Advertisement

ನೀರಿಲ್ಲದೆ ಭಣಗುಟ್ಟುತ್ತಿವೆ ಜೋಡಿ ಕೆರೆ

05:17 PM Nov 11, 2019 | Naveen |

„ಎಚ್‌.ಬಿ. ನಿರಂಜನ ಮೂರ್ತಿ
ಭರಮಸಾಗರ:
ಜಿಲ್ಲೆಯಲ್ಲಿ ದಾಖಲೆ ಮಳೆ ಸುರಿದರೆ, ಐತಿಹಾಸಿಕ ದೊಡ್ಡಕೆರೆ ಮತ್ತು ಚಿಕ್ಕಕೆರೆ ಎಂದೇ ಖ್ಯಾತಿ ಪಡೆದ ಜೋಡಿ ಕೆರೆಗಳಿಗೆ ಇದುವರೆಗೆ ಮಳೆ ನೀರು ಹರಿದು ಬಂದಿಲ್ಲ. ಇದರಿಂದ ಎರಡು ಕೆರೆಗಳು ಭಣಗುಟ್ಟುತ್ತಿವೆ. 2011ರಲ್ಲಿ ಸಮೃದ್ಧ ಮಳೆಯಾಗಿ ಕೆರೆ ತುಂಬಿ ಕೋಡಿ ಬಿದ್ದಿತ್ತು. ಬಳಿಕ ಕೆರೆಯ ಕೋಡಿ ಎತ್ತರವನ್ನು ಒಂದುವರೆ ಅಡಿ ಹೆಚ್ಚಿಸಲಾಯಿತು. ಆ ಬಳಿಕ ಎಂಟು ವರ್ಷಗಳು ಕಳೆದರೂ ಕೆರೆಗೆ ನೀರು ಬಂದಿಲ್ಲ. ಈ ವರ್ಷದ ದಾಖಲೆ ಮಳೆಯಾದರೂ ಕೆರೆಗೆ ನೀರು ಬಾರದೆ ಇರುವುದು ಸ್ಥಳೀಯರಲ್ಲಿ ನಿರಾಸೆ ಮೂಡಿಸಿದೆ.

Advertisement

ಹಲವು ಐತಿಹ್ಯಗಳ ಗಣಿ ಆಗಿರುವ ಇಲ್ಲಿನ ದೊಡ್ಡಕೆರೆ ಮತ್ತು ಚಿಕ್ಕ ಕೆರೆಗಳು ಪ್ರಾಕೃತಿಕ ಸೊಬಗಿನಿಂದ ಕಣ್ಮನ ಸೆಳೆಯಬೇಕಾಗಿತ್ತು. ಆದರೆ ಬರೀ ಜಾಲಿ ಗಿಡಗಳ ಪ್ರದೇಶವಾಗಿ ಮಾರ್ಪಟ್ಟಿದೆ. ಕೆರೆ ಪುನರ್‌ ನಿರ್ಮಾಣ ಮತ್ತು ಸಂರಕ್ಷಣೆ ಯೋಜನೆಯಡಿ ಕೆರೆ ಸುತ್ತ ಟ್ರಂಚ್‌ ನಿರ್ಮಾಣ ಮತ್ತು ಸುಮಾರು 10 ಅಡಿ ಎತ್ತರದವರೆಗೆ ಸುತ್ತ ಕಲ್ಲಿನ ತಡೆಗೋಡೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಕಳೆದ 8-9 ವರ್ಷಗಳಲ್ಲಿ ಉತ್ತಮ ಮಳೆಯಿಲ್ಲದೆ ಕೆರೆಗಳು ಖಾಲಿಯಾಗಿ ಅಂತರ್ಜಲ ಪಾತಾಳ ತಲುಪಿದೆ. ಇದರಿಂದಾಗಿ ಅಡಿಕೆ, ಬಾಳೆ, ತೆಂಗು ತೋಟಗಳ ಬೆಳೆಗಾರರು ಟ್ಯಾಂಕರ್‌ ನೀರು ಪೂರೈಸಿ ತೋಟಗಳನ್ನು ಉಳಿಸುವ ಭಗೀರಥ ಸಾಹಸ ಮಾಡಿ ನಷ್ಟ ಎದುರಿಸಿದ್ದರು.

