲಬಾಂಧವರು ಯಾತ್ರೆಯಲ್ಲಿ ಪಾಲ್ಗೊಳುತ್ತಿದ್ದಾರೆ ಎಂದರು. ಸಮಾಜಕ್ಕೆ ಎಸ್ಟಿ ಮೀಸಲಾತಿಗೆ ಒತ್ತಾಯಿಸಿ ಕಳೆದ ಹಲವಾರು ವರ್ಷಗಳಿಂದ ಹೋರಾಟ ನಡೆದಿದೆ. ಆದರೆ ಸರಕಾರ ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ.
ಮತ್ತೂಮ್ಮೆ ಸರಕಾರದ ಗಮನಸೆಳೆಯಲು ಈ ಪಾದಯಾತ್ರೆಯ ಹೋರಾಟ ನಡೆಯುತ್ತಿದೆ. ಪಾದಯಾತ್ರೆಯಲ್ಲಿ ಸಮುದಾಯದ ಸ್ವಾಮೀಜಿಗಳು, ಅಖೀಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ರಾಜ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಕೆ.ಪಿ. ನಂಜುಂಡಿ, ರಾಜ್ಯ ಮತ್ತು ಜಿಲ್ಲಾಮಟ್ಟದ ನಾಯಕರು ಭಾಗವಹಿಸುತ್ತಿದ್ದಾರೆ ಎಂದರು. ದೇವಿಂದ್ರಪ್ಪ ತಳವಾರಗೇರಾ, ಮಹೇಶಕುಮಾರ ಶಾರದಳ್ಳಿ, ಮಲ್ಲು ಬಡಿಗೇರ, ಚಂದ್ರು ಗೋಗಿ, ದೇವಿಂದ್ರಪ್ಪ ಬೈರಿಮಡ್ಡಿ, ಮಹೇಶ ವಿಶ್ವಕರ್ಮ, ಬಲಭೀಮ ಶೆಳ್ಳಗಿ, ಬಸವರಾಜ ಪತ್ತಾರ, ಮಹೇಶ ಸಗರ, ಮೌನೇಶ ಗುಡಿ ತಿಂಥಣಿ, ಶಿವಕುಮಾರ ವಿಶ್ವಕರ್ಮ, ಮೌನೇಶ ಕೋನಾಳ, ಮಾನಪ್ಪ ನಾಲವಾರ, ಗುರುರಾಜ ವಿಶ್ವಕರ್ಮ, ಶಂಕ್ರಪ್ಪ ಕಲಕೇರಿ, ರಘುವೀರ, ಬಸವರಾಜ ಇದ್ದರು.