Advertisement

ಚುರುಮುರಿ, ಚಹಾದಲ್ಲೇ ಪ್ರಚಾರ ಮುಗಿಯುತ್ತಿತ್ತು

12:49 AM Jan 21, 2023 | Team Udayavani |

ಕಟ್ಟಾ ಕಾಂಗ್ರೆಸ್ಸಿಗರಾಗಿರುವ 98ರ ಹರೆಯದ ಬೀದರ್‌ ಜಿಲ್ಲೆಯ ಭಾಲ್ಕಿ ಕ್ಷೇತ್ರದ ಭೀಮಣ್ಣ ಖಂಡ್ರೆ ಅವರು ಅತ್ಯಂತ ಕಿರಿಯ ವಯಸ್ಸಿನಲ್ಲೇ ರಾಜಕೀಯ ಪ್ರವೇಶ ಮಾಡಿದವರು. 1957ರಿಂದ ನಾಲ್ಕು ದಶಕಗಳ ಕಾಲ ಚುನಾವಣ ರಾಜಕೀಯದಲ್ಲಿದ್ದ ಖಂಡ್ರೆ, ಅಂದಿನ ವ್ಯವಸ್ಥೆಗಳ ಕುರಿತು ತಮ್ಮ ನೆನಪಿನಂಗಳದಲ್ಲಿನ ಅನುಭವ ಹಂಚಿಕೊಂಡಿದ್ದಾರೆ.

Advertisement

ಭೀಮಣ್ಣ ಖಂಡ್ರೆ, ಮಾಜಿ ಶಾಸಕರು ಭಾಲ್ಕಿ
ಸ್ವಾತಂತ್ರ್ಯಾನಂತರದ ಸಾರ್ವತ್ರಿಕ ಚುನಾವಣೆ ಪದ್ಧತಿಗೂ ಈಗಿನ ಚುನಾವಣೆಗೂ ಅಜ ಗಜಾಂತರ ಬದಲಾವಣೆಗಳಾಗಿವೆ. ಈಗಿನಂತೆ ಪ್ರಚಾರದ ಅಬ್ಬರ, ಕಾರ್ಯಕರ್ತರ ಆರ್ಭಟಗಳೇ ಇರಲಿಲ್ಲ. ಅದು ಜನರಿಂದಲೇ ಚುನಾವಣೆಗಳು ನಡೆಯುತ್ತಿದ್ದ ಕಾಲ. ಆಗ ವೈಭವೀಕರಣಕ್ಕಿಂತ, ನಮ್ಮ ಕೆಲಸಗಳೇ ನಮ್ಮ ಬಗ್ಗೆ ಮಾತನಾಡಬೇಕೆಂಬ ವಾತಾವರಣ ಇತ್ತು. ಈಗ ಎಲ್ಲವೂ ಬದಲಾಗಿದ್ದು, ಎಲ್ಲದಕ್ಕೂ ಹಣವೇ ಮೂಲವಾಗಿದೆ.

1953ರಲ್ಲಿ ಭಾಲ್ಕಿ ಪುರಸಭೆಯ ಮೊದಲ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಅತೀ ಕಿರಿಯ ವಯಸ್ಸಿನಲ್ಲಿಯೇ ಸಾರ್ವಜನಿಕ ಜೀವನದಲ್ಲಿ ಪಾದಾರ್ಪಣೆ ಮಾಡಿದ್ದೆ. ಅನಂತರ 1962ರಲ್ಲಿ ಭಾಲ್ಕಿ ಕ್ಷೇತ್ರದಿಂದ ಪ್ರಜಾ ಸಮಾ ಜವಾದಿ ಪಕ್ಷದಿಂದ ಸ್ಪಧಿ ìಸಿ 5,567 ಮತಗಳ ಅಂತರದಿಂದ ಗೆದ್ದು ಮೊದಲ ಬಾರಿಗೆ ವಿಧಾನಸಭೆಗೆ ಪ್ರವೇಶ ಮಾಡಿದ್ದೆ. 1967, 1978 ಮತ್ತು 1983ರಲ್ಲಿ ಸತತ ಮೂರು ಬಾರಿ ಕಾಂಗ್ರೆಸ್‌ನಿಂದ ಶಾಸಕನಾಗಿ, 1988 ಹಾಗೂ 1994ರಲ್ಲಿ ವಿಧಾನ ಪರಿಷತ್‌ ಸದಸ್ಯನಾಗಿ ಆಯ್ಕೆಯಾಗಿದ್ದೆ. ಈ ಅವಧಿ ಯಲ್ಲಿ ಅಂದಿನ ಸಿಎಂ ವೀರಪ್ಪ ಮೊಲಿ ಸರಕಾರದಲ್ಲಿ ಸಾರಿಗೆ ಸಚಿವನಾಗಿ ಕೆಲಸ ಮಾಡಲು ಅವಕಾಶ ಸಿಕ್ಕಿತ್ತು. ಸಚಿವನಾಗಿ ಸಾರಿಗೆ ವ್ಯವಸ್ಥೆ ಮತ್ತು ಇಲಾಖೆಯಲ್ಲಿ ಸಾಕಷ್ಟು ಸುಧಾರಣೆಗಳು, ಸೌಲಭ್ಯಗಳನ್ನು ಕಲ್ಪಿಸುವ ಸೌಭಾಗ್ಯ ನನಗೆ ಒದಗಿತ್ತು.

