Advertisement

ಸಂತ್ರಸ್ತರ ನೆರವಿಗೆ ಸರ್ಕಾರ ಸ್ಪಂದಿಸಲಿ: ಅಪ್ಪಾಜಿ

12:45 PM Aug 26, 2019 | Team Udayavani |

ಭದ್ರಾವತಿ: ಕ್ಷೇತ್ರದ ಎರಡು ಕಾರ್ಖಾನೆಗಳ ದುಸ್ಥಿತಿ, ಸಕ್ಕರೆ ಕಾರ್ಖಾನೆ ಮುಚ್ಚುವಿಕೆ ಈ ಎಲ್ಲದರಿಂದ ತಾಲೂಕಿನಲ್ಲಿ ಜನರ ಬದುಕು ದುಸ್ಥರವಾಗಿದೆ, ಇಂತಹ ಸಂಧರ್ಭದಲ್ಲಿ ಮಳೆ ಬಾರದೆ ಜಲಾಶಯ ತುಂಬಿರದಿದ್ದರೆ ರೈತರ ಆಶಾಕಿರಣವಾದ ಅಡಕೆ ಬೆಳೆಗೆ ಅಗತ್ಯ ನೀರು ದೊರಕದೆ ತುಂಬಾ ತೊಂದರೆಯಾಗುತ್ತಿತ್ತು. ಆದರೆ ದೇವರ ಕೃಪೆಯಿಂದ ನಿರೀಕ್ಷೆಗೂ ಮೀರಿ ಮಳೆಯಾಗಿ ಜಲಾಶಯ ತುಂಬಿದೆ ಎಂದು ಮಾಜಿ ಶಾಸಕ ಎಂ.ಜೆ. ಅಪ್ಪಾಜಿ ಹೇಳಿದರು.

Advertisement

ಭಾನುವಾರ ಭದ್ರಾ ಜಲಾಶಯದಲ್ಲಿ ಬಾಗಿನ ಸಮರ್ಪಣೆ ಮಾಡಿದ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪ್ರಕೃತಿ ದೇವತೆ ಕರುಣೆ ತೋರಿ ಕೇವಲ 5 ದಿನಗಳಲ್ಲಿ ತೀವ್ರವಾಗಿ ಸುರಿದ ಮಳೆಯಿಂದ ಭದ್ರಾ ಜಲಾಶಯ ತುಂಬಿದೆ.ಹಿರಿಯರು ಹೇಳುವಂತೆ ಈ ರೀತಿಯ ಮಳೆ ಸುಮಾರು 45 ವರ್ಷಗಳ ಹಿಂದಿನ ಇತಿಹಾಸವನ್ನು ಮರುನಿರ್ಮಾಣ ಮಾಡಿದೆ. ಗಾಳಿ, ಬೆಳಕು, ನೀರು ಪ್ರಕೃತಿಯ ಕೊಡುಗೆಗಳಾಗಿದ್ದು ಈ ಬಾರಿ ಜಲಾಶಯ ತುಂಬಿರುವ ಕಾರಣ ಜಲಾಶಯಕ್ಕೆ ಬಾಗಿನ ಅರ್ಪಿಸುವ ಕಾರ್ಯಕ್ರಮ ನಡೆಸಲಾಯಿತು ಎಂದರು.

ನಾನು ಚುನಾವಣೆ ನಿರೀಕ್ಷೆಯಲ್ಲಿಲ್ಲ: ಇದು ಧಾರ್ಮಿಕ ಕಾರ್ಯಕ್ರಮ. ಈ ಸಮಯದಲ್ಲಿ ರಾಜಕೀಯ ವಿಷಯ ಮಾತಾಡುವುದು ಸರಿಯಲ್ಲ. ಚುನಾವಣೆಗೆ ಬಳಸುವ ಹಣ ಜನರ ತೆರಿಗೆಯ ಹಣ. ಆದ್ದರಿಂದ ನಿಗದಿತ ಅವಧಿಗೆ ಮುಂಚೆ ಪದೇಪದೇ ಚುನಾವಣೆಗಳು ನಡೆದರೆ ಅದು ಜನರಿಗೆ ಹೊರೆಯಗುತ್ತದೆ. ಆದ್ದರಿಂದ ನಾನು ಸದ್ಯಕ್ಕೆ ಚುನಾವಣೆ ಆಗಲಿ ಎಂದು ನಿರೀಕ್ಷಿಸುವುದಿಲ್ಲ ಎಂದರು.

