Advertisement

ಬುದ್ಧಿಯಿಂದಷ್ಟೇ ವಿದ್ಯೆ ಫಲಕಾರಿ

10:19 AM Jun 02, 2019 | Naveen |

ಬೀದರ: ವಿದ್ಯೆಗಿಂತ ಬುದ್ಧಿ ಮುಖ್ಯ. ಕೇವಲ ವಿದ್ಯೆಯಿಂದ ಜೀವನ ಉದ್ಧಾರ ಸಾಧ್ಯವಿಲ್ಲ. ವಿದ್ಯೆ ಫಲಕಾರಿಯಾಗುವುದು ಬುದ್ಧಿಯಿಂದ ಮಾತ್ರ ಸಾಧ್ಯ ಎಂದು ಸಿದ್ಧಾರೂಢ ಮಠದ ಡಾ| ಶಿವಕುಮಾರ ಮಹಾಸ್ವಾಮಿಗಳು ನುಡಿದರು.

Advertisement

ನಗರದ ಶರಣ ಉದ್ಯಾನದಲ್ಲಿ ಲಿಂಗಾಯತ ಮಹಾಮಠದ ಆಶ್ರಯದಲ್ಲಿ ಜರುಗಿದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

ಮಕ್ಕಳ ಪಾಲಕರಾಗುವುದು ಸುಲಭ. ತಂದೆ-ತಾಯಿಯಾಗುವುದು ಕಷ್ಟ. ಮಕ್ಕಳಿಗೆ ಸಂಸ್ಕಾರ ನೀಡಿ, ಧರ್ಮ-ದೇಶಭಕ್ತಿ ಕಲಿಸುವುದೇ ನಿಜವಾದ ತಂದೆ-ತಾಯಿಗಳ ಕರ್ತವ್ಯವಾಗಿದೆ. ಸಂಪತ್ತಿನ ಆಸೆಯಲ್ಲಿ ಮಗ್ನನಾಗದೆ ಸದ್ಗುಣಗಳನ್ನು ಅಳವಡಿಸಿಕೊಂಡು ಸದಾಚಾರದಿಂದ ನಡೆಯುವವನೆ ನಿಜವಾದ ಮಗ ಎಂದರು. ಅಭ್ಯಾಸದಿಂದ ವಿದ್ಯೆ ಬರಬಹುದು ಆದರೆ, ಸಂಸ್ಕಾರದಿಂದ ಬುದ್ಧಿ ಸಮನಿಸುವುದು. ವಿದ್ಯೆಯನ್ನು ಬೆಳೆಸುವ ಕಲೆಯೇ ಬುದ್ಧಿಯ ಕೆಲಸವಾಗಿದೆ. ಮಕ್ಕಳು ಹಣ ಗಳಿಸುವ ಯಂತ್ರವಾಗದೇ ಮಾನವೀಯತೆ ಮೈಗೂಡಿಸಿಕೊಳ್ಳಬೇಕು ಎಂದು ಮಕ್ಕಳಿಗೆ ಸಂದೇಶ ನೀಡಿದರು. ಅಕ್ಕ ಅನ್ನಪೂರ್ಣ ಮಾತನಾಡಿ, ಪರೀಕ್ಷೆಯಲ್ಲಿ ಮಕ್ಕಳು ಸಂಪಾದಿಸುವ ಅಂಕಗಳಿಗಿಂತ ಒಳ್ಳೆಯ ನಡತೆ ಮುಖ್ಯ. ನೈತಿಕತೆ, ಸದ್ವರ್ತನೆಗಳನ್ನು ಕಲಿಸುವುದೇ ಸರಿಯಾದ ವಿದ್ಯೆಯೆಂದು ತಿಳಿಸಿದ ಅವರು, ತಮ್ಮ ಯಶಸ್ಸಿನಲ್ಲಿ ತಂದೆ-ತಾಯಿ, ಗುರು-ಹಿರಿಯರ ಪಾತ್ರವಿದೆ ಎಂಬ ಕೃತಜ್ಞತೆ ಮಕ್ಕಳಲ್ಲಿ ಇರಬೇಕು. ಹಿಂದೆ ಗುರು ಮುಂದೆ ಗುರಿ ಇಟ್ಟುಕೊಂಡ ರಣಧಿಧೀರರಾಗಬೇಕು. ಉತ್ತಮ ಸಂಸ್ಕಾರಗಳಿಂದ ಉತ್ತಮ ವ್ಯಕ್ತಿಗಳಾಗಿ ಇತಿಹಾಸ ಸೃಷ್ಟಿಸುವವರಾಗಬೇಕು. ಭಾರತೀಯರು ಶುದ್ಧ ಚಾರಿತ್ರ್ಯವಂತರಾಗಿ, ಪರಿಶ್ರಮಿಗಳಾಗಿ ವಿಶ್ವದಲ್ಲಿ ಪ್ರಜ್ಚವಲಿಸುವಂತಾಗಬೇಕು ಎಂದು ತಿಳಿಸಿದರು.

ಡಾ| ಗಂಗಾಂಬಿಕೆ ಪ್ರಾಸ್ತಾವಿಕ ಮಾತನಾಡಿ, ಬಸವಣ್ಣನವರ ಕಳಬೇಡ, ಕೊಲಬೇಡ ವಚನವನ್ನು ವಿದ್ಯಾರ್ಥಿಗಳು ಅನುಸರಿಸಬೇಕು. ಶರಣ ಚಿಂತನೆ, ಶರಣ ಆದರ್ಶಗಳನ್ನು ತಿಳಿದುಕೊಂಡು ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಭವಿಷ್ಯ ರೂಪುಗೊಳ್ಳುತ್ತದೆ ಎಂದು ಸಲಹೆ ನೀಡಿದರು. ಕಲಬುರಗಿಯ ವಿಟಿಯು ಸಂಯೋಜಕ ಬಸವರಾಜ ಗಾದಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಉನ್ನತ ಶಿಕ್ಷಣದ ಆಯ್ಕೆ, ಯಶಸ್ಸು ಕುರಿತು ಮಾರ್ಗದರ್ಶನ ನೀಡಿದರು.

ಕಲಬುರ್ಗಿ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದ ಶಿವಕುಮಾರ ಮಹಾಸ್ವಾಮಿಗಳು ಹಾಗೂ ಸಂಗೀತ ಕಲಾವಿದ ಡಾ| ವೀರಭದ್ರಪ್ಪ ಗಾದಗಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್ಸಿ ಮತ್ತು ಪಿಯು ದ್ವೀತಿಯ ಪರೀಕ್ಷೆಯಲ್ಲಿ ಶೇ.85ಕ್ಕೂ ಅಧಿಕ ಅಂಕ ಗಳಿಸಿ ಸಾಧನೆಗೈದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಪ್ರಕಾಶ ಟೊಣ್ಣೆ, ಪ್ರಥಮ ದರ್ಜೆ ಗುತ್ತೆದಾರರಾದ ಗುರುನಾಥ ಕೊಳ್ಳುರ್‌, ಚನ್ನಮ್ಮ ಹಾವಯ್ಯಸ್ವಾಮಿ, ವನಿತಾ ವೈಜಿನಾಥ ಹುಣಸಗೇರಿ, ವಿಜಯಲಕ್ಷ್ಮೀ ಪಾಟೀಲ, ಶಿವಕುಮಾರ ಪಂಚಾಳ ಸೇರಿದಂತೆ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next