Advertisement

ಈ ವರ್ಷವೂ ಕಾರಂಜಾ ಭರ್ತಿ ಅನುಮಾನ

10:10 AM Aug 03, 2019 | Naveen |

ದುರ್ಯೋಧನ ಹೂಗಾರ
ಬೀದರ:
ದೇಶ ಹಾಗೂ ರಾಜ್ಯದ ವಿವಿಧೆಡೆ ಭಾರಿ ಮಳೆ ಸುರಿಸುಯುತ್ತಿದ್ದು, ರಕ್ಷಣಾ ಕಾರ್ಯಗಳು ನಡೆಯುತ್ತಿವೆ. ಜಲಾಶಯಗಳು ತುಂಬಿ ಹರಿಯುತ್ತಿವೆ. ಆದರೆ, ಬೀದರ ಜಿಲ್ಲೆಯ ಕಾರಂಜಾ ಜಲಾಶಯಕ್ಕೆ ಮಾತ್ರ ಸೂಕ್ತ ಪ್ರಮಾಣದ ಒಳ ಹರಿವು ಬರದೇ ಸೊರಗುತ್ತಿದ್ದು, ಈ ವರ್ಷವೂ ಕಾರಂಜಾ ಜಲಾಶಯ ಭರ್ತಿಯಾಗುವುದು ಅನುಮಾನ ಎಂಬಂತಾಗಿದೆ.

Advertisement

ಕೆಲ ದಿನಗಳಿಂದ ರಾಜ್ಯದ ಮಲೆನಾಡು ಮತ್ತು ನೆರೆಯ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮುಂಗಾರು ಮಳೆ ಪ್ರಭಾವ ಮುಂದುವರಿದಿರುವುದರಿಂದ ಕಾವೇರಿ, ಕೃಷ್ಣ ಸೇರಿದಂತೆ ರಾಜ್ಯದ ಪ್ರಮುಖ ನದಿಗಳು ತುಂಬಿ ಹರಿಯುವ ಸ್ಥಿತಿಗೆ ಬಂದಿವೆ. ಆದರೆ, ಗಡಿ ಜಿಲ್ಲೆಯಲ್ಲಿ ಮಳೆ ಕೊರತೆ ಎದುರಾಗಿದೆ. ಆದರೂ ಎರಡು ದಿನಗಳಿಂದ ಜಿಲ್ಲೆಯಲ್ಲಿ ಉತ್ತಮ ಮಳೆ ಸುರಿದಿದೆ. ಆ.2ರಂದು ಸುರಿದ ಮಳೆಯಿಂದ ಕಾರಂಜಾ ಜಲಾಶಯಕ್ಕೆ 57.87 ಕ್ಯೂಸೆಕ್‌ ನೀರು ಒಳ ಹರಿವು ಬಂದಿದೆ. ಒಟ್ಟಾರೆ ಈ ವರ್ಷದ ಮುಂಗಾರಿನಲ್ಲಿ ಕಾರಂಜಾ ಜಲಾಶಯಕ್ಕೆ ಕೇವಲ 0.093 ಟಿಎಂಸಿ ನೀರು ಒಳ ಹರಿವು ಬಂದಿದೆ.

ಜಿಲ್ಲೆಯಲ್ಲಿ ಒಟ್ಟಾರೆ ಸರಾಸರಿ ಶೇ.45ರಷ್ಟು ಮಳೆ ಕೊರತೆ ಎದುರಾಗಿದೆ. ಜೂನ್‌ 1ರಿಂದ ಆ.2ರ ವೆರೆಗೆ ಒಟ್ಟು 328 ಮಿ.ಮೀ. ಮಳೆ ಸುರಿಯಬೇಕಿತ್ತು. ಆದರೆ, 202 ಮಿ.ಮೀ. ಮಳೆಯಾಗಿ ಮುಂಗಾರಿನಲ್ಲಿಯೇ ಶೇ.38ರಷ್ಟು ಮಳೆ ಕೊರತೆ ಉಂಟಾಗಿದೆ. ಜೂನ್‌ ತಿಂಗಳಲ್ಲಿ ಶೇ.29 ಹಾಗೂ ಜುಲೈ ತಿಂಗಳಲ್ಲಿ ಶೇ.47ರಷ್ಟು ಮಳೆ ಕೊರತೆ ಇದ್ದು, ಮುಂದಿನ ದಿನಗಳಲ್ಲಿ ಉತ್ತಮ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಕೃಷಿ ಇಲಾಖೆ ಮೂಲಗಳು ಹೇಳುತ್ತಿವೆ.