ಯಾವುದೇ ಪಕ್ಷ ಅಧಿಕಾರ ನಡೆಸಿದರೂ 5 ವರ್ಷ ಅವಧಿ ಪೂರೈಸಲಿ ಎಂದು ಆಶಿಸುತ್ತೇನೆ. ಶಾಸಕರಾದವರಿಗೆಲ್ಲಾ ಮಂತ್ರಿಸ್ಥಾನ ಸಿಗಬೇಕೆಂಬ ಆಸೆ ಇರಬಹುದು. ಆದರೆ ಎಲ್ಲರನ್ನೂ ಮಂತ್ರಿಗಳಾಗಿ ಮಾಡಲು ಅಸಾಧ್ಯ. ಯಾರೇ ಮುಖ್ಯಮಂತ್ರಿಯಾದರೂ ಈ ಆಸೆ ಈಡೇರಿಸಲು ಸಾಧ್ಯವಿಲ್ಲ. ಸರ್ಕಾರದಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬುದು ಮುಖ್ಯವಲ್ಲ. ಯಾರೇ ಆ ಸ್ಥಾನವನ್ನು ಅಲಂಕರಿಸಿದರೂ ಪ್ರಸ್ತುತ ರಾಜ್ಯದಲ್ಲಿನ ಅತಿವೃಷ್ಟಿಯಿಂದ ನೊಂದವರಿಗೆ ಅಗತ್ಯವಾದ ಹಣಕಾಸಿನ ನೆರವನ್ನು ಒದಗಿಸುವ ಕೆಲಸ ಶೀಘ್ರವಾಗಿ ಮಾಡಬೇಕು ಎಂದರು.

Advertisement

ನಮಗೆ ನಾವೇ ಶತ್ರುಗಳು: ಚುನಾವಣೆ ಸಮಯದಲ್ಲಾಗಲಿ ಅಥವಾ ನಂತರದ ದಿನಗಳಲ್ಲಾಗಲಿ ಅಪ್ಪಾಜಿ ಬಗ್ಗೆ ಅಭಿಮಾನವಿದ್ದವರು ನಾನು ನೇರವಾಗಿ ಅವರನ್ನು ಸಂಪರ್ಕಿಸಿಲ್ಲ ಎಂಬ ಕಾರಣಕ್ಕೆ ತಪ್ಪು ಅರ್ಥಕಲ್ಪಿಸಿಕೊಂಡು ದೂರ ಉಳಿಯುವ ಮನಸ್ಥಿತಿ ಬೆಳೆಸಿಕೊಂಡಿರುವುದರಿಂದ ಸಂಘಟನೆಯಲ್ಲಿ ವ್ಯತ್ಯಯವಾಗಿ ಇದರಿಂದ ಬೇರಯವರಿಗೆ ಲಾಭವಾಗುವಂತಾಯಿತು. ಈ ಮನಸ್ಥಿತಿಯಿಂದ ಹೊರಬರದಿದ್ದರೆ ನಮಗೆ ನಾವೇ ಶತ್ರುಗಳಾಗಿ ಸೋಲಿನ ಸುಳಿಗೆ ಸಿಲುಕಬೇಕಾಗುತ್ತದೆ ಎಂಬುದನ್ನು ಅರಿತು ಸಂಘಟನೆಯಲ್ಲಿ ಸಕ್ರಿಯವಾಗಿರಬೇಕು ಎಂದರು.

ಜಿಪಂ ಸದಸ್ಯ ಯೋಗೀಶ್‌ ಮಾತನಾಡಿ, ರಾಜ್ಯದಲ್ಲಿ ಚುನಾವಣೆ ಯವುದೇ ಕ್ಷಣದಲ್ಲಿ ಬರುವ ಸಾಧ್ಯತೆ ಇರುವುದರಿಂದ ಅಪ್ಪಾಜಿ ಬಳಗದ ಚುನಾಯಿತ ಪ್ರತಿನಿಧಿಗಳು ಈ ಹಿಂದೆ ಮಾಡಿದ ತಪ್ಪನ್ನು ಮಾಡದೆ ಒಗ್ಗಟ್ಟಿನಿಂದ ಚುನಾವಣೆಯಲ್ಲಿ ಕಾರ್ಯಚಟುವಟಿಕೆ ನಡೆಸಿದರೆ ಬರಲಿರುವ ಚುನಾವಣೆಯಲ್ಲಿ ಅಪ್ಪಾಜಿ ಪುನಃ ಶಾಸಕರಾಗುವುದರಲ್ಲಿ ಅನುಮಾನವಿಲ್ಲ ಎಂದರು.

