Advertisement

ಬೇಸಗೆಗೆ ಆರೋಗ್ಯಕರ ಆಹಾರ

03:45 AM Mar 26, 2017 | Team Udayavani |

ಋತುಮಾನ ಬದಲಾಗುತ್ತಿರುತ್ತದೆ, ಬೇಸಗೆ ಶುರುವಾದ ಹಾಗೆಲ್ಲ  ನಮ್ಮ ಶರೀರದಲ್ಲಿ ಹಲವಾರು ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ಬೇಸಗೆಯಲ್ಲಿ ಆರೋಗ್ಯಶಾಲಿಯಾಗಿ ಇರುವುದಕ್ಕಾಗಿ ನಾವು ನಮ್ಮ ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಬೇಸಗೆಯಲ್ಲಿ ಒಂದು  ಒಳ್ಳೆಯ ಮತ್ತು ಆರೋಗ್ಯಕರ ಆಹಾರ ಕ್ರಮವನ್ನು ಪಾಲಿಸುವುದು ಬಹಳ ಆವಶ್ಯಕ. ಒಳ್ಳೆಯ ಆಹಾರ ಕ್ರಮವು ಬೇಸಗೆಯಲ್ಲಿ ನೀವು ಫಿಟ್‌ ಆಗಿರಲು ಮತ್ತು ತಂಪಾಗಿರಲು ಸಹಾಯ ಮಾಡುವುದಷ್ಟೇ ಅಲ್ಲದೆ, ಒಳ್ಳೆಯ ಆಹಾರವು ಅನಾರೋಗ್ಯಕ್ಕೆ ಕಾರಣವಾಗುವ ಅನೇಕ ಕಾಯಿಲೆಗಳಿಂದ ನಿಮ್ಮನ್ನು  ದೂರ ಇರಿಸುತ್ತದೆ. 

