Advertisement

Bengaluru: ಆರ್‌ಬಿಐಗೇ ನಕಲಿ ನೋಟು ನೀಡಿ ವಂಚನೆ ಯತ್ನ

12:20 PM Oct 11, 2024 | Team Udayavani |

ಬೆಂಗಳೂರು: ಎರಡು ಸಾವಿರ ಮುಖಬೆಲೆಯ ನಕಲಿ ನೋಟುಗಳನ್ನು ಮುದ್ರಿಸಿದಲ್ಲದೆ, ಆರ್‌ಬಿಐ ಬ್ಯಾಂಕ್‌ ನಲ್ಲಿ ಬದಲಾವಣೆಗೆ ಯತ್ನಿಸಿದ ಐವರು ಹಲಸೂರು ಗೇಟ್‌ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Advertisement

ಬಳ್ಳಾರಿ ಜಿಲ್ಲೆ ಸಿರಿಗುಪ್ಪ ತಾಲೂಕಿನ ಸಿರಿಗೆರೆ ನಿವಾಸಿ ಎ.ಕೆ.ಅಫ್ಜಲ್‌ ಹುಸೇನ್‌ (29), ಪುದುಚೆರಿ ಮೂಲದ ಪ್ರಸೀತ್‌ (47), ಕೇರಳ ಮೂಲದ ಮೊಹಮ್ಮದ್‌ ಅಫ್ನಾಸ್ (34), ನೂರುದ್ದೀನ್‌ ಅಲಿಯಾಸ್‌ ಅನ್ವರ್‌ (34) ಹಾಗೂ ಪ್ರಿಯೇಶ್‌(34) ಬಂಧಿತರು. ‌ಆರೋಪಿಗಳಿಂದ 52.40 ಲಕ್ಷ ರೂ. ಮೌಲ್ಯದ 2 ಸಾವಿರ ರೂ. ಮುಖಬೆಲೆಯ ನಕಲಿ ನೋಟುಗಳು ಹಾಗೂ ಎರಡು ಮೊಬೈಲ್‌ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.

ಬಳ್ಳಾರಿ ಮೂಲದ ಆರೋಪಿ ಅಫ್ಜಲ್‌ ಹುಸೇನ್‌, ಸೆ.9ರಂದು ನೃಪತುಂಗ ರಸ್ತೆಯ ಆರ್‌ಬಿಐ ಬ್ಯಾಂಕ್‌ ಗೆ ಬಂದಿದ್ದು, 2 ಸಾವಿರ ರೂ. ಮುಖಬೆಲೆಯ 24.68 ಲಕ್ಷ ರೂ. ಗಳನ್ನು 500 ರೂ. ಮುಖಬೆಲೆಯ ನೋಟುಗಳಿಗೆ ಬದಲಾವಣೆಗೆ ಮುಂದಾಗಿದ್ದ. ಈ ವೇಳೆ ಬ್ಯಾಂಕಿನ ಅಧಿಕಾರಿಗಳು 2 ಸಾವಿರ ರೂ. ಮುಖ ಬೆಲೆಯ ನೋಟುಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಪರಿಶೀಲನೆ ನಡೆಸಿದಾಗ ನಕಲಿ ಎಂಬುದು ಗೊತ್ತಾಗಿದೆ.

ಈ ಸಂಬಂಧ ಆರ್‌ಬಿಐ ಬ್ಯಾಂಕಿನ ಎಜಿಎಂ ಭೀಮ್‌ ಚೌಧರಿ ಎಂಬುವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಅಫ್ಜಲ್‌ ಹುಸೇನ್‌ನನ್ನು ಬಂಧಿಸಿ, ವಿಚಾರಣೆ ನಡೆಸಿದಾಗ ನಕಲಿ ನೋಟು ದಂಧೆಯನ್ನು ಬಯಲಿಗೆಳೆದಿದ್ದಾರೆ.

ಈತನ ನೀಡಿದ ಮಾಹಿತಿ ಮೇರೆಗೆ ಉಳಿದ ನಾಲ್ವರು ಆರೋಪಿಗಳನ್ನು ಕೇರಳದಲ್ಲಿ ಬಂಧಿಸಿದ್ದು, ಅವರಿಂದ 27.72 ಲಕ್ಷ ರೂ. ಮೌಲ್ಯದ 2 ಸಾವಿರ ರೂ. ಮುಖಬೆಲೆಯ ನಕಲಿ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

