Advertisement

ಖಂಡ್ರೆ -ಖೂಬಾ ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ

11:24 AM Mar 28, 2019 | Team Udayavani |

ಬೀದರ: ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌-ಬಿಜೆಪಿ ಅಭ್ಯರ್ಥಿಗಳ ಆಯ್ಕೆ
ಅಂತಿಮವಾಗಿದ್ದು, ಮಾ.28ರಿಂದ ನಾಮಪತ್ರ ಸಲ್ಲಿಕೆ ಶುರುವಾಗಲಿದೆ. ಎರಡೂ ಪಕ್ಷಗಳ ಪ್ರಭಾವಿ ನಾಯಕರ ಮುಂದಾಳತ್ವದಲ್ಲಿ ಇಬ್ಬರೂ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಮೂಲಕ ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ
ನಡೆಸಿದ್ದಾರೆ.

Advertisement

ಏ.4ರವರೆಗೆ ನಾಮಪತ್ರ ಸಲ್ಲಿಕೆಯಾಗಲಿದ್ದು, ಕಾಂಗ್ರೆಸ್‌ ಅಭ್ಯರ್ಥಿ ಈಶ್ವರ ಖಂಡ್ರೆ ಏ.2ರಂದು ನಾಮಪತ್ರ ಸಲ್ಲಿಕೆಗೆ ದಿನಾಂಕ ನಿಗದಿ ಮಾಡಿಕೊಂಡಿದ್ದಾರೆ. ಅಂದು ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಸಿ.ಎಂ. ಇಬ್ರಾಹಿಂ ಸೇರಿದಂತೆ ಮೈತ್ರಿ ಸರ್ಕಾರದ ಅನೇಕ ಸಚಿವರು ಭಾಗವಹಿಸಲಿದ್ದು, ಬೃಹತ್‌ ರ್ಯಾಲಿ ನಡೆಯುವ ಸಾಧ್ಯತೆಯಿದೆ. ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಕೂಡ ನಾಮಪತ್ರ ಸಲ್ಲಿಕೆಗೆ ಭರದ ಸಿದ್ಧತೆ ನಡೆಸಿದ್ದಾರೆ. ಬಿ.ಎಸ್‌.ಯಡಿಯೂರಪ್ಪ, ನಿತಿನ್‌ ಗಡ್ಕರಿ ಸೇರಿದಂತೆ ಹಲವು ಮುಖಂಡರು ಭಾಗವಹಿಸಲಿದ್ದಾರೆ ಎನ್ನಲಾಗಿದೆ. ಏ.3ರಂದು ನಾಮಪತ್ರ ಸಲ್ಲಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಿರುವ ಪಕ್ಷದ ವರಿಷ್ಠರು ಈಗಾಗಲೇ ಕ್ಷೇತ್ರದ ವಿವಿಧೆಡೆ ಪಕ್ಷದ ಸಭೆಗಳನ್ನು ನಡೆಸುತ್ತಿದ್ದಾರೆ.

ಸದ್ಯ ಬೀದರ್‌ ಲೋಕಸಭೆ ಕ್ಷೇತ್ರ ಹೈವೋಲ್ಟೆಜ್‌ ಕ್ಷೇತ್ರವಾಗಿ ಪರಿಣಮಿಸಿದೆ. ಎರಡು ಪಕ್ಷಗಳಿಗೆ ಈ ಚುನಾವಣೆ ಪ್ರತಿಷ್ಠೆಯ ಕಣವಾಗಿದೆ. ಕಾಂಗ್ರೆಸ್‌ ತನ್ನ ವರ್ಚಸ್ಸು ಹೆಚ್ಚಿಕೊಳ್ಳಲು ಅನೇಕ ತಂತ್ರಗಳನ್ನು ಹೆಣೆಯುತ್ತಿದ್ದರೆ, ಬಿಜೆಪಿ ತನ್ನ ಸ್ಥಾನವನ್ನು ಭದ್ರವಾಗಿ ಉಳಿಸಿಕೊಳ್ಳಲು ಪ್ರತಿತಂತ್ರಕ್ಕೆ ಮುಂದಾಗಿದೆ.

