Advertisement

ಭಗೀರಥರ ತಪಸ್ಸಿನಿಂದ ಜೀವರಾಶಿಗೆ ನೀರು

04:17 PM May 09, 2022 | Team Udayavani |

ಕೊಪ್ಪಳ: ಭಗೀರಥರ ತಪಸ್ಸಿನ ಫಲವಾಗಿ ಭೂಲೋಕಕ್ಕೆ ನೀರು ದೊರೆತಿದೆ ಎಂದು ಗಿಣಿಗೇರಿಯ ಉಪನ್ಯಾಸಕ ಮಲ್ಲಪ್ಪ ತಿರುಪತೆಪ್ಪ ಹೊಸೂರು ಹೇಳಿದರು.

Advertisement

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ರವಿವಾರ ನಗರದ ಸಾಹಿತ್ಯ ಭವನದಲ್ಲಿ ನಡೆದ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.

ಸೋಲಿನಿಂದ ಧೃತಿಗೇಡದೆ, ಸತತ ಪ್ರಯತ್ನ ಮಾಡಬೇಕು. ಪ್ರಯತ್ನಕ್ಕೆ ಇನ್ನೊಂದು ಹೆಸರೇ ಭಗೀರಥರು. ಅವರ ಸತತ ಯತ್ನದಿಂದ, ತಪಸ್ಸಿನಿಂದ, ಭೂಲೋಕದ ಜೀವರಾಶಿಗೆ ನೀರು ದೊರೆಯುವಂತಾಯಿತು. ಭಗೀರಥರ ವ್ಯಕ್ತಿತ್ವ ಹಿಮಾಲಯ ಪರ್ವತದಷ್ಟು ಎತ್ತರ. ಸಾಕ್ಷಾತ್ ದೈವಗಂಗೆಯನ್ನೇ ಶಿವನ ಜಟದಿಂದ ಭೂಮಿಗೆ ತರುವ ಮೂಲಕ ಭಗೀರಥ ಮಹರ್ಷಿಗಳು ಈ ಜಗತ್ತಿನಲ್ಲಿ ಮನುಷ್ಯನಿಂದ ಸಾಧ್ಯವಾಗದ ಕೆಲಸ ಯಾವುದೂ ಇಲ್ಲ ಎಂಬುದನ್ನು ತೋರಿಸಿದ್ದಾರೆ.

ಭಗೀರಥರು ದೇವಲೋಕದಿಂದ ಗಂಗೆಯನ್ನು ಭೂಮಿಗೆ ತರಿಸಿಕೊಂಡಿದ್ದು ಜಗತ್ತಿನಲ್ಲಿಯೇ ಮನುಷ್ಯನ ಬಹುದೊಡ್ಡ ಪ್ರಯತ್ನವಾಗಿದೆ. ರಾಜ್ಯದಲ್ಲಿ ಸಾಮಾನ್ಯವಾಗಿ ಉಪ್ಪಾರರು ಎಂದು ಕರೆಯಲ್ಪಡುವ ಈ ಸಮುದಾಯ ಪ್ರಾಚೀನ ಕಸುಬು ಉಪ್ಪು ತಯಾರಿಸುವುದಾಗಿತ್ತು. ಆದ್ದರಿಂದ ಉಪ್ಪಾರರು ಎಂದು ಕರೆಯಲಾಗುತ್ತದೆ. ಉಪ್ಪಾರ ಸಮಾಜ ಇಂದು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಶಿಕ್ಷಣ ಅತ್ಯವಶ್ಯಕವಾಗಿದ್ದು, ಸಮಾಜದ ಜನತೆ ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿ ಎಂದರು.

ಕೊಪ್ಪಳ ಎಸಿ ಬಸವಣ್ಣಪ್ಪ ಕಲಶೆಟ್ಟಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ತಹಶೀಲ್ದಾರ್‌ ವಿಠ್ಠಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಪಿಎಂಸಿ ಅಧ್ಯಕ್ಷ ಜಡಿಯಪ್ಪ ಬಂಗಾಳಿ, ಗಣ್ಯರಾದ ಸಿ.ವಿ. ಚಂದ್ರಶೇಖರ್‌, ಸಮಾಜದ ಮುಖಂಡರಾದ ವೆಂಕಟೇಶ ಹೊಸಳ್ಳಿ, ಕನಕಪ್ಪ, ಬಸವರಾಜ ಎಂ., ನಾಗರಾಜ್‌ ಚಳ್ಳಾರಿ, ಹೇಮಣ್ಣ ದೇವರಮನಿ, ಮಂಜುನಾಥ ಪಾಟೀಲ್‌, ಮಂಜುನಾಥ ಬಗನಾಳ, ಕೊಟ್ರೇಶ ಮರಬನಹಳ್ಳಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

ಸಿ.ವಿ. ಜಡಿಯವರ್‌ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಪೂರ್ವದಲ್ಲಿ ಭಗೀರಥರ ಭಾವಚಿತ್ರದ ಮೆರವಣಿಗೆಗೆ ನಗರದ ಸಿರಸಪ್ಪಯ್ಯಮಠ ಆವರಣದಿಂದ ಪ್ರಾರಂಭಗೊಂಡು ಸಾಹಿತ್ಯ ಭವನದವರೆಗೆ ಜರುಗಿತು. ಮೆರವಣಿಗೆಯಲ್ಲಿ ಹಲವು ಗಣ್ಯರು, ಸಮಾಜದ ಮುಖಂಡರು, ಪೂರ್ಣಕುಂಭ ಹೊತ್ತ ಮಹಿಳೆಯರು, ವಿವಿಧ ಕಲಾ ತಂಡಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next