Advertisement

Crime News: ಪುತ್ರಿ ತಂಟೆಗೆ ಬರಬೇಡ ಎಂದು ಬುದ್ಧಿ ಹೇಳಿದ ತಂದೆ ಕೊಲೆ

10:59 AM Sep 04, 2023 | Team Udayavani |

ಬೆಂಗಳೂರು: ಪ್ರೀತಿಸುವಂತೆ ಪುತ್ರಿಯನ್ನು ಪೀಡಿಸುತ್ತಿದ್ದ ಯುವಕನ ಮನೆಗೆ ಹೋಗಿ ಬುದ್ದಿವಾದ ಹೇಳಿದ ತಂದೆಯನ್ನು ಚಾಕುವಿನಿಂದ ಇರಿದು ಕೊಲೆಗೈದಿರುವ ಘಟನೆ ಅಶೋಕನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಅಶೋಕನಗರದ ನಂಜಪ್ಪ ವೃತ್ತ ಸಮೀಪ ನಿವಾಸಿ ಅನ್ವರ್‌ (42) ಕೊಲೆಯಾದವರು. ಕೃತ್ಯ ಎಸಗಿದ ಜಾಹಿದ್‌ (22) ಎಂಬಾತನನ್ನು ಬಂಧಿಸಲಾಗಿದೆ.

ಅನ್ವರ್‌ ಗೂಡ್ಸ್‌ ಆಟೋ ಚಾಲಕರಾಗಿದ್ದು, ನಂಜಪ್ಪ ವೃತ್ತ ಸಮೀಪದ ಮನೆಯಲ್ಲಿ ಕುಟುಂಬ ಸಮೇತ ವಾಸವಾಗಿದ್ದರು. ಅನ್ವರ್‌ಗೆ 15 ವರ್ಷದ ಪುತ್ರಿಯಿದ್ದು, ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಮಧ್ಯೆ ಎಲೆಕ್ಟ್ರಿಕಲ್‌ ಗೋಡೌನ್‌ನಲ್ಲಿ ಕೆಲಸ ಮಾಡುವ ಆರೋಪಿ ಜಾಹಿದ್‌, ಅನ್ವರ್‌ ಅವರ ಅಪ್ರಾಪ್ತ ಪುತ್ರಿಯ ಹಿಂದೆ ಬಿದ್ದಿದ್ದು, ನಿತ್ಯ ಆಕೆಯನ್ನು ಹಿಂಬಾಲಿಸಿ ಪ್ರೀತಿಸುವಂತೆ ಪೀಡಿಸುತ್ತಿದ್ದ. ಅದರಿಂದ ಬೇಸತ್ತ ಬಾಲಕಿ, ಈ ವಿಚಾರವನ್ನು ತಂದೆಗೆ ತಿಳಿಸಿದ್ದಳು.

ಕಳೆದ ಮೂರು ತಿಂಗಳ ಹಿಂದೆ ಅನ್ವರ್‌, ಜಾಹಿದ್‌ಗೆ ಬುದ್ದಿವಾದ ಹೇಳಿದ್ದರು. ,ಆರೋಪಿ, ಅಪ್ರಾಪ್ತೆಗೆ ಕಿರುಕುಳ ನೀಡುತ್ತಿದ್ದ. ಶನಿವಾರ ಸಂಜೆ ಕೂಡ ಜಾಹಿದ್‌, ಬಾಲಕಿಯನ್ನು ಹಿಂಬಾಲಿಸಿ ಪ್ರೀತಿಸುವಂತೆ ಪೀಡಿಸಿದ್ದಾನೆ. ಅದರಿಂದ ಆಕ್ರೋಶಗೊಂಡ ಅನ್ವರ್‌, ಶನಿವಾರ ಸಂಜೆ ಆತನ ಮನೆಗೆ ತೆರಳಿ ಜಾಹಿದ್‌ ಪೋಷಕರಿಗೆ ತಿಳಿಸಿ, ಮತ್ತೂಮ್ಮೆ ಪುತ್ರಿಗೆ ತೊಂದರೆ ಕೊಡದಂತೆ ತಮ್ಮ ಪುತ್ರನಿಗೆ ಎಚ್ಚರಿಕೆ ನೀಡುವಂತೆ ಮನವಿ ಮಾಡುತ್ತಿದ್ದರು. ಅದೇ ವೇಳೆ ಸ್ಥಳದಲ್ಲಿದ್ದ ಆರೋಪಿ, ಚಾಕು ತಂದು ಅನ್ವರ್‌ ಕುತ್ತಿಗೆಗೆ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ಕೆಳಗೆ ಬಿದ್ದ ಅನ್ವರ್‌ನನ್ನು ಕೂಡಲೇ ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಚಿಕಿತ್ಸೆ ಫ‌ಲಕಾರಿಯಾಗದೆ ಅನ್ವರ್‌ ಮೃತಪಟ್ಟಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next