ನಮ್ಮ ಕಾಲದಲ್ಲಿ ಪ್ರತೀ ಚುನಾವಣೆಗಳು ಕೇವಲ ಸಾವಿರಾರು ಇಲ್ಲವೇ ಒಂದು ಲಕ್ಷ ರೂ. ಒಳಗೆ ಖರ್ಚಿನಲ್ಲಿಯೇ ಚುನಾವಣೆಯ ಎಲ್ಲ ಪ್ರಕ್ರಿಯೆಗಳು ಮುಗಿದು ಹೋಗುತ್ತಿದ್ದವು. ಈಗಿನಂತೆ ಧ್ವನಿವರ್ಧ ಕಗಳ ಅಬ್ಬರ, ಕಾರ್ಯಕರ್ತರ ಆರ್ಭಟ, ಪ್ರಚಾರದ ಸಮಾವೇಶಗಳು ಇರುತ್ತಿರಲಿಲ್ಲ. ಸಾರ್ವತ್ರಿಕ ಚುನಾವಣೆ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತ ಬಂದಿದ್ದು, ಸದ್ಯ ಒಂದು ಕ್ಷೇತ್ರದಲ್ಲಿ ಚುನಾವಣೆ ಮಾಡಬೇಕಾದರೆ 25-30 ಕೋಟಿ ರೂ. ಬೇಕು. ಆಗ ಏನಿದ್ದರೂ ಒಂದು ಲಕ್ಷ ರೂ.ವರೆಗೆ ಖರ್ಚು ಆಗುತ್ತಿತ್ತು. ಕೆಲವೊಮ್ಮೆ ಸಾರ್ವಜನಿಕರು ಮತ್ತು ಪಕ್ಷದ ಕಾರ್ಯಕರ್ತರೇ ತಮ್ಮ ಕೈಯಿಂದ ಹಣ ಖರ್ಚು ಮಾಡಿ ಗೆಲ್ಲಿಸಿಕೊಂಡು ಬರುತ್ತಿದ್ದುದ್ದೂ ಇದೆ.
ಆ ದಿನಗಳಲ್ಲಿ ರಾಜಕೀಯ ಪಕ್ಷಕ್ಕಿಂತ ವ್ಯಕ್ತಿ ಆಧಾರಿತ ಚುನಾವಣೆ ನಡೆಯುತ್ತಿದ್ದವು. ಅಭಿವೃದ್ಧಿಪರ ಚಿಂತನೆಗಳಿಂದ ಚುನಾವಣೆಗಳು ಕೂಡಿರುತ್ತಿದ್ದವು. ಟಿಕೆಟ್‌ ಹಂಚಿಕೆ ಪ್ರಕ್ರಿಯೆ ಈಗಿನಂತಿದ್ದರೂ ಆಕಾಂಕ್ಷಿ ಗಳ ಸಂಖ್ಯೆ ಹೆಚ್ಚಾಗಿರುತ್ತಿರಲಿಲ್ಲ. ಅಭ್ಯರ್ಥಿಗಳ ಕೆಲಸದ ವೈಖರಿ, ಆತನ ನಡವಳಿಕೆ, ಗುಣ ಮತ್ತು ಮನಃಸ್ಥಿತಿಯನ್ನು ಅಳೆದು ತೂಗಿ ಅರ್ಹರನ್ನು ಗೆಲ್ಲಿಸುತ್ತಿದ್ದರು. ಮತದಾರರು ಮತ್ತು ಅಭ್ಯರ್ಥಿಗಳ ನಡುವೆ ಗಟ್ಟಿ ಸಂಬಂಧ ಇರುತ್ತಿತ್ತು.