Advertisement

ಬಾಯಾರಿಕೆ ನೀಗಿಸಿಕೊಳ್ಳಲು ನೀರು ಕುಡಿಯಿರಿ: ನೀರು ಕುಡಿಯುವುದು ನಿಮ್ಮ ಶರೀರವನ್ನು ತಂಪಾಗಿ ಇರಿಸಿಕೊಳ್ಳುವ ಅತ್ಯುತ್ತಮ ಉಪಾಯ. ವಾತಾವರಣದಲ್ಲಿ  ತೇವಾಂಶದ ಮಟ್ಟವು ವಿಶೇಷವಾಗಿದ್ದರೆ, ಬೆವರು ಕ್ಷಿಪ್ರವಾಗಿ ಆರಿ ಹೋಗುವುದಿಲ್ಲ. ಇದರಿಂದಾಗಿ ಶರೀರದಿಂದ ಉಷ್ಣತೆಯು ಸಮರ್ಪಕ ರೀತಿಯಲ್ಲಿ ಬಿಡುಗಡೆಯಾಗುವುದಕ್ಕೆ ತಡೆಯಾಗುತ್ತದೆ. ಈ ಕಾರಣದಿಂದಾಗಿ ಬೇಸಗೆಯಲ್ಲಿ ನಿಮಗೆ ಬಾಯಾರಿಕೆ ಆಗಿರದಿದ್ದರೂ ಸಹ ನೀವು ನೀರು ಕುಡಿಯಬೇಕು. ನಿಮ್ಮ ಚಟುವಟಿಕೆಯ ಮಟ್ಟ ಏನೇ ಆಗಿದ್ದರೂ ಪರವಾಗಿಲ್ಲ, ಆದರೆ ನಿಮ್ಮ ನೀರು ಕುಡಿಯುವ ಪ್ರಮಾಣವನ್ನು ಹೆಚ್ಚಿಸಿಕೊಳ್ಳಿ. 
ಕೆಫಿನ್‌ಯುಕ್ತ ಪಾನೀಯಗಳು ಅಥವಾ ಕಾಬೋìನೇಟೆಡ್‌ ಪಾನೀಯಗಳು, ಅಲ್ಕೋಹಾಲಿಕ್‌ ಪಾನೀಯಗಳು ಮತ್ತು ಅಧಿಕ ಸಕ್ಕರೆಯುಕ್ತ ಪಾನೀಯಗಳನ್ನು ಕುಡಿಯಬೇಡಿ: ಈ ಎಲ್ಲ ಪಾನೀಯಗಳಲ್ಲಿ ಸಂರಕ್ಷಕಗಳು, ಬಣ್ಣಗಳು ಮತ್ತು ಹೆಚ್ಚು ಸಕ್ಕರೆಯ ಅಂಶಗಳು ಇರುತ್ತವೆ. ಇವು ಆಮ್ಲಿàಯ ಪೇಯಗಳಾಗಿದ್ದು, ಡೈಯುರೆಟಿಕ್ಸ್‌ನಂತೆ ಕಾರ್ಯವೆಸಗುತ್ತವೆ. ಅಂದರೆ ಇವು ಮೂತ್ರದ ಮೂಲಕ ಹೆಚ್ಚು ದ್ರವಾಂಶವು ದೇಹದಿಂದ ಹೊರಹೋಗುವಂತೆ ಮಾಡುತ್ತವೆ. ಅನೇಕ ಲಘು ಪಾನೀಯಗಳಲ್ಲಿ ದುರ್ಬಲ ಪಾಸಾ#ರಿಕ್‌ ಆಸಿಡ್‌ ಇದ್ದು, ಇದು ಜೀರ್ಣಾಂಗವ್ಯೂಹದ ಒಳಪದರವನ್ನು ಹಾನಿಗೊಳಿಸಿ ಅದರ ಚಟುವಟಿಕೆಯ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಲಘು ಪಾನೀಯಗಳನ್ನು ಹೆಚ್ಚು ಸೇವಿಸಿದರೆ ರಕ್ತದಲ್ಲಿನ ಪಾಸ್ಫರಸ್‌ ಮಟ್ಟವು ಏರಿಕೆಯಾಗುತ್ತದೆ. ಇದು ಮೂಳೆಯಲ್ಲಿನ ಕ್ಯಾಲ್ಸಿಯಂ ಅನ್ನು ಬೇರ್ಪಡಿಸುತ್ತದೆ ಮತ್ತು ಅದನ್ನು ರಕ್ತಕ್ಕೆ ಸೇರಿಸುತ್ತದೆ. ಈ ರೀತಿಯಲ್ಲಿ ಕ್ಯಾಲ್ಸಿಯಂ ಬೇರ್ಪಡುವುದರಿಂದ ಮೂಳೆಯಲ್ಲಿ ರಂಧ್ರಗಳಾಗಿ, ದುರ್ಬಲವಾಗಿ ಮುರಿಯುತ್ತವೆ. ಹಲ್ಲುಗಳಲ್ಲಿ ದಂತ ಕಿಟ್ಟದ ಪದರ ಉಂಟಾಗುತ್ತದೆ, ಮೂತ್ರಪಿಂಡಗಳಲ್ಲಿ ಕಲ್ಲುಗಳಾಗುತ್ತವೆ, ಸಂಧಿವಾತ ಮತ್ತು ಮೂಳೆಯಲ್ಲಿ ಚುಚ್ಚುಮುಳ್ಳಿನಂಥ ಅಸಹಜ ಬೆಳವಣಿಗೆಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಲಘು ಪಾನೀಯಗಳು ಶರೀರದಲ್ಲಿನ ಖನಿಜಾಂಶದ ಮಟ್ಟವನ್ನೂ ಸಹ ತಗ್ಗಿಸುತ್ತವೆ ಮತ್ತು ಕಿಣ್ವಗಳು ಸರಿಯಾಗಿ ಕಾರ್ಯಾಚರಿಸದಂತೆ ಮಾಡುತ್ತವೆ. ಇದರ ಪರಿಣಾಮವಾಗಿ ಅಜೀರ್ಣ ಉಂಟಾಗುತ್ತದೆ.  

