Advertisement

ಬೆಂಗಳೂರಿನಲ್ಲಿ ಏದುಸಿರು ಬಿಡುತ್ತಿರುವ ಸೈಕ್ಲಿಂಗ್

05:38 PM Jun 03, 2020 | Nagendra Trasi |

ಬೆಂಗಳೂರು : ಪರಿಸರ ಸ್ನೇಹಿ, ಮಾಲಿನ್ಯರಹಿತ ಸಾರಿಗೆ ವಿಧಾನವಾಗಿರುವ ಸೈಕಲಿಂಗ್ ಹಲವಾರು ಆರೋಗ್ಯ ಪ್ರಯೋಜನಗಳಿಂದ ಕೂಡಿದ್ದರೂ; ನಿರಂತರವಾಗಿ, ಬೃಹದಾಕಾರಕ್ಕೆ ವಿಸ್ತರಿಸುತ್ತಿರುವ ಬೆಂಗಳೂರು ಮಹಾನಗರದ ಸಾರಿಗೆ ಕ್ಷೇತ್ರದಲ್ಲಿ ಇನ್ನೂ ಸರಿಯಾದ ಮಾನ್ಯತೆಯನ್ನು ಪಡೆದುಕೊಂಡಿಲ್ಲ.
`ಕಳೆದ ಕೆಲವು ದಶಕಗಳಿಂದ ಬೆಂಗಳೂರಿನ ಸಾರಿಗೆಯಲ್ಲಿ ಸೈಕಲ್‍ನ ಪಾಲು ತೀವ್ರವಾಗಿ ಕುಸಿದಿದೆ. 1965ರಲ್ಲಿ ಬೆಂಗಳೂರಿನ ಸಾರಿಗೆಯ ಪಾಲಿನಲ್ಲಿ ಶೇಖಡಾ 70ರಷ್ಟು ದ್ವಿಚಕ್ರ ವಾಹನಗಳ ಸಂಚಾರವಿತ್ತು. 1988ರಲ್ಲಿ ಈ ಸಂಖ್ಯೆ ಶೇಖಡಾ 20ಕ್ಕೆ ಇಳಿದು, 1998ರಲ್ಲಿ 5%ಕ್ಕೆ ತಲುಪಿತು. 2002ರಲ್ಲಿ ದ್ವಿಚಕ್ರ ವಾಹನಗಳ ಶೇಖಡಾವಾರು ಬಳಕೆಯು ಸುಧಾರಣೆಗೊಳ್ಳುವಲ್ಲಿ ವಿಫಲವಾಯಿತು’ ಎಂಬುದಾಗಿ ದಿ ಎನರ್ಜಿ ಆಂಡ್ ರಿಸೋರ್ಸಸ್ ಇನ್ಸ್‍ಟಿಟ್ಯೂಟ್ (ಟಿಇಆರ್‍ಐ) 2014ರಲ್ಲಿ ನಡೆಸಿದ ಸಂಶೋಧನೆಯು ತಿಳಿಸಿದೆ.

Advertisement

ಅಟ್ಮಾಸ್ಫರಿಕ್ ಪೊಲ್ಯೂಷನ್ ರೀಸರ್ಚ್ (ಎಪಿಆರ್) ಪತ್ರಿಕೆಯ ವರದಿಯ ಪ್ರಕಾರ `ಯಾವುದೇ ಪರಿಣಾಮಕಾರಿ ನೀತಿ, ನಿಯಮಗಳನ್ನು ಜಾರಿಗೊಳಿಸದಿದ್ದರೆ 2030ರ ವೇಳೆಗೆ ಬೆಂಗಳೂರಿನ ಅರ್ಧದಷ್ಟು ವಾಯುಮಾಲಿನ್ಯವು ಕೇವಲ ವಾಹನಗಳಿಂದ ಬರುತ್ತದೆ. ಶುದ್ಧ ಇಂಧನ, ಸಮೂಹ ಸಾರಿಗೆ, ಸೈಕ್ಲಿಂಗ್ ; ಇವು ವಾಹನದಿಂದುಂಟಾಗುವ ಮಾಲಿನ್ಯಕ್ಕೆ ಸರಿಯಾದ ಕ್ರಮಗಳಾಗಿವೆ.ಸೈಕಲ್ ಹಂಚಿಕೆ ಸೇವೆಗಳ ಪರಿಕಲ್ಪನೆಯು ಪ್ರಾರಂಭವಾದ ನಗರಗಳ ಪೈಕಿ ಬೆಂಗಳೂರು ಕೂಡಾ ಸೇರಿದೆ. ಆದರೆ ಮೂಲಭೂತ ಸೌಕರ್ಯಗಳ ಕೊರತೆ, ಸೈಕಲಿಂಗ್ ಟ್ಯ್ರಾಕ್‍ಗಳ ಅತಿಕ್ರಮಣದಿಂದಾಗಿ ಮೆಟ್ರೋ ನಿಲ್ದಾಣಗಳ ನಡುವಿನ ಸಂಪರ್ಕ ಹಾಗೂ ಇನ್ನೂ ಕೆಲವು ಪ್ರದೇಶ ವ್ಯಾಪ್ತಿಗಷ್ಟೇ ಸೀಮಿತಗೊಳಿಸಲಾಗಿದೆ.

