Advertisement

ಮತ್ತೆ ವಿಐಎಸ್‌ಎಲ್ ಖಾಸಗೀಕರಣದ ಸದ್ದು!

12:22 PM Jun 15, 2019 | Naveen |

ಕೆ.ಎಸ್‌. ಸುಧೀಂದ್ರ, ಭದ್ರಾವತಿ
ಭದ್ರಾವತಿ:
ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್‌ ಕಾಲದಲ್ಲಿ ಭಾರತರತ್ನ ಸರ್‌.ಎಂ. ವಿಶ್ವೇಶ್ವರಯ್ಯನವರ ತಂತ್ರಜ್ಞಾನದ ಆಧಾರದ ಮೇಲೆ ಸ್ಥಾಪಿತವಾದ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಕಬ್ಬಿಣ ಮತ್ತು ಉಕ್ಕು ಉತ್ಪಾದನೆಯ ಜೊತೆಗೆ ಸಿಮೆಂಟ್ ಉತ್ಪಾದನೆಯನ್ನೂ ಮಾಡುತ್ತಾ 10 ಸಾವಿರಕ್ಕೂ ಅಧಿಕ ಕಾರ್ಮಿಕರಿಗೆ ಕೆಲಸ ನೀಡಿ ಸಾವಿರಾರು ಕುಟುಂಬಗಳಿಗೆ ಜೀವನಾಧಾರವಾಗಿ ದೇಶದ ಕೈಗಾರಿಕಾ ವಲಯದಲ್ಲಿ ಉನ್ನತ ಸ್ಥಿತಿಯಲ್ಲಿತ್ತು ಇತ್ತೀಚಿನ ದಿನಗಳಲ್ಲಿ ಖಾಸಗೀಕರಣದ ಗುಮ್ಮ ಸದ್ದು ಮಾಡಿತ್ತು. ಇದೀಗ ಮತ್ತೆ ಖಾಸಗೀಕರಣದ ಸುದ್ದಿ ಬಂದಿದ್ದು ಕಾರ್ಮಿಕರಲ್ಲಿ ಆತಂಕದ ಕಾರ್ಮೋಡ ಕವಿಯುವಂತಾಗಿದೆ.

Advertisement

ಕೆಲವು ದಶಕಗಳಿಂದ ವಿವಿಧ ಕಾರಣಗಳಿಂದ ಕಾರ್ಖಾನೆ ಅವನತಿಯ ಹಾದಿಯಲ್ಲಿ ಸಾಗುತ್ತಾ ಬಂದಿದ್ದು ಕಾರ್ಖಾನೆಯಲ್ಲಿ ಕಾರ್ಮಿಕರ ಸಂಖ್ಯೆ ಇಳಿಮುಖವಾಗುತ್ತಾ ಕಂಪನಿ ಮುಚ್ಚುವ ಹಂತಕ್ಕೆ ಬಂದಿತ್ತು. ದೇವೇಗೌಡರು ಪ್ರಧಾನಿಯಾಗಿದ್ದಾಗ ಅಧಿಕಾರಾವಧಿಯ ಕೊನೆಯ ಘಳಿಗೆಯಲ್ಲಿ ಕಾರ್ಖಾನೆಯನ್ನು ಸೈಲ್ ಆಡ‌ಳಿತಕ್ಕೆ ವಹಿಸುವ ಮೂಲಕ ಕಾರ್ಖಾನೆ ಜೀವಂತವಾಗಿ ಉಳಿಯುವಂತೆ ಮಾಡಿದ್ದರು. ಕೆಲ ಕಾಲ ಉತ್ತಮವಾಗಿ ಸಾಗಿದ ಕಾರ್ಖಾನೆ ಪುನಃ ನಷ್ಟದ ಹಾದಿಯಲ್ಲಿ ಸಾಗುತ್ತಾ ಬಂದು ಪ್ರಸ್ತುತ ಇಲ್ಲಿನ ಕಾರ್ಮಿಕರ ಸಂಖ್ಯೆ ಕೇವಲ 1150- 200 ಸಂಖ್ಯೆಗೆ ಇಳಿದು ಗುತ್ತಿಗೆ ಕಾರ್ಮಿಕರ ಪರಿಶ್ರಮದಿಂದ ಕಾರ್ಖಾನೆ ಉಸಿರಾಡುತ್ತಾ ನಿಂತಿದೆ.

