Advertisement

ಬೆಸ್ಕಾಂ ನೌಕರನ ಅಮಾನತು, ಪ್ರತಿಭಟನೆ

04:25 PM May 07, 2019 | Team Udayavani |

ತಿಪಟೂರು: ಅನಿರೀಕ್ಷಿತವಾಗಿ ನಡೆದ ಘಟನೆಯಿಂದ ರೈತರೊಬ್ಬರು ಇತ್ತೀಚೆಗೆ ಮೃತಪಟ್ಟಿರುವ ಕಾರಣಕ್ಕೆ ಬೆಸ್ಕಾಂ ನೌಕರನನ್ನು ಕರ್ತವ್ಯಲೋಪ ಎಸಗಿದ್ದಾರೆಂದು ಅಮಾನತ್ತು ಮಾಡಿರುವುದು ಖಂಡನೀಯವಾಗಿದ್ದು, ಕೂಡಲೆ ಮೇಲಧಿಕಾರಿಗಳು ಆದೇಶವನ್ನು ಹಿಂಪಡೆದು ನೌಕರನನ್ನು ಕರ್ತವ್ಯಕ್ಕೆ ಹಾಜರು ಪಡಿಸಬೇಕೆಂದು ಕೆಪಿಟಿಸಿಎಲ್ ಯೂನಿಯನ್‌ನ ಪದಾಧಿ ಕಾರಿಗಳು ನಗರದ ಬೆಸ್ಕಾಂನ ವಿಭಾಗೀಯ ಕಾರ್ಯ ನಿರ್ವಾಹಕ ಎಂಜಿನಿಯರ್‌ ಕಚೇರಿಯ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

Advertisement

ಈ ಸಂದ‌ರ್ಭದಲ್ಲಿ ಮಾತನಾಡಿದ ತುಮಕೂರು ವಿಭಾಗದ ನೌಕರರ ಸಂಘದ ಸಂಘಟನಾ ಕಾರ್ಯ ದರ್ಶಿ ಲಿಂಗದೇವರು ಮಾತನಾಡಿ, ಕಳೆದವಾರ ನೊಣವಿನಕೆರೆ ಹೋಬಳಿಯ ಆಲ್ಬೂರು ಗ್ರಾಮದ ಗದ್ದೆ ಬಯಲಿನಲ್ಲಿ ಆಕಸ್ಮಿಕವಾಗಿ ವಿದ್ಯುತ್‌ ತಂತಿ ತುಂಡಾಗಿ ಬಿದ್ದಿತ್ತು. ಸ್ಥಳಿಯರು ಇದನ್ನು ನೋಡಿ ವಿದ್ಯುತ್‌ ಇಲಾಖೆಗೆ ಮಾಹಿತಿ ನೀಡಿದ್ದರು. ಮಾಹಿತಿ ಬಂದ 10 ನಿಮಿಷದಲ್ಲಿ ನೊಣವಿನಕೆರೆ ಶಾಖೆಯ ಲೈನ್‌ಮೆನ್‌ ಚಂದ್ರು ಸ್ಥಳಕ್ಕೆ ಹೋಗಿ ವಿದ್ಯುತ್‌ ಸಂಪರ್ಕ ವನ್ನು ಖಡಿತಗೊಳಿಸಿ ವಿದ್ಯುತ್‌ ತಂತಿಯನ್ನು ತೆಗೆಯಲು ಹೋಗಿದ್ದಾರೆ. ಅಷ್ಟರಲ್ಲಿ ಗದ್ದೆ ನೋಡಲು ಹೋಗಿದ್ದ ರೈತ ಕೃಷ್ಣೇಗೌಡ ಎಂಬುವವರು ತಂತಿಯನ್ನು ತುಳಿದು ಸಾವಿಗೀಡಾಗಿದ್ದರು. ಈ ಘಟನೆ ಆಕಸ್ಮಿಕವಾಗಿ ನಡೆದಿದ್ದು, ಇಲಾಖೆಯ ಮೇಲಾಗಲಿ ಅಥವಾ ನೌಕರನ ಮೇಲಾಗಲಿ ಪ್ರಕರಣಗಳು ದಾಖಲಾಗಿರುವುದಿಲ್ಲ. ಆದರೆ ಮೇಲಧಿಕಾರಿಗಳು ಇಲಾಖೆಯ ನೌಕರರನ್ನು ಹೊಣೆ ಮಾಡುವ ಉದ್ದೇಶದಿಂದ ನೌಕರ ಚಂದ್ರು ಎಂಬುವವರನ್ನು ಕರ್ತವ್ಯದಿಂದ ಅಮಾನತು ಮಾಡಿದ್ದಾರೆ.

ನಿರಪರಾಧಿಯಾದ ಚಂದ್ರು ಹಲವಾರು ವರ್ಷ ಗಳಿಂದ ಇಲಾಖೆಯಲ್ಲಿ ಉತ್ತಮವಾಗಿ ಕೆಲಸ ನಿರ್ವ ಹಿಸುತ್ತಿದ್ದು, ಅಧಿಕಾರಿಗಳು ಒತ್ತಡಕ್ಕೆ ಮಣಿದು ಇಂತಹ ಕೆಲಸ ಮಾಡಿದ್ದಾರೆ. ಇದನ್ನು ನಮ್ಮ ಯೂನಿಯನ್‌ ಖಂಡಿಸಿದ್ದು, ಕೂಡಲೇ ಅಮಾನತ್ತು ಆದೇಶವನ್ನು ಹಿಂಪಡೆದು ನೌಕರ ಚಂದ್ರುನನ್ನು ಕರ್ತವ್ಯಕ್ಕೆ ಹಾಜರುಪಡಿಸಬೇಕು. ಇಲ್ಲವಾದರೆ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದರು.

ಪ್ರತಿಭಟನೆಯಲ್ಲಿ ಸಹಾಯಕ ಎಂಜಿನಿಯರ್‌ ಚಂದ್ರಶೇಖರ್‌, ಜೆ.ಇ. ಮರುಳಸಿದ್ದಸ್ವಾಮಿ, ಚಿಕ್ಕನಾಯಕನಹಳ್ಳಿ ಸಹಾಯಕ ಎಂಜಿನಿಯರ್‌ ಯೋಗೇಂದ್ರ, ತೇಜಮೂರ್ತಿ, ನರಸಿಂಹಮೂರ್ತಿ, ನಿರಂಜನ್‌ಮೂರ್ತಿ, ತುರುವೇಕೆರೆ, ತಿಪಟೂರು, ಚಿ.ನಾ.ಹಳ್ಳಿ ವಿಭಾಗದ ಅಧಿಕಾರಿಗಳು ಹಾಗೂ ನೌಕರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next