ಬಹಳ ತಂಪಾದ ನೀರನ್ನು ಕುಡಿಯಬೇಡಿ: ಈ ನೀರಿನಿಂದ ನಿಮಗೆ ಸ್ವಲ್ಪ ಸಮಯ ತಂಪು ಅನ್ನಿಸಬಹುದು, ಆದರೆ ಬೇಸಗೆೆಯಲ್ಲಿ ಬಹಳ ತಂಪಾದ ನೀರು ಕುಡಿಯುವುದರಿಂದ ಹೆಚ್ಚು ಪ್ರಯೋಜನವಾಗದು. ಬಹಳ ಬಿಸಿಯನ್ನು ಅನುಭವಿಸುತ್ತಿರುವಾಗ ನೀವು ತೀರಾ ತಂಪಾದ ನೀರನ್ನು ಕುಡಿಯುವುದರಿಂದ ಚರ್ಮದಲ್ಲಿನ ರಕ್ತನಾಳಗಳು ಸಣ್ಣಗೆ ಸಂಕುಚನಗೊಳ್ಳುತ್ತವೆ ಮತ್ತು ದೇಹದ ಶಾಖವು ನಷ್ಟವಾಗುವುದನ್ನು ತಡೆಯುತ್ತವೆ, ಇಂತಹ ಸಮಯದಲ್ಲಿ ದೇಹವು ವಿಪರೀತ ತಂಪಾಗುವುದನ್ನು ಸಲಹೆ ಮಾಡುವುದಿಲ್ಲ. 

ಪೋಷಣಾಭರಿತವಾದ, ಲಘುವಾದ ಮತ್ತು ಕೊಬ್ಬು-ರಹಿತ ಊಟವನ್ನು ಸೇವಿಸಿ: ಒಮ್ಮೆಗೆ ಭರ್ಜರಿ ಊಟ ಮಾಡಬೇಡಿ ಇದರಿಂದ ಅಸಿಡಿಟಿ ಆಗಬಹುದು ಮತ್ತು ಜೀರ್ಣಕ್ರಿಯೆಯ ಮೇಲೆ ಪರಿಣಾಮ ಉಂಟಾಗಬಹುದು. ಬೇಸಗೆಯಲ್ಲಿ ಸಣ್ಣ ಸಣ್ಣ ಪ್ರಮಾಣದ ಊಟಗಳನ್ನು ಅಥವಾ ಆಹಾರಗಳನ್ನು ಸೇವಿಸುವುದರಿಂದ ನಿಮಗೆ ಹಿತ ಎನಿಸಬಹುದು ಮತ್ತು ಇದು ನಿಮ್ಮ ಶರೀರ ವ್ಯವಸ್ಥೆಯನ್ನು ಹೆಚ್ಚು ಚುರುಕಾಗಿರಿಸುತ್ತದೆ. 

ಒಣಹಣ್ಣುಗಳನ್ನು ಕಡಿಮೆ ಸೇವಿಸಿ: ತಾಜಾ ಹಣ್ಣುಗಳನ್ನು ಹೆಚ್ಚು ಸೇವಿಸಿ. 

Advertisement

ಹಣ್ಣು ಮತ್ತು ತರಕಾರಿಗಳನ್ನು ಸಮೃದ್ಧವಾಗಿ ಸೇವಿಸಿ: ತಾಜಾ ಹಣ್ಣು ಮತ್ತು ತರಕಾರಿಗಳನ್ನು ಯಥೇತ್ಛವಾಗಿ ಸೇವಿಸಿ, ಹಸಿ ಸಲಾಡ್‌ಗಳು ಮತ್ತು ಸ್ವಲ್ಪವೇ ಮಸಾಲೆ ಸೇರಿಸಿದ ಆಹಾರಗಳನ್ನು ಸೇವಿಸಿ. ಹಣ್ಣು ಮತ್ತು ತರಕಾರಿಗಳನ್ನು ಜೀರ್ಣಿಸಿಕೊಳ್ಳುವುದು ಸುಲಭ ಮತ್ತು ಇವುಗಳಲ್ಲಿ ನೀರಿನಂಶವೂ ಸಹ ಸಮೃದ್ಧವಾಗಿದ್ದು ಇದು ದೇಹವನ್ನು ಜಲಾಂಶ ಭರಿತವಾಗಿ ಇರಿಸಿಕೊಳ್ಳಲು ಸಹಾಯ ಮಾಡುತ್ತದೆ. 

