Advertisement

ವಿದ್ಯಾರ್ಥಿಗಳ ಯಶಸ್ಸು ಶಿಕ್ಷಕರ ಆದ್ಯತೆಯಾಗಿರಲಿ: ಪತ್ತಾರ

01:04 PM Aug 19, 2019 | Team Udayavani |

ಬೀದರ: ವಿದ್ಯಾರ್ಥಿಗಳ ಬಾಳು ಯಶಸ್ವಿಗೊಳಿಸುವುದೇ ಶಿಕ್ಷಕರ ಮುಖ್ಯ ಆದ್ಯತೆಯಾಗಿರಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಎಂ.ಪತ್ತಾರ ಹೇಳಿದರು.

Advertisement

ನಗರದ ಶರಣಬಸವೇಶ್ವರ ಪ್ರೌಢ ಶಾಲೆಯಲ್ಲಿ ಜಿಲ್ಲಾ ಪಂಚಾಯತ್‌, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ವಿಜ್ಞಾನ ಶಿಕ್ಷಕರ ವೇದಿಕೆ ಸಂಯುಕ್ತಾಶ್ರಯದಲ್ಲಿ ನಡೆದ ವಿಜ್ಞಾನ ಶಿಕ್ಷಕರ ಸಮಾಲೋಚನಾ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಾಯೋಗಿಕ ಚಟುವಟಿಕೆಗಳನ್ನು ಮಾಡಿಸುವುದರ ಮೂಲಕ ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವ ಮೂಡಿಸಬೇಕು. ವಿಜ್ಞಾನ ಎಂದರೆ ಕುತೂಹಲ, ಆಸಕ್ತಿ, ಹೊಸ ವಿಷಯವನ್ನು ಅರಿಯುವುದು ಇತ್ಯಾದಿಯಾಗಿದೆ. ಇಂದಿನ ಮಕ್ಕಳು ನಾಳಿನ ಭವಿಷ್ಯವಾಗಿರುವುದರಿಂದ ಶಿಕ್ಷಕರು ಶ್ರದ್ಧೆ, ಭಕ್ತಿಯನ್ನು ಬೋಧನೆಯಲ್ಲಿ ಅಳವಡಿಸಿಕೊಳ್ಳಬೇಕು. ಆಗ ಮಾತ್ರ ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ಮಾಡುವುದರ ಜೊತೆಗೆ ಮಕ್ಕಳು ತಮ್ಮ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯವಾಗುವಂತೆ ಮಾಡಬೇಕು. ಮಕ್ಕಳಿಗೆ ಗುಣಮಟ್ಟ ಶಿಕ್ಷಣ ಒದಗಿಸಲು ಎಲ್ಲಾ ಶಿಕ್ಷಕರು ಅಚಲವಾದ ಧ್ಯೇಯದಿಂದ ಪ್ರಯತ್ನಿಸಿ ಇದಕ್ಕೆ ಶಿಕ್ಷಣ ಇಲಾಖೆಯಿಂದ ಬೇಕಾದಂತಹ ಎಲ್ಲಾ ಸಹಕಾರ ನೀಡಲು ಸಿದ್ಧರಿದ್ದೇವೆ ಎಂದು, ಪ್ರಶ್ನೆಪತ್ರಿಕೆ ವಿನ್ಯಾಸದ ಬಗ್ಗೆ ಸಭೆಯಲ್ಲಿ ಚರ್ಚಿಸಿ ಎಲ್ಲಾ ಶಿಕ್ಷಕರಿಂದ ಸಲಹೆ ಸೂಚನೆಗಳನ್ನು ಪಡೆದರು. ಪ್ರತೀ ತಿಂಗಳು ಮೂರನೇ ಶನಿವಾರದಂದು ತಾಲೂಕಿನ ಎಲ್ಲಾ ವಿಜ್ಞಾನ ಶಿಕ್ಷಕರು ಕಡ್ಡಾಯವಾಗಿ ಸಮಾಲೋಚನಾ ಸಭೆಗೆ ಹಾಜರಾಗಬೇಕೆಂದು ನಿರ್ದೇಶನ ನೀಡಿದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಾಬುರಾವ್‌ ದಾನಿ ಮಾತನಾಡಿ, ವಿಶ್ವದಲ್ಲಿ ವಿಜ್ಞಾನ ಹುಟ್ಟಿದ್ದೇ ಭಾರತದಲ್ಲಿ. ಅನಾದಿ ಕಾಲದಿಂದಲೂ ನಮ್ಮ ಪೂರ್ವಜರು ವೈಜ್ಞಾನಿಕ ದೃಷ್ಟಿಕೋನವನ್ನು ತಮ್ಮ ದಿನನಿತ್ಯದ ಜೀವನದಲ್ಲಿ ರೂಢಿಸಿಕೊಂಡಿದ್ದರು. ಪ್ರತಿಯೊಬ್ಬ ಭಾರತೀಯನ ಕಣ ಕಣ ರಕ್ತದಲ್ಲಿ ವಿಜ್ಞಾನ ಬೆಳೆದು ಬಂದಿದೆ. ಇಂದಿನ ವಿಜ್ಞಾನ ಯುಗದಲ್ಲಿ ಶಿಕ್ಷಕರು ಸರ್ವಜ್ಞನ ಆದರ್ಶವನ್ನು ರೂಢಿಸಿಕೊಂಡು ಮಕ್ಕಳಿಗೆ ಒಳ್ಳೆಯ ಮಾರ್ಗದರ್ಶಕರಾಗಿ ಪ್ರೋತ್ಸಾಹಿಸಿ ಎಸ್‌ಎಸ್‌ಎಲ್ಸಿ ಫಲಿತಾಂಶದಲ್ಲಿ ನಮ್ಮ ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಕೀರ್ತಿ ತರಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