ಬಗೆಹರಿದ ಅದಿರಿನ ಗಣಿ ಸಮಸ್ಯೆ: ಕಾರ್ಖಾನೆಗೆ ಜೀವ ತುಂಬಲು ಉತ್ಪಾದನೆಗೆ ಅಗತ್ಯವಾದ ಸ್ವಂತದ ಕಬ್ಬಿಣದ ಅದಿರಿನ ಗಣಿ ಬೇಕೆಂದು ನಡೆದ ಹೋರಾಟದ ಫಲವಾಗಿ ರಾಜ್ಯ ಸರ್ಕಾರ ಬಳ್ಳಾರಿಯ ರಮಣದುರ್ಗದ ಬಳಿ 150 ಎಕರೆ ಕಬ್ಬಿಣದ ಅದಿರಿನ ಗಣಿ ನೀಡಿದ್ದು ಅದಕ್ಕೆ ಕೇಂದ್ರ ಸರ್ಕಾರ ಕಳೆದ ಲೋಕಸಭಾ ಚುನಾವಣೆ ಪೂರ್ವದ ಅಧಿಕಾರಾವಧಿಯಲ್ಲಿ ಒಪ್ಪಿಗೆ ನೀಡುವ ಮೂಲಕ ಉತ್ಪಾದ‌ನೆಗೆ ಅಗತ್ಯವಾದ ಅದಿರಿನ ಗಣಿ ದೊರಕಿದಂತಾಗಿ ಒಂದು ಸಮಸ್ಯೆ ಬಗೆಹರಿದಿದೆ.

ಹುಸಿಯಾದ ಬಂಡವಾಳದ ಭರವಸೆ: ಈ ಹಿಂದೆ ಸಂಸದರಾಗಿದ್ದ ಬಿ.ಎಸ್‌. ಯಡಿಯೂರಪ್ಪ ಕಾರ್ಖಾನೆಯ ಉಳಿವಿಗೆ ಅಂದಿನ ಕೇಂದ್ರ ಉಕ್ಕು ಸಚಿವ ನರೇಂದ್ರ ಸಿಂಗ್‌ ತೋಮರ್‌ ಅವರನ್ನು ಕಾರ್ಖಾನೆಗೆ ಬರುವಂತೆ ಮಾಡಿ ಇಲ್ಲಿನ ಸ್ಥಿತಿಗತಿ ವಿವರಿಸಿದ್ದರು. ಆಗ ಬಂದಿದ್ದ ಕೇಂದ್ರ ಸಚಿವರು ಕಾರ್ಖಾನೆಯ ಉಳಿವಿಗೆ 6 ಸಾವಿರ ಕೋಟಿ ಬಂಡವಾಳ ನೀಡುವ ಭರವಸೆ ನೀಡಿದ್ದರು. ಅನಂತರ ಸಂಸದ ಬಿ.ವೈ. ರಾಘವೇಂದ್ರ ಕಾರ್ಖಾನೆಯ ಗುತ್ತಿಗೆ ಕಾರ್ಮಿಕರ ಕೆಲಸಕ್ಕೆ ಎದುರಾಗಿದ್ದ ತೊಂದರೆಯನ್ನು ಕೇಂದ್ರ ಉಕ್ಕು ಪ್ರಾಧಿಕಾರ ಮತ್ತು ಮಂತ್ರಿಗಳೊಂದಿಗೆ ಕಾರ್ಮಿಕ ಸಂಘದ ಮುಖಂಡರನ್ನು ಭೇಟಿ ಮಾಡಿಸಿ ತೊಡಕನ್ನು ನಿವಾರಿಸಲು ಪ್ರಯತ್ನಿಸಿ ಸದ್ಯಕ್ಕೆ ಕಾರ್ಖಾನೆಯಲ್ಲಿ ಗುತ್ತಿಗೆ ಕಾರ್ಮಿಕರಿಗೆ ಕೆಲಸ ದೊರೆಯುವಂತಾಗಿದೆ.

