Advertisement

‘ಕೈ’ಕೋಟೆಯಲ್ಲಿ ಕಮಲ ಕಮಾಲ್‌

10:59 AM May 24, 2019 | Naveen |

ಕಲಬುರಗಿ: ಲೋಕಸಭಾ ಚುನಾವಣಾ ಇತಿಹಾಸದಲ್ಲೇ ಕಲಬುರಗಿ ಕ್ಷೇತ್ರದ ಜನತೆ ಐತಿಹಾಸಿಕ ತೀರ್ಪು ಕೊಟ್ಟಿದ್ದಾರೆ. ಸೋಲಿಲ್ಲದ ಸರದಾರ ಖ್ಯಾತಿಯ ಕಾಂಗ್ರೆಸ್‌ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಡಾ| ಉಮೇಶ ಜಾಧವ್‌ ಸೋಲಿನ ರುಚಿ ತೋರಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಕಾಂಗ್ರೆಸ್‌ ನ ಭದ್ರಕೋಟೆಯಲ್ಲಿ ಎರಡನೇ ಬಾರಿಗೆ ಕಮಲದ ಬಾವುಟ ಹಾರಿದೆ.

Advertisement

ಕ್ಷೇತ್ರದ ಸಂಕ್ಷಿಪ್ತ ಇತಿಹಾಸ: 1957ರಿಂದ ಇದುವರೆಗೆ ಒಟ್ಟು 18 ಸಾರ್ವತ್ರಿಕ
ಚುನಾವಣೆಗಳನ್ನು ಕಲಬುರಗಿ ಕಂಡಿದೆ. 1957ರಿಂದ 1991ರ ವರೆಗೂ ಕಾಂಗ್ರೆಸ್‌
ಅಭ್ಯರ್ಥಿಗಳೇ ಗೆಲುವು ಸಾಧಿಸಿದ್ದರು. 1957, 1962 ಮತ್ತು 1967ರಲ್ಲಿ
ಸತತ ಮೂರು ಬಾರಿ ಗೆಲುವು ಕಂಡಿದ್ದ ಮಹದೇವಪ್ಪ ಯಶವಂತರಾಯ ಅವರು ಹ್ಯಾಟ್ರಿಕ್‌ ಸಾಧನೆ ಮಾಡಿದ್ದರು. ಇವರ ದಾಖಲೆಯನ್ನು ಇದುವರೆಗೂ
ಯಾರೂ ಸರಿಗಟ್ಟಲು ಅಥವಾ ಮೀರಿಸಲು ಆಗಿಲ್ಲ.

ಕಾಂಗ್ರೆಸ್‌ ಪಾರುಪತ್ಯಕ್ಕೆ ಮೊದಲ ಬಾರಿಗೆ ಜನತಾ ದಳ ತಡೆಯೊಡ್ಡಿತ್ತು. 1996ರ ಚುನಾವಣೆಯಲ್ಲಿ ಜನತಾ ದಳದಿಂದ ಸ್ಪರ್ಧಿಸಿದ್ದ ಖಮರುಲ್‌ ಇಸ್ಲಾಂ
ಜಯಭೇರಿ ಬಾರಿಸಿದ್ದರು. ನಂತರದ 1998ರ ಚುನಾವಣೆಯಲ್ಲಿ ಬಿಜೆಪಿಯ
ಬಸವರಾಜ ಪಾಟೀಲ ಸೇಡಂ ಗೆಲುವು ಸಾಧಿಸುವ ಮೂಲಕ ಮೊದಲ ಬಾರಿಗೆ
ಕೇಸರಿ ಬಾವುಟವನ್ನು ಹಾರಿಸಿದ್ದರು. ಅಂದು ಜೆಡಿಎಸ್‌ನಿಂದ ಖಮರುಲ್‌
ಇಸ್ಲಾಂ ಮತ್ತು ಕಾಂಗ್ರೆಸ್‌ನಿಂದ ಡಾ| ಬಿ.ಜಿ. ಜವಳಿ ಸ್ಪರ್ಧಿಸಿದ್ದರು. ಖಮರುಲ್‌ ಇಸ್ಲಾಂ 1.97 ಲಕ್ಷ ಮತ ಪಡೆದರೆ, ಡಾ| ಜವಳಿ 1.40 ಲಕ್ಷ ಮತಗಳನ್ನು ಪಡೆದಿದ್ದರು. ಬಸವರಾಜ ಪಾಟೀಲ ಸೇಡಂ 3.28 ಲಕ್ಷ ಮತಗಳನ್ನು ಪಡೆಯುವ ಮೂಲಕ ಅತ್ಯಧಿಕ 1.31 ಲಕ್ಷ ಮತಗಳ ಅಂತರದಿಂದ ಗೆಲುವು
ಸಾಧಿಸಿದ್ದರು. ಬಸವರಾಜ ಪಾಟೀಲ ಸೇಡಂ ಅವರ ಜಯ ಕ್ಷೇತ್ರದ ಇತಿಹಾಸದಲ್ಲಿ ದಾಖಲಾಗಿದೆ.

