Advertisement

ಕೊರೊನಾ ವೈರಸ್‌; ಭಯ ಬಿಟ್ಟು ಎಚ್ಚರಿಕೆ ವಹಿಸಲು ಸಲಹೆ

01:35 PM Feb 05, 2020 | Naveen |

ಬೀದರ: ನೋವೆಲ್‌ ಕೊರೊನಾ ವೈರಸ್‌ ಬಗ್ಗೆ ಭಯ ಬೇಡ, ಎಚ್ಚರಿಕೆ ವಹಿಸಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ವಿ.ಜಿ ರೆಡ್ಡಿ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Advertisement

ನೋವೆಲ್‌ ಕೊರೊನಾ ವೈರಸ್‌ ಪ್ರಾಣಿಗಳಲ್ಲಿ ಮತ್ತು ಮನುಷ್ಯರಲ್ಲಿ ಮುಖ್ಯವಾಗಿ ಶ್ವಾಸಕೋಶ ಹಾಗೂ ಉಸಿರಾಟಕ್ಕೆ ತೊಂದರೆ ಉಂಟು ಮಾಡುವ ವೈರಸ್‌ ಆಗಿರುತ್ತದೆ. ಈ ವೈರಸ್‌ ಮೊದಲ ಬಾರಿಗೆ ಚೀನಾ ದೇಶದ ವುಹಾನ್‌ ನಗರದಲ್ಲಿ ಪತ್ತೆಯಾಗಿದೆ. ಭಾರತ, ಅಮೇರಿಕಾ, ಪಾಕಿಸ್ತಾನ, ರಷ್ಯಾ, ಇಂಗ್ಲೆಂಡ್‌ ಸೇರಿದಂತೆ ಜಗತ್ತಿನ 25 ರಾಷ್ಟ್ರಗಳಲ್ಲಿ ನೋವೆಲ್‌ ಕೊರೊನಾ ವೈರಸ್‌ ಕಾಣಿಸಿದೆ. ವಿಶ್ವ ಆರೋಗ್ಯ ಸಂಸ್ಥೆ ಈಗಾಗಲೇ ಚೀನಾದಾದ್ಯಂತ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದೆ. ಈ ರೋಗದ ಕುರಿತು ಮಾಧ್ಯಮಗಳಲ್ಲಿ ಅನೇಕ ಧನಾತ್ಮಕ ಹಾಗೂ ಋಣಾತ್ಮಕ ಸುದ್ದಿಗಳು ಕೂಡ ಹರಡುತ್ತಿದ್ದು, ಕಾರಣ ಜನಸಾಮಾನ್ಯರು ಭಯಭೀತರಾಗಿದ್ದಾರೆ. ಈ ರೋಗದ ಬಗ್ಗೆ ಭಯಬೇಡ ಮುಂಜಾಗ್ರತೆಯಿಂದ ಇರುವುದು ಅತ್ಯವಶ್ಯಕ. ಏಕೆಂದರೆ ಈ ರೋಗ ಬಾರದಂತೆ ತಡೆಯಲು ಯಾವುದೇ ಲಸಿಕೆಗಳು ಲಭ್ಯವಿಲ್ಲ. ನಿರ್ದಿಷ್ಟ ಚಿಕಿತ್ಸೆ ಇರುವುದಿಲ್ಲ. ಕಾಣಿಸಿದ ಲಕ್ಷಣಗಳಿಗನುಸಾರವಾಗಿ ಚಿಕಿತ್ಸೆ ನೀಡಲಾಗುತ್ತದೆ.

ಚಿಕಿತ್ಸಾ ಸಂದರ್ಭದಲ್ಲಿ ಲಕ್ಷಣಗಳು ಕಂಡು ಬಂದ ಸಂದರ್ಭದಲ್ಲಿ ಕೊರೊನಾ ವೈರಸ್‌ ದೃಢಪಟ್ಟರೆ ರೋಗಿಯನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಬೇಕಾಗಿರುತ್ತದೆ. ಆದ್ದರಿಂದ ಈ ರೋಗ ಹರಡುವ ರೀತಿ ಹಾಗೂ ಮುಂಜಾಗ್ರತಾ ಕ್ರಮಗಳನ್ನು ತಿಳಿದುಕೊಳ್ಳುವುದು ಮತ್ತು ಅನುಸರಿಸುವುದು ಅತ್ಯುತ್ತಮ ಎಂದು ಸಲಹೆ ನೀಡಿದ್ದಾರೆ.

ರೋಗದ ಲಕ್ಷಣಗಳು: ಜ್ವರ, ತಲೆನೋವು, ನೆಗಡಿ, ಕೆಮ್ಮು, ಉಸಿರಾಟದ ತೊಂದರೆ, ನ್ಯುಮೋನಿಯಾ, ಭೇದಿ ಈ ರೋಗದ ಲಕ್ಷಣಗಳಾಗಿವೆ. ರೋಗಹರಡುವ ಬಗೆ: ಈ ವೈರಸ್‌ ಒಬ್ಬರಿಂದ ಮತ್ತೂಬ್ಬರಿಗೆ ಸೋಂಕಿತ ವ್ಯಕ್ತಿಯು ಸೀನಿದಾಗ ಮತ್ತು ಕೆಮ್ಮಿದಾಗ, ಸೋಂಕಿತ ವ್ಯಕ್ತಿಯ ಜೊತೆ ನಿಕಟ ಸಂಪರ್ಕದಲ್ಲಿರುವಾಗ, ಸೋಂಕಿತ ವ್ಯಕ್ತಿಯ ಹಸ್ತ ಲಾಘವ ಮತ್ತು ಮುಟ್ಟುವಾಗ, ಸೋಂಕಿತ ವ್ಯಕ್ತಿಯು ಬಳಸಿದ ವಸ್ತುಗಳನ್ನು ಯಾವುದೇ ರಕ್ಷಣೆ ಇಲ್ಲದೆ ಬಳಸಿದಾಗ, ಸ್ವತ್ಛಗೊಳಿಸದೆ/ ಸುರಕ್ಷಿತವಲ್ಲದ ಕೈಗಳಿಂದ ಕಣ್ಣು, ಮೂಗು, ಬಾಯಿಯನ್ನು ಮುಟ್ಟುವುದರ ಮೂಲಕ ಈ ರೋಗವು ಮನುಷ್ಯರಿಂದ ಮನುಷ್ಯರಿಗೆ ಹಾಗೂ ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ.