ವಿಜ್ಞಾನ ಶಿಕ್ಷಕ ಪ್ರಭು ಗಂಗು ಮಾತನಾಡಿ, ಮುಂದೆ ಗುರಿ, ಹಿಂದೆ ಗುರು ಇದ್ದರೆ ಎಂತಹ ಕಠಿಣವಾದ ಗುರಿ ಇದ್ದರೂ ತಲುಪಬಹುದು. ಶ್ರೇಷ್ಠ ವಿಜ್ಞಾನಿಗಳ ಜೀವನ ಚರಿತ್ರೆ ಹಾಗೂ ಅವರ ಜೀವನ ಸಾಧನೆಗಳನ್ನು ಮಕ್ಕಳು ಜೀವನದಲ್ಲಿ ಅಳವಡಿಸಿಕೊಳ್ಳಲು ಶಿಕ್ಷಕರು ಮಾರ್ಗದರ್ಶನ ಮಾಡಬೇಕು ಎಂದರು.

Advertisement

ವಿಜ್ಞಾನ ಸಂಪನ್ಮೂಲ ಶಿಕ್ಷಕ ಕಲಾಲ್ ದೇವಿಪ್ರಸಾದ, ರಫಿ ತಾಳಿಕೋಟಿ ಮಾತನಾಡಿದರು. ಸಂಜೀವಕುಮಾರ ಸ್ವಾಮಿ, ಕಾಡವಾದನ ವಿಜ್ಞಾನ ಶಿಕ್ಷಕ ಚಂದ್ರಕಾಂತ ಚಿಕ್ಕಲೆ, ಲಕ್ಷ್ಮೀಕಾಂತ ಭಯ್ನಾ, ವಿನೋದ ಮಠಪತಿ, ಶಿವಾನಂದ ಕುಂಬಾರ, ಮಲ್ಲಿಕಾರ್ಜುನ, ಕರಬಸಪ್ಪ, ಪವನ, ಮನೋಜಕುಮಾರ ಪಾಟೀಲ, ಸುವರ್ಣ, ಪ್ರವೀಣಾ, ಶಶಿಕಲಾ, ನೀಲಾಂಬಿಕಾ, ನಂದಾ, ಕೃಷ್ಣವೇಣಿ, ಪ್ರಿಯಂಕಾ, ಸಮೀನಾ ನಿಕತ್‌, ಮೀನಾಕ್ಷಿ ಸ್ವಾಮಿ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next