Advertisement

ನಾಗಬನಕ್ಕೆ ಆವರಣ ಗೋಡೆ ನಿರ್ಮಾಣ

07:00 PM Apr 18, 2021 | Team Udayavani |

ಭಟ್ಕಳ: ಸರಕಾರಿ ಸ್ಥಳದಲ್ಲಿ ನೂರಾರು ವರ್ಷಗಳ ಇತಿಹಾಸವಿರುವ ನಾಗಬನಕ್ಕೆ ಕಾಂಪೌಂಡ್‌ ನಿರ್ಮಿಸಿಕೊಡುವಲ್ಲಿ ಶಾಸಕ ಸುನೀಲ್‌ ನಾಯ್ಕ ಯಾಶಸ್ವಿಯಾಗಿದ್ದು ಜನರ ಪ್ರಶಂಸೆಗೆ ಕಾರಣವಾಗಿದೆ.

Advertisement

ಕಳೆದ ಹಲವಾರು ವರ್ಷಗಳಿಂದ ನಾಗಬನದ ಕಾಂಪೌಂಡ್‌ ಕಟ್ಟಲು ಹಣ ಮಂಜೂರಾಗಿದ್ದರೂ ನಿರ್ಮಾಣ ಕಾರ್ಯ ಮಾತ್ರ ಸಾಧ್ಯವಾಗಿರಲಿಲ್ಲ. 2013ರಲ್ಲಿ ನಾಗಬನಕ್ಕೆ ಮಾಂಸ ಹಾಕಿ ಅಪವಿತ್ರಗೊಳಿಸಿದಾಗ ಸರ್ಕಾರ 2 ಲಕ್ಷ ರೂ. ಆವರಣ ಗೋಡೆ ನಿರ್ಮಾಣಕ್ಕೆ ಮಂಜೂರಿ ಮಾಡಿತ್ತು. ಅಂದಿನಿಂದ ಕಾಂಪೌಂಡ್‌ ಕಟ್ಟುವ ವಿಷಯ ಬಂದಾಗಲೆಲ್ಲ ತಕರಾರಿದೆ ಎನ್ನುವ ಸಬೂಬು ಹೇಳಿ ಅಧಿಕಾರಿಗಳು ದಿನ ಕಳೆಯುತ್ತಿದ್ದರು. ಸರಕಾರ ಕಾಂಪೌಂಡ್‌ ಕಟ್ಟಿ ಮೇಲೆ ಗ್ರಿಲ್ಸ್‌ ಅಳವಡಿಸುವುದಕ್ಕೆಂದು ಮತ್ತೆ 5.50 ಲಕ್ಷ ರೂ. ಮಂಜೂರಿ ಮಾಡಿಸಿದ್ದು ನಿರ್ಮಿತಿ ಕೇಂದ್ರದವರಿಗೆ ಕಾಮಗಾರಿ ಮಂಜೂರಾಗಿದ್ದು ಯುಗಾದಿಯಂದು ಕಾಮಗಾರಿಗೆ ಶಾಸಕ ಸುನೀಲ್‌ ನಾಯ್ಕ ಅವರೇ ಚಾಲನೆ ನೀಡಿದ್ದರು.

