Advertisement

ಕಟ್ಟಡ ಕಾಮಗಾರಿ ವಿಳಂಬಕ್ಕೆ 26 ಲಕ್ಷ ದಂಡ

10:20 AM Jun 16, 2019 | Team Udayavani |

ದುರ್ಯೋಧನ ಹೂಗಾರ
ಬೀದರ:
ನಿಗದಿತ ಅವಧಿಯಲ್ಲಿ ಬೀದರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆ ಕಟ್ಟಡ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ನಾಗಾರ್ಜುನ ಕನ್‌ಸ್ಟ್ರಕ್ಷನ್‌ ಕಂಪನಿಗೆ ಈವ‌ರೆಗೆ 26 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂಬ ಅಂಶ ಲೋಕೋಪಯೋಗಿ ಇಲಾಖೆ ಮೂಲಗಳಿಂದ ತಿಳಿದುಬಂದಿದೆ.

Advertisement

2017ರಲ್ಲಿ ಸಿವಿಲ್ ಕಾಮಗಾರಿ ಪೂರ್ಣಗೊಳಿಸಿ ಕಟ್ಟಡ ಹಸ್ತಾಂತರ ಮಾಡಿದ ಗುತ್ತಿಗೆ ಕಂಪನಿ, ಇನ್ನೂ ಸುಮಾರು 3 ಕೋಟಿ ರೂ. ಮೊತ್ತದ ವಿದ್ಯುತ್‌, ಎಸಿ ಅಳವಡಿಕೆ, ಲಿಫ್ಟ್‌ ಸೇರಿದಂತೆ ಇತರೆ ಕಾಮಗಾರಿ ಬಾಕಿ ಉಳಿಸಿದೆ. ಕಾಮಗಾರಿ ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ಪ್ರತಿನಿತ್ಯ ಕಂಪೆನಿಗೆ 4,000 ರೂ. ದಂಡ ವಿಧಿಸಲಾಗುತ್ತಿದ್ದು, ಈವರೆಗೆ ಸರ್ಕಾರ ಒಟ್ಟು 26 ಲಕ್ಷ ರೂ. ದಂಡ ವಿಧಿಸಿದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಾಮಗಾರಿ ವಿವರ: ಬೋಧಕ ಆಸ್ಪತ್ರೆಯ ಕಟ್ಟಡ ಕಾಮಗಾರಿಗೆ 110.09 ಕೋಟಿ ಅನುದಾನ ನಿಗದಿ ಮಾಡಲಾಗಿದೆ. ಈವರೆಗೆ ಮಾಡಿದ ಕಾಮಗಾರಿಗೆ 97.73 ಕೋಟಿ ರೂ. ಹಣ ಪಾವತಿ ಮಾಡಲಾಗಿದೆ. ಇನ್ನೂ 9.73 ಕೋಟಿ ಅನುದಾನ ಸರ್ಕಾರದ ಖಾತೆಯಲ್ಲಿದ್ದು, ಪೂರ್ಣ ಪ್ರಮಾಣದ ಕಾಮಗಾರಿ ಮುಗಿದ ನಂತರ, ವಿವಿಧ ಹಂತಗಳ ತಪಾಸಣೆ, ದೃಢೀಕರಣದ ನಂತರ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಬೀದರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಯನ್ನು 300 ಹಾಸಿಗೆಗಳ ಸಾಮರ್ಥ್ಯದಿಂದ 750 ಹಾಸಿಗೆಗಳ ಸಾಮರ್ಥ್ಯಕ್ಕೆ ಮೇಲ್ದರ್ಜೆಗೇರಿಸಲು ಹೊಸ ಆಸ್ಪತ್ರೆಯ ಕಟ್ಟಡ ನಿರ್ಮಾಣಕ್ಕೆ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜನಸಾರಿಗೆ ಇಲಾಖೆಯ ಮೂಲಕ ಬೆಂಗಳೂರು ಮೂಲದ ನಾಗಾರ್ಜುನ ಕನ್‌ಸ್ಟ್ರಕ್ಷನ್‌ ಕಂಪನಿಗೆ ಗುತ್ತಿಗೆ ನೀಡಲಾಗಿತ್ತು. 2012-13ನೇ ಸಾಲಿನಲ್ಲಿ ಕಾಮಗಾರಿಯ ಟೆಂಡರ್‌ ಗುತ್ತಿಗೆ ಕರೆದು ರೂ. 95.95 ಕೋಟಿಗೆ ಸರ್ಕಾರ ಅನುಮೋದನೆ ನೀಡಿತ್ತು. ನಂತರ ಯೋಜನೆಯನ್ನು ಪರಿಷ್ಕೃತಗೊಳಿಸಿ ಇದೀಗ 110.09 ಕೋಟಿ ರೂ. ವರೆಗೆ ಹೆಚ್ಚಿಸಲಾಗಿದೆ.

