Advertisement
ಅಕ್ಕನ ಹೆರಿಗೆ ಆಗಿ ಒಂದು ವಾರ ಆಗಿತ್ತಷ್ಟೇ. ಬಾಣಂತನಕ್ಕೆ ಊರಿಂದ ಅಜ್ಜಿ ಬರುತ್ತಿದ್ದಾರೆ ಎಂಬುದೇ ನನಗೆ ಸಡಗರ. ಅಜ್ಜಿ ಸಿದ್ಧಾಪುರದಿಂದ ಹೊರಟಿದ್ದಾರೆ ಎಂದು ಮಾವ ಬೆಳಿಗ್ಗೇನೆ ಫೋನ್ ಮಾಡಿ ಹೇಳಿದ್ದರು. ಸಿದ್ಧಾಪುರದಿಂದ ಶಿರಸಿಗೆ ಅಜ್ಜಿ ಆರು ತಿಂಗಳಿಗೊಮ್ಮೆ ಬಂದು ಎರಡೇ ಎರಡು ದಿನ ಇದ್ದು ಹೋಗುತ್ತಿದ್ದರು. ಬಂದಾಗ ಅಪ್ಪನಿಗೆ ಒಂದಿಷ್ಟು ಬುದ್ಧಿಮಾತು, ಆಯಿ ಕಣ್ಣೀರಿಗೆ ಒಂದಿಷ್ಟು ಬೈಗುಳದ ಸುರಿಮಳೆ ಸುರಿಸಿ, ನನಗೆ ಚಕ್ಕುಲಿ, ಶೇಂಗಾ, ಗೆಣಸಿನ ಹಪ್ಪಳ ಕೊಟ್ಟು ಹೋಗುತ್ತಿದ್ದರು. “”ಇನ್ನೊಂದೆರೆಡು ದಿನ ಇರೆ ಅಜ್ಜಿ” ಎಂದಾಗ, “”ನಿನ್ನ ಮದ್ವೆಗೆ ತಿಂಗಳಿರುವಾಗಲೇ ಬಂದು ಸಂಸಾರ ಮಾಡುವ ಗುಟ್ಟು ಹೇಳಿಕೊಡುತ್ತೀನಿ ಪುಟ್ಟಿ. ನಿನ್ನ ಅಮ್ಮನ ಹಾಗೆ ಅಳುಮುಂಜಿ ಆಗಬೇಡ ನೀನು” ಎನ್ನುತ್ತಿದ್ದರು. ಮದುವೆ ಎಂದಾಕ್ಷಣ ಕೆಂಪಾಗುವ ನನ್ನ ಮುಖಕ್ಕೆ ದೃಷ್ಟಿ ತೆಗೆದು, “ಹಾದಿ ಕಣ್ಣು ಬೀದಿ ಕಣ್ಣು ರಂಡೇರಕಣ್ಣು ಮುಂಡೇರ ಕಣ್ಣು ಯಾವ ಕಣ್ಣು ಬೀಳದೇ ಇರಲಿ ನನ್ನ ಪುಟ್ಟಿ ಮೇಲೆ’ ಎಂದು ನಂದಬಟ್ಟಲು ಹೂವಿನ ರಸದಿಂದ ಮಾಡಿದ ಕಾಡಿಗೆಯನ್ನು ನನ್ನ ಗಲ್ಲಕ್ಕೆ ಒತ್ತುತ್ತಿದ್ದರು.