ಜಿಪಂ ಸದಸ್ಯ ಮಣಿಶೇಖರ್‌ ಮಾತನಾಡಿ, ಕಳೆದ ಬಾರಿ ಚುನಾವಣೆಯಲ್ಲಿ ಅಪ್ಪಾಜಿ ಬಳಗದ ಕೆಲವು ಚುನಾಯಿತ ಪ್ರತಿನಿಧಿಗಳ ನಡುವಿನ ಪರಸ್ಪರ ತಪ್ಪು ಕಲ್ಪನೆ ಕಾರಣದಿಂದ ಚುನಾವಣಾ ಪ್ರಚಾರದಲ್ಲಿ ಸರಿಯಾಗಿ ತೊಡಗಿಸಿಕೊಳ್ಳದೆ ಇದ್ದುದರ ಪರಿಣಾಮ ಉತ್ತಮ ಜನನಾಯಕರಾದ ಅಪ್ಪಾಜಿ ಸೋಲ ಬೇಕಾಯಿತು ಎಂದರು.

ಜೆಡಿಎಸ್‌ ಮುಖಂಡ ಹಾಗೂ ನ್ಯಾಯವಾದಿ ಮಾವಿನ ಕೆರೆ ಮಂಜಪ್ಪ ಮಾತನಾಡಿ ಭದ್ರಾ ಜಲಾಶಯ ತುಂಬುವ ನಿರೀಕ್ಷೆ ಕೈಬಿಟ್ಟಿದ್ದ ಜನತೆಗೆ ಪ್ರಕೃತಿ ನಿರೀಕ್ಷೆಗೂ ಮೀರಿ ಕೇವಲ ಐದಾರು ದಿನಗಳಲ್ಲಿ ಅತಿಯಾದ ಮಳೆ ಸುರಿಸಿ ಜಲಾಶಯ ಭರ್ತಿ ಮಾಡಿ ಕ್ಷೇತ್ರದ ರೈತರ ಮೊಗದಲ್ಲಿ ನಗು ಮೂಡಿಸಿದೆ. ಉತ್ತಮ ಜನನಾಯಕನಾದವನು ಗೆಲುವಿನಿಂದ ದರ್ಪ ಪ್ರದರ್ಶಿಸದೆ ಸೋತಾಗನಾಗದೆ, ಸಮಚಿತ್ತದಿಂದ ಯಾವಾಗಲೂ ಜನರ ಕಷ್ಟಸುಖಗಳಿಗೆ ಸ್ಪಂದಿಸುವ ಗುಣವನ್ನು ಹೊಂದಿರಬೇಕು ಎಂದರು.

ಶಾರದಾ ಅಪ್ಪಾಜಿ, ಜೆಡಿಎಸ್‌ ಅಧ್ಯಕ್ಷ ಆರ್‌. ಕರುಣಾಮೂರ್ತಿ, ತಾಪಂ ಅಧ್ಯಕ್ಷೆ ಆಶಾ ಶ್ರೀಧರ್‌, ಉಪಾಧ್ಯಕ್ಷೆ ಸರೋಜಮ್ಮ, ನಗರಸಾಭಾ ಮಾಜಿ ಅಧ್ಯಕ್ಷೆ ಹಾಲಮ್ಮ, ಸುಧಾಮಣಿ, ಸದಸ್ಯರಾದ ರವಿಕುಮಾರ್‌, ಬದ್ರಿನಾರಾಯಣ್‌, ಆನಂದ್‌, ಕೆಎಂಎಫ್‌ ಅಧ್ಯಕ್ಷ ಆನಂದ್‌ ಮತ್ತಿತರರು ಮಾತನಾಡಿದರು.

ಬಾಗಿನ ಸಮರ್ಪಣೆ: ಪುರೋಹಿತ ಕೃಷ್ಣಮೂರ್ತಿ ಸೋಮಯಾಜಿಗಳ ಪೌರೋಹಿತ್ಯದಲ್ಲಿ ಮಾಜಿ ಶಾಸಕ ಅಪ್ಪಾಜಿ ದಂಪತಿ ಪಕ್ಷದ ಮುಖಂಡರ, ನಾಗರಿಕರ ಸಮ್ಮುಖದಲ್ಲಿ ಭದ್ರಾ ಜಲಾಶಯಕ್ಕೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next