ಟ್ಯಾಂಕರ್‌ ನೀರು ಒದಗಿಸಲು ಆಗದೆ ತೋಟಗಳನ್ನು ಬರದ ಛಾಯೆಯಿಂದ ರಕ್ಷಿಸಿಕೊಳ್ಳಲಾಗದೆ ಬೆಳೆಗಾರು ಅಸಹಾಯಕರಾಗಿದ್ದರು. ಇತ್ತ ಕುಡಿಯುವ ನೀರಿಗೂ ಹಾಹಾಕಾರ ಎದುರಾಗಿ ಗ್ರಾಪಂಗಳು ಟ್ಯಾಂಕರ್‌ ಗಳ ಮೂಲಕ ನೀರು ಪೂರೈಕೆ ಮಾಡಿ ಜನ ಮತ್ತು ಜಾನುವಾರುಗಳನ್ನು ಕಾಪಾಡಿದ್ದವು. ಈ ಬಾರಿ ಸುರಿದ ಮಳೆ ಎರಡು ಕೆರೆಗಳನ್ನು ತುಂಬಿಸದೇ ಇರುವುದು ಈ ಭಾಗದ ಜನರನ್ನು ಆತಂಕಕ್ಕೆ ತಳ್ಳಿದೆ.

ಭರಮಸಾಗರ ಹೋಬಳಿಯಲ್ಲಿ ಜೂನ್‌-67 ಮಿಮೀ, ಜುಲೈ-74, ಆಗಸ್ಟ್‌-133, ಸೆಪ್ಟಂಬರ್‌-166, ಅಕ್ಟೋಬರ್‌-149 ಮಿಮೀ ಮಳೆಯಾಗಿದೆ. ಒಟ್ಟಾರೆ ಐದು ತಿಂಗಳಲ್ಲಿ ಆಗಬೇಕಾದ ವಾಡಿಕೆ ಮಳೆ 429 ಮಿಲಿ ಮೀಟರ್‌. ಇದುವರೆಗೆ 585 ಮಿಮೀ ಮಳೆ ಸುರಿದಿದೆ.

ಗುಡಿನಾಯಕನಹಳ್ಳಿ ಎಂದು ಕರೆಯುತ್ತಿದ್ದ ಈಗಿನ ಗ್ರಾಮದ ಬಳಿ ಕ್ರಿಶ 1695 ರಲ್ಲಿ ಚಿತ್ರದುರ್ಗದ ಪಾಳೇಗಾರ ಬಿಚ್ಚುಗತ್ತಿ ಭರಮಣ್ಣ ನಾಯಕ ಎರಡು ಜೋಡಿ ಕೆರೆಗಳನ್ನು ಕಟ್ಟಿಸಿದ ಕಾರಣ ಗ್ರಾಮಕ್ಕೆ “ಭರಮಸಾಗರ’ ಎಂಬ ಹೆಸರು ಬಂದಿದೆ. ದೊಡ್ಡಕೆರೆ ಅಂಗಳದಲ್ಲಿ ಬ್ರಿಟಿಷರ ಸೇನಾ ತುಕಡಿಗಳು ಈ ಮಾರ್ಗದಲ್ಲಿ ಸಾಗುವ ವೇಳೆ ವಿಶ್ರಾಂತಿ ಪಡೆದು ಸಾಗುತ್ತಿದ್ದರಿಂದ ಕೆರೆಯಂಗಳದ ಮೈದಾನವನ್ನು “ಲಷ್ಕರ್‌ ಮೈದಾನ’ ಎಂದು ಕರೆಯುತ್ತಿದ್ದರು.

Advertisement

230 ಎಕರೆ ವಿಸ್ತಾರದ ದೊಡ್ಡಕೆರೆ 800 ಎಕರೆ ಕೃಷಿ ಭೂಮಿಗೆ ನೀರುಣಿಸುತ್ತಿತ್ತು ಎಂದು ದಾಖಲೆಗಳು ಹೇಳುತ್ತವೆ. ಒಟ್ಟಾರೆ ಜಿಲ್ಲೆಯ ಹೊಳಲ್ಕೆರೆ, ಹೊಸದುರ್ಗ ತಾಲೂಕುಗಳಲ್ಲಿ ಅಬ್ಬರಿಸಿದ ಮಳೆಗೆ ಕೆರೆ ಕಟ್ಟೆಗಳು ತುಂಬಿ ಕೋಡಿ ಬಿದ್ದಿವೆ. ಅದೇ ಮಾದರಿಯಲ್ಲಿ ಚಿತ್ರದುರ್ಗ ತಾಲೂಕಿನ ಭರಮಸಾಗರದ ಕೆರೆ-ಕಟ್ಟೆಗಳು ತುಂಬುತ್ತವೆ ಎಂಬ ಜನರ ನಿರೀಕ್ಷೆ ಹುಸಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next