Advertisement

ಭಗವಂತನಿಗೇ ಮತಾಶೀರ್ವಾದ

10:52 AM May 24, 2019 | Team Udayavani |

ಬೀದರ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಭಗವಂತ್‌ ಖೂಬಾ 1,16,834 ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಸತತ ಎರಡನೇ ಬಾರಿಗೆ ಸಂಸತ್‌ ಪ್ರವೇಶಿಸಲು ಮುಂದಡಿ ಇಟ್ಟಿದ್ದರೆ, ಕಾಂಗ್ರೆಸ್‌ ಅಭ್ಯರ್ಥಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರಿಗೆ ತೀವ್ರ ಮುಖಭಂಗವಾಗಿದೆ.

Advertisement

ಜಿಲ್ಲೆಯಲ್ಲಿ ಮೈತ್ರಿ ಪಕ್ಷದ ಮೂವರು ಸಚಿವರು ಇದ್ದರು ಕೂಡ ಈಶ್ವರ ಖಂಡ್ರೆ ಸೋಲಿನ ಕುರಿತು ಜಿಲ್ಲೆಯಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಕಳೆದ ಲೋಕಸಭೆ ಚುನಾವಣೆಯಲ್ಲಿ 93 ಸಾವಿರ ಮತಗಳ ಅಂತರದಿಂದ ಜಯಗಳಿಸಿದ್ದರು. ಇದೀಗ 1.16 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಹೊಸ ದಾಖಲೆ ಸೃಷ್ಠಿಸಿದ್ದಾರೆ. 2014ರಲ್ಲಿ ಪ್ರಥಮ ಬಾರಿಗೆ ಚುನಾವಣೆ ಎದುರಿಸಿ ಮೋದಿ ಗಾಳಿಯಲ್ಲಿ ಜಯಗಳಿಸಿದ ಖೂಬಾ, ಇದೀಗ ಅಖೀಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್‌ ಪಕ್ಷದ ಕಾರ್ಯಾಧ್ಯಕ್ಷ ಹಾಗೂ ಭಾಲ್ಕಿ ಕ್ಷೇತ್ರದಿಂದ ಸತತ ಮೂರು ಭಾರಿ ಶಾಸಕರಾಗಿ ಆಯ್ಕೆಯಾಗಿರುವ ಈಶ್ವರ ಖಂಡ್ರೆ ಅವರನ್ನು ಸೋಲಿಸುವ ಮೂಲಕ ಮತ್ತೂಮ್ಮೆ ದೆಹಲಿಗೆ ತೆರಳಲು ಸಜ್ಜಾಗಿದ್ದಾರೆ.

ಗುರುವಾರ ಬೆಳಗ್ಗೆ ಆರಂಭವಾದ ಮತ ಎಣಿಕೆ ಕಾರ್ಯ ಒಟ್ಟು 20 ಸುತ್ತುಗಳಲ್ಲಿ ನಡೆಯಿತು. ಮೊದಲನೇ ಸುತ್ತಿನಿಂದ ಆರಂಭವಾದ ಬಿಜೆಪಿ ಅಭ್ಯರ್ಥಿ ಖೂಬಾ ಲೀಡ್‌ ಕಡೆ 20 ಸುತ್ತಿನ ತನಕ ಮುಂದುವರಿಯುತ್ತಲೇ ಹೋಯಿತು. 20ನೇ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ 5,85,471 ಮತ ಗಳಿಸಿದರೆ, ಕಾಂಗ್ರೆಸ್‌ ಅಭ್ಯರ್ಥಿ ಈಶ್ವರ ಖಂಡ್ರೆ 4,68,637 ಮತಗಳನ್ನು ಪಡೆದುಕೊಂಡಿದ್ದಾರೆ. 1,16,834 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಖೂಬಾ ಗೆಲುವು ದಾಖಲಿಸಿದ್ದಾರೆ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಗೆದ್ದು ಬೀಗಿದ್ದ ಕಾಂಗ್ರೆಸ್‌ ನಾಯಕರಿಗೆ ಮುಖಕ್ಕೆ ಹೊಡೆದ ಹಾಗೇ ಜವಾಬು ಕೊಟ್ಟಿರುವ ಬಿಜೆಪಿ ಪಡೆ ಗೆಲುವಿನ ಕೇಕೆ ಹಾಕುತ್ತಿದೆ.

ಸಂಸದ ಭಗವಂತ ಖೂಬಾ ಬೆಳಗ್ಗೆಯಿಂದ ಮತ ಎಣಿಕೆ ಕೇಂದ್ರದ ಎಲ್ಲೆಡೆ ಸಂಚರಿಸಿ ಮತ ಎಣಿಕೆ ಮಾಹಿತಿ ಪಡೆಯುತ್ತಿದ್ದರು. ಆದರೆ, ಕಾಂಗ್ರೆಸ್‌ ಅಭ್ಯರ್ಥಿ ಈಶ್ವರ ಖಂಡ್ರೆ ಮತ ಎಣಿಕೆ ಕೇಂದ್ರದ ಕಡೆ ಕಂಡು ಬಂದಿಲ್ಲ. ಹಂತಹಂತವಾಗಿ ಎಲ್ಲ ಸುತ್ತುಗಳಲ್ಲಿ ಬಿಜೆಪಿ ಮುನ್ನಡೆ ಕಂಡು ಕಾಂಗ್ರೆಸ್‌ ಪಕ್ಷದವರ ಉತ್ಸಾಹ ಕುಗಿತ್ತು. ಒಟ್ಟಾರೆ ಫಲಿತಾಂಶದಲ್ಲಿ ಬೀದರ ಹಾಗೂ ಬೀದರ ದಕ್ಷಿಣ ಕ್ಷೇತ್ರದಲ್ಲಿ 11 ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿದರೆ ಇನ್ನುಳಿದ ಆರು ವಿಧಾನ ಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಕಂಡಿದೆ.

ಕ್ಷೇತ್ರವಾರು ಪಕ್ಷಗಳ ಲೀಡ್‌: ಚಿಂಚೋಳಿ ವಿಧಾನ ಸಭೆ ಕ್ಷೇತ್ರದಲ್ಲಿ 13, 590 ಬಿಜೆಪಿ ಲೀಡ್‌ ಪಡೆದುಕೊಂಡಿದೆ. ಆಳಂದ ವಿಧಾನ ಸಭೆ ಕ್ಷೇತ್ರದಲ್ಲಿ ಬಿಜೆಪಿ 28,287 ಮತಗಳ ಅಂತರ ಪಡೆದುಕೊಂಡಿದೆ. ಬಸವಕಲ್ಯಾಣ ಬಿಜೆಪಿ 38,738 ಮತಗಳ ಲೀಡ್‌, ಹುಮನಾಬಾದ ವಿಧಾನ ಸಭೆ ಕ್ಷೇತ್ರದಲ್ಲಿ ಬಿಜೆಪಿ 13,519 ಮತಗಳ ಲೀಡ್‌ ಪಡೆದುಕೊಂಡಿದೆ. ಬೀದರ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್‌ 11,118 ಮತಗಳ ಲೀಡ್‌ ಪಡೆದಿದೆ. ಬೀದರ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ 11,596 ಮತಗಳ ಅಂತರ, ಭಾಲ್ಕಿ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷಕ್ಕೆ 12,263 ಲೀಡ್‌ ಹಾಗೂ ಔರಾದ ಕ್ಷೇತ್ರದಲ್ಲಿ ಬಿಜೆಪಿಗೆ 32853 ಮತಗಳ ಲೀಡ್‌ ಬಂದಿದೆ. ಒಟ್ಟಾರೆ ಫಲಿತಾಂಶದಲ್ಲಿ ಬಸವಕಲ್ಯಾಣ ಕ್ಷೇತ್ರದಲ್ಲಿ ಬಿಜೆಪಿಗೆ ಅತೀ ಹೆಚ್ಚು ಲೀಡ್‌ ನೀಡಿದೆ.

