Advertisement

ಜೇನು ಕೃಷಿಯಿಂದ ಬೆಳೆ ಇಳುವರಿ ವೃದ್ಧಿ

01:39 PM Mar 12, 2020 | Naveen |

ಬೀದರ: ಜೇನು ಸಾಕಾಣಿಕೆ ಲಾಭದಾಯಕ ಉಪ ಕಸುಬು. ಮಾತ್ರವಲ್ಲ ತೋಟಗಾರಿಕೆ ಬೆಳೆಗಳ ಇಳುವರಿ ಹೆಚ್ಚಿಸಲು ನೆರವಾಗುತ್ತದೆ ಎಂದು ತೋಟಗಾರಿಕೆ ಮಹಾವಿದ್ಯಾಲಯದ ಡೀನ್‌ ಡಾ| ರವೀಂದ್ರ ಮೂಲಗೆ ತಿಳಿಸಿದರು.

Advertisement

ನಗರದ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರ ಕಚೇರಿ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ತೋಟಗಾರಿಕೆ ಇಲಾಖೆಯ “ಜೇನು ಮೇಳ’ ಜೇನು ಪ್ರದರ್ಶನ-ಮಾರಾಟ ಮೇಳ ಹಾಗೂ ಜೇನು ಕೃಷಿ ತಾಂತ್ರಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಜೇನು ನಿಸರ್ಗದತ್ತವಾಗಿ ಸಿಗುವಂಥದ್ದು. ಇದನ್ನು ವೃದ್ಧಿ ಮಾಡಿ ಲಾಭ ಮಾಡಿಕೊಳ್ಳುವುದು ಮನುಷ್ಯರ ಕೆಲಸ ಎಂದು ಸಲಹೆ ನೀಡಿದರು.

ಜೇನು ನೊಣಗಳಿಂದ ಪರಾಗಸ್ಪರ್ಶವಾಗುವುದರಿಂದ ಬೆಳೆಗಳ ಇಳುವರಿ ಮತ್ತು ಗುಣಮಟ್ಟ ಹೆಚ್ಚುತ್ತದೆ. ಬೀಜೋತ್ಪನ್ನಕ್ಕೂ ಸಹಕಾರಿಯಾಗುತ್ತದೆ. ಹಾಗಾಗಿ ರೈತರು ಜೇನು ಸಾಕಾಣಿಕೆಗೆ ಮುಂದಾಗಬೇಕು. ಜೇನು ಸಾಕಾಣಿಕೆ ಆರಂಭಿಸಿರುವ ರೈತರು ಬೇಸಿಗೆ ಅವಧಿ ಯಲ್ಲಿ ಹೂಗಳ ಪ್ರಮಾಣ ಇಳಿಕೆಯಾಗುವ ಕಾರಣ ಸಕ್ಕರೆಪಾಕ ಒದಗಿಸುವ ಮೂಲಕ ಜೇನು ನೊಣಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

ಜೇನು ಕೃಷಿ ಉದ್ಯಮವಾಗಿ ಬೆಳೆಯುತ್ತಿದೆ. ಪಶ್ಚಿಮ ಘಟ್ಟದಲ್ಲಿ ನಿರಂತರವಾಗಿ ಜೇನು ಕೃಷಿ ಮಾಡಲಾಗುತ್ತಿದ್ದು, ಬೆಳೆಗಾರರ ಸಂಘಗಳನ್ನು ಮಾಡಿಕೊಂಡು ಪ್ರಗತಿ ಸಾಧಿ ಸುತ್ತಿದ್ದಾರೆ. ಈ ಕೃಷಿಯನ್ನು ಒಣ ಭೂಮಿ ಪ್ರದೇಶಕ್ಕೂ ವ್ಯಾಪಿಸುವ ಉದ್ದೇಶ ಸರ್ಕಾರ ಹೊಂದಿದೆ. ಇದಕ್ಕಾಗಿ ತೋಟಗಾರಿಕೆ ಇಲಾಖೆ ಮೂಲಕ ಅಗತ್ಯ ಸಹಾಯ, ಸಲಕರಣೆ ವಿತರಿಸಲಾಗುತ್ತಿದ್ದು, ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ ಬಾವಗೆ ಮಾತನಾಡಿ, ಭೂಮಿ ಮೇಲಿರುವ ಸಸ್ಯ ಪ್ರಬೇಧಗಳಲ್ಲಿ ಬಹುತೇಕ ಸಸ್ಯಗಳ ಸಂತತಿ ಪರಾಗಸ್ಪರ್ಶದ ಮೂಲಕ ನಡೆಯುತ್ತದೆ. ಜೇನು ಔಷಧದ ರೂಪದಲ್ಲಿಯೂ ಬಳಕೆಯಾಗುತ್ತದೆ. ಜಿಲ್ಲೆಯು ಜೇನು ಸಾಕಾಣಿಕೆಗೆ ಸೂಕ್ತ ಸ್ಥಳವೆಂದು ತಜ್ಞರು ತಿಳಿಸಿದ್ದಾರೆ.