ತಾಲೂಕುವಾರು ಮಳೆ: ಆ.1ರಂದು ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಉತ್ತಮ ಮಳೆಯಾಗಿದೆ. ಆ.1ರಿಂದ ಆ.2ರ ಬೆಳಗ್ಗೆ 8 ಗಂಟೆ ವರೆಗೆ ಔರಾದ ತಾಲೂಕಿನಲ್ಲಿ 4 ಮಿ.ಮೀ., ಬೀದರ ತಾಲೂಕಿನಲ್ಲಿ 18 ಮಿ.ಮೀ., ಭಾಲ್ಕಿ 10 ಮಿ.ಮೀ., ಬಸವಕಲ್ಯಾಣ 5 ಮಿ.ಮೀ., ಹುಮನಾಬಾದ 12 ಮಿ.ಮೀ. ಮಳೆಯಾಗಿದೆ. ಒಟ್ಟಾರೆ ವರ್ಷದ ಮಳೆಯ ವಿವರ ನೋಡುವುದಾದರೆ ಜನವರಿ ತಿಂಗಳಿಂದ ಆ.2ರ ವರೆಗೆ ಔರಾದ ತಾಲೂಕಿನಲ್ಲಿ 412 ಮಿ.ಮೀ. ಮಳೆಯ ಪೈಕಿ 216 ಮಿ.ಮೀ. ಮಳೆಯಾಗಿ ಶೇ.48ರಷ್ಟು ಮಳೆ ಕೊರತೆ ಎದುರಾಗಿದೆ. ಬೀದರ ತಾಲೂಕಿನಲ್ಲಿ 458 ಮಿ.ಮೀ ಮಳೆಯ ಪೈಕಿ 230 ಮಿ.ಮೀ. ಮಳೆಯಾಗಿ ಶೇ.50ರಷ್ಟು ಮಳೆ ಕೊರತೆ ಇದೆ. ಭಾಲ್ಕಿ ತಾಲೂಕಿನಲ್ಲಿ 394 ಮಿ.ಮೀ. ಪೈಕಿ 214 ಮಿ.ಮೀ ಮಳೆಯಾಗಿದ್ದು, ಶೇ.46ರಷ್ಟು ಮಳೆ ಕೊರತೆ ಇದೆ. ಬಸವಕಲ್ಯಾಣ ತಾಲೂಕಿನಲ್ಲಿ 358 ಮಿ.ಮೀ. ಮಳೆಯ ಪೈಕಿ 223 ಮಿ.ಮೀ. ಮಳೆಯಾಗಿದ್ದು, ಶೇ.38ರಷ್ಟು ಮಳೆ ಕೊರತೆ ಇದೆ. ಹುಮನಾಬಾದ ತಾಲೂಕಿನಲ್ಲಿ 394 ಮಿ.ಮೀ. ಪೈಕಿ 229 ಮಿ.ಮೀ. ಮಳೆಯಾಗಿದ್ದು, ಶೇ.42ರಷ್ಟು ಮಳೆ ಕೊರತೆ ಇದೆ.

ಮೋಡ ಕವಿದ ವಾತಾವರಣ: ಜಿಲ್ಲೆಯಲ್ಲಿ ಒಂದು ವಾರದಿಂದ ನಿರಂತರ ಮೋಡ ಕವಿದ ವಾತಾರ್ವಣ ಸೃಷ್ಟಿಯಾಗಿದೆ. ಆದರೆ, ಭಾರಿ ಪ್ರಮಾಣದಲ್ಲಿ ಮಳೆ ಮಾತ್ರ ಸುರಿಯುತ್ತಿಲ್ಲ. ಆಗಾಗ ತುಂತುರು ಮಳೆಯಾಗುತ್ತಿದ್ದು, ರೈತರ ಬೆಳೆಗಳಿಗೆ ಶಕ್ತಿ ತುಂಬುತ್ತಿದೆ. ಸದ್ಯದ ಸ್ಥಿತಿಲ್ಲಿ ಜಿಲ್ಲೆಯ ವಿವಿಧೆಡೆ ರೈತರ ಬೆಳೆಗಳು ಉತ್ತಮವಾಗಿ ಬೆಳೆಯುತ್ತಿವೆ. ರೈತರು ಉತ್ತಮ ಫಸಲು ಬರುವ ನಿರೀಕ್ಷೆಯಲ್ಲಿದ್ದಾರೆ. ಆದರೆ, ಈಗಾಗಲೇ ಮಳೆಗಾಲದ ಎರಡು ತಿಂಗಳು ಪೂರ್ಣಗೊಂಡಿದ್ದು, ಮುಂದಿನ ದಿನಗಳಲ್ಲಿ ಎಷ್ಟು ಪ್ರಮಾಣದ ಮಳೆ ಸುರಿಯುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Advertisement

