Advertisement

ಬ್ರಿಮ್ಸ್‌ನಲ್ಲಿ ಕುಡಿವ ನೀರು ಸಿಗುವುದಿಲ್ಲ!

10:27 AM Jun 15, 2019 | Naveen |

ದುರ್ಯೋಧನ ಹೂಗಾರ
ಬೀದರ:
ನಗರದ ಸರ್ಕಾರಿ ಮೆಡಿಕಲ್ ಕಾಲೇಜ್‌ (ಬ್ರಿಮ್ಸ್‌)ನಲ್ಲಿ ಕುಡಿಯುವ ನೀರಿನ ಅಭಾವ ಎದುರಾಗಿರುವುದರಿಂದ ಖಾಸಗಿ ನೀರಿನ ಮೊರೆ ಹೋಗಿ ಕ್ಯಾನ್‌ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ.

Advertisement

ವೈದ್ಯಕೀಯ ವಿದ್ಯಾರ್ಥಿಗಳು, ಸಿಬ್ಬಂದಿ ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣಗೊಂಡಿದ್ದು, ಮಳೆಗಾಲ ಆರಂಭವಾದರೂ ನೀರಿನ ಬವಣೆ ಮುಗಿಯುವ ಬದಲಿಗೆ ಹೆಚ್ಚಾಗುತ್ತಿದೆ.

ನಗರದ ಹೃದಯ ಭಾಗದಲ್ಲಿನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಕಳೆದ ವರ್ಷದಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಕಾಲೇಜು ಆಡಳಿತ ನಡೆಸುವ ಅಧಿಕಾರಿಗಳು ಇಂದಿಗೂ ಕಾಲೇಜಿನಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಪ್ರಯತ್ನಿಸಿಲ್ಲ. ಇದರಿಂದ ಪ್ರತಿನಿತ್ಯ ವಿದ್ಯಾರ್ಥಿಗಳು ಆಡಳಿತ ಅಧಿಕಾರಿಗಳಿಗೆ, ಜಿಲ್ಲಾಡಳಿತ ಹಾಗೂ ಸ್ಥಳೀಯ ಜನ ಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ನೂರು ಕೋಟಿಗೂ ಅಧಿಕ ಮೊತ್ತದ ಕಟ್ಟಡದಲ್ಲಿ ಕುಡಿಯಲು ನೀರೇ ಇಲ್ಲದಿರುವುದು ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ದೇಶದ ವಿವಿಧೆಡೆಯಿಂದ ವೈದ್ಯಕೀಯ ಶಿಕ್ಷಣ ಪಡೆಯಲು ಬಂದಿರುವ ವಿದ್ಯಾರ್ಥಿಗಳು ಇಲ್ಲಿನ ಅವ್ಯವಸ್ಥೆಗಳನ್ನು ನೋಡಿ ಯಾಕಾದರು ಇಲ್ಲಿಗೆ ಬಂದೆವು ಎಂದು ನೋವು ವ್ಯಕ್ತಪಡಿಸುತ್ತಿದ್ದಾರೆ. ಕುಡಿಯುವ ನೀರು ಬೇಕಾದರೆ ನಾಲ್ಕು ಮಹಡಿಯಿಂದ ಕೆಳಗೆ ಬಂದು ಖಾಸಗಿ ಹೋಟೆಲ್ನಲ್ಲಿ ನೀರು ಖರೀದಿಸಬೇಕು. ಕಾಲೇಜಿನಲ್ಲಿ ಎರಡು ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅಳವಡಿಸಿದ್ದಾರೆ. ಆದರೆ, ಆ ಯಂತ್ರದಿಂದ ಇಂದಿಗೂ ಹನಿ ನೀರು ಕೂಡ ಬಂದಿಲ್ಲ ಎನ್ನುತ್ತಾರೆ ಸಿಬ್ಬಂದಿ. ಈ ಕುರಿತು ಅನೇಕ ಬಾರಿ ಕಾಲೇಜಿನ ಮುಖ್ಯಸ್ಥರ ಗಮನಕ್ಕೆ ತಂದರು ಕೂಡ ಯಾವುದೇ ಪ್ರಯೋಜನವಾಗಿಲ್ಲ್ಲ. ಅಲ್ಲದೆ, ಕಳೆದ ವರ್ಷ ಎಲ್ಲ ವಿದ್ಯಾರ್ಥಿಗಳು ಕಾಲೇಜು ಎದುರಿಗೆ ಖಾಲಿ ಕೊಡಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು ಕೂಡ ವಿದ್ಯಾರ್ಥಿಗಳ ಸಮಸ್ಯೆಗೆ ಯಾರೂ ಸ್ಪಂದಿಸುತ್ತಿಲ್ಲ ಎಂದು ವಿದ್ಯಾರ್ಥಿಗಳು ದೂರುತ್ತಿದ್ದಾರೆ.