30-04-2014ರಂದು ಆಸ್ಪತ್ರೆ ಕಟ್ಟಡ ನಿರ್ಮಾಣದ ಟೆಂಡರ್‌ ಕರಾರಿಗೆ ಸಹಿ ಹಾಕಲಾಗಿದ್ದು, ಅದೇ ದಿನ ಕಟ್ಟಡ ಕಾಮಗಾರಿಗೆ ಭೂ ಗುರುತು ಹಾಕುವ ಕೆಲಸ ಕೂಡ ನಡೆದಿತ್ತು. ಪೂರ್ಣ ಕಟ್ಟಡ ನಿರ್ಮಾಣಕ್ಕೆ ಎರಡು ವರ್ಷದ ಅವಧಿ ನಿಗದಿ ಪಡಿಸಲಾಗಿತ್ತು. ನಿಗಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಸರ್ಕಾರದಿಂದ ಹೆಚ್ಚಿನ ಅವಧಿ ಪಡೆದುಕೊಂಡ ಗುತ್ತಿಗೆ ಕಂಪನಿ 2017ರ ನವೆಂಬರ್‌ 15ಕ್ಕೆ ಸಿವಿಲ್ ಕಾಮಗಾರಿ ಪೂರ್ಣಗೊಳಿಸಿ ಆಸ್ಪತ್ರೆಯನ್ನು ಆಡಳಿತಕ್ಕೆ ಹಸ್ತಾಂತರ ಮಾಡಿದ್ದಾರೆ. ನಂತರದ ಕಾಮಗಾರಿಯ ವೇಗ ಕಡಿಮೆಯಾಗಿದ್ದು, ಸೂಕ್ತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿ, ದಿನದ ಲೆಕ್ಕದಲ್ಲಿ ದಂಡ ವಿಧಿಸುವ ಕಾರ್ಯಕ್ಕೆ ಇಲಾಖೆ ಮುಂದಾಗಿದೆ.

Advertisement

ಮಾದರಿ ಕಟ್ಟಡ: ಶನಿವಾರ ಆಸ್ಪತ್ರೆಗೆ ಭೇಟಿ ನೀಡಿದ ನಾಗಾರ್ಜುನ ಕಂಪನಿಯ ಇಂಜಿನಿಯರ್‌ ಕಟ್ಟಡದ ಬಗ್ಗೆ ಯಾರೂ ಮಾತನಾಡುವಂತೆ ಇಲ್ಲ. ಸೂಕ್ತ ನಕ್ಷೆಯ ಆಧಾರದಲ್ಲಿ ಕಟ್ಟಡ ಕಾಮಗಾರಿ ಮಾಡಲಾಗಿದೆ. ದೂರದಿಂದ ಆಸ್ಪತ್ರೆ ಕಟ್ಟಡ ಒಂದೇ ಕಾಣುತ್ತದೆ. ಆದರೆ ಸೂಕ್ಷ್ಮವಾಗಿ ಗಮನಿಸಿದೆ ಕಟ್ಟಡ ಒಂದಲ್ಲ ಬದಲಿಗೆ ಅದು 9 ಕಟ್ಟಡಗಳು ಸೇರಿ ಒಂದು ಆಸ್ಪತ್ರೆಯ ಕಟ್ಟಡ ನಿರ್ಮಾಣಗೊಂಡಿದೆ. 9 ಕಟ್ಟಡಗಳ ಮಧ್ಯದಲ್ಲಿ ಸುಮಾರು ಎರಡು ಇಂಚ್ ಅಂತರ ಇದೆ. ಭೂಕಂಪ ಸಂಭವಿಸಿದ ಸಂದರ್ಭದಲ್ಲಿ ಕಟ್ಟಡಕ್ಕೆ ಯಾವುದೇ ಹಾನಿ ಸಂಭವಿಸುವುದಿಲ್ಲ. ಕೆಲ ಕಡೆಗಳಲ್ಲಿ ನೀರು ಜಿನುಗುತ್ತಿದ್ದು, ಅದು ಆ ಅಂತರದ ಮಧ್ಯದಿಂದ ಬರುತ್ತಿರುವುದನ್ನು ಗಮನಿಸಬಹುದಾಗಿದೆ. ಶೌಚಾಲಯಗಳ ಸೂಕ್ತ ನಿರ್ವಹಣೆ ಇಲ್ಲದಕ್ಕೆ ಆ ನೀರು ಎಲ್ಲೆಡೆ ಹರಿದಾಡುತ್ತಿದೆ ಎಂದು ಇಂಜಿನಿಯರ್‌ ರಂಗೇಗೌಡ ವಿವರಿಸಿದರು.

ಬೀದರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಯ ಮುಂಭಾಗದ ಮೇಲ್ಛಾವಣಿಯಲ್ಲಿ ತಾಂತ್ರಿಕ ಸಮಸ್ಯೆ ಕಂಡು ಬಂದ ಹಿನ್ನೆಲೆಯಲ್ಲಿ ಅದು ಬೀಳುವ ಮುನ್ನ ಎರಡು ದಿನಗಳ ಕಾಲ ಬೀಳಿಸುವ ಕೆಲಸ ಮಾಡಲಾಗಿದೆ. ಈಗಾಗಲೇ ಕಲಬುರಗಿಯ ಗುಣಮಟ್ಟ ನಿಯಂತ್ರಣ ಇಲಾಖೆಯ ಅಧಿಕಾರಿಗಳು ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಸ್ಪತ್ರೆಯ ಕಟ್ಟಡ ಗುತ್ತಿಗೆ ಪಡೆದಿರುವ ನಾಗಾರ್ಜುನ ಕಂಪನಿಗೆ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸದ ಹಿನ್ನೆಲೆಯಲ್ಲಿ ದಿನಕ್ಕೆ ನಾಲ್ಕು ಸಾವಿರ ದಂಡ ವಿಧಿಸಲಾಗುತ್ತಿದೆ. ಈ ವರೆಗೆ ಸುಮಾರು 26 ಲಕ್ಷ ದಂಡದ ಮೊತ್ತ ಆಗಿದೆ.
ರಾಜೇಂದ್ರ,
ಲೋಕೋಪಯೋಗಿ ಇಲಾಖೆಯ ಎಇಇ

ಬೀದರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಯ ಮುಂಭಾಗದ ಮೇಲ್ಛಾವಣಿ ಕುಸಿತ ಕುರಿತು ಅನೇಕ ರೀತಿಯ ಚರ್ಚೆಗಳು ನಡೆದು ರಾಜಕೀಯ ವಾದ-ವಿವಾದಕ್ಕೆ ಕಾರಣವಾಗಿತ್ತು. ಇದೀಗ ಇಂಜಿನಿಯರ್‌ಗಳ ಪ್ರಕಾರ ಮಳೆಗೆ ಕಟ್ಟಡದ ಛಾವಣಿ ಕುಸಿದಿಲ್ಲ. ಬದಲಾಗಿ ತಾಂತ್ರಿಕ ಸಮಸ್ಯೆ ಗುರುತಿಸಿ ದುರಸ್ತಿ ಮಾಡುವ ನಿಟ್ಟಿನಲ್ಲಿ ಛಾವಣಿ ತೆರವುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಶನಿವಾರ ಆಸ್ಪತ್ರೆಗೆ ಭೇಟಿ ನೀಡಿದ ಅಧಿಕಾರಿಗಳು ಕಟ್ಟಡ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ಮೇಲ್ಛಾವಣಿಯಲ್ಲಿ ಅವ್ಯವಸ್ಥೆ ಕಂಡು ಬಂದಿತ್ತು. ಅಲ್ಲದೇ, ಆಸ್ಪತ್ರೆಯ ಬಹುತೇಕ ಕಡೆಗಳಲ್ಲಿ ಮಲ, ಮೂತ್ರ ವಿಸರ್ಜನೆ ಮಾಡಿರುವುದರಿಂದ ಅಧಿಕಾರಿಗಳು ಮೂಗು ಮುಚ್ಚಿಕೊಂಡು ತೆರಳಿದರು. ಆಸ್ಪತ್ರೆಯ ಸಿಬ್ಬಂದಿ ಹಾಗೂ ಆಸ್ಪತ್ರೆಗೆ ಭೇಟಿ ನೀಡುವ ರೋಗಿಗಳು ಬೇಕಾದ ಸ್ಥಳಗಳಲ್ಲಿ ತ್ಯಾಜ್ಯ ಎಸೆದಿದ್ದು ನೋಡಿ ಆಸ್ಪತ್ರೆ ಸಿಬ್ಬಂದಿ ಸೂಕ್ತ ನಿರ್ವಹಣೆ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು. ಆಸ್ಪತ್ರೆಯ ಬಹುತೇಕ ಶೌಚಾಲಯಗಳಲ್ಲಿನ ನಳಗಳು ಸೇರಿದಂತೆ ಇತರೆ ಸಾಮಗ್ರಿಗಳನ್ನು ಹಾಳು ಮಾಡಲಾಗಿದೆ. ಶೌಚಾಲಯಗಳಲ್ಲಿ ಬಟ್ಟೆ ಸೇರಿದಂತೆ ಇತರೆ ವಸ್ತುಗಳನ್ನು ಎಸೆದಿರುವ ಕಾರಣ ನೀರು ಹರಿದು ಹೋಗದೆ ಎಲ್ಲೆಡೆ ಹರಡಿರುವುದು ಕಂಡು ಬಂತು. ಇನ್ನೂ ಕೆಲ ಕೊಠಡಿಗಳಿಗೆ ಬೀಗ ಹಾಕದ ಹಿನ್ನೆಲೆಯಲ್ಲಿ ಹೊರಗಿನ ಯುವಕ, ಯುವತಿಯರು ಅಲ್ಲಿ ಕಾಲಹರಣ ಮಾಡುತ್ತಿರುವುದು ಕೂಡ ಕಂಡು ಬಂತು.

Advertisement

Udayavani is now on Telegram. Click here to join our channel and stay updated with the latest news.

Next