Advertisement

ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ: ಇಂದು ಪೊಲೀಸ್‌ ಅಧಿಕಾರಿಗಳ ವಿಚಾರಣೆ

09:35 AM Jun 28, 2019 | keerthan |

ಉಡುಪಿ: ಉದ್ಯಮಿ ಭಾಸ್ಕರ ಶೆಟ್ಟಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಿಗಳ ವಿಚಾರಣೆ ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ಶುಕ್ರವಾರ ಇಬ್ಬರು ಹಿರಿಯ ಪೊಲೀಸ್‌ ಅಧಿಕಾರಿಗಳ ವಿಚಾರಣೆ ನಡೆಯಲಿದೆ.

Advertisement

ಗುರುವಾರ ಸಿಐಡಿ ಇನ್‌ಸ್ಪೆಕ್ಟರ್‌ ಕಿರಣ್‌, ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಭಾಸ್ಕರ ಶೆಟ್ಟಿ ಜತೆ ಅನೈತಿಕ ಸಂಬಂಧ ಇತ್ತು ಎಂದು ಆರೋಪಿಸಲಾಗಿದ್ದ ಮಹಿಳೆ ಹಾಗೂ ಹೊಟೇಲಿನ ಭದ್ರತಾ ಸಿಬಂದಿಯ ಮುಖ್ಯ ವಿಚಾರಣೆ ಮತ್ತು ಪಾಟಿಸವಾಲು ನಡೆಯಿತು. ಅಲ್ಲದೆ ಭಾಸ್ಕರ ಶೆಟ್ಟಿ ಮತ್ತು ಅವರ ಪತ್ನಿ ರಾಜೇಶ್ವರಿ ಶೆಟ್ಟಿ ನಡುವೆ ವೈಮನಸ್ಸು ಉಂಟಾಗಿ ಆ ಬಗ್ಗೆ ಹಿಂದೆ ದೂರು ದಾಖಲಿಸಿಕೊಂಡಿದ್ದ ಪೊಲೀಸ್‌ ಅಧಿಕಾರಿಯನ್ನು ಕೂಡ ವಿಚಾರಣೆಗೆ ಒಳಪಡಿಸಲಾಯಿತು.

ಈ ಪ್ರಕರಣದ ವಿಶೇಷ ಸರಕಾರಿ ಅಭಿಯೋಜಕ ಶಾಂತಾರಾಮ ಶೆಟ್ಟಿ ಅವರು ಮುಖ್ಯ ವಿಚಾರಣೆ ನಡೆಸಿದರು. ನ್ಯಾಯವಾದಿಗಳಾದ ಅರುಣ್‌ ಬಂಗೇರ ಮತ್ತು ವಿಕ್ರಂ ಹೆಗ್ಡೆ ಪಾಟಿಸವಾಲಿಗೆ ಒಳಪಡಿಸಿದರು.

ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಲ್ಲಿರುವ ಆರೋಪಿಗಳಾದ ನವನೀತ ಶೆಟ್ಟಿ ಮತ್ತು ಜೋತಿಷಿ ನಿರಂಜನ ಭಟ್‌ನನ್ನು ವೀಡಿಯೋ ಕಾನ್ಫರೆನ್ಸ್‌ ಮೂಲಕ ಹಾಜರುಪಡಿಸಲಾಯಿತು. ಜಾಮೀನಿನಲ್ಲಿ ಬಿಡುಗಡೆಗೊಂಡಿರುವ ಭಾಸ್ಕರ ಶೆಟ್ಟಿ ಅವರ ಪತ್ನಿ ರಾಜೇಶ್ವರಿ ಶೆಟ್ಟಿ, ಚಾಲಕ ರಾಘವೇಂದ್ರ ಅವರು ವಿಚಾರಣೆಗೆ ಹಾಜರಾಗಿದ್ದರು. ಪ್ರಕರಣದ ಮುಖ್ಯ ತನಿಖಾಧಿಕಾರಿಯಾಗಿದ್ದು, ಪ್ರಸ್ತುತ ಕೊಡಗು ಎಸ್‌ಪಿ ಆಗಿರುವ ಸುಮನಾ ಹಾಗೂ ಸಿಐಡಿ ಅಧಿಕಾರಿ ಚಂದ್ರಶೇಖರ್‌ ಅವರ ವಿಚಾರಣೆ ಶುಕ್ರವಾರ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next