ಶುಕ್ರವಾರ ಕಾಮಗಾರಿ ಆರಂಭಿಸುತ್ತಲೇ ಕೆಲವರು ತಕರಾರು ತೆಗೆದರಾದರೂ ಪೊಲೀಸರು ಅದನ್ನು ವಿಫಲಗೊಳಿಸಿದರು. ಆದರೆ ಮಧ್ಯಾಹ್ನವಾಗುತ್ತಲೇ ಜನ ಸೇರುತ್ತಿರುವುದನ್ನು ಕಂಡ ಅಧಿಕಾರಿಗಳು ಕಾಮಗಾರಿ ನಿಲ್ಲಿಸಿ ಸಭೆ ನಡೆಸಲು ಮುಂದಾಗಿದ್ದು ಸಭೆಯಲ್ಲಿ ಕಡಾಖಂಡಿತವಾಗಿ ಕಾಂಪೌಂಡ್‌ ಕಟ್ಟುತ್ತೇವೆ ಎನ್ನುವ ನಿಲುವು ತಳೆದ ಸುನೀಲ್‌ ನಾಯ್ಕ ಕೊನೆಗೂ ಕಂಪೌಂಡ್‌ ಕಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಹಾಯಕ ಕಮಿಷನರ್‌ ಕಚೇರಿಯಲ್ಲಿ ಸಭೆ: ಇದರಿಂದಾಗಿ ಅಧಿಕಾರಿಗಳು, ಪೊಲೀಸರು ಸಹಾಯಕ ಕಮಿಷನರ್‌ ಕಚೇರಿಯಲ್ಲಿ ಸಭೆ ಸೇರಿ ವಿಷಯವನ್ನು ಕೂಲಂಕುಷವಾಗಿ ಚರ್ಚಿಸಿದರು. ಅಧಿಕಾರಿಗಳು, ಶಾಸಕ ಸುನೀಲ್‌ ನಾಯ್ಕ ಕಾಗದ ಪತ್ರಗಳನ್ನು ನೋಡಿ ಇಲ್ಲಿ ವಿವಾದಕ್ಕೆ ಯಾವುದೇ ಆಸ್ಪದವಿಲ್ಲ. ಕೇವಲ ಬೆದರಿಸುತ್ತಾ ಇಲ್ಲಿಯ ತನಕ ಬಂದಾಗಿದ್ದು ಇನ್ನು ಮುಂದೆ ಇದೇ ರೀತಿ ಮುಂದವರಿಸಿದರೆ ಕರೆ ಸೇವೆಯ ಮೂಲಕ ನಾಗಬನದ ಕಾಂಪೌಂಡ್‌ ಕಟ್ಟುವುದಾಗಿ ಖಾರವಾಗಿಯೇ ಹೇಳಿದ್ದರಿಂದ ಅಧಿಕಾರಿಗಳು ಕೂಡಾ ಅನಿವಾರ್ಯವಾಗಿ ಮುಂದುವರಿಯಬೇಕಾಯಿತು.

ತಕರಾರಿಗೆ ಸಕಾರಣವಿಲ್ಲ: ತಂಜೀಂ ಸಂಸ್ಥೆ ಶುಕ್ರವಾರ ಸಂಜೆ ಸಹಾಯಕ ಕಮಿಷನರ್‌ ಅವರನ್ನು ಭೇಟಿಯಾಗಿ ತಕರಾತು ಎತ್ತಿತ್ತಾದರೂ ಯಾವುದೇ ಲಿಖೀತ ದೂರು ನೀಡಿರಲಿಲ್ಲ. ಅಲ್ಲದೇ ಅಲ್ಲಿ ಸಕಾರಣವಿಲ್ಲದೇ, ದಾಖಲೆಯಿಲ್ಲದೇ ಅದನ್ನು ಮಾನ್ಯ ಮಾಡುವಲ್ಲಿ ಸಾಧ್ಯವಾಗುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟವಾಗಿ ಹೇಳಿದ್ದರು. ಕೊನೆಗೆ ತಂಜೀಂ ಮುಖಂಡರೂ ಕೂಡಾ ತಮ್ಮ ಕೆಲವೊಂದು ವಿಷಯಗಳನ್ನು ಸಭೆಯ ಮುಂದಿಟ್ಟು ನಿರ್ಗಮಿಸಿದ್ದು ಒಟ್ಟಾರೆ ಗೊಂದಲ ಮುಂದುವರಿದಿತ್ತು. ಅಧಿಕಾರಿಗಳ ದಿಟ್ಟ ನಿಲುವು: ಸರಕಾರದ ಜಾಗಾದಲ್ಲಿ ನಾಗಬನ ಇದ್ದು ನೂರಾರು ವರ್ಷಗಳಿಂದ ಸರಿಯಾದ ದಾಖಲೆ ಸಹ ಇರುವಾಗ ಕಾಂಪೌಂಡ್‌ ಕಟ್ಟು ಸರಕಾರ ಹಣ ಮಂಜೂರಿ ಮಾಡಿದ್ದನ್ನು ವಿನಿಯೋಗಿಸಲು ಯಾರ ತಕರಾರು ಏಕೆ? ಎನ್ನುವ ಧೋರಣೆ ತಳೆದ ಅಧಿಕಾರಿಗಳು ಶನಿವಾರ ಬೆಳಗ್ಗೆಯಿಂದಲೇ ಬಿಗು ಪೊಲೀಸ್‌ ಬಂದೋಬಸ್ತ್ನಲ್ಲಿ ಕಾಂಪೌಂಡ್‌ ಕಾಮಗಾರಿ ಆರಂಭಿಸಿದ್ದು ಸಂಜೆಯೊಳಗೆ ಪೂರ್ಣಗೊಂಡಿತ್ತು.