ಜಾಗರೂಕತೆ ಅಗತ್ಯ :

ಉತ್ತರ ಬೆಂಗಳೂರಿನ ನಿವಾಸಿಯಾಗಿರುವ ಕಾಲೇಜು ವಿದ್ಯಾರ್ಥಿ ರಾವ್ನಕ್ ಅಹ್ಮದ್ ಅವರ ಪ್ರಕಾರ `ವಾಹನ ದಟ್ಟಣೆಯಲ್ಲಿ ಅಶಿಸ್ತಿನ ವಾಹನ ಚಾಲನೆ ಮಾಡುವ ವಾಹನ ಚಾಲಕರು ಕೆಲವೊಮ್ಮೆ ಸೈಕಲ್ ಚಾಲಕರ ಮೇಲೆ ಕಣ್ಣಿಗೆ ಕಾಣಿಸದವರಂತೆ ಎರಗಿ ಬರುವುದಿದೆ’ ಎನ್ನುತ್ತಾರೆ. ಇವರ ಈ ಆತಂಕವು ತಲೆಯ ಮೇಲೆ ಹೆಲ್ಮೆಟ್ ಇಲ್ಲದೇ ಪೆಡಲ್ ಮೇಲೆ ಕಾಲಿಡಬಾರದು ಎಂಬುದನ್ನು ಗಂಭೀರವಾಗಿ ಸೂಚಿಸುತ್ತದೆ.

Advertisement

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ವರದಿಯ ಪ್ರಕಾರ, 2011 ಮತ್ತು 2015ರ ನಡುವಿನ ಐದು ವರ್ಷಗಳ ಅವಧಿಯಲ್ಲಿ ಭಾರತದಲ್ಲಿ 25 ಸಾವಿರಕ್ಕೂ ಹೆಚ್ಚು ಸೈಕ್ಲಿಸ್ಟ್‍ಗಳು ಸಾವನ್ನಪ್ಪಿದ್ದಾರೆ ಎಂಬುದನ್ನು ಗಮನಿಸುವಾಗ ರಾವ್ನಕ್ ಅವರ ಕಳವಲ್ಲ ಆಧಾರ ರಹಿತವಲ್ಲ ಎಂಬುದನ್ನು ಗೊತ್ತುಪಡಿಸುತ್ತದೆ.
ಬೆಂಗಳೂರಿನ ಟೆಕ್ನಾಲಜಿ ಪಾರ್ಕ್‍ನಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾರದಾ ಕೆ. ಅವರ ಹೇಳುವಂತೆ, ಸೈಕಲಿಂಗ್‍ಗೆ ಉತ್ತೇಜನ ನೀಡುವ ಸಲುವಾಗಿ ಯೋಜನೆಯೊಂದನ್ನು ಸರಕಾರ ಘೋಷಿಸಿರುವುದಾಗಿ ಮಾಧ್ಯಮಗಳಲ್ಲಿ ಓದಿದ್ದು, ಸರಿಯಾಗಿ ಯಾವುದೇ ಉತ್ತೇಜನ ಕ್ರಮ ಜಾರಿಯಾಗದೇ ಇರುವುದರಿಂದ ಆಕೆ ಮತ್ತು ಆಕೆಯ ಅನೇಕ ಮಂದಿ ಸೈಕಲಿಂಗ್‍ನಲ್ಲಿ ಉತ್ಸಾಹಿಗಳಾಗಿರುವ ಸ್ನೇಹಿತರಿಗೆ ನಿರಾಶೆ ತರಿಸಿದೆ.