1998ರಲ್ಲಿ ಚುನಾವಣೆಯ ಮರು ವರ್ಷವೇ ನಡೆದ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಕಾಂಗ್ರೆಸ್‌ ಕಲಬುರಗಿಯನ್ನು ಮತ್ತೆ ತಕ್ಕೆಗೆ ತೆಗೆದುಕೊಳ್ಳುವಲ್ಲಿ ಸಫಲವಾಗಿತ್ತು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಇಕ್ಬಾಲ್‌
ಅಹ್ಮದ್‌ ಸರಡಗಿ ಗೆಲುವು ಸಾಧಿಸಿದ್ದರು. ಅಂದಿನಿಂದ 2019ರವರೆಗೂ ಕಾಂಗ್ರೆಸ್‌ ತನ್ನ ಗೆಲುವಿನ ಓಟವನ್ನು ಮುಂದುವರಿಸಿತ್ತು. ಈ ಗೆಲುವಿನ ಓಟಕ್ಕೆ ಬಿಜೆಪಿ ಬ್ರೇಕ್‌ ಹಾಕಿದೆ. ಅದರಲ್ಲೂ 9 ಬಾರಿ ಶಾಸಕರಾಗಿ ಮತ್ತು ಎರಡು ಬಾರಿ ಸಂಸದರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬಿಜೆಪಿ ಮಕಾಡೆ ಮಲಗಿಸಿದೆ.

ಮಹದೇವಪ್ಪನವರು ಹ್ಯಾಟ್ರಿಕ್‌ ಗೆಲುವಿನ ನಂತರ ಸಿದ್ದರಾಮರೆಡ್ಡಿ, ಡಾ| ಬಿ.ಜಿ.ಜವಳಿ ಮತ್ತು ಇಕ್ಬಾಲ್‌ ಅಹ್ಮದ್‌ ಸರಡಗಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಸತತ ಎರಡು ಗೆಲುವು ಸಾಧಿಸಿದ್ದರು. 1974 ಮತ್ತು 1977ರಲ್ಲಿ ಸಿದ್ದರಾಮರೆಡ್ಡಿ, 1989 ಮತ್ತು 1991ರಲ್ಲಿ ಡಾ| ಜವಳಿ ಹಾಗೂ 1999 ಮತ್ತು 2011ರಲ್ಲಿ ಇಕ್ಬಾಲ್‌ ಅಹ್ಮದ್‌ ಸರಡಗಿ ಜಯ ದಾಖಲಿಸಿದ್ದರು. 2009 ಮತ್ತು 2014ರಲ್ಲಿ
ಮಲ್ಲಿಕಾರ್ಜುನ ಖರ್ಗೆ ಗೆಲುವು ಸಾಧಿಸಿದ್ದರು.

Advertisement

ಸೋತ ಪ್ರಮುಖರು: ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಘಟಾನುಘಟಿ ನಾಯಕರು ಸೋಲನ್ನು ಕಂಡಿದ್ದಾರೆ. 1971ರ ಸಾರ್ವತ್ರಿಕ
ಚುನಾವಣೆಯಲ್ಲಿ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಶರಣಬಸವಪ್ಪ ಅಪ್ಪ ಅವರು ಸ್ಪರ್ಧಿಸಿ ಸೋಲು ಕಂಡಿದ್ದರು. ವೈಜನಾಥ ಪಾಟೀಲರು 1980,
1991ರಲ್ಲಿ ಸೋಲು ಅನುಭವಿಸಿದ್ದರು. 1998ರಲ್ಲಿ ಬಸವರಾಜ ಪಾಟೀಲ ಸೇಡಂ ಗೆಲುವು ಸಾಧಿಸುವ ಮುನ್ನ 1991ರಲ್ಲಿ ಸೋತಿದ್ದರು. ಅಲ್ಲದೇ, 1999
ಹಾಗೂ 2004ರ ಚುನಾವಣೆಯಲ್ಲೂ ಬಸವರಾಜ ಪಾಟೀಲ ಸೇಡಂ ಪರಾಭವಗೊಂಡಿದ್ದರು. ಈಗ ಮಲ್ಲಿಕಾರ್ಜುನ ಖರ್ಗೆ ಕೂಡ ಸೋತ ಗಣ್ಯರ ಸಾಲಿಗೆ ಸೇರ್ಪಡೆಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next