Advertisement

ಡಾ|ಬಸವಲಿಂಗ ಶ್ರೀ ದೀನರ ದಯಾಸಿಂಧು

01:05 PM Aug 25, 2019 | Naveen |

ಜಯರಾಜ ದಾಬಶೆಟ್ಟಿ
ಭಾಲ್ಕಿ:
ಹನ್ನೆರಡನೇ ಶತಮಾನದ ಬಸವಣ್ಣನವರ ದಯೆವೇ ಧರ್ಮದ ಮೂಲ ಎನ್ನುವ ತತ್ವವನ್ನು ಅನುಷ್ಠಾನ ಗೊಳಿಸುತ್ತಿರುವ ಲಿಂ. ಡಾ| ಚನ್ನಬಸವ ಪಟ್ಟದ್ದೇವರ ಉತ್ತರಾಧಿಕಾರಿಗಳಾದ ಡಾ| ಬಸವಲಿಂಗ ಪಟ್ಟದೇವರು ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ದೀನರ ದಯಾಸಿಂಧುಗಳಾಗಿ ಅನಾಥ ಮಕ್ಕಳ ಬಾಳ ಸಿಂಧುವಾಗಿ ಬೆಳಕು ಹರಿಸಿದ್ದಾರೆ.

Advertisement

ಇವರು ಸಾಮಾಜಿಕ ಸಾಮರಸ್ಯ, ಧರ್ಮ ಸಹಿಷ್ಣುತೆಗೆ ಹೆಸರಾದವರು. ದಯೆ ಜೀವನಪ್ರೀತಿ, ಮೈಗೂಡಿಸಿಕೊಂಡು ಜನರ ನೋವನ್ನು ತಮ್ಮ ನೋವೆಂದು ಭಾವಿಸುವ ಮಾತೃಹೃದಯಿಗಳು. ಇವರ ಜನ್ಮದಿನವನ್ನು ಪ್ರತಿವರ್ಷ ಅನಾಥ ಮಕ್ಕಳ ಜನ್ಮದಿನವಾಗಿ ಆಚರಿಸಿಕೊಳ್ಳುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ.

ಶ್ರೀಗಳ ಸಂಕ್ಷಿಪ್ತ ಪರಿಚಯ: ಕೇವಲ ಉತ್ತಮ ವಿದ್ಯಾಭ್ಯಾಸಕ್ಕೆಂದೇ ಭಾಲ್ಕಿಯ ಹಿರೇಮಠಕ್ಕೆ ಆಗಮಿಸಿ ಸಾತ್ವಿಕ ಸಜ್ಜನಿಕೆ, ಸರಳತೆ ಮೈಗೂಡಿಸಿಕೊಂಡ ಕಾರಣಕ್ಕೆ 1985ರಲ್ಲಿ ಅದೇ ಮಠದ ಪೀಠಾಧಿಪತಿಯಾದವರು. ಇವರು ಮೂಲತಃ ಮೃದು ಸ್ವಭಾವದ ತಾಯಿ ಪ್ರೀತಿಯುಳ್ಳವರಾಗಿದ್ದಾರೆ. ಜನರು ಕಷ್ಟದಲ್ಲಿದ್ದಾಗ ಇವರು ಕಂಬನಿ ಮಿಡಿಯುತ್ತಾರೆ. ಮಠಾಧಿಪತಿಗಳಾದರೂ ಅಹಂ ಸುಳಿಯದ ದಾಸೋಹ ಜೀವಿಗಳು. ಸ್ವಾಮಿಗಳಾದರೂ ಪೂಜೆಯನ್ನೇ ಹೇಳದೇ ಕಾಯಕ ತತ್ವವನ್ನು ಹೇಳುವವರು. ಜನರೇ ಮಠಕ್ಕೆ ಬರಬೇಕೆಂದು ಅಪೇಕ್ಷೆ ಮಾಡದೇ ಜನತೆಯತ್ತ ಮಠ ಒಯ್ದವರು.