Advertisement

ನಾಲ್ಕು ಅಡಿ ಗೋಡೆ ಕಟ್ಟಿ ಅದರ ಮೇಲೆ ಸ್ಟೀಲ್‌ ಮತ್ತು ಕಬ್ಬಿಣದ ಗ್ರಿಲ್ಸ್‌ ಅಳವಡಿಸಲಾಗಿದೆ. ಸೆಕ್ಷನ್‌ 144: ಪದೇಪದೇ ನಾಗಬನದ ವಿಷಯದಲ್ಲಿ ಕೆಲವರು ಅನಾವಶ್ಯಕವಾಗಿ ತಕರಾರು ತೆಗೆಯುತ್ತಿರುವುದರಿಂದ ಪೊಲೀಸರು ಶನಿವಾರ ಬೆಳಗ್ಗೆ 6 ರಿಂದ ಸಂಜೆ 6ರ ತನಕ ಸೆಕ್ಷನ್‌ 144 ಜಾರಿಗೊಳಿಸಿದ್ದು ಭಟ್ಕಳ ನಗರ ಹಾಗೂ ಜಾಲಿ ಪಪಂ ವ್ಯಾಪ್ತಿಯಲ್ಲಿ ಕಠಿನಿ ನಿಲುವು ತಾಳಲಾಗಿದೆ. ಬಿಗಿ ಪೊಲೀಸ್‌ ಬಂದೋಬಸ್ತ್: ನಾಗಬನದ ಕಾಂಪೌಂಡ್‌ ಕಟ್ಟುತ್ತಿರುವ ಸ್ಥಳದಲ್ಲಿ ಶುಕ್ರವಾರ ಬೆಳಗ್ಗೆಯಿಂದಲೇ ಬಿಗು ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಶನಿವಾರ ಬೇರೆ ಬೇರೆ ಕಡೆಯಿಂದ ಇನ್ಸಪೆಕ್ಟರ್‌, ಸಬ್‌ ಇನ್ಸಪೆಕ್ಟರ್‌ ಹಾಗೂ ಸಿವಿಲ್‌ ಪೊಲೀಸರನ್ನ ಕರೆಸಲಾಗಿತ್ತು. ಜೊತೆಗೆ ಡಿವೈಎಸ್‌ಪಿ ಕೆ.ಯು. ಬೆಳ್ಳಿಯಪ್ಪ, ಸಿಪಿಐ ದಿವಾಕರ ಎಂ. ಅವರು ಸ್ಥಳದಲ್ಲಿಯೇ ಇದ್ದು ಯಾವುದೇ ಗೊಂದಲಕ್ಕೆ ಅವಕಾಶ ಕೊಡದೇ ಕಾಮಗಾರಿ ನಡೆಸಲು ಅನುವು ಮಾಡಿಕೊಟ್ಟರು. ಸಹಾಯಕ ಕಮಿಷನರ್‌ ಮಮತಾದೇವಿ ಜಿ.ಎಸ್‌., ತಹಶೀಲ್ದಾರ್‌ ರವಿಚಂದ್ರ ಹಾಗೂ ನಿರ್ಮಿತಿ ಕೇಂದ್ರದ ಅಭಿಯಂತರು, ಮುಖ್ಯಸ್ಥರು ಕೂಡಾ ಸ್ಥಳದಲ್ಲಿದ್ದು ಕಾಮಗಾರಿ ನಡೆಯುವಂತೆ ನೋಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next