Advertisement
ಜಿಲ್ಲೆಯಲ್ಲಿ ಮೈತ್ರಿ ಪಕ್ಷದ ಮೂವರು ಸಚಿವರು ಇದ್ದರು ಕೂಡ ಈಶ್ವರ ಖಂಡ್ರೆ ಸೋಲಿನ ಕುರಿತು ಜಿಲ್ಲೆಯಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಕಳೆದ ಲೋಕಸಭೆ ಚುನಾವಣೆಯಲ್ಲಿ 93 ಸಾವಿರ ಮತಗಳ ಅಂತರದಿಂದ ಜಯಗಳಿಸಿದ್ದರು. ಇದೀಗ 1.16 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಹೊಸ ದಾಖಲೆ ಸೃಷ್ಠಿಸಿದ್ದಾರೆ. 2014ರಲ್ಲಿ ಪ್ರಥಮ ಬಾರಿಗೆ ಚುನಾವಣೆ ಎದುರಿಸಿ ಮೋದಿ ಗಾಳಿಯಲ್ಲಿ ಜಯಗಳಿಸಿದ ಖೂಬಾ, ಇದೀಗ ಅಖೀಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ಹಾಗೂ ಭಾಲ್ಕಿ ಕ್ಷೇತ್ರದಿಂದ ಸತತ ಮೂರು ಭಾರಿ ಶಾಸಕರಾಗಿ ಆಯ್ಕೆಯಾಗಿರುವ ಈಶ್ವರ ಖಂಡ್ರೆ ಅವರನ್ನು ಸೋಲಿಸುವ ಮೂಲಕ ಮತ್ತೂಮ್ಮೆ ದೆಹಲಿಗೆ ತೆರಳಲು ಸಜ್ಜಾಗಿದ್ದಾರೆ.
Related Articles
Advertisement
ಅತಿಯಾದ ಆತ್ಮಿವಿಶ್ವಾಸ: ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಳ್ಳದೇ ಇರುವುದು ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಅವರ ಸೋಲಿಗೆ ಪ್ರಮುಖ ಕಾರಣವಾಯಿತೆ? ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಖಂಡ್ರೆ ಹೀನಾಯ ಸೋಲಿನ ಬಳಿಕ ಈ ಬಗ್ಗೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗಳು ಶುರುವಾಗಿದ್ದು, ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ತಮಗೆ ಸರಿಸಾಟಿಯಲ್ಲದ ಅಭ್ಯರ್ಥಿ ಎಂದೇ ಖಂಡ್ರೆ ಭಾವಿಸಿದ್ದರು. ಅಲ್ಲದೇ ಹಾಗೇ ಖಂಡ್ರೆ ವರ್ತಿಸಿದ್ದರು ಕೂಡ. ಹಾಲಿ ಭಾಲ್ಕಿ ಶಾಸಕರೂ ಆಗಿರುವ ಈಶ್ವರ ಖಂಡ್ರೆ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಬಳಿಕ ಅವರ ಹಾವಭಾವ ಸಂಪೂರ್ಣ ಬದಲಾಗಿತ್ತು ಎಂದು ಅನೇಕರು ಮಾತಾಡಿಕೊಂಡಿದರು. ಅಲ್ಲದೆ, ಚುನಾವಣೆಯನ್ನು ತುಂಬಾ ಸುಲಭವಾಗಿ ತೆಗೆದುಕೊಂಡಿರುವುದು ಕೂಡ ಹೀನಾಯ ಸೋಲಿಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಈಗಾಗಲೇ ಭಾಲ್ಕಿ ಕ್ಷೇತ್ರದಲ್ಲಿ ಹಿಡಿತ ಹೊಂದಿರುವ ಖಂಡ್ರೆ ಕುಟುಂಬ, ಶಿಕ್ಷಣ ಸಂಸ್ಥೆ, ಸಹಕಾರ ಕ್ಷೇತ್ರದಲ್ಲೂ ಪ್ರಾಬಲ್ಯ ಹೊಂದಿದೆ. ಹಾಗಾಗಿ, ಖಂಡ್ರೆ ಗೆದ್ದರೆ ಜಿಲ್ಲೆಯಲ್ಲಿ ಮತ್ತಷ್ಟು ಹಿಡಿತ ಸಾಧಿಸಬಹುದು ಎಂಬ ಆತಂಕ ಲಿಂಗಾಯತ ನಾಯಕರು ಸೇರಿದಂತೆ ಇತರೆ ಸಮಾಜದ ರಾಜಕೀಯ ಮುಖಂಡರಲ್ಲೂ ಮನೆ ಮಾಡಿತ್ತು. ಇದು ಕೂಡ ಖಂಡ್ರೆಗೆ ಸೋಲಿನ ಕಾರಣ ಆಗಿರಬೇಕು ಎಂದು ಕೂಡ ರಾಜಕೀಯ ಮುಖಂಡರು ಅಭಿಪ್ರಾರ್ಯಗಳು ವ್ಯಕ್ತಪಡಿಸುತ್ತಿದ್ದಾರೆ.
ತಪ್ಪಿದ ಮರುಚುನಾವಣೆ: ಒಂದು ವೇಳೆ ಈಶ್ವರ ಖಂಡ್ರೆ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರೆ ಭಾಲ್ಕಿ ಕ್ಷೇತ್ರದಲ್ಲಿ ಮತ್ತೂಂದು ಉಪಚುನಾವಣೆ ಎದುರಿಸಬೇಕಾಗಿತ್ತು. ಉಪ ಚುನಾವಣೆಯಲ್ಲಿ ಈಶ್ವರ ಖಂಡ್ರೆ ಪತ್ನಿ ಡಾ| ಗೀತಾ ಖಂಡ್ರೆ ಕಾಂಗ್ರೆಸ್ ಅಭ್ಯರ್ಥಿ ಎಂದು ಕೂಡ ತೀರ್ಮಾನಿಸಲಾಗಿತ್ತು. ಆದರೆ, ಲೋಕಸಭೆ ಚನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲು ಅನುಭವಿಸಿರುವ ಹಿನ್ನೆಲೆಯಲ್ಲಿ ಉಪ ಚುನಾವಣೆ ತಪ್ಪಿದೆ.