Advertisement

Bengaluru 5ನೇ ಟಿ20 : ಅಂತಿಮ ಪಂದ್ಯ ಅಭ್ಯಾಸಕ್ಕೆ ಮೀಸಲು

11:35 PM Dec 02, 2023 | Team Udayavani |

ಬೆಂಗಳೂರು: ಆಸ್ಟ್ರೇಲಿಯ ವಿರುದ್ಧ ವಿಶ್ವಕಪ್‌ ಫೈನಲ್‌ನಲ್ಲಿ ಭಾರತದ ಕ್ರಿಕೆಟ್‌ ಪ್ರೇಮಿಗಳಿಗೆ ಎದುರಾದ ಆಘಾತ, ಹತಾಶೆ, ನಿರಾಸೆ ಎನ್ನುವುದು ಟಿ20 ಸರಣಿ ಗೆಲುವಿನೊಂದಿಗೆ ಸ್ವಲ್ಪ ಮಟ್ಟಿಗಾದರೂ ತಿಳಿಯಾಗಿದೆ. ಹಾಗೆಯೇ ಸೂರ್ಯಕುಮಾರ್‌ ಯಾದವ್‌ಗೆ ನಾಯಕತ್ವ ನೀಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದವರಿಗೂ ಒಂದಿಷ್ಟು ಖುಷಿಯಾಗಿದೆ. “ಯಂಗ್‌ ಇಂಡಿಯಾ’ ಸರಣಿ ಗೆಲುವಿನ ಅಂತರವನ್ನು 4-1ಕ್ಕೆ ವಿಸ್ತರಿಸೀತೇ ಎಂಬುದು ಮುಂದಿನ ನಿರೀಕ್ಷೆ.

Advertisement

ರವಿವಾರದ 5ನೇ ಹಾಗೂ ಅಂತಿಮ ಟಿ20 ಪಂದ್ಯಕ್ಕೆ ಉದ್ಯಾನನಗರಿಯ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ ಸಾಕ್ಷಿಯಾಗಲಿದೆ. ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ಇದು ಭಾರತದ ಪಾಲಿನ ಕೊನೆಯ ಅಂತಾರಾಷ್ಟ್ರೀಯ ಪಂದ್ಯ. ಹೀಗಾಗಿ ಇದನ್ನೂ ಗೆದ್ದು ಹೊಸ ಹುರುಪಿನಲ್ಲಿ ಹರಿಣಗಳ ನಾಡಿಗೆ ಪ್ರವಾಸ ತೆರಳುವ ಯೋಜನೆ ಭಾರತ ತಂಡದ್ದು.

ಬೆಂಗಳೂರು ಪಂದ್ಯ ಭಾರತದ ಪಾಲಿಗೆ ಬಹುತೇಕ ಅಭ್ಯಾಸಕ್ಕೆ ಮೀಸಲು. ದಕ್ಷಿಣ ಆಫ್ರಿಕಾ ವಿರುದ್ಧ ಶ್ರೇಯಸ್‌ ಅಯ್ಯರ್‌, ದೀಪಕ್‌ ಚಹರ್‌ ಪ್ರಮುಖ ಪಾತ್ರ ವಹಿಸಬೇಕಿರುವುದರಿಂದ ಈ ಕೊನೆಯ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಳ್ಳಬೇಕಿದೆ. ಅಯ್ಯರ್‌ ಸರಿಸುಮಾರು ಒಂದು ವರ್ಷದ ಬಳಿಕ ಟಿ20 ಪಂದ್ಯ ಆಡಿದ್ದು, 7 ಎಸೆತಗಳಿಂದ ಕೇವಲ 8 ರನ್‌ ಮಾಡಿ ವಾಪಸಾಗಿದ್ದರು. ಬೆಂಗಳೂರಿನಲ್ಲಿ ಮಿಂಚುವ ನಿರೀಕ್ಷೆ ಇರಿಸಿಕೊಳ್ಳಲಾಗಿದೆ. ಇಲ್ಲಿಯೇ ನಡೆದ ನೆದರ್ಲೆಂಡ್ಸ್‌ ಎದುರಿನ ಕೊನೆಯ ವಿಶ್ವಕಪ್‌ ಲೀಗ್‌ ಪಂದ್ಯದಲ್ಲಿ ಅಯ್ಯರ್‌ ಶತಕ ಬಾರಿಸಿದ್ದನ್ನು ಮರೆಯುವಂತಿಲ್ಲ.