ಸಂಚಾರಿಗಳ ಸಂಖ್ಯೆಯು ಅಧಿಕಗೊಂಡಿರುವ ಬೆಂಗಳೂರಿನಂತಹ ನಗರದಲ್ಲಿ ಸೈಕ್ಲಿಂಗ್‍ನ ಮೇಲೆ ಆಸಕ್ತಿಯೂ ಹೆಚ್ಚುತ್ತಿದೆ. ಈಗಾಗಲೇ ಕೆಲವು ತಂತ್ರಜ್ಞಾನ ಆಧಾರಿತ ಕಂಪೆನಿಗಳಾದ ಬಾಷ್, ಕ್ವಾಲ್‍ಕಾಮ್, ಕಿಸ್ಕೋ ಮತ್ತು ಜುನಿಫರ್ ನೆಟ್‍ವರ್ಕ್‍ಗಳು ತಮ್ಮ ಉದ್ಯೋಗಿಗಳಿಗಾಗಿ `ಸೈಕಲ್ ಟು ವರ್ಕ್’ ಎಂಬ ಯೋಜನೆಯನ್ನು ತಂದಿವೆ.

ಹಾದಿ ತಪ್ಪಿದ ಸೈಕ್ಲಿಂಗ್ ಹಾಡುಪಾಡು

ಕರ್ನಾಟಕ ನಗರಾಭಿವೃದ್ಧಿ ಇಲಾಖೆಯ ಮಾಜಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಅವರ ಪ್ರಕಾರ `ಪ್ರಸ್ತುತ ಬಜೆಟ್‍ನಲ್ಲಿ ಸಮಗ್ರ ಸೈಕ್ಲಿಂಗ್ ಅಭಿವೃದ್ಧಿ ಹಾಗೂ ಸೈಕ್ಲಿಂಗ್ ದಾರಿಗಳ ನಿರ್ಮಾಣಕ್ಕಾಗಿ 80 ಕೋಟಿ ರೂ. ಮೀಸಲಾಗಿಡಲಾಗಿದೆ. ಸದ್ಯದ ಸ್ಥಿತಿಯಲ್ಲಿ ದೇಶದಲ್ಲಿ ಕೆಲವೇ ಕೆಲವು ಸೈಕ್ಲಿಂಗ್ ಟ್ರ್ಯಾಕ್‍ಗಳಿದ್ದು, ಯಾವೊಂದು ಸೈಕ್ಲಿಂಗ್ ಟ್ರಾಕ್‍ಗಳೂ ನಿರಂತರವಾದ ದಾರಿಯನ್ನು ಹೊಂದಿರದೆ, ಒಂದು ಕಡೆಗೆ ಮುಕ್ತಾಯಗೊಳ್ಳುತ್ತದೆ. ಹೀಗಾಗಿ ವಾಹನದಟ್ಟಣೆ ಇರುವ ನಗರಗಳಲ್ಲಿ ಸೈಕ್ಲಿಸ್ಟ್‍ಗಳು ನಿರಂತರವಾಗಿ ಒಂದೆಡೆಯಿಂದ ಇನ್ನೊಂದೆಡೆಗೆ ಟ್ರ್ಯಾಕ್‍ಗಳ ಮೂಲಕ ತಲುಪಲು ಸಾಧ್ಯವಿಲ್ಲ.

2012ರಲ್ಲಿ ಬೆಂಗಳೂರಿನ ಜಯನಗರ ಪ್ರದೇಶದ 22 ರಸ್ತೆಗಳಲ್ಲಿ ಬೈಸಿಕಲ್ ಟ್ರ್ಯಾಕ್‍ಗಳನ್ನು ನಿರ್ಮಾಣ ಮಾಡಲಾಯಿತು. 2.5 ಕೋಟಿ ರೂಪಾಯಿ ಮೊತ್ತದಲ್ಲಿ ನಿರ್ಮಿಸಲಾದ ಈ ಟ್ರ್ಯಾಕ್‍ಗಳು ಈಗ ಅಕ್ರಮವಾಗಿ ಕಾರುನಿಲುಗಡೆಗೆ ಬಳಸಲಾಗುತ್ತಿದೆ. ಅವುಗಳಲ್ಲಿ ಕೆಲವೊಂದು ಸೈಕಲಿಂಗ್ ಟ್ರ್ಯಾಕ್‍ಗಳು ನಿರ್ಮಾಣ ಪೂರ್ವದಲ್ಲಿ ಇಲಾಖೆಗಳ ನಡುವಿನ ಸಮನ್ವಯತೆಯ ಕೊರತೆಯಿಂದಾಗಿ ಬಸ್ ನಿಲುಗಡೆಯ ಸ್ಥಳಗಳಿಂದಾಗಿಯೇ ಹಾದುಹೋಗಿದೆ.
2013ರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಇನ್ನೊಂದು ಸೈಕ್ಲಿಂಗ್ ಟ್ರ್ಯಾಕ್ ಯೋಜನೆಯನ್ನು ಮಡಿವಾಳ ಪ್ರದೇಶದಲ್ಲಿ ಕೈಗೆತ್ತಿಕೊಂಡು ಹೊಸೂರು ರಸ್ತೆಯವರೆಗೂ 3.6 ಕೋಟಿ ರೂಪಾಯಿಯ ಹಣವನ್ನು ಮೀಸಲಾಗಿರಿಸಲಾಯಿತು. ಆದರೆ ಇದುವರೆಗೂ ಯೋಜನೆಯು ಕಾರ್ಯಗತಗೊಂಡಿಲ್ಲ.