ಬಗೆ ಹರಿಯದ ಬಂಡವಾಳ ಹಿಂತೆಗೆತದ ಭೂತ: ಕೇಂದ್ರ ಉಕ್ಕು ಪ್ರಾಧಿಕಾರದ ಆಡಳಿತದ ಗುಂಪಿಗೆ ಸೇರಿದ ಈ ಕಾರ್ಖಾನೆ ನಷ್ಟದ ಹಾದಿಯಲ್ಲಿ ಸಾಗಿಬಂದ ಕಾರಣ ಕಾರ್ಖಾನೆಯನ್ನು ಬಂಡವಾಳ ಹಿಂತೆಗೆತದ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ. ಕಾರ್ಖಾನೆಯನ್ನು ಸಾರ್ವಜನಿಕ ವಲಯದ ಉದ್ಯಮವಾಗಿ ಉಳಿಸಿಕೊಳ್ಳಬೇಕೆಂಬ ಹೋರಾಟದ ಫಲವಾಗಿ ಕೆಂದ್ರ ಉಕ್ಕು ಪ್ರಾಧಿಕಾರ ಪಟ್ಟಿಯಿಂದ ಕಾರ್ಖಾನೆಯ ಹೆಸರನ್ನು ಕೈಬಿಟ್ಟರೆ ಕಾರ್ಖಾನೆಯ ಅಭಿವೃದ್ಧಿಗೆ ಅಗತ್ಯವಾದ ಬಂಡವಾಳ ಹೂಡುವ ಭರವಸೆಯನ್ನು ಕೇಂದ್ರ ಉಕ್ಕು ಪ್ರಾಧಿಕಾರ ನೀಡಿತ್ತಾ ಬಂದಿದೆಯಾದರೂ ಈವರೆಗೆ ಆ ಭರವಸೆ ಭರವಸೆಯಾಗಿಯೇ ಉಳಿದಿದೆ.

Advertisement

ಕಾರ್ಖಾನೆಗೆ ತಜ್ಞರ ತಂಡದ ಭೇಟಿ: ಸಂಸದ ಬಿ.ವೈ. ರಾಘವೇಂದ್ರ, ಬಿ.ಎಸ್‌. ಯಡಿಯೂರಪ್ಪ ಅವರ ಪ್ರಯತ್ನದ ಫಲವಾಗಿ ಕಾರ್ಖಾನೆಗೆ ಅನೇಕ ಬಾರಿ ಕೇಂದ್ರ ಉಕ್ಕು ಮಂತ್ರಿಗಳಾದ ನರೇಂದ್ರ ಸಿಂಗ್‌ ತೋಮರ್‌, ಬೀರೇಂದ್ರ ಸಿಂಗ್‌ ಚೌಧರಿ ಮುಂತಾದವರು ಭೇಟಿ ನೀಡಿ ಕಾರ್ಖಾನೆ ಉಳಿಸುವ ಭರವಸೆ ನೀಡಿ ಹೋಗಿದ್ದಾರೆ. ಕೇಂದ್ರ ಉಕ್ಕು ಪ್ರಾಧಿಕಾರದ ತಜ್ಞರ ತಂಡ ಭೇಟಿ ನೀಡಿ ಅಧ್ಯಯನ ನಡೆಸಿ ಕಾರ್ಖಾನೆಯ ಅಭಿವೃದ್ಧಿಗೆ ಕೈಗೊಳ್ಳಬಹುದಾದ ಕ್ರಮದ ಕುರಿತ ವರದಿ ಸಿದ್ಧಪಡಿಸಿ ನೀಡಿದೆ. ಈ ಎಲ್ಲ ಬೆಳವಣಿಗೆಗಳು ಕಾರ್ಮಿಕರಲ್ಲಿ ಕಾರ್ಖಾನೆ ಸಾರ್ವಜನಿಕ ವಲಯದಲ್ಲಿ ಉಳಿದು ಬೆಳೆಯುತ್ತದೆ ಎಂಬ ಆಶಾಭಾವನೆ ಚಿಗುರೊಡೆಯುವಂತೆ ಮಾಡಿತ್ತು.