ದೀಪಕ್‌ ಚಹರ್‌ ಕೂಡ ಒಂದು ವರ್ಷದ ಬಳಿಕ ಟಿ20 ಆಡಲಿಳಿದಿದ್ದರು. 44ಕ್ಕೆ 2 ವಿಕೆಟ್‌ ಕೆಡವಿದರೂ ಇನ್ನಷ್ಟು ಮಿತವ್ಯಯಿ ಆಗಬೇಕಾಗಿದೆ.

ವಾಷಿಂಗ್ಟನ್‌ಗೆ ಅವಕಾಶ?
ಆಲ್‌ರೌಂಡರ್‌ ವಾಷಿಂಗ್ಟನ್‌ ಸುಂದರ್‌ ಈ ಪಂದ್ಯದಲ್ಲಿ ಆಡುವ ಸಾಧ್ಯತೆ ಇದೆ. ಫೆ. ಒಂದರಂದು ನ್ಯೂಜಿಲ್ಯಾಂಡ್‌ ವಿರುದ್ಧ ಅಹ್ಮದಾಬಾದ್‌ ಪಂದ್ಯದಲ್ಲಿ ವಾಷಿಂಗ್ಟನ್‌ ಟಿ20 ಕ್ರಿಕೆಟಿಗೆ ಮರಳಿದರೂ ಅಲ್ಲಿ ಬ್ಯಾಟಿಂಗ್‌, ಬೌಲಿಂಗ್‌ ಅವಕಾಶವೆರಡೂ ಸಿಗಲಿಲ್ಲ. ಅನಂತರ ಐರ್ಲೆಂಡ್‌ ಮತ್ತು ಹ್ಯಾಂಗ್‌ಝೂ ಏಷ್ಯಾಡ್‌ನ‌ಲ್ಲಿ 5 ಪಂದ್ಯಗಳನ್ನಾಡುವ ಅವಕಾಶ ಇವರಿಗೆ ಲಭಿಸಿತ್ತು. ಬೆಂಗಳೂರಿನಲ್ಲಿ ಇವರು ಅಕ್ಷರ್‌ ಪಟೇಲ್‌ ಬದಲು ಆಡಲಿಳಿಯಬಹುದು. ಅಕ್ಷರ್‌ ದಕ್ಷಿಣ ಆಫ್ರಿಕಾ ಪ್ರವಾಸದ ಟಿ20 ಸರಣಿಗೆ ಆಯ್ಕೆಯಾಗಿಲ್ಲ.

Advertisement

ಭಾರತದ ಬ್ಯಾಟಿಂಗ್‌ ಯಶಸ್ಸು ಈ ಸರಣಿಯ ಆಶಾಕಿರಣ. ಜೈಸ್ವಾಲ್‌, ಗಾಯಕ್ವಾಡ್‌, ಸೂರ್ಯಕುಮಾರ್‌, ರಿಂಕು ಸಿಂಗ್‌, ಇಶಾನ್‌ ಕಿಶನ್‌ ಉತ್ತಮ ಪ್ರದರ್ಶನ ನೀಡಿದ್ದಾರೆ. ತಿಲಕ್‌ ವರ್ಮ ಬದಲು ಆಡಲಿಳಿದ ಜಿತೇಶ್‌ ಶರ್ಮ ಕೂಡ ಜಬರ್ದಸ್ತ್ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಭಾರತದ ಬ್ಯಾಟಿಂಗ್‌ ಸರದಿಯಲ್ಲಿ ಬದಲಾವಣೆ ಸಂಭವಿಸುವ ಸಾಧ್ಯತೆ ಕಡಿಮೆ.

ಸಂಭಾವ್ಯ ತಂಡಗಳು
ಭಾರತ: ಯಶಸ್ವಿ ಜೈಸ್ವಾಲ್‌, ಋತುರಾಜ್‌ ಗಾಯಕ್ವಾಡ್‌, ಶ್ರೇಯಸ್‌ ಅಯ್ಯರ್‌, ಸೂರ್ಯ ಕುಮಾರ್‌ ಯಾದವ್‌ (ನಾಯಕ), ಜಿತೇಶ್‌ ಶರ್ಮ, ರಿಂಕು ಸಿಂಗ್‌, ವಾಷಿಂಗ್ಟನ್‌ ಸುಂದರ್‌, ರವಿ ಬಿಷ್ಣೋಯಿ, ದೀಪಕ್‌ ಚಹರ್‌, ಆವೇಶ್‌ ಖಾನ್‌, ಮುಕೇಶ್‌ ಕುಮಾರ್‌.
ಆಸ್ಟ್ರೇಲಿಯ: ಜೋಶ್‌ ಫಿಲಿಪ್‌, ಟ್ರ್ಯಾವಿಸ್‌ ಹೆಡ್‌, ಬೆನ್‌ ಮೆಕ್‌ಡರ್ಮಟ್‌, ಆರನ್‌ ಹಾರ್ಡಿ, ಟಿಮ್‌ ಡೇವಿಡ್‌, ಮ್ಯಾಥ್ಯೂ ಶಾರ್ಟ್‌, ಮ್ಯಾಥ್ಯೂ ವೇಡ್‌ (ನಾಯಕ), ಬೆನ್‌ ಡ್ವಾರ್ಶಿಯಸ್‌, ಕ್ರಿಸ್‌ ಗ್ರೀನ್‌, ಜೇಸನ್‌ ಬೆಹೆÅಂಡಾಫ್ì, ತನ್ವೀರ್‌ ಸಂಘಾ.