Related Articles
Advertisement
ರಸ್ತೆಯತ್ತ ಇಣುಕಿ ಇಣುಕಿ ನನ್ನ ಕತ್ತು ನೋವಾದರೂ ಬಸ್ನ ಸುಳಿವಿರಲಿಲ್ಲ. ಸಂಜೆ ಹೊತ್ತಿಗೆ ತನ್ನ ಇಡೀ ಮೈತುಂಬಾ ಕೆಸರಿನ ಅಭ್ಯಂಜನ ಮಾಡಿಸಿಕೊಂಡು, ಬಸುರಿಯಂತೆ ತೇಕುತ್ತ ಗಜಾನನ ಬಸ್ ಬಂದೇ ಬಿಡು¤. “ಅಜ್ಜಿ ಬಂದ್ರು ಅಜ್ಜಿ’ ಎಂದು ಜೋರಾಗಿ ಕೂಗಿದ್ದೇ ತಡ, ಎಲ್ಲಿದ್ದಾಳ್ಳೋ ಆಯಿ ಪೊರಕೆ ಹಿಡಿದುಕೊಂಡು ಓಡಿ ಬಂದಳು : “”ಬಂದವರು ಮನೆಗೆ ಬರುತ್ತಾರೆ, ನೀನು ಬಸ್ ಹತ್ತಿರ ಹೋಗಿ ನಮ್ಮನೆ ಮಾನ ಕಳಿಬೇಡ” ಎಂದು ಕೂಗಾಡುವುದಕ್ಕೆ ಶುರುಮಾಡಿದಳು. “”ನನ್ನಿಂದಲ್ಲ ಈ ಮನೆಯ ಮಾರ್ಯಾದೆ ಹೋಗುವುದು, ನಿನ್ನಿಂದ! ಅದ್ಯಾಕೆ ಅಷ್ಟು ಜೋರಾಗಿ ಕಿರುಚುತ್ತಿಯಾ ನೀನು?” ಎಂದು ಮೊದಲ ಸಲ ಜೋರಾಗಿಯೇ ಆಯಿಗೆ ದಬಾಯಿಸಿದೆ. ಇನ್ನು ಏನೋ ಹೇಳಬೇಕೆಂದಿದ್ದವಳು, ಅಜ್ಜಿಯ ಮುಖ ನೋಡಿ ಸುಮ್ಮನಾದೆ. “”ಥೂ ಏನು ಮಳೇನೋ… ಇಡೀ ಬಸ್ ತುಂಬ ಕೆಸರು ಮಗಾ. ಅದು ಹೇಗೆ ಆ ದಾರಿಯಲ್ಲಿ ಬಂತೋ ಗೊತ್ತಿಲ್ಲ” ಎಂದು ಅಜ್ಜಿ ಡ್ರೆವರ್ ಪಾಪಣ್ಣನ ಬಗ್ಗೆ ಕಾಳಜಿ ವಹಿಸುತ್ತ ಮಾತನಾಡಿದರು. “”ನಾ ಸ್ನಾನ ಮಾಡಿ ಒಳಗೆ ಬರುತ್ತೇನೆ. ನೀನು ಮಾಣಿನ ಪಡಸಾಲೆಗೆ ತೆಗೆದುಕೊಂಡು ಬಾ” ಎಂದು ಆಯಿಗೆ ಹೇಳಿ, “ಪುಟ್ಟಿ ಹೇಗಿದ್ದಿಯೇ…’ ಎಂದು ನನ್ನ ನೆತ್ತಿಯನ್ನೊಮ್ಮೆ ಸವರಿದರು. “”ನಿನ್ನ ಮಾವ ಒಂದು ಗಂಡು ಹುಡುಕಿದ್ದಾನೆ, ಇನ್ನಾರು ತಿಂಗಳಲ್ಲಿ ನಿನ್ನ ಮದುವೆ ಮಾಡಿಸುತ್ತೇನೆ ನೋಡ್ತಿರು” ಎಂದಾಗ ನನ್ನ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತಿತ್ತು. “”ನನಗೆ ಈಗಲೇ ಬೇಡ ಅಜ್ಜಿ ನಾ ಮದುವೆಯಾದರೆ ನೀವು ಸಿಗೋದಿಲ್ಲ. ಹೀಗೆ ನಿಮ್ಮ ಜೋಡಿ ಸಮಯ ಕಳೆಯೋದಕ್ಕೂ ಆಗೋದಿಲ್ಲ” ಎಂದಾಗ ಅಜ್ಜಿ ತನ್ನ ಬೊಚ್ಚು ಬಾಯಿ ಅಗಲಿಸಿಕೊಂಡು ನಕ್ಕು ಸ್ನಾನಕ್ಕೆ ಹೊರಟೇ ಬಿಟ್ಟರು. ಅವರ ಆ ನಗುವಿನಲ್ಲಿ ನಿನ್ನಂತರಂಗ ಬಲ್ಲೆ ಎಂಬ ಭಾವವೊಂದು ತೇಲಿಹೋಯ್ತು!