ತಲೆಯೆತ್ತಿದ ಖಾಸಗೀಕರಣದ ಭೂತ: ಈ ನಡುವೆ ಆಗಿಂದಾಗ್ಗೆ ಕಾರ್ಖಾನೆಯನ್ನು ಖಾಸಗೀಕರಣಗೊಳಿಸಲಾಗುತ್ತದೆ ಎಂಬ ವಂದಂತಿಗಳು ಹರಿದಾಡುತ್ತಾ ಕಾರ್ಮಿಕರಲ್ಲಿ ಆತಂಕದ ಛಾಯೆ ಮೂಡಿಸಿತ್ತು. ಆದರೆ ಲೋಕಸಭಾ ಚುನಾವಣೆಯ ಕಾರಣ ಸ್ಥಗಿತಗೊಂಡಿದ್ದ ಖಾಸಗೀಕರಣದ ಗಾಳಿಸುದ್ದಿಗೆ ಗುರುವಾರ ಖಾಸಗಿ ಸುದ್ದಿವಾಹಿನಿಯೊಂದು ಕೇಂದ್ರ ಸರ್ಕಾರ ದೇಶದ 3 ಕಾರ್ಖಾನೆಗಳನ್ನು ಖಾಸಗಿ ಸಂಸ್ಥೆಗೆ ಮಾರಾಟ ಮಾಡಲು ನಿರ್ಧರಿಸಿದ್ದು ಅದರಲ್ಲಿ ಭದ್ರಾವತಿ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಸಹ ಸೇರಿದೆ ಎಂಬ ಸುದ್ದಿ ಪ್ರಸಾರ ಮಾಡುತ್ತಿದ್ದಂತೆ ಕಾರ್ಖಾನೆಯ ಕಾರ್ಮಿಕರಲ್ಲಿ ಪುನಃ ಖಾಸಗೀಕರಣದ ಭೂತದ ಆತಂಕ ತಲೆಯೆತ್ತಿದೆ.

ಕಾರ್ಮಿಕ ಮುಖಂಡರಿಂದ ಸಂಸದ ಬಿವೈಆರ್‌ ಭೇಟಿ: ಕಾರ್ಖಾನೆಯನ್ನು ಖಾಸಗೀಕರಣಗೊಳಿಸಲಾಗುತ್ತಿದೆ ಎಂಬ ಸುದ್ದಿ ಕಿವಿಗೆ ಬೀಳುತ್ತಿದ್ದಂತೆ ಕಾರ್ಖಾನೆಯ ಕಾರ್ಮಿಕ ಸಂಘದ ಮುಖಂಡರು ಸಂಸದ ಬಿ.ವೈ. ರಾಘವೇಂದ್ರ ಅವರನ್ನು ಭೇಟಿ ಮಾಡಿ ತಮ್ಮ ಆತಂಕ ವ್ಯಕ್ತಪಡಿಸಿ ಮಾತನಾಡಿದ್ದಾರೆ..