ಈಶ್ವರ ಖಂಡ್ರೆಗೆ ಸವಾಲು
ಭಾಲ್ಕಿ ಕ್ಷೇತ್ರದ ಶಾಸಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರಿಗೆ ಈ ಚುನಾವಣೆ ಸವಾಲಾಗಿದೆ. ಸಿದ್ದರಾಮಯ್ಯ ಸರ್ಕಾರದ ವೇಳೆ ವಿಧಾನಸಭೆ ಚುನಾವಣೆಯಲ್ಲಿ ಮುಂದಾಳತ್ವ ವಹಿಸಿ ಜಿಲ್ಲೆಯ 4 ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಗೆಲುವಿಗೆ ಅಣಿಯಾಗಿದ್ದರು. ಕೆಪಿಸಿಸಿ ಕಾರ್ಯಾಧ್ಯಕ್ಷರ ಕ್ಷೇತ್ರದಲ್ಲೇ ಪಕ್ಷ ಸೋತರೆ ಮುಜುಗರ ಆಗಬಹುದೆಂಬ ಲೆಕ್ಕಾಚಾರದಲ್ಲಿ ಖಂಡ್ರೆ ಸ್ವತಃ ಸ್ಪರ್ಧೆಗೆ ಇಳಿದಿದ್ದಾರೆ ಎನ್ನಲಾಗಿದೆ. ಪ್ರಥಮ ಬಾರಿಗೆ ಲೋಕಸಭೆ ಚುನಾವಣೆ ಕಣಕ್ಕಿಳಿದಿದ್ದು ಗೆಲವು ಪ್ರತಿಷ್ಠೆಯ ವಿಷಯವಾಗಿದೆ.

ಸಂಸದ ಖೂಬಾಗೆ ಅಸ್ತಿತ್ವದ ಪ್ರಶ್ನೆ
2014ರ ಲೋಕಸಭೆ ಚುನಾವಣೆಯಿಂದ ಪ್ರಥಮ ಬಾರಿಗೆ ಪ್ರವೇಶ ಮಾಡಿದ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರಿಗೆ ಈ ಚುನಾವಣೆ ಅಸ್ತಿತ್ವದ ಪ್ರಶ್ನೆ. ಕೇಂದ್ರದ ಹತ್ತಾರು ಸಚಿವರ ಆಪ್ತರಾಗಿ ಗುರುತಿಸಿಕೊಂಡಿರುವ ಖೂಬಾ ಚುನಾವಣೆ ಯನ್ನು ಸವಾಲಾಗಿ ಸ್ವೀಕರಿಸಿದ್ದಾರೆ. ಖೂಬಾ ಪಕ್ಷದ ಬೂತ್‌ ಮಟ್ಟದ ಕಾರ್ಯಕರ್ತರ ಸಂಪರ್ಕಕ್ಕೆ ಮುಂದಾಗಿದ್ದಾರೆ. ಕೇಂದ್ರದ ವಿವಿಧ ಯೋಜನೆಗಳ ಸಾಧನೆಯನ್ನು ಜನರಿಗೆ ತಿಳಿಸುತ್ತಿದ್ದಾರೆ.

Advertisement

ಜಿಪಂ ಅಧ್ಯಕ್ಷ- ಉಪಾಧ್ಯಕ್ಷರ ನಡೆ ಏನು?
ಕಾಂಗ್ರೆಸ್‌ ಹಿಡಿತದಲ್ಲಿದ್ದ ಜಿಪಂನಲ್ಲಿ ಕಳೆದ ತಿಂಗಳು ಆ ಪಕ್ಷದವರೇ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದರು. ಅದರ ಪರಿಣಾಮ ಲೋಕಸಭೆ ಚುನಾವಣೆ ಮೇಲೆ ಬೀರುವ ಸಾಧ್ಯತೆ ಇದೆ. ಅಧ್ಯಕ್ಷೆ ಭಾರತಬಾಯಿ ಶೇರಿಕಾರ ಹಾಗೂ ಉಪಾಧ್ಯಕ್ಷ ಡಾ. ಪ್ರಕಾಶ ಪಾಟೀಲ ಅವರನ್ನು ಕಾಂಗ್ರೆಸ್‌ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಉಚ್ಚಾಟನೆ ಮಾಡಿದ ಕಾಂಗ್ರೆಸ್‌ ಪಕ್ಷಕ್ಕೆ ಸೆಡ್ಡು ಹೊಡಯಬೇಕು ಎಂಬ ನಿಟ್ಟಿನಲ್ಲಿ ಇಬ್ಬರೂ ತಂತ್ರ ನಡೆಸುತ್ತಿದ್ದಾರೆ. ಪ್ರಕಾಶ ಪಾಟೀಲ ಮರಾಠ ಸಮುದಾಯದ ಪ್ರಬಲ ನಾಯಕರು. ಕಾಂಗ್ರೆಸ್‌ಗೆ ಮರಾಠ ಸಮುದಾಯದ ಶಕ್ತಿ ಪ್ರದರ್ಶಿಸಲು ಸಿದ್ಧತೆ ನಡೆಸುತ್ತಿದ್ದಾರೆ.

ದುರ್ಯೋಧನ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next