ಪಡಸಾಲೆಯಲ್ಲಿ ಹತ್ತಿ ಬಟ್ಟೆ ಮೇಲೆ ಮಗುವನ್ನು ಮಲಗಿಸಿ ಆಯಿ, “ಓಲಾಲಾ ಲಾ….ಚಿನ್ನ’ ಎಂದು ಅದನ್ನು ಮುದ್ದಾಡುತ್ತಿದ್ದಳು. ಅಪ್ಪ ಕೂಡ ಆಗಾಗ ಮಗುವಿನ ಮುಖ ನೋಡಿ ನಗುತ್ತಿದ್ದರು. ಆಯಿಗೆ ಅಪ್ಪ ನಗುತ್ತಿರುವುದರಿಂದ ಒಳಗೊಳಗೆ ಹಿಗ್ಗಿರಬೇಕು. ಅವಳು ಮೊಮ್ಮಗನ ಹತ್ತಿರ, “ಅಲ್ನೋಡು ಅಜ್ಜ’ ಎಂದು ಒಂದು ತಿಂಗಳು ತುಂಬಿರದ ಮಗುವಿಗೆ ಸಂಬಂಧಗಳನ್ನು ಪರಿಚಯ ಮಾಡೋದಕ್ಕೆ ಶುರುಮಾಡಿದಳು. ಅಜ್ಜಿ ಸ್ನಾನ ಮುಗಿಸಿ “ರಾಮಾ ರಾಮಾ…’ ಎಂದು ಬಂದವರೇ ತಮ್ಮ ಸೆರಗನ್ನು ಆಯಿ ಕಡೆಗೆ ಚಾಚಿ ಮಗೂನ ಹಾಕಿಲ್ಲಿ ಎಂದರು. ಅಜ್ಜಿ ಮಗುವನ್ನು ಸೆರಗಿನಲ್ಲಿಯೇ ಹಿಡಿದುಕೊಂಡು ಎರಡು ನಿಮಿಷ ಕಣ್ಮುಚ್ಚಿ ಕುಳಿತಿದ್ದರು. ಮಗು ಕೂಡ ಸುಮ್ಮನೇ ಇತ್ತು. ಇದೆಲ್ಲ ಏನು ಎಂಬುದೇ ನನಗೆ ಗೊತ್ತಾಗಿಲ್ಲ. ಅಕ್ಕನ ಕಡೆ ನೋಡಿದಾಗ, “ಅಜ್ಜಿ ಮೇಲೆ ದೇವರು ಬರುತ್ತದೆ ಕಣೆ’ ಎಂದಷ್ಟೇ ಹೇಳಿ ಸುಮ್ಮನಾದಳು.
ಬೆಳ್ಳುಳ್ಳಿ , ಈರುಳ್ಳಿ ಚೂರ್ಣ, ಶುಂಠಿ ಪುಡಿ, ಮಗುವಿಗೆ ಕೆಂಪೆಣ್ಣೆ, ಬಾಣಂತಿ ತೈಲ ಎಂದೆಲ್ಲಾ ಕೆಲಸ ಮಾಡೋದರಲ್ಲಿಯೇ ಅಜ್ಜಿಗೆ ಪುರಸೊತ್ತು ಸಿಕ್ಕಿರಲಿಲ್ಲ. ಇನ್ನೇನು ಅಜ್ಜಿ ಹೊರಡೋದಕ್ಕೆ ಒಂದು ದಿನ ಇರಬೇಕು ಅನ್ನುವಾಗ, “”ಬಾರೆ… ಪುಟ್ಟಿ ಇವತ್ತು ನನ್ನ ಜತೆ ಮಲಗು, ಮಾತನಾಡುವ” ಎಂದಾಗ ನನಗೆ ಖುಷಿಯೋ ಖುಷಿ. ಆಯಿ ಅಕ್ಕನ ಜತೆ ಬಾಣಂತಿ ಕೋಣೆಯಲ್ಲಿ ಮಲಗುತ್ತಿದ್ದರು. ನನಗೆ ಅಲ್ಲಿನ ವಾಸನೆ ಆಗಿಬರುತ್ತಿರಲಿಲ್ಲ.