ರೋಗ ಹರಡಲು ಪೂರಕ ಅಂಶಗಳು: ಪೌಷ್ಟಿಕಾಂಶಗಳ ಕೊರತೆ, ಅಶುದ್ಧ ಗಾಳಿ ಸೇವನೆ, ಕೊಳಚೆ ಪ್ರದೇಶಗಳಲ್ಲಿ ವಾಸವಾಗಿರುವುದು. ವೈದ್ಯಕೀಯ ಸೌಲಭ್ಯದ ಅಲಭ್ಯತೆ, ನಗರಗಳಲ್ಲಿನ ಅತಿಯಾದ ಜನಸಾಂದ್ರತೆ, ಮನುಷ್ಯನ ರೋಗನಿರೋಧಕ ಶಕ್ತಿ ದುರ್ಬಲಗೊಂಡಿರುವುದು ಹಾಗೂ ಕಾಡು ಪ್ರಾಣಿಗಳ ಮಾಂಸಾಹಾರ ಸೇವನೆ ಪದ್ಧತಿಯ ಆಹಾರ ಸೇವನೆ ಕ್ರಮಗಳು ಈ ರೋಗ ವ್ಯಾಪಿಸಲು ನಿರ್ಧಾರಕ ಅಂಶಗಲಾಗಿವೆ.

Advertisement

ಮುಂಜಾಗ್ರತಾ ಕ್ರಮಗಳು: ಸೋಂಕು ಪೀಡಿತರ ಸಂಪರ್ಕದಿಂದ ದೂರವಿರುವುದು, ಶಂಕಿತ ರೋಗಿಯನ್ನು ಮನೆಯಲ್ಲಿಯೇ ಪ್ರತ್ಯೇಕವಾಗಿರಿಸುವುದು, ಟ್ರಿಪಲ್‌ ಲೇಯರ್‌ ಮಾಸ್ಕ್ ಬಳಸುವುದು, ವೈಯಕ್ತಿಕ ಸ್ವಚ್ಚತೆ ಹಾಗೂ ಪರಿಣಾಮಕಾರಿ ಕೈತೊಳೆಯುವುದು. ಕೆಮ್ಮುವಾಗ, ಸೀನುವಾಗ ಮಾಸ್ಕ್ ಇಲ್ಲವೇ ಕೈವಸ್ತ್ರ ಉಪಯೋಗಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು. ಈ ರೋಗದ ಲಕ್ಷಣಗಳು ಕಂಡುಬಂದರೆ ವೈದ್ಯರ ಬಳಿ ಪರೀಕ್ಷಿಸುವುದು. ಉಸಿರಾಟದ ತೊಂದರೆಯಾದಲ್ಲಿ ತಕ್ಷಣ ವೈದ್ಯರ ಸಲಹೆ ಪಡೆಯುವುದು, ಮಾಂಸ, ಮೊಟ್ಟೆ ಹಾಗೂ ಇತರೆ ಪ್ರಾಣೀ ಜನ್ಯ ಆಹಾರವನ್ನು ಸರಿಯಾಗಿ ಬೇಯಿಸಿ ಉಪಯೋಗಿಸುವುದು. ಅಸುರಕ್ಷಿತವಲ್ಲದ ಕಾಡು ಪ್ರಾಣಿ ಅಥವಾ ಸಾಕು ಪ್ರಾಣಿಗಳನ್ನು ಮುಟ್ಟಬೇಡಿ. ಮನೆಯ ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳುವುದು, ಹೆಚ್ಚು ಜನನಿಬೀಡ ಪ್ರದೇಶದಲ್ಲಿ ಸಂಚರಿಸುವಾಗ ರಕ್ಷಣಾತ್ಮಕ ವಿಧಾನಗಳನ್ನು ಅನುಸರಿಸಿ ಸಂಚರಿಸಬೇಕು.

ಹೆಚ್ಚಿನ ಮಾಹಿತಿಗಾಗಿ 24×7 ಉಚಿತ ಆರೋಗ್ಯ ಸಹಾಯವಾಣಿ 104 ಅಥವಾ 011-23978046 ದೂರವಾಣಿ ಸಂಖ್ಯೆಗೆ ಕರೆ ಮಾಡಿಯೂ ಮಾಹಿತಿ ಹಾಗೂ ಮಾರ್ಗದರ್ಶನ ಪಡೆಯಬಹುದು. ಈ ಮೇಲಿನ ಎಲ್ಲಾ ಕ್ರಮಗಳನ್ನು ಅನುಸರಿಸಿದರೆ ನೋವೆಲ್‌ ಕೊರೊನಾ ವೈರಸ್‌ ಅಪಾಯದಿಂದ ಪಾರಾಗಬಹುದು ಎಂದು ಡಿಎಚ್‌ಒ ಡಾ| ವಿ.ಜಿ.ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next