Advertisement

ಇಂದು ಭಾರತ್‌ ಬಂದ್‌ಗೆ ಕರೆ: ಪ್ರತಿಭಟನ ಸಭೆಗೆ ಸೀಮಿತ: ಬಸ್‌ ಸಂಚಾರ ಯಥಾಸ್ಥಿತಿ

02:13 AM Sep 27, 2021 | Team Udayavani |

ಮಂಗಳೂರು/ಉಡುಪಿ: ಕೇಂದ್ರ ಸರಕಾರ ಜಾರಿಗೆ ತಂದಿರುವ ಕೃಷಿ ಮಸೂದೆ ತಿದ್ದುಪಡಿ ಹಿಂಪಡೆಯಲು ಆಗ್ರಹಿಸಿ ದೇಶಾದ್ಯಂತ ರೈತ ಸಂಘಟನೆಗಳು ಸೋಮವಾರ ಭಾರತ್‌ ಬಂದ್‌ಗೆ ಕರೆ ನೀಡಿದ್ದು, ಈ ಸಂದರ್ಭ ಕರಾವಳಿಯ ಜಿಲ್ಲೆಗಳಲ್ಲಿ ಬಂದ್‌ ಇರುವುದಿಲ್ಲವಾದರೂ ಕೆಲವು ಸಂಘಟನೆಗಳು ಪ್ರತಿಭಟನೆಯನ್ನು ಹಮ್ಮಿಕೊಂಡಿವೆ.

Advertisement

ಸಾಂಕೇತಿಕ ಪ್ರತಿಭಟನೆ
ಭಾರತ್‌ ಬಂದ್‌ ಬೆಂಬಲಿಸಿ ರೈತ, ಕಾರ್ಮಿಕ, ಜನಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಬೃಹತ್‌ ಪ್ರತಿಭಟನಾ ಸಭೆ ಮತ್ತು ರಾಷ್ಟ್ರೀಯ ಹೆದ್ದಾರಿ ಬಂದ್‌ ಹೋರಾಟ ಸೋಮವಾರ ಬೆಳಗ್ಗೆ ಬಂಟ್ವಾಳ ಬಿ.ಸಿ. ರೋಡ್‌ನ‌ ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಬಳಿ ನಡೆಯಲಿದೆ.

ಸಂಯುಕ್ತ ಕಿಸಾನ್‌ ಮೋರ್ಚಾದ ಬೇಡಿಕೆಗಳ ಜತೆಗೆ ಉಡುಪಿ-ಕಾಸರಗೋಡು ವಿದ್ಯುತ್‌ ಮಾರ್ಗ, ಡಿಸಿ ಮನ್ನಾ ಜಮೀನು, ವಿದ್ಯುತ್‌ ಸ್ಮಾರ್ಟ್‌ ಮೀಟರ್‌ ಅಳವಡಿಕೆ, ಮಂಗಳೂರು- ಕಾರ್ಕಳ ಹೆದ್ದಾರಿ ಭೂಸ್ವಾಧೀನದಲ್ಲಿ ಕೃಷಿ ಭೂಮಿಗೆ ನಿಕೃಷ್ಟ ಪರಿಹಾರ ಇತ್ಯಾದಿ ಸ್ಥಳೀಯ ಸಮಸ್ಯೆಗಳ ಬಗ್ಗೆಯೂ ಈ ಪ್ರತಿಭಟನೆಯಲ್ಲಿ ಧ್ವನಿ ಎತ್ತಲಾಗುವುದು ಎಂದು ರೈತ ಸಂಘದ ಪ್ರಧಾನ ಕಾರ್ಯದರ್ಶಿ ರವಿಕಿರಣ ಪುಣಚ ತಿಳಿಸಿದ್ದಾರೆ.

ಬಂದ್‌ಗೆ ಎಸ್‌ಡಿಪಿಐ ರಾಷ್ಟ್ರೀಯ ಸಮಿತಿಯು ಬೆಂಬಲ ಸೂಚಿಸಿದ್ದು, ಅದರ ಭಾಗವಾಗಿ ದ.ಕ. ಜಿಲ್ಲೆಯ ಪುತ್ತೂರು, ಬಿ.ಸಿ. ರೋಡ್‌ ಮತ್ತು ಮಂಗಳೂರಿನಲ್ಲಿ ಪ್ರತಿಭಟನೆ, ಹಕ್ಕೊತ್ತಾಯ ರ್ಯಾಲಿ, ಬೀದಿ ನಾಟಕಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಅವರು ತಿಳಿಸಿದ್ದಾರೆ.

ಕ್ಲಾಕ್‌ ಟವರ್‌ ಸಮೀಪ ಪ್ರತಿಭಟನಾ ಕಾರ್ಯಕ್ರಮ ನಡೆಯಲಿದೆ ಎಂದು ಕಮ್ಯೂನಿಸ್ಟ್‌ ಮುಖಂಡ ಬಿ.ಎಂ. ಭಟ್‌ ತಿಳಿಸಿದರೆ ಬಂದರು ಶ್ರಮಿಕರ ಸಂಘದ ನೇತೃತ್ವದಲ್ಲಿ ಪ್ರತಿಭಟನಾ ಸಭೆ ನಡೆಯಲಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಕೆ. ಇಮಿ¤ಯಾಜ್‌ ಮಾಹಿತಿ ನೀಡಿದ್ದಾರೆ.