Advertisement

ಅತಿಯಾದ ಆತ್ಮಿವಿಶ್ವಾಸ: ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಳ್ಳದೇ ಇರುವುದು ಕಾಂಗ್ರೆಸ್‌ ಅಭ್ಯರ್ಥಿ ಈಶ್ವರ ಖಂಡ್ರೆ ಅವರ ಸೋಲಿಗೆ ಪ್ರಮುಖ ಕಾರಣವಾಯಿತೆ? ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಖಂಡ್ರೆ ಹೀನಾಯ ಸೋಲಿನ ಬಳಿಕ ಈ ಬಗ್ಗೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗಳು ಶುರುವಾಗಿದ್ದು, ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ತಮಗೆ ಸರಿಸಾಟಿಯಲ್ಲದ ಅಭ್ಯರ್ಥಿ ಎಂದೇ ಖಂಡ್ರೆ ಭಾವಿಸಿದ್ದರು. ಅಲ್ಲದೇ ಹಾಗೇ ಖಂಡ್ರೆ ವರ್ತಿಸಿದ್ದರು ಕೂಡ. ಹಾಲಿ ಭಾಲ್ಕಿ ಶಾಸಕರೂ ಆಗಿರುವ ಈಶ್ವರ ಖಂಡ್ರೆ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಬಳಿಕ ಅವರ ಹಾವಭಾವ ಸಂಪೂರ್ಣ ಬದಲಾಗಿತ್ತು ಎಂದು ಅನೇಕರು ಮಾತಾಡಿಕೊಂಡಿದರು. ಅಲ್ಲದೆ, ಚುನಾವಣೆಯನ್ನು ತುಂಬಾ ಸುಲಭವಾಗಿ ತೆಗೆದುಕೊಂಡಿರುವುದು ಕೂಡ ಹೀನಾಯ ಸೋಲಿಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಈಗಾಗಲೇ ಭಾಲ್ಕಿ ಕ್ಷೇತ್ರದಲ್ಲಿ ಹಿಡಿತ ಹೊಂದಿರುವ ಖಂಡ್ರೆ ಕುಟುಂಬ, ಶಿಕ್ಷಣ ಸಂಸ್ಥೆ, ಸಹಕಾರ ಕ್ಷೇತ್ರದಲ್ಲೂ ಪ್ರಾಬಲ್ಯ ಹೊಂದಿದೆ. ಹಾಗಾಗಿ, ಖಂಡ್ರೆ ಗೆದ್ದರೆ ಜಿಲ್ಲೆಯಲ್ಲಿ ಮತ್ತಷ್ಟು ಹಿಡಿತ ಸಾಧಿಸಬಹುದು ಎಂಬ ಆತಂಕ ಲಿಂಗಾಯತ ನಾಯಕರು ಸೇರಿದಂತೆ ಇತರೆ ಸಮಾಜದ ರಾಜಕೀಯ ಮುಖಂಡರಲ್ಲೂ ಮನೆ ಮಾಡಿತ್ತು. ಇದು ಕೂಡ ಖಂಡ್ರೆಗೆ ಸೋಲಿನ ಕಾರಣ ಆಗಿರಬೇಕು ಎಂದು ಕೂಡ ರಾಜಕೀಯ ಮುಖಂಡರು ಅಭಿಪ್ರಾರ್ಯಗಳು ವ್ಯಕ್ತಪಡಿಸುತ್ತಿದ್ದಾರೆ.

ತಪ್ಪಿದ ಮರುಚುನಾವಣೆ: ಒಂದು ವೇಳೆ ಈಶ್ವರ ಖಂಡ್ರೆ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರೆ ಭಾಲ್ಕಿ ಕ್ಷೇತ್ರದಲ್ಲಿ ಮತ್ತೂಂದು ಉಪಚುನಾವಣೆ ಎದುರಿಸಬೇಕಾಗಿತ್ತು. ಉಪ ಚುನಾವಣೆಯಲ್ಲಿ ಈಶ್ವರ ಖಂಡ್ರೆ ಪತ್ನಿ ಡಾ| ಗೀತಾ ಖಂಡ್ರೆ ಕಾಂಗ್ರೆಸ್‌ ಅಭ್ಯರ್ಥಿ ಎಂದು ಕೂಡ ತೀರ್ಮಾನಿಸಲಾಗಿತ್ತು. ಆದರೆ, ಲೋಕಸಭೆ ಚನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಸೋಲು ಅನುಭವಿಸಿರುವ ಹಿನ್ನೆಲೆಯಲ್ಲಿ ಉಪ ಚುನಾವಣೆ ತಪ್ಪಿದೆ.

Advertisement

Udayavani is now on Telegram. Click here to join our channel and stay updated with the latest news.

Next