ನಿಂಬೆ ಶರಬತ್ತು, ಎಳನೀರು ಮತ್ತು ನೀರು ಮಜ್ಜಿಗೆಯನ್ನು ಕುಡಿಯಿರಿ: ಬೆವರಿನ ಮೂಲಕ ಮೈಯಿಂದ ಹೊರಬಿದ್ದ ಜಲಾಂಶವನ್ನು ಮರುಪೂರಣಗೊಳಿಸಲು ನಿಂಬೆ ಶರಬತ್ತು, ಎಳನೀರು ಮತ್ತು ನೀರು ಮಜ್ಜಿಗೆಯನ್ನು ಕುಡಿಯುವುದು ಒಳ್ಳೆಯ ಉಪಾಯ. 

ಹೆಚ್ಚು ಸಿಹಿಯಾದ ಆಹಾರಗಳನ್ನು ದೂರವಿರಿಸಿ: ಹಣ್ಣು ಮತ್ತು ತರಕಾರಿಗಳ ಮೂಲಕ ಸಿಗುವ ನೈಸರ್ಗಿಕ ಸಕ್ಕರೆಯನ್ನು ಹೆಚ್ಚು ನೆಚ್ಚಿಕೊಳ್ಳಿ ಮತ್ತು ಹೆಚ್ಚು ಸಿಹಿಯಾದ ಆಹಾರಗಳಿಂದ ದೂರವಿರಿ. 

ಬಿಸಿಯಾದ, ಮಸಾಲೆ ಭರಿತ ಮತ್ತು ವಿಶೇಷವಾಗಿ ಉಪ್ಪುಳ್ಳ ಆಹಾರಗಳನ್ನು ಕಡಿಮೆ ಸೇವಿಸಿ. 

ಕರಿದ ಪದಾರ್ಥಗಳನ್ನು ಕಡಿಮೆ ಸೇವಿಸಿ: ವಡಾ, ಸಮೋಸಾ, ಚಿಪ್ಸ್‌, ಭಜಿಯಾ ಇತ್ಯಾದಿ ಕರಿದ ಪದಾರ್ಥಗಳನ್ನು ಕಡಿಮೆ ಸೇವಿಸಿ. ಕೊಬ್ಬಿನ ಆಹಾರಗಳು ಶರೀರದಲ್ಲಿ ಥರ್ಮಲ್‌ ಇಫೆಕ್ಟ್ ಉಂಟು ಮಾಡುತ್ತವೆ ಮತ್ತು ಜೀರ್ಣವಾಗಲು ಸಮಯ ತೆಗೆದುಕೊಳ್ಳುತ್ತದೆ.  ಇದನ್ನು ಜೀರ್ಣಿಸಿಕೊಳ್ಳಲು ಬಹಳಷ್ಟು ನೀರು ಕುಡಿಯಬೇಕಾಗುತ್ತದೆ. 

ಶುಚಿತ್ವವನ್ನು ಕಾಪಾಡಿಕೊಳ್ಳಿ: ಆಹಾರಗಳನ್ನು ತೆರೆದಿರಿಸಬೇಡಿ. ವಾಕರಿಕೆ, ವಾಂತಿ ಮತ್ತು ಭೇದಿಗೆ ಕಾರಣ ಆಗುವ ಅಪಾಯಕಾರಿ ಬ್ಯಾಕ್ಟೀರಿಯಾಗಳು ಆಹಾರವನ್ನು ಕಲುಷಿತಗೊಳಿಸಬಹುದು.  ಶೌಚದ ಅನಂತರ ಮತ್ತು ಆಹಾರ ಸೇವಿಸುವುದಕ್ಕೆ ಮೊದಲು ಯಾವಾಗಲೂ ನಿಮ್ಮ ಕೈಗಳನ್ನು ಬೆಚ್ಚಗಿನ ಸಾಬೂನು ನೀರಿನಿಂದ ತೊಳೆದುಕೊಳ್ಳಿ.