ವೈದ್ಯಕೀಯ ಕಾಲೇಜಿನಲ್ಲಿ ಕೊಳವೆ ಬಾವಿ, ತೆರೆದ ಬಾವಿ ಇವೆ. ಆದರೂ, ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಕೊಳವೆ ಬಾವಿಯಲ್ಲಿ ನೀರು ಇರಬೇಕು ಎಂದು ಹೇಳಲಾಗುತ್ತಿದ್ದು, ಮೇಲೆತ್ತುವ ವ್ಯವಸ್ಥೆ ಇಲ್ಲ ಎಂಬುದು ತಿಳಿದು ಬಂದಿದೆ. ಕಾಲೇಜಿನ ವಿದ್ಯಾರ್ಥಿಗಳು ಮಾತ್ರ ಅಲ್ಲ, ಬೋಧಕ ಸಿಬ್ಬಂದಿ ಕೂಡ ಮನೆಯಿಂದ ನೀರಿನ ಬಾಟಲ್ ತರುವುದು ವಾಡಿಕೆಯಾಗಿ ಮಾಡಿಕೊಂಡಿದ್ದಾರೆ. ಅಲ್ಲದೆ, ಕಾಲೇಜಿನ ವಿದ್ಯಾರ್ಥಿಗಳು ಕೂಡ ತಪ್ಪದೆ ವಸತಿ ನಿಲಯಗಳಿಂದ ನೀರಿನ ಬಾಟಲ್ ತರುವುದು ಸಾಮಾನ್ಯವಾಗಿದೆ. ಎಲ್ಲಾ ವಿದ್ಯಾರ್ಥಿಗಳ ಬ್ಯಾಗಿನ ಜೊತೆಗೆ ನೀರಿನ ಬಾಟಲ್ ಇಲ್ಲಿ ಕಂಡು ಬರುತ್ತದೆ.