`ಟೆರಿ’ ಸಂಶೋಧನಾ ವರದಿಯ ಪ್ರಕಾರ ದ್ವಿಚಕ್ರ ಹಾಗೂ ಕಾರುಗಳ ಬಳಕೆಯನ್ನು ಅಲ್ಪದೂರದ ಪ್ರಯಾಣಕ್ಕಾಗಿ ಬಳಸುವುದನ್ನು ತ್ಯಜಿಸಿ ಸೈಕಲ್ ಉಪಯೋಗಿಸಿದರೆ ವಾರ್ಷಿಕವಾಗಿ ದೇಶವು 1.8 ಟ್ರಿಲಿಯನ್ ಲಾಭವನ್ನು ಪಡೆಯಬಹುದು. ಇದು 2015-16ರಲ್ಲಿ ಭಾರತದ ಜಿಡಿಪಿಯ 1.6 ಶೇಖಡಾದಷ್ಟಾಗಿದೆ.
‘ಭಾರತದಲ್ಲಿ ಸೈಕ್ಲಿಂಗ್‍ನ ಪ್ರಯೋಜನಗಳು : ಆರ್ಥಿಕ, ಪರಿಸರ ಮತ್ತು ಸಾಮಾಜಿಕ ಮೌಲ್ಯಮಾಪನ’ ಎಂಬ ವಿಷಯವಾಗಿ ನಡೆದ ಸಂಶೋಧನೆಯು ಸೈಕ್ಲಿಂಗ್‍ನ ನೇರ ಮತ್ತು ಪರೋಕ್ಷವಾದ ಲಾಭಗಳನ್ನು ವಿವರಿಸುತ್ತದೆ. ಆ ಪ್ರಕಾರ 15 ವರ್ಷಗಳಲ್ಲಿ ಸೈಕ್ಲಿಂಗ್‍ನಿಂದ ಹೆಚ್ಚುವ ದೈಹಿಕ ಕಾರ್ಯಚಟುವಟಿಕೆಯ ಪ್ರಯೋಜನದ ಒಟ್ಟು ಮೌಲ್ಯವು ರೂ. 1.4 ಟ್ರಿಲಿಯನ್‍ಗಿಂತಲೂ ಹೆಚ್ಚಿನದಾಗಿವೆ. ಇದು ಭಾರತದಲ್ಲಿ ಸೈಕಲಿಂಗ್ ಕ್ಷೇತ್ರದ ಅಭಿವೃದ್ಧಿ ಮತ್ತು ಬೆಳವಣಿಗೆಗಾಗಿ ಬೈಸಿಕಲ್ ಅಭಿವೃದ್ಧಿ ಮಂಡಳಿಯ ಸ್ಥಾಪನೆಯ ಅಗತ್ಯವನ್ನು ಪರಿಣಾಮಕಾರಿಯಾಗಿ ಸೂಚಿಸುತ್ತದೆ.

ಸೌಮಿಕ್ ದತ್ತಾ (ಬೆಂಗಳೂರು ಮೂಲದ ಹವ್ಯಾಸಿ ಲೇಖಕರು ಹಾಗೂ ಟೀಮ್ 101ರಿಪೋಟರ್ಸ್.ಕಾಮ್‍ನ ಸದಸ್ಯರು)

Advertisement

Udayavani is now on Telegram. Click here to join our channel and stay updated with the latest news.

Next