ಕಂಪನಿಯ ಉಳಿವಿಗೆ ಸರ್ವಪ್ರಯತ್ನ: ಬಿವೈಆರ್‌

ಪತ್ರಿಕೆಯು ಕಾರ್ಖಾನೆಯ ಖಾಸಗೀಕರಣದ ಸುದ್ದಿಯ ಕುರಿತಂತೆ ಸಂಸದ ಬಿ.ವೈ. ರಾಘವೇಂದ್ರ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಂಸದರು ಕಾರ್ಖಾನೆಯ ಖಾಸಗೀಕರಣದ ಮಾಹಿತಿ ಸುದ್ದಿ ನಮಗೂ ನೇರವಾಗಿ ಲಭ್ಯವಾಗಿಲ್ಲ. ಸುದ್ದಿವಾಹಿನಿಯೊಂದರಲ್ಲಿ ಬಿತ್ತರವಾದ ಸುದ್ದಿ ಆಧರಿಸಿ ಕಾರ್ಖಾನೆಯ ಕಾರ್ಮಿಕ ಮುಖಂಡರು ಗುರುವಾರ ಬಂದು ಭೇಟಿ ಮಾಡಿ ಹೋಗಿದ್ದಾರೆ. ನಮ್ಮ ತಂದೆ ಯಡಿಯೂರಪ್ಪ ಈಗಾಗಲೇ ಕೇಂದ್ರ ಉಕ್ಕು ಮಂತ್ರಿ ಧರ್ಮೇಂದ್ರ ಪ್ರಧಾನ್‌ ಅವರನ್ನು ಭೇಟಿ ಮಾಡಿ ಮಾತನಾಡಿದ್ದಾರೆ. ನಾನು ಸಹ ಜೂ.17ರಿಂದ ಆರಂಭಗೊಳ್ಳಲಿರುವ ಸಂಸತ್‌ ಅಧಿವೇಶನದಲ್ಲಿ ಭಾಗಿಯಾಗಲು ಹೋಗುತ್ತಿದ್ದು ಕಾರ್ಖಾನೆಯ ಅಭಿವೃದ್ಧಿ ಸೇರಿದಂತೆ ಎಲ್ಲ ವಿಷಯವನ್ನು ಅಲ್ಲಿ ಪ್ರಸ್ತಾಪಿಸುತ್ತೇವೆ. ಜೂ. 16ರಂದೇ ನಾನು ದೆಹಲಿಗೆ ತೆರಳುತ್ತಿದ್ದು ಅಲ್ಲಿ ರಾಜ್ಯದ ಎಲ್ಲಾ ಸಂಸದರ ಜೊತೆ ಈ ವಿಷಯ ಚರ್ಚಿಸಿ ಸರ್ಕಾರಕ್ಕೆ ಕೇಂದ್ರ ಉಕ್ಕು ಸಚಿವ ಧಮೇಂದ್ರ ಪ್ರಧಾನ್‌ ಅವರನ್ನು ಸಂಪರ್ಕಿಸಿ ಸಮಸ್ಯೆಯ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇವೆ. ವಿಐಎಸ್‌ಎಲ್ ಕಾರ್ಖಾನೆ ರಾಜ್ಯದ ಆಸ್ತಿಯಾಗಿದ್ದು ಅದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಾವು ಶಕ್ತಿ ಮೀರಿ ಪ್ರಯತ್ನ ನಡೆಸುತ್ತಾ ಬಂದಿದ್ದು ಈಗಲೂ ಆ ಪ್ರಯತ್ನವನ್ನು ಇನ್ನೂ ಹೆಚ್ಚಿನ ಮಟ್ಟದಲ್ಲಿ ನಡೆಸಿ ಕಾರ್ಖಾನೆಯನ್ನು ಸಾರ್ವಜನಿಕ ವಲಯದಲ್ಲಿ ಉಳಿಸಿಕೊಂಡು ಅಭಿವೃದ್ಧಿಪಡಿಸಿ ಕಾರ್ಮಿಕರಿಗೆ ನ್ಯಾಯ ದೊರಕಿಸಿ ಕೊಡುವ ಹಾದಿಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next