Advertisement

ಸೆ.27ಕ್ಕೆ “ಭರಾಟೆ’

10:02 AM Jul 04, 2019 | Lakshmi GovindaRaj |

ಶ್ರೀ ಮುರಳಿ ಅಭಿನಯದ “ಭರಾಟೆ’ ಚಿತ್ರೀಕರಣ ಮುಗಿದಿದ್ದು, ಸೋಮವಾರದಿಂದ ಡಬ್ಬಿಂಗ್‌ ಕೆಲಸ ಶುರುವಾಗಿದೆ. “ಬಹದ್ದೂರ್‌’ ಚೇತನ್‌ಕುಮಾರ್‌ ನಿರ್ದೇಶನದ “ಭರಾಟೆ’ ಆರಂಭದಿಂದಲೂ ಕುತೂಹಲ ಕೆರಳಿಸಿರುವ ಚಿತ್ರ. ಕಾರಣ, “ಮಫ್ತಿ’ ಬಳಿಕ ಶ್ರೀಮುರಳಿ ಅಭಿನಯಿಸುತ್ತಿರುವ ಚಿತ್ರ ಎಂಬುದು ಒಂದಾದರೆ, ಈಗಾಗಲೇ ಟೀಸರ್‌ ಹುಟ್ಟಿಸಿರುವ ನಿರೀಕ್ಷೆ ಇನ್ನೊಂದು ಕಡೆ.

Advertisement

ಶೀರ್ಷಿಕೆ, ಫ‌ಸ್ಟ್‌ಲುಕ್‌ನಿಂದಲೇ ಹೊಸದೊಂದು ಹವಾ ಎಬ್ಬಿಸಿದ್ದ “ಭರಾಟೆ’ ಯಾವಾಗ ತೆರೆಗೆ ಬರುತ್ತೆ ಎಂಬ ಕುತೂಹಲ ಕೂಡ ಶ್ರೀಮುರಳಿ ಅಭಿಮಾನಿಗಳಿಗಿತ್ತು. ಅದಕ್ಕೂ ಚಿತ್ರತಂಡ ಉತ್ತರ ಕೊಟ್ಟಿದೆ. ಹೌದು, “ಭರಾಟೆ’ ತನ್ನ ಬಿಡುಗಡೆಯ ದಿನಾಂಕವನ್ನೂ ಘೋಷಿಸಿಕೊಂಡಿದೆ. ಸೆಪ್ಟೆಂಬರ್‌ 27 ರಂದು ರಾಜ್ಯಾದ್ಯಂತ ಬಿಡುಗಡೆ ಮಾಡುವುದಾಗಿ ಸ್ವತಃ ನಿರ್ಮಾಪಕ ಸುಪ್ರೀತ್‌ ಅವರೇ ಹೇಳಿದ್ದಾರೆ.

ಡಬ್ಬಿಂಗ್‌ ಶುರುವಾಗಿದ್ದು, ಮುಂದಿನ ಎರಡುವರೆ ತಿಂಗಳಲ್ಲಿ ಉಳಿದ ಎಲ್ಲಾ ಕೆಲಸ ಕಾರ್ಯಗಳನ್ನು ಪೂರೈಸಿ, ಪ್ರೇಕ್ಷಕರ ಮುಂದೆ ಬರಲು ಅಣಿಯಾಗುತ್ತಿದೆ “ಭರಾಟೆ’. ಈ ಚಿತ್ರದಲ್ಲಿ ಇನ್ನೊಂದು ವಿಶೇಷವಿದೆ. ಇದೇ ಮೊದಲ ಬಾರಿಗೆ ಸಹೋದರರಾದ ಸಾಯಿಕುಮಾರ್‌, ರವಿಶಂಕರ್‌, ಅಯ್ಯಪ್ಪ ಖಳನಟರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರೊಂದಿಗೆ ಶರತ್‌ಲೋಹಿತಾಶ್ವ, ಅವಿನಾಶ್‌ ಸೇರಿದಂತೆ ಇನ್ನೂ ಅನೇಕ ನಟರು ಅಭಿನಯಿಸುತ್ತಿದ್ದಾರೆ.

ಶ್ರೀಲೀಲಾ ಅವರು ಶ್ರೀಮುರಳಿ ಅವರಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು, ಶ್ರೀಮುರಳಿ “ಭರಾಟೆ’ ಚಿತ್ರದ ನಂತರ “ಮದಗಜ’ ಚಿತ್ರ ಮಾಡುತ್ತಿರುವುದು ಗೊತ್ತೇ ಇದೆ. ಆ ಚಿತ್ರವನ್ನು ಮಹೇಶ್‌ಗೌಡ ನಿರ್ದೇಶನ ಮಾಡುತ್ತಿದ್ದು, ಉಮಾಪತಿ ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ “ಮದಗಜ’ ಚಿತ್ರಕ್ಕೆ ಸ್ಕ್ರಿಪ್ಟ್ ಪೂಜೆ ನೆರವೇರಿತ್ತು. ಇನ್ನು, ವರಮಹಾಲಕ್ಷ್ಮೀ ಹಬ್ಬಕ್ಕೆ ಚಿತ್ರ ಶುರುವಾಗಲಿದೆ ಎಂಬುದು ಈ ಹೊತ್ತಿನ ಸುದ್ದಿ.

Advertisement

Udayavani is now on Telegram. Click here to join our channel and stay updated with the latest news.

Next