ಆರಂಭ: ರಾ. 7.00
ಪ್ರಸಾರ: ಸ್ಪೋರ್ಟ್ಸ್ 18

ನೆನಪಿಗೆ ಬಂದ ಮ್ಯಾಕ್ಸ್‌ವೆಲ್‌!
ಏಕದಿನ ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯಕ್ಕೆ ಸರಣಿ ಸೋಲಿನ ಅಂತರವನ್ನು ಕಡಿಮೆ ಮಾಡಿಕೊಳ್ಳುವುದಷ್ಟೇ ಮುಂದಿರುವ ಮಾರ್ಗ. ತಂಡದ ಸ್ಟಾರ್‌ ಆಟಗಾರರೆಲ್ಲ ಈಗಾಗಲೇ ತವರಿಗೆ ವಾಪಸಾಗಿದ್ದು, ಟಿ20 ಸ್ಪೆಷಲಿಸ್ಟ್‌ ಎನಿಸಿಕೊಂಡ ಒಂದಿಷ್ಟು ಕ್ರಿಕೆಟಿಗರು ಉಳಿದಿದ್ದಾರೆ. ಇದರ ಫ‌ಲಶ್ರುತಿ ರಾಯ್‌ಪುರದ 4ನೇ ಪಂದ್ಯದಲ್ಲಿ ಅರಿವಿಗೆ ಬಂತು. ಚೇಸಿಂಗ್‌ ವೇಳೆ ಗ್ಲೆನ್‌ ಮ್ಯಾಕ್ಸ್‌ ವೆಲ್‌ ನೆನಪಿಗೆ ಬಂದರು!
ಕಳೆದೆರಡು ತಿಂಗಳಿಂದ ಭಾರತ ಪ್ರವಾಸದಲ್ಲಿದ್ದ ಆಸ್ಟ್ರೇಲಿಯ ಅಂತಿಮ ಟಿ20 ಪಂದ್ಯ ಗೆದ್ದು ತವರಿಗೆ ತೆರಳುವ ಯೋಜನೆಯಲ್ಲಿದೆ. ಆ್ಯಶಸ್‌, ಐಸಿಸಿ ಪಂದ್ಯಾವಳಿ, ಪ್ರಮುಖ ಟೆಸ್ಟ್‌ ಸರಣಿಗಳಿಗಷ್ಟೇ ಹೆಚ್ಚಿನ ಮಹತ್ವ ನೀಡುವ ಆಸ್ಟ್ರೇಲಿಯ, ಟಿ20 ಪಂದ್ಯಗಳನ್ನು ಗಂಭೀರವಾಗಿ ಪರಿಗಣಿಸಿದ್ದು ಕಡಿಮೆ. ಇಂಥ ಸರಣಿಯನ್ನು ಜಿದ್ದಿಗೆ ಬಿದ್ದು ಆಡುವುದೂ ಇಲ್ಲ. ಆದರೂ ಹೋರಾಟವಂತೂ ಜಾರಿಯಲ್ಲಿರುತ್ತದೆ.
ಮ್ಯಾಥ್ಯೂ ವೇಡ್‌, ಟ್ರ್ಯಾವಿಸ್‌ ಹೆಡ್‌, ಜೇಸನ್‌ ಬೆಹ್ರೆಂಡಾರ್ಫ್ ಹೊರತುಪಡಿಸಿದರೆ ಉಳಿದವರೆಲ್ಲ ಬಹುತೇಕ ಅನನುಭವಿಗಳು. ಆದರೆ ಟಿ20ಗೆ ಓಕೆ.

Advertisement

Udayavani is now on Telegram. Click here to join our channel and stay updated with the latest news.

Next