Advertisement

ತೋಟಗಾರಿಕೆ ಇಲಾಖೆಯಿಂದಲೂ ಜೇನು ಸಾಕಾಣಿಕೆದಾರರಿಗೆ ನೆರವು ನೀಡಲಾಗುತ್ತಿದೆ. ರೈತರು ಯಾವುದೇ ಹಿಂಜರಿಕೆ ಇಲ್ಲದೇ ಇಲಾಖೆ ಸೌಲಭ್ಯ ಪಡೆದು ಜೇನು ಸಾಕಾಣಿಕೆ ಆರಂಭಿಸಬೇಕು ಎಂದರು. ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ|
ಸುನೀಲಕುಮಾರ.ಎನ್‌.ಎಂ ಮಾತನಾಡಿ, ಜೇನಿನ ಪ್ರಬೇಧಗಳು, ಜೇನು ಸಾಕಾಣಿಕೆ ವಿಧಾನಗಳು ಹಾಗೂ ಜೇನಿನ ಲಾಭದ ಕುರಿತು ವಿವರಣೆ ನೀಡಿದರು. ಮೊದಲಿಗೆ ಎರಡು ಪೆಟ್ಟಿಗೆಗಳಿಂದ ಜೇನು ಸಾಕಾಣಿಕೆ ಆರಂಭಿಸುವುದು ಸೂಕ್ತ. ಅನುಭವದ ಆಧಾರದ ಮೇಲೆ ಪೆಟ್ಟಿಗೆ ವಿಸ್ತರಿಸಿಕೊಳ್ಳಬಹುದು ಎಂದು ತಿಳಿಸಿದರು.

ಬೆಂಗಳೂರಿನ ಜೇನು ಪೆಟ್ಟಿಗೆ ತಯಾರಕರು ಮತ್ತು ವಿತರಕರಾದ ಇಂದುಶೇಖರ್‌ ಹಾಗೂ ಜಿಲ್ಲೆಯ ವಿವಿಧ ರೈತರು ಜೇನು ಸಾಕಾಣಿಕೆ ಕುರಿತು ತಮ್ಮ ಅನುಭವ ಹಂಚಿಕೊಂಡರು. ಈ ಸಂದರ್ಭದಲ್ಲಿ ಜೇನು ಕೃಷಿಕ ಡಾ| ಮಲ್ಲಿಕಾರ್ಜುನ ಎಮ್ಮೆ, ತೋಟಗಾರಿಕೆ ಇಲಾಖೆಯ ವಿಷಯ ತಜ್ಞ ವಿಜಯಕುಮಾರ ರೇವಣ್ಣನವರ್‌ ಸೇರಿದಂತೆ ರೈತರು ಉಪಸ್ಥಿತರಿದ್ದರು.

ಹಿರಿಯ ಸಹಾಯಕ ನಿರ್ದೇಶಕ ಶಿವಪುತ್ರ ಶಂಭು ನಿರೂಪಿಸಿದರು. ಜೇನು ಮೇಳದ ಪ್ರಯುಕ್ತ ತೋಟಗಾರಿಕೆ ಕಚೇರಿ ಆವರಣದಲ್ಲಿ ಜೇನು ಪ್ರದರ್ಶನ ಮತ್ತು ಮಾರಾಟ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next