ಅಜ್ಜಿ ಬಳಿ ಮಾತನಾಡುವುದು ತುಂಬ ಇದ್ದಿತ್ತು. ಆ ರಾತ್ರಿ ಅಜ್ಜಿ ತನ್ನ ಕತೆ ಹೇಳಲು ಶುರುಮಾಡಿದರು.
ಅಜ್ಜಿಗೆ ಸರಿಸುಮಾರು ಏಳು ವರ್ಷಕ್ಕೆ ಮದುವೆ ಆಯ್ತಂತೆ. ಮುನ್ನೂರುಮುಡಿ ಹುಟ್ಟುವಳಿದಾರರ ಮನೆತನದ ಅಜ್ಜನಿಗೆ ಅಜ್ಜಿಯನ್ನು ಧಾರೆ ಎರೆದುಕೊಟ್ಟಿದ್ದರು. ಆ ಕಾಲದಲ್ಲಿ ಅಜ್ಜಿನ ಪಲ್ಲಕ್ಕಿ ಮೇಲೆ ಕೂರಿಸಿಕೊಂಡು ಅಜ್ಜನ ಮನೆಗೆ ದಿಬ್ಬಣ ತಂದಿದ್ದರು. ಅಜ್ಜನಿಗೆ ಘಟ್ಟದಲ್ಲಿ ಶೇರಿಗಾರಿಕೆ ಕೆಲಸ. ಅಜ್ಜ ಅಂದರೆ ಇಡೀ ಊರೇ ನಡುಗುತ್ತಿತ್ತಂತೆ. ಅಜ್ಜ ಮನೆಗೆ ಬಂದಾಗ ಒಂದು ತಂಬಿಗೆ ನೀರು ಕಾಲಿಗೆ ಎರೆದುಕೊಂಡು ಒಳಗೆ ಬಂದರೆ, ಅಜ್ಜಿ ಮಣೆ, ತಟ್ಟೆಯಲ್ಲಾ ಸಿದ್ಧ ಮಾಡಕೊಳ್ಳಬೇಕಿತ್ತಂತೆ. ಅಜ್ಜ ಎಂದರೆ ಹೆದರುತ್ತಿದ್ದ ಅಜ್ಜಿ, ಅಜ್ಜ ಸಾಯೋದಕ್ಕೆ ಎರಡು ವರ್ಷ ಇರುವಾಗ ಅವರ ಜತೆ ಮಾತು ಬಿಟ್ಟರಂತೆ. ನೇರವಾಗಿ ಮಾತನಾಡದೇ ಇದ್ದರೂ ಕೆಲಸದಾಳುಗಳ ನೆಪ ಇಟ್ಟುಕೊಂಡು ಗಂಡ-ಹೆಂಡತಿಯ ಸಂಭಾಷಣೆ ನಡೆಯುತ್ತಿತ್ತು. ‘ಏಯ್… ಸೋಮ ಸೂರ್ಯ ನೆತ್ತಿ ಮೇಲೆ ಬಂದಾಯಿತು ಊಟಕ್ಕೆ ಬನ್ನಿ ಎನ್ನುವಂತೆಯೋ ಅಜ್ಜಿ ಅಜ್ಜನ ಊಟಕ್ಕೆ ಕರೆಯುತ್ತಿದ್ದರಂತೆ. ಅವರಿಬ್ಬರ ಮಧ್ಯೆ ಜಗಳಕ್ಕೆ ಕಾರಣವೂ ಇದ್ದಿತ್ತು. ಅಜ್ಜ ಶಿರಸಿಯಲ್ಲಿ ಯಾರನ್ನೋ ಇಟ್ಟುಕೊಂಡಿ¨ªಾರೆ ಎಂಬುದು ಅಜ್ಜಿಗೆ ತಡವಾಗಿ ಗೊತ್ತಾಗಿತ್ತು. ದೀಪಾವಳಿಗೆ, ಯುಗಾದಿಗೆ ಅಜ್ಜ ಅಕ್ಕಿ, ತೆಂಗಿನಕಾಯಿಯನ್ನು ಸಿದ್ಧಾಪುರದಿಂದ ಶಿರಸಿಗೆ ತೆಗೆದುಕೊಂಡು ಹೋಗುತ್ತಿದ್ದರಂತೆ. ಮೊದಮೊದಲು ರೇಗುತ್ತಿದ್ದ ಅಜ್ಜಿ ಕೊನೆಗೆ ಅಜ್ಜನೊಂದಿಗೆ ಮಾತನಾಡದೇ ಜೀವನ ಕಳೆದರು. ಆಗಲೇ ಅವರು ದೇವರು ದಿಂಡಿರು ಅಂತ ನಂಬಿದ್ದು. ಇಡೀಹೊತ್ತು ದೇವರ ಕೋಣೆ ಚೊಕ್ಕ ಮಾಡುವುದು, ಆಗಾಗ ಶಿರಸಿಯಮ್ಮನ ದೇವಸ್ಥಾನಕ್ಕೆ ಹೋಗೋದನ್ನು ಮಾಡುತ್ತಿದ್ದರಂತೆ. ಶಿರಸಿಗೆ ಹೋದಾಗ ತನ್ನ ಸವತಿ ಹೇಗಿರಬಹುದು ಎಂದು ನೋಡಿಕೊಂಡು ಬರುವ ಕುತೂಹಲ ಮೂಡಿದ್ರೂ ಅಜ್ಜಿ ಯಾವತ್ತೂ ಅತ್ತಕಡೆ ಹೋಗಿಲ್ಲಂತೆ. ಅವಳಿಗೂ ಎರಡು ಮಕ್ಕಳು ಇರುವುದು ಅಜ್ಜಿಗೆ ಗೊತ್ತಿತ್ತು. ಅದಕ್ಕೆ ಅಜ್ಜ ಅಕ್ಕಿ, ತೆಂಗಿನಕಾಯಿ ತೆಗೆದುಕೊಂಡು ಹೋಗುವಾಗ ಅಜ್ಜಿ ಸುಮ್ಮನಾಗುತ್ತಿದ್ದರು. ಒಂದು ದಿನ ಅಜ್ಜ ಹಠಾತ್ತಾಗಿ ಸತ್ತಾಗ ಅಜ್ಜಿ ಶಿರಸಿಗೆ ಸುದ್ದಿ ಮುಟ್ಟಿಸಿ ಎಂದು ಆಳುಗಳಿಗೆ ಹೇಳಿ ಕಳುಹಿಸಿದ್ದರು. ಪ್ರತಿ ದೀಪಾವಳಿ, ಯುಗಾದಿಗೆ ಒಂದಷ್ಟು ಅಕ್ಕಿ-ಕಾಯಿಯನ್ನು ಕೊಟ್ಟು ಕಳುಹಿಸುತ್ತಿದ್ದರಂತೆ. ಮನೆ ಪಾಲು ಪಂಚಾಯಿತಿ ಆದಾಗಲೂ ಅಜ್ಜಿ ಒಂದು ತಾಮ್ರದ ಹಂಡೆ, ಸ್ವಲ್ಪ ಬೆಳ್ಳಿ ಸಾಮಾನುಗಳನ್ನು ಆ ಹೆಂಗಸಿಗೆ ಕೊಟ್ಟಿದ್ದ ಧಾರಾಳಿ ನಮ್ಮಜ್ಜಿ.