ಹಿರೇಮಠ ಎಂದರೆ ಅದು ಜನಸತ್ತೆಯ ಭಕ್ತರ ಮಠ. ಹಾಗಾಗಿ ಶ್ರೀಗಳಿಗೆ ಧರ್ಮ ಸಮಾಜ ಎರಡು ಕಣ್ಣು ಒಂದೇ ದೃಷ್ಟಿ. ಅನೇಕ ಮಠಾಧಿಧೀಶರಿಗೆ ಪೀಠದಿಂದ ಗೌರವ ಬರುತ್ತದೆ. ಆದರೆ ಡಾ|ಬಸವಲಿಂಗ ಪಟ್ಟದ್ದೇವರಿಂದ ಪೀಠಕ್ಕೆ ಗೌರವ ಸಂದಿದ್ದು ಅವರ ರಚನಾತ್ಮಕ ಕಾರ್ಯಳಿಂದಲೆ.

ಶಿಕ್ಷಣವೇ ಶಕ್ತಿ ಎಂದು ತಿಳಿದು, ಶಿಕ್ಷಣ ಮನುಷ್ಯರ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುತ್ತದೆ ಎಂಬ ಆಶಯದಿಂದ ಪೂಜ್ಯರು ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್‌ 1992ರಲ್ಲಿ ಆರಂಭಿಸಿ ಆ ಮೂಲಕ ಸುಮಾರು 50 ಶಾಲಾ ಕಾಲೇಜು (ಅಂಗಸಂಸ್ಥೆ) ಗಳಿಂದ ಗಡಿಭಾಗದಲ್ಲಿ ಕನ್ನಡ ಮಾಧ್ಯಮ ಶಾಲೆ ತೆರೆದು ಹಳ್ಳಿಯ ಜನತೆಗೆ ಗುಣಾತ್ಮಕ ಶಿಕ್ಷಣ ನೀಡುತ್ತಿದ್ದಾರೆ. ಇಂದು ಸುಮಾರು 15 ಸಾವಿರ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಒಂದು ಸಾವಿರ ಶಿಕ್ಷಕರು ಕಾರ್ಯ ನಿರತರಾಗಿದ್ದಾರೆ. ಸಂಸ್ಕಾರ ಸಹಿತ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ.

Advertisement

ಸುದೈವಿ ಶಿಶುಗಳ ಜನ್ಮದಿನಾಚರಣೆ: ಸಮಾಜೋ- ಆರ್ಥಿಕ ಸಮಸ್ಯೆಗಳಿಂದ, ಅವರವರ ಭಿನ್ನ-ಭಿನ್ನ ವೈಯಕ್ತಿಕ ಕಾರಣಗಳಿಂದ ಹೆರಿಗೆಯಾದ ಕೂಡಲೇ ರಸ್ತೆಯಲ್ಲಿ, ತಿಪ್ಪೆಯಲ್ಲಿ ಬೇಲಿಯಲ್ಲಿ, ಚರಂಡಿಯಲ್ಲಿ ಬೀಸಾಡಿದ ಮಕ್ಕಳನ್ನು ಎತ್ತಿಕೊಂಡು ಬಂದು ಸಾಕುತ್ತಿರುವುದು ಪೂಜ್ಯರ ಅಂತಃಕರಣ, ಮಾನವೀಯ ಪ್ರೇಮಕ್ಕೆ ಸಾಕ್ಷಿಯಾಗಿದೆ. ಭೂಮಿಯ ಮೇಲೆ ಯಾವೊಂದು ಮಗುವೂ ಅನಾಥವಾಗಿರಬಾರದು ಎಂಬ ಆಶಯದಿಂದ ಈ ವರೆಗೆ ಸುಮಾರು ನೂರಾರು ಅನಾಥ ಶಿಶುಗಳನ್ನು ತಂದಿದ್ದು ಅವರಿಗೆ ಯಾವುದೇ ಕೊರತೆ ಇಲ್ಲದಂತೆ ನಿಜವಾಗಿಯೂ ಬಸವಮಕ್ಕಳು ಎಂದು ಭಾವಿಸಿ ಪೂಜ್ಯರ ಅಂತಃಕರಣದಲ್ಲಿ ಬೆಳೆಸುತ್ತಿದ್ದಾರೆ. ಅನಾಥ ಮಕ್ಕಳಲ್ಲಿ ಅನಾಥ ಭಾವ ಬರದಂತೆ, ಅವರಿಗೆ ಬಸವ ಸುದೈವಿ ಶಿಶುಗಳೆಂದು ಕರೆದು ತಮ್ಮ ಜನ್ಮದಿನವನ್ನು ಸುದೈವಿ ಶಿಶುಗಳ ಜನ್ಮದಿನವಾಗಿ ಆಚರಿಸಿಕೊಳ್ಳುತ್ತಿರುವುದು ಆದರ್ಶ, ಅನುಕರಣೀಯವಾಗಿದೆ.

