Advertisement

ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ

01:50 PM Sep 11, 2019 | Naveen |

ಭದ್ರಾವತಿ: ನಗರದ ಹೊಸಮನೆ ಬಡಾವಣೆಯಲ್ಲಿ ಪ್ರತಿಷ್ಠಾಪಿಸಿದ್ದ ಹಿಂದೂ ಮಹಾಸಭೆ ಮತ್ತು ಹಿಂದೂ ರಾಷ್ಟ್ರಸೇನಾ ಗಣಪತಿಯ ವಿಸರ್ಜನಾ ಪೂರ್ವ ಮೆರವಣಿಗೆ ಮಂಗಳವಾರ ಸಹಸ್ರಾರು ಸಂಖ್ಯೆಯ ಜನರ ಪಾಲ್ಗೊಳ್ಳುವಿಕೆಯಲ್ಲಿ ಶಾಂತಿಯುತವಾಗಿ ನೆರವೇರಿತು.

Advertisement

ಬೆಳಗ್ಗೆ 11-30ಕ್ಕೆ ಗಣಪತಿ ಪೆಂಡಾಲ್ನಲ್ಲಿ ಗಣಪತಿಗೆ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಶಾಸಕ ಬಿ.ಕೆ. ಸಂಗಮೇಶ್ವರ್‌, ತಹಶೀಲ್ದಾರ್‌ ಸೋಮಶೇಖರ್‌, ಉಪ ತಹಶೀಲ್ದಾರ್‌ ಮಂಜಾನಾಯ್ಕ ಹಾಗೂ ಪೊಲೀಸ್‌ ಅಧಿಕಾರಿಗಳು ಇದ್ದರು.

ಗಣಪತಿ ಮೆರವಣಿಗೆ ಶಿವಾಜಿ ವೃತ್ತ ಬಳಸಿಕೊಂಡು ಹೊಸಮನೆ ಮುಖ್ಯ ರಸ್ತೆ ಮೂಲಕ ಸಾಗಿ ಬಂದು ರಂಗಪ್ಪ ವೃತ್ತ, ಚೆನ್ನಗಿರಿ ರಸ್ತೆ, ಬಿ.ಎಚ್. ರಸ್ತೆ, ಮಾಧವಾಚಾರ್‌ ವೃತ್ತ, ಹುತ್ತಾ ಬಸ್‌ ನಿಲ್ದಾಣದವರೆಗೆ ಸಾಗಿ ಪುನಃ ಅದೇ ಮಾರ್ಗದಲ್ಲಿ ಹಿಂದಿರುಗಿ ಬಂದು ತರೀಕೆರೆ ರಸ್ತೆಯ ಗಾಂಧಿ ವೃತ್ತವನ್ನು ಬಳಸಿಕೊಂಡು ಸಾಗಿ ಬಂದಿತು.

ಸಂಸದ ಬಿ.ವೈ ರಾಘವೇಂದ್ರ ಬೇಟಿ: ಮೆರವಣಿಗೆ ಮಾರ್ಗಮಧ್ಯದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಆಗಮಿಸಿ ಗಣಪತಿಗೆ ಪೂಜೆ ಸಲ್ಲಿಸಿ ತೆರಳಿದರು.

ವೈವಿಧ್ಯಮಯ ಪ್ರಸಾದ ವಿತರಣೆ: ಮೆರವಣಿಗೆ ಮಾರ್ಗದುದ್ದಕ್ಕೂ ಅಲ್ಲಲ್ಲಿ ವಿನಾಯಕ ಸ್ನೇಹ ಬಳಗ, ಆಟೋ ಸಂಘ ಸೇರಿದಂತೆ ವಿವಿಧ ಹಲವು ಸಂಘ-ಸಂಸ್ಥೆಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದ ಜನರಿಗೆ ಉಚಿತವಾಗಿ ಪಲಾವ್‌, ಚಿತ್ರಾನ್ನ, ಕೇಸರಿಬಾತ್‌, ಜಾಮೂನು ಮುಂತಾದ ಹಲವು ಬಗೆಯ ಊಟ- ಉಪಹಾರವನ್ನು ಪ್ರಸಾದ ರೂಪದಲ್ಲಿ ಯಥೇಚ್ಛವಾಗಿ ನೀಡಿದರು.