Advertisement

ಕಾಲೇಜಿಗೆ ನಗರ ಸಭೆಯ ನೀರಿನ ಸಂಪರ್ಕ ಪಡೆದಿದ್ದು, ಆ ನೀರು ವಿವಿಧ ಪ್ರಯೋಗಾಲಯಕ್ಕೆ ಬಳಸಲಾಗುತ್ತಿದೆ. ಆದರೆ, ಆ ನೀರು ಶೌಚಾಲಯ ಬಳಕೆಗೆ ಬಾರದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ವಿಶೇಷವಾಗಿ ಮಹಿಳಾ ವಿದ್ಯಾರ್ಥಿಗಳ ಗೋಳು ಹೆಚ್ಚಿದೆ. ಆದರೆ, ವಿದ್ಯಾರ್ಥಿಗಳು ಎಲ್ಲವನ್ನು ಸಹಿಸಿಕೊಂಡು ಶಿಕ್ಷಣ ಪಡೆಯುತ್ತಿದ್ದಾರೆ. ಕಾರಣ ಯಾವುದೇ ಧ್ವನಿ ಎತ್ತಿದ್ದರೆ ಕಾಲೇಜಿನ ಸಿಬ್ಬಂದಿ ಉದ್ದೇಶಪೂರ್ವಕ ದ್ವೇಶ ಸಾಧಿಸುತ್ತಾರೆ. ಶಿಕ್ಷಣಕ್ಕೆ ಅಡಚಣೆ ಉಂಟು ಮಾಡಬಹುದು ಎಂದು ತಿಳಿದು ಮೌನಕ್ಕೆ ಶರಣಾಗಿರುವುದಾಗಿ ತಿಳಿಸಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ವೈದ್ಯಕೀಯ ವಸತಿ ನಿಲಯದಲ್ಲಿನ ಶುದ್ಧ ಕುಡಿಯುವ ನೀರಿನ ಯಂತ್ರ ಸೂಕ್ತವಾಗಿ ಕಾರ್ಯ ನಿರ್ವಹಿಸದ ಹಿನ್ನೆಲೆಯಲ್ಲಿ 10 ವಿದ್ಯಾರ್ಥಿಗಳ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದಾರೆ ಎಂದು ವಿದ್ಯಾರ್ಥಿಗಳು ಹಾಗೂ ಕಾಲೇಜು ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಅಲ್ಲದೆ, ಸ್ನಾನಕ್ಕೆ ಬರುವ ನೀರು ಕೂಡ ತುಂಬ ಗಲೀಜು ಇರುತ್ತದೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ. ಕೂಡಲೆ ಕಾಲೇಜಿನ ಅಧಿಕಾರಿಗಳು, ಜಿಲ್ಲಾಡಳಿತ ಹಾಗೂ ಜಿಲ್ಲೆಯ ಜನ ಪ್ರತಿನಿಧಿಗಳು ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆಗೆ ಮುಕ್ತಿ ನೀಡುವ ಕೆಲಸ ಮಾಡಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸುತ್ತಿದ್ದಾರೆ.

ಕಾಲೇಜಿನ ಮೂರು ಮಹಡಿಗಳಲ್ಲಿನ ಶುದ್ಧ ನೀರಿನ ಘಟಕಗಳು 12 ವರ್ಷಗಳ ಹಿಂದೆ ಅಳವಡಿಸಿದ್ದು, ಸದ್ಯ ಅವು ಕಾರ್ಯ ನಿರ್ವಹಿಸುತ್ತಿಲ್ಲ. ಆದರೆ, ಖಾಸಗಿ ನೀರು ಪೂರೈಕೆ ಸಂಸ್ಥೆಗಳಿಂದ ಕ್ಯಾನ್‌ ನೀರು ತರಿಸಲಾಗುತ್ತಿದೆ. ವಸತಿ ನಿಲಯದ ಅಡುಗೆ ಕೋಣೆಯಲ್ಲಿ ಕೂಡ ಆರ್‌ಒ ಅಳವಡಿಸುವ ಕಾರ್ಯ ಮುಂದಿನ 15 ದಿನಗಳಲ್ಲಿ ನಡೆಯಲಿದೆ. ಅಲ್ಲದೆ, ಕಾಲೇಜಿನಲ್ಲಿ ಕುಡಿಯುವ ನೀರು ಪೂರೈಕೆಗಾಗಿ ಈಗಾಗಲೇ ಕ್ರಿಯಾ ಯೋಜನೆ ಹಾಕಿಕೊಂಡಿದ್ದು, ಹೊಸ ನೀರು ಶುದ್ಧೀಕರಣ ಘಟಕಗಳನ್ನು ಅಳವಡಿಸಿ ನೀರು ಪೂರೈಕೆಗೆ ಕ್ರಮ ವಹಿಸಲಾಗುವುದು.
ಡಾ| ಎಸ್‌.ವಿ. ಕ್ಷೀರಸಾಗರ,
ಬ್ರಿಮ್ಸ್‌ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next