2010ರ ಏಪ್ರಿಲ್ 15 ರಂದು ಸ್ಥಾಪನೆಯಾದ ದತ್ತು ಸಂಸ್ಥೆಯಲ್ಲಿ ಇಂದು 33 ಮಕ್ಕಳನ್ನು ಪೋಷಿಸಲಾಗುತ್ತಿದೆ. ಶರಣಾಂಜಲಿ, ಬಸವಕಿರಣ, ಬಸವಚೇತನ, ಅರ್ಚನಾ, ಬಸವಾನಂದ, ಅನುಶ್ರೀ, ಉಷಾ, ವೈಶಾಲಿ, ಅರ್ಜುನ, ಸೋನಿಯ, ಬಸವದೃಷ್ಟಿ, ಜೈ, ಸಂಯುಕ್ತ, ಅಭಿನಂದನ, ಪ್ರತೀಕ್ಷಾ, ಬಸವಶೃತಿ, ರಾಣಿ, ವೇದಾಂತ, ಶುಭಂ, ಬಸವಸಾರಿಕಾ, ಬಸವತೀರ್ಥ, ಭವ್ಯ, ಬಸವಶ್ರೇಯಾ, ದಿವ್ಯಾಂಜಲಿ, ಬಸವಾಂಜಲಿ, ಬಸವಜಯಂತಿ, ನಾಗಮ್ಮ, ಮಹಾನಂದ, ಬಸವಣ್ಣ, ಚೆನ್ನಬಸವಣ್ಣ, ಬಸವಪ್ರಣವ, ನಂದಿನಿ ಎನ್ನುವ ಹೆಸರಿನ 12 ಗಂಡು ಮತ್ತು 21 ಹೆಣ್ಣು ಶಿಶುಗಳಿವೆ. ಇಲ್ಲಿಯವರೆಗೆ 63 ಮಕ್ಕಳನ್ನು ದತ್ತು ನೀಡಲಾಗಿದೆ. ವಿದೇಶಗಳಾದ ಕುವೈತ್‌, ಕೆನಿಯಾ ನೈರೋಬಿನ್‌ ಮತ್ತು ನಮ್ಮ ರಾಷ್ಟ್ರದ ಕೇರಳ, ಚೆನೈ, ಮಧುರೈ, ತಮಿಳುನಾಡು, ಪಾಂಡಿಚೇರಿ, ಆಂಧ್ರಪ್ರದೇಶ, ಮಧ್ಯಪ್ರದೇಶ ರಾಜ್ಯಗಳಿಗೆ ದತ್ತು ನೀಡಲಾಗಿದೆ. ಇಂತಹ ಮಹನೀಯರು ಆಗಷ್ಟ 25ರಂದು ರವಿವಾರ ಸುದೈವಿ ಮಕ್ಕಳ ದಿನ ಆಚರಿಸುತ್ತಿರುವುದು ಪಟ್ಟಣದ ಜನರ ಭಾಗ್ಯವಾಗಿದೆ.