Advertisement

ಮಳೆಗೂ ಹಿಂಜರಿಯದ ಯುವಕರು: ಯುವಕ- ಯುವತಿಯರೇ ಮೆರವಣಿಗೆಯಲ್ಲಿ ಹೆಚ್ಚಾಗಿ ಭಾಗವಹಿಸಿದ್ದರು. ಬೆಳಗ್ಗೆ ಬಿಸಿಲಿನ ವಾತಾವರಣ ಇದ್ದರೂ ಮೆರವಣಿಗೆ ಆರಂಭಗೊಂಡ ಕೆಲವೇ ಗಂಟೆಗಳಲ್ಲಿ ಕೆಲ ಸಮಯ ಸುರಿದ ಮಳೆಗೆ ಅಂಜದ ಯುವಸಮೂಹ ಧ್ವನಿವರ್ಧಕದಲ್ಲಿನ ಹಾಡಿಗೆ ಉತ್ಸಾಹದಿಂದ ಕುಣಿದು ಕುಪ್ಪಳಿಸಿತು. ಯುವತಿಯರೂ ಸಹ ನರ್ತಿಸುತ್ತಾ ಸಂಭ್ರಮದಿಂದ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಮೆರವಣಿಗೆಯ ಮಾರ್ಗದುದ್ದಕ್ಕೂ ಅಲ್ಲಲ್ಲಿ ಕೆಲವರು ವರ್ಣಮಯವಾದ ಓಂಕಾರಾಕ್ಷರ, ಶಿವನ ಚಿತ್ರ ಸೇರಿದಂತೆ ವಿವಿಧ ರೀತಿಯ ರಂಗವಲ್ಲಿಗಳನ್ನು ಹಾಕಿದ್ದರು. ಆದರೆ ಸುರಿದ ಮಳೆಯಿಂದಾಗಿ ಗಣಪತಿ ಅದರ ಬಳಿ ಬರುವ ಮುನ್ನವೇ ರಂಗವಲ್ಲಿಗಳು ನೀರಿನಲ್ಲಿ ಕರಗಿ ಹೋದವು.

ಕೇಸರಿಮಯ: ಮೆರವಣಿಗೆ ಸಾಗಿ ಬಂದ ಮಾರ್ಗದುದ್ದ‌ಕ್ಕೂ ರಸ್ತೆಯ ಉಭಯ ಪಾರ್ಶ್ವಗಳಲ್ಲಿ ಮತ್ತು ವೃತ್ತಗಳಲ್ಲಿ ಕೇಸರಿ ತಳಿರು ತೋರಣ, ಕೇಸರಿ ಧ್ವಜವನ್ನು ಹಾಕುವ ಮೂಲಕ ಎಲ್ಲೆಡೆ ಕೇಸರಿ ವರ್ಣವೇ ರಾರಾಜಿಸುತ್ತಿತ್ತು. ಇದರ ಜೊತೆ ಯುವಕರು ಕೇಸರಿ ವರ್ಣದ ರುಮಾಲನ್ನು ಕೊರಣಿಗೆ ಹಾಕಿಕೊಂಡು ಕೇಸರಿ ಪೇಟ ಧರಿಸಿ ಬೈಕ್‌ಗಳಲ್ಲಿ ರ್ಯಾಲಿ ನಡೆಸಿ ಮೆರವಣಿಗೆಯಲ್ಲಿ ಕೇಸರಿ ಬಣ್ಣದ ಬೃಹತ್‌ ಧ್ವಜವನ್ನು ವೃತ್ತಾಕಾರವಾಗಿ ತಿರುಗಿಸುತ್ತಾ ಕುಣಿಯುತ್ತಾ ಮೇಲಕ್ಕೆ ಹಾರುತ್ತಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಅದೇ ರೀತಿ ಮಹಿಳೆಯರು, ಯುವತಿಯರೂ ಸಹ ಕೇಸರಿ ಶಾಲನ್ನು ಕೊರಳಿಗೆ ಹಾಕಿಕೊಂಡು ಕುಣಿಯುತ್ತಾ ಭಾರತ ಮಾತೆಗೆ ಜಯಕಾರ ಹಾಕುತ್ತಾ ಸಾಗಿದರು.