ಹಾಗಾಗಿ ಹೋಬಳಿ ಮಟ್ಟದಲ್ಲೇ ನಮ್ಮ ಪ್ರಚಾರ ಕಾರ್ಯಗಳು ಸೀಮಿತವಾಗಿರುತ್ತಿದ್ದವು. ಪ್ರತಿಯೊಬ್ಬ ಕಾರ್ಯಕರ್ತನು ನಾನೇ ಚುನಾವಣೆಗೆ ನಿಂತಿದ್ದೇನೆ ಎನ್ನುವ ರೀತಿಯಲ್ಲಿ ಪ್ರಚಾರ ಮಾಡು ತ್ತಿದ್ದರು. ಅದೇ ರೀತಿ ಮತದಾರರಲ್ಲಿ ಸಹ ಯಾವುದೇ ಅಪೇಕ್ಷೆಗಳು ಇರ ಲಿಲ್ಲ. ಜನರೇ ತಮ್ಮ ತಮ್ಮ ಗ್ರಾಮಗಳಲ್ಲಿ ಪ್ರಚಾರ ಮಾಡಿಕೊಳ್ಳುತ್ತಿದ್ದರು. ನಮ್ಮ ಮೇಲೆ ನಂಬಿಕೆಯನ್ನು ಇಟ್ಟು ಮತ ಚಲಾವಣೆ ಮಾಡುತ್ತಿದ್ದರು. ನಾವು ಸಹ ಅಧಿ ಕಾರ ಸಿಕ್ಕಾಗಲೆಲ್ಲ ನಮ್ಮ ಕೆಲಸಗಳ ಮೂಲಕ ಜನರ ವಿಶ್ವಾಸವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೆವು. ಚುನಾವಣೆ ಪ್ರಚಾರಕ್ಕೆ ನನ್ನೊಂ ದಿಗೆ 150ರಿಂದ 200 ಜನರ ಪಡೆ ಇರುತ್ತಿತ್ತು. ಅವರೆಲ್ಲರೂ ತಂಡಗಳಾಗಿ ಕೆಲಸಗಳನ್ನು ಹಂಚಿಕೊಂಡು ಮಾಡುತ್ತಿದ್ದರು. ಈಗಿನಂತೆ ವಾಹನಗಳ ವ್ಯವಸ್ಥೆಯೂ ಇರಲಿಲ್ಲ. ಹಿತೈಷಿಗಳು, ಕಾರ್ಯ ಕರ್ತರು ಎತ್ತಿನ ಬಂಡಿಗಳಲ್ಲಿ ಗುಂಪಾಗಿ ಬಂದು ದೊಡ್ಡ ಗ್ರಾಮಗಳಲ್ಲಿ ಸಭೆ ಮೂಲಕ ಪ್ರಚಾರ ಕಾರ್ಯ ಮುಗಿಸುತ್ತಿದ್ದರು. ಕೆಲವರು ಸೈಕಲ್‌ ಹತ್ತಿ ನಮ್ಮ ಪರ ಮತಯಾಚನೆ ಮಾಡುತ್ತಿದ್ದರು. ಬಹುತೇಕ ಕಡೆ ಚುರು ಮುರಿ ಮತ್ತು ಚಹಾದಲ್ಲೇ ಕಾರ್ಯಕ್ರಮಗಳನ್ನು ಮುಗಿಸುತ್ತಿದ್ದೆವು. ಜತೆಗೆ ಈಗಿನಂತೆ ಚುನಾವಣೆ ಗೆದ್ದಾದ ಮೇಲೆ ಅಭ್ಯರ್ಥಿಗಳ ಅದ್ದೂರಿ, ವೈಭವದ ಮೆರವಣಿಗೆಗಳನ್ನು ಮಾಡುತ್ತಿರಲಿಲ್ಲ. ಗೆದ್ದವರನ್ನು ಅವರ ಹಿತೈಷಿಗಳು, ಕಾರ್ಯಕರ್ತರು ಬಂದು ಶುಭ ಕೋರಿ ಹೋಗುತ್ತಿದ್ದರಷ್ಟೇ.

Advertisement

ಈಗ ಚುನಾವಣೆ ಪ್ರಚಾರದ ವೈಖರಿ ಜತೆಗೆ ಮತದಾರರ ಮನಃಸ್ಥಿತಿಯೂ ಬದಲಾಗಿದೆ. ಪಕ್ಷ ಮತ್ತು ಅಭ್ಯರ್ಥಿಗಳ ಆಡಂಬರ, ಆಸೆ- ಆಮಿಷಗಳಿಗೆ ಬಲಿಯಾಗುತ್ತಿದ್ದಾರೆ. ನಮ್ಮ ಕಾಲಘಟ್ಟದವರಿಗೆ ಈಗಿನ ಕಲುಷಿತ ರಾಜಕೀಯ ವ್ಯವಸ್ಥೆಯಲ್ಲಿ ರಾಜಕಾರಣ ಮಾಡುವುದು ಬಹಳ ಕಷ್ಟಕರ.

-ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next