ಊಟ ತಪ್ಪಿಸಬೇಡಿ: ಬಹಳ ಜನರು ದಿಢೀರ್‌ ಆಗಿ ತೂಕವನ್ನು ಕಳೆದುಕೊಳ್ಳುವುದಕ್ಕಾಗಿ ಊಟವನ್ನು ತಪ್ಪಿಸಿಕೊಳ್ಳುತ್ತಾರೆ.  ಇದು ಬಹಳ ಅನಾರೋಗ್ಯಕರ ವಿಧಾನವಾಗಿದ್ದು, ಇದರಿಂದಾಗಿ ಶರೀರದ ವ್ಯವಸ್ಥೆಯು ಏರುಪೇರಾಗುವ ಸಾಧ್ಯತೆ ಇದೆ. ಊಟ ತಪ್ಪಿಸುವುದರಿಂದ ಶರೀರದ ಚಯಾಪಚಯ ಕ್ರಿಯೆಯು ನಿಧಾನಗೊಳ್ಳುತ್ತದೆ, ಅಂದರೆ ಶರೀರವು ಕೆಲವೇ ಕ್ಯಾಲೊರಿಗಳನ್ನು ದೇಹಗತ ಮಾಡುತ್ತದೆ. ಹಾಗಾಗಿ ಆಗಾಗ ಸಣ್ಣ ಸಣ್ಣ ಪ್ರಮಾಣದ ಊಟ ಸೇವಿಸಿ.

ಮೊಸರು ಬೇಸಗೆ ಸಮಯಕ್ಕೆ ಅತ್ಯುತ್ತಮ ಆಹಾರ: ಮೊಸರಿನಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾವು ಜೀರ್ಣಕ್ರಿಯೆಯನ್ನು ಮತ್ತು ದೇಹದ ರೋಗಪ್ರತಿರೋಧಕ ವ್ಯವಸ್ಥೆಯನ್ನು ಉತ್ತಮಪಡಿಸುತ್ತದೆ

ತಾಜಾ ಮಾವಿನ ಹಣ್ಣುಗಳು ಬೇಸಗೆ ಕಾಲದ ವಿಶೇಷ ಹಣ್ಣುಗಳು:
ಸನ್‌ಸ್ಟ್ರೋಕ್‌ ಮತ್ತು ದೇಹದ ನಿಶ್ಯಕ್ತಿಯನ್ನು ಹೋಗಲಾಡಿಸುವಲ್ಲಿ  ಮಾವಿನ ಹಣ್ಣುಗಳು ಉತ್ತಮ ಆಹಾರಗಳು. ಸಲಾಡ್‌ ಅಥವಾ ಇನ್ನಾವುದೇ ರೀತಿಯಲ್ಲಿ ಅಡುಗೆಯಲ್ಲಿ ಹಣ್ಣುಗಳನ್ನು ಬಳಸಿಕೊಳ್ಳಬಹುದು. 

ನಿಮ್ಮ ಆಹಾರವು ತಾಜಾ ಇದೆ ಎಂಬುದನ್ನು ಖಚಿತಪಡಿಸಿಕೊಳ್ಳಿ: ನೀವು ಬೇಸಗೆಯ ಲಘು ಆಹಾರವನ್ನು ಸೇವಿಸಿಯೂ, ಅದು ತಾಜಾ ಇಲ್ಲದಿದ್ದರೆ ಅಥವಾ ಅದರ ಗುಣಮಟ್ಟ ಉತ್ತಮವಾಗಿಲ್ಲದಿದ್ದರೆ, ನಿಮ್ಮ ಬೇಸಗೆಯ ಲಘು ಆಹಾರ ಸೇವನೆಯ ಪ್ರಯೋಜನ ದೊರಕದೆಯೇ ಇರಬಹುದು. ಬೇಸಗೆ ಕಾಲದಲ್ಲಿ ಆಹಾರ ಬಹಳ ಬೇಗ ಕಲುಷಿತಗೊಳ್ಳುತ್ತದೆ. ಹಾಗಾಗಿ ಈ ಅವಧಿಯಲ್ಲಿ ನೀವು ಮಾಂಸ, ಮೀನು ಮತ್ತು ಸಮುದ್ರಾಹಾರಗಳ ಅಡುಗೆಯನ್ನು ತಯಾರಿಸುತ್ತೀರಾದರೆ ಶುಚಿತ್ವಕ್ಕೆ ಹೆಚ್ಚು ಗಮನ ಕೊಡಬೇಕು. 