ಕಲಾತಂಡಗಳು ಮತ್ತು ಸಿಡಿಮದ್ದು ಪ್ರದರ್ಶನ: ಮೆರವಣಿಗೆಯಲ್ಲಿ ಬೃಹತ್‌ ಬಿದಿರುಗೊಂಬೆಗಳ ಕುಣಿತ ಮನರಂಜಿಸಿತು, ಇದರ ಜೊತೆಗೆ ಪಟಾಕಿ ಸಿಡಿಮದ್ದುಗಳ ಸಿಡಿತಗಳೊಂದಿಗೆ ಮೆರವಣಿಗೆ ಸಾಗಿತು.

ಜನಸಾಗರ: ಮೆರವಣಿಗೆಯಲ್ಲಿ ಸುಮಾರು ಹತ್ತು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರೆ ಮೆರವಣಿಗೆ ಮಾರ್ಗದುದ್ದಕ್ಕೂ ರಸ್ತೆಯ ಬದಿಗಳಲ್ಲಿ ಹಾಗೂ ಉಭಯ ಪಾರ್ಶ್ವಗಳಲ್ಲಿನ ಕಟ್ಟಡಗಳ ಮೇಲೆ ಸಹಸ್ರಾರು ಜನರು, ಮಕ್ಕಳು ನಿಂತು ಗಣಪತಿ ಮೆರವಣಿಗೆ ವೀಕ್ಷಿಸಿ ವಿನಾಯಕನಿಗೆ ನಮಸ್ಕರಿಸಿದರು.

ಹಣ್ಣು,ಹೂವಿನ ಹಾರಗಳ ಸುರಿಮಳೆ: ಮೆರವಣಿಗೆ ಮಾರ್ಗದುದ್ದಕ್ಕೂ ಅಲ್ಲಲ್ಲಿ ವಿವಿಧ ಅಂಗಡಿ- ಮುಂಗಟ್ಟುಗಳ ಮುಂದೆ ವ್ಯಾಪಾರಸ್ಥರು ಪೂಜೆ ಸಲ್ಲಿಸುವುದರ ಜೊತೆಗೆ ಸೇಬು ಮತ್ತಿತ‌ರ ಹಣ್ಣಿನ ಹಾರ, ಬೃಹತ್‌ ಗಾತ್ರದ ಹೂವಿನ ಹಾರಗಳನ್ನು ಗಣಪತಿಗೆ ಅರ್ಪಿಸಿದರು. ಕೆಲವೆಡೆ ಜನರು ಮೇಲಿನಿಂದ ಗಣಪತಿಯ ಮೇಲೆ ಬಿಡಿಹೂವುಗಳ ಪುಷ್ಪವೃಷ್ಟಿ ಸುರಿಸಿದರು.

ಪೊಲೀಸ್‌ ಬಿಗಿಭದ್ರತೆ: 8ಡಿವೈಎಸ್ಪಿ, 2ಎಸ್ಪಿ, 17 ವೃತ್ತ ನಿರೀಕ್ಷಕರು, 23ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್‌, 79 ಎಎಸ್‌ಐ, 796 ಪೊಲೀಸ್‌ ಕಾನ್ಸ್‌ಟೇಬಲ್, 350 ಗೃಹರಕ್ಷಕ ಸಿಬ್ಬಂದಿ, 50 ಆರ್‌ಪಿಎಫ್‌, 400 ಕೆಎಸ್‌ಆರ್‌ಪಿ, 8 ಪಾರಿrಡಿಆರ್‌, 30 ಎಎನೆಸ್‌ ಸೇರಿದಂತೆ 50 ಕ್ಯಾಮೆರಾಮೆನ್‌ ಮತ್ತು ಇತರೆ 25 ಕ್ಯಾಮೆರಾ ಸೇರಿದಂತೆ 1600 ಪೊಲೀಸ್‌ ಇಲಾಖೆ ರಕ್ಷಣಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು.

ಹಿಂದೂ ಮಹಾಸಭಾ ಅಧ್ಯಕ್ಷ ವಿ. ಕದಿರೇಶ್‌ ಹಾಗೂ ಪದಾಧಿಕಾರಿಗಳು, ಕಾರ್ಯಕರ್ತರು ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next