ಜಲಾಶಯದಲ್ಲಿರುವ ನೀರಿನ ಪ್ರಮಾಣ: ಕಾರಂಜಾ ಜಲಾಶಯದ ಒಟ್ಟು ನೀರು ಸಂಗ್ರಹ ಸಾಮರ್ಥ್ಯ 7.691 ಟಿಎಂಸಿಯಾಗಿದ್ದು, ಸಧ್ಯ 1.257 ಟಿಎಂಸಿಯಷ್ಟು ಮಾತ್ರ ನೀರಿದೆ. ಈ ಪೈಕಿ 0.375 ಟಿಎಂಸಿ ನೀರು (ಡೆಡ್‌ ಸ್ಟೋರೆಜ್‌) ಬಳಕೆಗೆ ಯೋಗ್ಯವಲ್ಲದ ನೀರಾಗಿದ್ದು, 0.882 ಟಿಎಂಸಿ ನೀರು ಮಾತ್ರ ಬಳಕೆಗೆ ಯೋಗ್ಯವಾಗಿದೆ ಎಂದು ಅಧಿಕಾರಿ ಆನಂದಕುಮಾರ ಮಾಹಿತಿ ನೀಡಿದ್ದಾರೆ. 2019ರ ಮುಂಗಾರಿನಲ್ಲಿ ಒಟ್ಟಾರೆ, 0.093 ಟಿಎಂಸಿ ನೀರು ಮಾತ್ರ ಒಳ ಹರಿವು ಬಂದಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಮಳೆ ಸುರಿಯದಿದ್ದರೆ ಜಿಲ್ಲೆಯ ವಿವಿಧೆಡೆ ಕುಡಿವ ನೀರಿಗೆ ಸಮಸ್ಯೆ ಉಲ್ಬಣಗೊಳ್ಳಬಹುದು ಎಂಬ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಎಲ್ಲಿ ಎಷ್ಟು ನೀರು ಪೂರೈಕೆ?: ಹುಮನಾಬಾದ, ಚಿಟಗುಪ್ಪ ಪಟ್ಟಣಗಳಿಗೆ ಕಾರಂಜಾ ಜಲಾಶಯದಿಂದ ಪ್ರತಿವರ್ಷ 0.300 ಟಿಎಂಸಿ ನೀರು ಪೂರೈಕೆ ಮಾಡಲಾಗುತ್ತಿದೆ. ಭಾಲ್ಕಿ ಪಟ್ಟಣ ಸೇರಿದಂತೆ ಇತರೆ ಗ್ರಾಮಗಳಿಗೆ 0.300 ಟಿಎಂಸಿ ನೀರು, ಬೀದರ ನಗರಕ್ಕೆ 0.387 ಟಿಎಂಸಿ ಹಾಗೂ ಇತರೆ ಗ್ರಾಮಗಳಿಗೆ 0.183 ಟಿಎಂಸಿ ನೀರನ್ನು ಪೂರೈಸಲಾಗುತ್ತಿದೆ. ಒಟ್ಟಾರೆ ವರ್ಷಕ್ಕೆ ಕನಿಷ್ಟ 1.17 ಟಿಎಂಸಿಯಷ್ಟು ನೀರು ಜಲಾಶಯದಿಂದ ಜಿಲ್ಲೆಯ ಜನರಿಗೆ ಪೂರೈಸಲಾಗುತ್ತಿದೆ. ಆದರೆ, ಸದ್ಯಕ್ಕೆ 0.882 ಟಿಎಂಸಿ ನೀರು ಮಾತ್ರ ಬಳಕೆಗೆ ಯೋಗ್ಯವಾಗಿರುವುದು ನೋಡಿದರೆ, ಮುಂದಿನ ದಿನಗಳಲ್ಲಿ ಜಿಲ್ಲೆಗೆ ಕುಡಿವ ನೀರಿನ ಆಭಾವ ಉಂಟಾಗುವ ಸಾಧ್ಯತೆ ಎದುರಾಗಬಹುದು ಎಂದು ಹೇಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next