ಮಾಂಸ, ಮೊಟ್ಟೆ ಮತ್ತು ಕೋಳಿಯ ಮಾಂಸದ ಅಡುಗೆಗಳನ್ನು ಅಧಿಕ ಉಷ್ಣತೆಯಲ್ಲಿ ಬೇಯಿಸಿ. ಕಾಯಿಲೆಯನ್ನು ಉಂಟುಮಾಡುವ ಬ್ಯಾಕ್ಟೀರಿಯಾಗಳಾದ ಈ-ಕೋಲಿ, ಸಾಲ್ಮೊನೆಲ್ಲಾ ಮತ್ತು ಲಿಸ್ಟೇರಿಯಾಗಳು ಅಧಿಕ ಉಷ್ಣತೆಯಲ್ಲಿ ಮಾತ್ರವೇ ನಾಶವಾಗುತ್ತವೆ. 

ವಿವಿಧ ರೀತಿಯ ಹೊಸ ಮತ್ತು ಋತುಮಾನಕ್ಕೆ ತಕ್ಕನಾದ ಆಹಾರಗಳನ್ನು ಆರಿಸಿಕೊಳ್ಳುವ ಮೂಲಕ ಬೇಸಗೆಯ ಉದ್ದಕ್ಕೂ ಆರೋಗ್ಯ ಮತ್ತು ಆನಂದದಿಂದ ಇರಬಹುದು. 

ಇಲ್ಲಿ ಶಿಫಾರಸು ಮಾಡಿರುವ ಆಹಾರಗಳು ಬಹಳ ಸಾಮಾನ್ಯ ರೀತಿಯವುಗಳು. ಬೇಸಗೆಯ ಆಹಾರ ಕ್ರಮಕ್ಕೆ ವಿರುದ್ಧವಾದ, ನಿರ್ದಿಷ್ಟ ರೀತಿಯ ಆಹಾರ ಕ್ರಮವನ್ನು ಅಥವಾ ಪಥ್ಯಾಹಾರವನ್ನು ನೀವು ಅನುಸರಿಸುತ್ತಿರಬಹುದು. ಕೆಲವು ಜನರಿಗೆ ಹಸಿ ಆಹಾರಗಳನ್ನು ಜೀರ್ಣಿಸಿಕೊಳ್ಳುವುದಕ್ಕೆ ಕಷ್ಟವಾಗಬಹುದು; ಇನ್ನು ಕೆಲವರಿಗೆ ಸ್ವಲ್ಪವೂ ಸಕ್ಕರೆಯ ಅಂಶವನ್ನು ಸೇವಿಸದೇ ಇರುವ ಅಥವಾ ಹಣ್ಣಿನ ಸಕ್ಕರೆಯ ಅಂಶವನ್ನು ಸೇವಿಸಲು ನಿರ್ಬಂಧ ಇರುವ ಆರೋಗ್ಯ ಸಮಸ್ಯೆ ಇರಬಹುದು. ಈ ವರ್ಗದ ಜನರು ತಮ್ಮ ವೈದ್ಯರೊಂದಿಗೆ ಸಮಾಲೋಚಿಸಿ ಬೇಸಗೆಯ ಆಹಾರ ಕ್ರಮದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬಹುದು. 

– ದಕ್ಷಾ ಕುಮಾರಿ,   
ಆಹಾರ ತಜ್ಞರು, 
ನ್ಯೂಟ್ರೀಷನ್‌ ಎಂಡ್‌ ಡಯಟಿಕ್ಸ್‌  ವಿಭಾಗ,
ಕಸ್ತೂರ್ಬಾ ಆಸ್ಪತ್ರೆ,  ಮಣಿಪಾಲ.

Advertisement

Udayavani is now on Telegram. Click here to join our channel and stay updated with the latest news.

Next