500 ಮಕ್ಕಳಿಗೆ ಅನ್ನ-ಅಕ್ಷರ ದಾಸೋಹ
ಡಾ| ಬಸವಲಿಂಗ ಪಟ್ಟದ್ದೇವರು ದೀನ ದಲಿತರ, ಬಡವರ ನಿರ್ಗತಿಕರ ಆಶಾಕಿರಣವಾಗಿದ್ದಾರೆ. ಹೆತ್ತವರಿಗೆ ಬೇಡವಾದ ತಿಪ್ಪೆಯ ಪಾಲಾದ ಹತ್ತಾರು ಅನಾಥ ಮಕ್ಕಳನ್ನು ಸಾಕುತ್ತಿದ್ದಾರೆ. ಹಾನಗಲ್ಲ ಕುಮಾರೇಶ್ವರ ಉಚಿತ ಪ್ರಸಾದ ನಿಲಯದಲ್ಲಿ ಯಾವುದೇ ಜಾತಿಭೇದ ಮಾಡದೇ ಸುಮಾರು 500 ಮಕ್ಕಳಿಗೆ ಅನ್ನ, ಅಕ್ಷರ ದಾಸೋಹ ನೀಡುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಪ್ರತಿಭಾವಂತ ಬಡಮಕ್ಕಳಿಗಾಗಿ ಬೀದರದಲ್ಲಿ ಡಾ| ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯ ತೆರೆದಿದ್ದಾರೆ. ಅನೇಕ ಅಂಗವಿಕಲರಿಗೆ, ವಿಧವೆಯರಿಗೆ ಆಶ್ರಯ ನೀಡಿದ್ದಾರೆ. ಜೊತೆಗೆ ಸಾಮಾಜಿಕ ಬದುಕಲ್ಲಿ ಮಂಗಳ ಕಾರ್ಯಗಳಿಂದ ವಂಚಿತರಾದ ವಿಧವಾ ಸ್ತ್ರೀಯರಿಗೆ ಉಡಿ ತುಂಬಿ ಗೌರವಿಸಿದ್ದಾರೆ. ಶ್ರೀಮಠದಲ್ಲಿ ದಲಿತರಿಗೆ ಪ್ರವೇಶ ನೀಡಿದ್ದಾರೆ. ಭಾಲ್ಕಿ ಹೊರವಲಯದ ಡೊಂಬರಾಟದವರ ಓಣಿ ನಿವಾಸಿಗಳ ಮತ್ತು ಅವರ ಮಕ್ಕಳ ಸರ್ವಾಂಗೀಣ ವಿಕಾಸಕ್ಕಾಗಿ ಪ್ರತಿವರ್ಷ ಅಲ್ಲಿಗೆ ಭೇಟಿ ನೀಡುತ್ತಾರೆ. ಅಲ್ಲಿಯ ಮಕ್ಕಳಿಗೆ ಉಚಿತ ಶಿಕ್ಷಣ, ವಸತಿ, ದಾಸೋಹ ಕಲ್ಪಿಸುತ್ತಿದ್ದಾರೆ. ವಿಶೇಷವಾಗಿ ನಾಗಪಂಚಮಿ ದಿನದಂದು ನಿರ್ಗತಿಕರಿಗೆ ಹೊಸ ಬಟ್ಟೆಗಳನ್ನು ವಿತರಿಸಿ ಹಾಲು ಹಣ್ಣು ನೀಡುತ್ತಾರೆ. ಹೀಗೆ ಹಲವಾರು ಜೀವಕಾರುಣ್ಯದ ಕೆಲಸಗಳಿಂದ ಅವರು ಮಾನವೀಯತೆಯ ಆಗರವಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next