Advertisement

ಇದನ್ನೂ ಓದಿ:65 ಗಂಟೆಗಳಲ್ಲಿ 20 ಸಭೆ ನಡೆಸಿದ ಮೋದಿ : ವಿಮಾನ ಪ್ರಯಾಣದ ವೇಳೆಯೂ 4 ಮೀಟಿಂಗ್‌

ಬಸ್‌ ಸಂಚಾರ ಎಂದಿನಂತೆ
ಯಾವ ಸಂಘಟನೆಯೂ ಜಿಲೆಯಲ್ಲಿ ಬಂದ್‌ ಆಚರಣೆಗೆ ಕರೆ ನೀಡಿಲ್ಲ. ಸರಕಾರಿ ಮತ್ತು ಖಾಸಗಿ ಬಸ್‌ಗಳು, ರಿಕ್ಷಾ, ಟ್ಯಾಕ್ಸಿ ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿಲ್ಲ. ಹಾಗಾಗಿ ಸಾರ್ವಜನಿಕ ಸಾರಿಗೆ ವಾಹನಗಳು ಎಂದಿನಂತೆ ಕಾರ್ಯಾಚರಿಸಲಿವೆ. ಅಂಗಡಿ ಮುಂಗಟ್ಟುಗಳು, ಹೊಟೇಲ್‌ಗ‌ಳು, ಸರಕಾರಿ, ಖಾಸಗಿ ಕಚೇರಿಗಳು ಕಾರ್ಯಾಚರಿಸಲಿವೆ.

“ರೈತರು ದೇಶದ ಬೆನ್ನೆಲುಬು. ಅವರಿಗೆ ನಮ್ಮ ನೈತಿಕ ಬೆಂಬಲ ಸದಾ ಇದೆ. ಆದರೆ ಸಾರ್ವಜನಿಕರ ಹಿತದೃಷ್ಟಿಯಿಂದ ಬಸ್‌ ಸಂಚಾರ ನಿಲ್ಲಿಸುವುದಿಲ್ಲ ಎಂದು ದ.ಕ. ಜಿಲ್ಲಾ ಬಸ್‌ ಮಾಲಕರ ಸಂಘದ ಅಧ್ಯಕ್ಷ ಜಯಶೀಲ ಅಡ್ಯಂತಾಯ ಪ್ರತಿಕ್ರಿಯಿಸಿದ್ದಾರೆ.

ಉಡುಪಿ: ಕೆಲ ಸಂಘಟನೆಗಳಿಂದ ಬೆಂಬಲ
ಉಡುಪಿ: ನೂತನ ಕೃಷಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ಕೆಲ ರೈತ ಸಂಘಟನೆಗಳು ಸೆ. 27ರಂದು ಭಾರತ್‌ ಬಂದ್‌ಗೆ ಕರೆ ನೀಡಿದ್ದು ಜಿಲ್ಲೆಯಲ್ಲಿ ಕೆಲವು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿ ಪ್ರತಿಭಟನ ಜಾಥ ಹಮ್ಮಿಕೊಂಡಿವೆ.

ರಾಜ್ಯ ಬಸ್‌ ಮಾಲಕರ ಸಂಘಗಳ ಒಕ್ಕೂಟದಿಂದ ಬಂದ್‌ಗೆ ಬೆಂಬಲವಿಲ್ಲ. ಬಸ್‌ಗಳು ಎಂದಿನಂತೆ ಸಂಚರಿಸಲಿವೆ ಎಂದು ರಾಜ್ಯ ಬಸ್‌ ಮಾಲಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್‌ ತಿಳಿಸಿದ್ದಾರೆ. ಸಿಐಟಿಯು ಉಡುಪಿ ಜಿಲ್ಲಾ ಸಮಿತಿ ಸಮಾನ ಮನಸ್ಕ ಜನಪರ ಸಂಘಟನೆಗಳೊಂದಿಗೆ ಕೂಡಿಕೊಂಡು ಉಡುಪಿ, ಕುಂದಾಪುರ, ಬೈಂದೂರು, ಕಾರ್ಕಳದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಉಡುಪಿಯಲ್ಲಿ ಜೋಡುಕಟ್ಟೆಯಿಂದ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಯಲಿದೆ ಎಂದು ಸಿಐಟಿಯು ಜಿಲ್ಲಾ ಅಧ್ಯಕ್ಷ ಕೆ. ಶಂಕರ್‌ ತಿಳಿಸಿದ್ದಾರೆ. ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಉಡುಪಿ, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ವಾದ) ಉಡುಪಿ ಜಿಲ್ಲಾ ಸಮಿತಿ, ಸಾಲಿಡಾರಿಟಿ ಯೂತ್‌ ಮೂಮೆಂಟ್‌ ಉಡುಪಿ ಜಿಲ್ಲಾ ಘಟಕ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದೆ. ಕೆಎಸ್ಸಾರ್ಟಿಸಿ ಬಸ್‌ಗಳು ಎಂದಿನಂತೆ ಸಂಚಾರ ಮಾಡಲಿವೆ ಎಂದು ಡಿಪೋ ಮ್ಯಾನೇಜರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next