Advertisement

ಗ್ರಾನೈಟ್‌ ವ್ಯವಹಾರ: ಆರೋಪಿ ಅಫ್ಜಲ್‌ ಹುಸೇನ್‌ ಬಳ್ಳಾರಿಯಲ್ಲಿ ಗ್ರಾನೈಟ್‌ ವ್ಯವಹಾರ ನಡೆಸುತ್ತಿದ್ದು, ಕೇರಳ ಮೂಲದ ಆರೋಪಿ ನೂರುದ್ದೀನ್‌ಗೆ ಗ್ರಾನೈಟ್‌ ವ್ಯವಹಾರ ಸಂಬಂಧ ಅಫ್ಜಲ್‌ ಹುಸೇನ್‌ಗೆ 25 ಲಕ್ಷ ರೂ. ನೀಡಬೇಕಿತ್ತು. ಈ ಹಣವನ್ನು ಕೊಡುವಂತೆ ಕೇಳಿದಾಗ, ತನ್ನ ಬಳಿ 500 ರೂ. ಮುಖಬೆಲೆಯ ನೋಟುಗಳು ಇಲ್ಲ. 2 ಸಾವಿರ ರೂ. ಮುಖಬೆಲೆಯ ನೋಟುಗಳಿದ್ದು, ಅವುಗಳನ್ನು 500 ರೂ. ಮುಖ ಬೆಲೆಯ ನೋಟುಗಳಿಗೆ ಬದಲಾವಣೆ ಮಾಡಿ ಕೊಳ್ಳುವಂತೆ ಕೇಳಿಕೊಂಡಿದ್ದ. ಹೀಗಾಗಿ ಆರೋಪಿ ಅಫ್ಜಲ್‌ ಹುಸೇನ್‌ ಸೆ.9ರಂದು 24.68 ಲಕ್ಷ ರೂ. ಮೌಲ್ಯದ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ತೆಗೆದುಕೊಂಡು ಆರ್‌ಬಿಐ ಬ್ಯಾಂಕ್‌ಗೆ ಬಂದು ಬದಲಾವಣೆಗೆ ಮುಂದಾಗಿದ್ದ ಎಂದು ಪೊಲೀಸರು ತಿಳಿಸಿದರು.

ನಕಲಿ ನೋಟು ಚಲಾವಣೆಗೆ ಹಲವರಿಗೆ ವಿಡಿಯೋ

ಆರೋಪಿಗಳ ಪೈಕಿ ನೂರುದ್ದೀನ್‌ ಮತ್ತು ಮೊಹಮ್ಮದ್‌ ಅಫ್ನಾಸ್ ಈ ನಕಲಿ ನೋಟುಗಳನ್ನು ವಿಡಿಯೋ ಮಾಡಿ ಚಲಾವಣೆಗೆ ಮಾಡಿಸಲು ಹಲವು ಜನರಿಗೆ ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಈ ನಕಲಿ ನೋಟು ಮುದ್ರಿಸುತ್ತಿದ್ದ ಆರೋಪಿ ಪ್ರಿಯೇಶ್‌ನನ್ನು ಈ ಹಿಂದೆ ಮಂಗಳೂರು ಸೈಬರ್‌ ಕ್ರೈಂ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು ಎಂಬುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದರು.

ಕೇರಳ ಪ್ರಿಂಟಿಂಗ್‌ ಪ್ರಸ್‌ನಲ್ಲಿ ನಕಲಿ ನೋಟು ಮುದ್ರಣ ಕೇರಳದ ಕಾಸರಗೋಡು ಜಿಲ್ಲೆಯ ಚರ್ಕಳಾದಲ್ಲಿ ಆರೋಪಿ ಪ್ರಿಯೇಶ್‌, ಕಳೆದ 20 ವರ್ಷಗಳಿಂದ ಪ್ರಿಂಟಿಂಗ್‌ ಪ್ರಸ್‌ ನಡೆಸುತ್ತಿದ್ದಾನೆ. ಆರೋಪಿಯು ಕ್ಯಾಲಿಕಟ್‌ನಿಂದ ವಿಶೇಷ ಪೇಪರ್‌ ಹಾಗೂ ನೋಟು ತಯಾರಿಸುವ ಸಾಮಗ್ರಿಗಳನ್ನು ತಂದು ತನ್ನದೇ ಪ್ರಿಂಟಿಂಗ್‌ ಪ್ರಸ್‌ನಲ್ಲಿ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಮುದ್ರಿಸಿ ಚಲಾವಣೆಗಾಗಿ ಆರೋಪಿ ನೂರುದ್ದೀನ್‌ಗೆ ನೀಡಿದ್ದ. ಬಳಿಕ ನೂರುದ್ದೀನ್‌ ಇತರೆ ಆರೋಪಿಗಳ ಜತೆ ಸೇರಿಕೊಂಡು ನಕಲಿ ನೋಟುಗ ಳನ್ನು ಚಲಾವಣೆ ಮಾಡುತ್ತಿದ್ದ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next