ಅಜ್ಜಿ ತನ್ನ ಕತೆ ಹೇಳಿ ವೀಳ್ಯದೆಲೆ ಚೀಲದಿಂದ ಒಂದು ಪುಟ್ಟ ಡಬ್ಬಿ ತೆಗೆದು ವಜ್ರದ ಮೂಗುಬೊಟ್ಟನ್ನು ನನ್ನ ಕೈಗಿಟ್ಟರು. ಇದು ನನ್ನ ಆಯಿ ನನಗೆ ಕೊಟ್ಟಿದ್ದು. ನಿನ್ನ ಆಯಿಗೆ ಇದು ಸೇರಬೇಕಿತ್ತು. ಆದರೆ ಅವಳ ಜಾತಕಕ್ಕೆ ವಜ್ರ ಆಗಿಬರುವುದಿಲ್ಲ. ನಿನ್ನ ಜಾತಕ ನೋಡಿದೆ ವಜ್ರ ಆಗಿಬರುತ್ತೆ. ಮದುವೆ ದಿನ ಹಾಕಿಕೋ ನಾನು ಕಣ್ತುಂಬ ನೋಡಬೇಕು ಪುಟ್ಟಿ ನಿನ್ನ ಎಂದು ಒಂದೆರೆಡು ನಿಮಿಷ ಮೌನವಾದರು. ನಾನೂ ಅವರನ್ನು ಮಾತನಾಡಿಸೋ ಪ್ರಯತ್ನ ಮಾಡಿಲ್ಲ.
ಮರುದಿನ ಬೆಳಿಗ್ಗೆ ಬೇಗ ಎದ್ದು ಅಜ್ಜಿ ಹೊರಟೇ ಬಿಟ್ಟರು. ಅಕ್ಕನ ಮಗವನ್ನು ಸ್ವಲ್ಪ ಹೊತ್ತು ಎತ್ತಿ ಆಡಿಸಿ ಮತ್ತೂಮ್ಮೆ ಸೆರಗಿನಲ್ಲಿ ಎತ್ತಿಕೊಂಡು ಏನೋ ಮಂತ್ರ ಹೇಳಿ ಅಕ್ಕನಿಗೆ ವಾಪಸ್ಸು ಕೊಟ್ಟರು. ನನ್ನ ಬಳಿ ಬಂದು ‘ನತ್ತು ಹುಷಾರು’ ಎಂದು ತಿರುಗಿ ನೋಡದೇ ಬಸ್ಸ್ಟ್ಯಾಂಡಿನತ್ತ ಹೊರಟೇ ಹೋದರು. ಅಜ್ಜಿ ಹೋದ ಬೆನ್ನಿಗೆ ಅಪ್ಪ ಗೂಟಕ್ಕೆ ನೇತು ಹಾಕಿದ್ದ ಅಂಗಿ ಕೊಡವಿ ಚಪ್ಪಲಿ ಮೆಟ್ಟಿಕೊಂಡು ಮತ್ತೂಂದು ಕಡೆ ಹೊರಟರು. ಆಯಿ ಕಣ್ಣಲ್ಲಿ ಮತ್ತೆ ನೀರು, ಮೂಗಿನಲ್ಲಿ ಉರಿಶೀತ ಜಿನುಗಲು ಶುರುವಾಯಿತು. ಇದಾಗಿ ಎರಡೇ ವಾರದಲ್ಲಿ ಸಿದ್ಧಾಪುರದಿಂದ ಮಾವನ ಪೋನ್ ಬಂದಿತ್ತು. ಅಜ್ಜಿ ಬೆಳಿಗ್ಗೆ ಹೋಗಿಬಿಟ್ಟರು ಎಂದು. ಅಂದು ಶುಕ್ರವಾರವಾಗಿತ್ತು !
ಪವಿತ್ರಾ ಶೆಟ್ಟಿ