Advertisement

ಸದಸ್ಯರ ಪ್ರಶ್ನೆಗೆ ಕಣ್ಣೀರಿಟ್ಟ ಅಬಕಾರಿ ಅಧಿಕಾರಿ

10:29 PM Jan 02, 2020 | mahesh |

ಬೆಳ್ತಂಗಡಿ: ತಾ|ನಲ್ಲಿ ಎಗ್ಗಿಲ್ಲದೆ ಮದ್ಯ ಅಕ್ರಮ ಮಾರಾಟ ನಡೆಯುತ್ತಿದ್ದು, ತಡೆಯುವಲ್ಲಿ ಅಬಕಾರಿ ಇಲಾಖೆ ನಿರ್ಲಕ್ಷ್ಯ ವಹಿಸುತ್ತಿದೆ ಎಂಬ ಆರೋಪ ಗುರುವಾರ ಸಾಮಾನ್ಯ ಸಭೆಯಲ್ಲಿ ವ್ಯಕ್ತವಾದ ಹಿನ್ನೆಲೆ ಅಬಕಾರಿ ಅಧಿಕಾರಿ ಕಣ್ಣೀರಿಟ್ಟು ಸಭೆಯಿಂದ ಹೊರ ನಡೆದರು.

Advertisement

ತಾ.ಪಂ ಸಭಾಂಗಣದಲ್ಲಿ ಗುರು ವಾರ ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆ ಯಲ್ಲಿ ಈ ಘಟನೆ ಸಂಭವಿಸಿತು. ಬಂದಾರು-ಮೈರೋಳ್ತಡ್ಕದಲ್ಲಿ ಮದ್ಯ ಅಕ್ರಮ ಮಾರಾಟ ನಡೆಯುತ್ತಿರುವ ವಿಚಾರ ಪ್ರತಿಬಾರಿ ಸಭೆಯಲ್ಲಿ ಪ್ರಸ್ತಾವ ಗೊಂಡಿದೆ. ಈ ವರೆಗೆ ಕ್ರಮ ಕೈಗೊಂಡಿಲ್ಲ. ಇಲಾಖೆ ಮಾಮೂಲಿ ಪಡೆಯುತ್ತಿದೆಯೋ ಎಂಬ ಸಂಶಯ ವ್ಯಕ್ತವಾಗಿದೆ ಎಂದು ತಾ.ಪಂ. ಸದಸ್ಯ ಕೃಷ್ಣಯ್ಯ ಆಚಾರ್‌ ಆರೋಪಿಸಿದರು. ಇದಕ್ಕೆ ಅಬಕಾರಿ ನಿರೀಕ್ಷಕಿ ಸೌಮ್ಯಲತಾ ಪ್ರತಿಕ್ರಿಯಿಸಿ, ನಿಮ್ಮ ಆರೋಪ ಸುಳ್ಳು ಎಂದು ಏರುಧ್ವನಿಯಲ್ಲಿ ಉತ್ತರಿಸಿದರು. ಮದ್ಯ ಅಕ್ರಮ ಮಾರಾಟ ತಡೆಯಿರಿ ಎಂದರೆ ನಮ್ಮನ್ನೇ ಗದರಿಸುವುದಾದರೆ ಇಲಾಖೆ ಯಾಕೆ ಎಂದು ಅಬಕಾರಿ ನಿರೀ ಕ್ಷಕಿಯನ್ನು ಸದಸ್ಯರು ತರಾಟೆಗೆ ತೆಗೆದು ಕೊಂಡರಲ್ಲದೆ, ದಬ್ಟಾಳಿಕೆ ವರ್ತನೆಗೆ ಸದಸ್ಯರು ಆಕ್ರೋಶಗೊಂಡು, ಮಾತಿನ ಚಕಮಕಿ ನಡೆಯಿತು.

ಖಂಡನ ನಿರ್ಣಯಕ್ಕೆ ಆಗ್ರಹ
ಅಷ್ಟರಲ್ಲಾಗಲ್ಲೇ ಅಬಕಾರಿ ನಿರೀಕ್ಷಕಿ ಅಳುತ್ತಾ ಹೊರನಡೆದರು. ಅಧ್ಯಕ್ಷರ ಅನುಮತಿಯಿಲ್ಲದೆ ಸಭೆಯಿಂದ ಹೊರ ನಡೆದ ಬಗ್ಗೆ ಸದಸ್ಯರು ಆಕೋಶ ವ್ಯಕ್ತ ಪಡಿಸಿ ಜನಪ್ರತಿನಿಧಿಗಳ ವಿರುದ್ಧವೇ ಅಧಿಕಾರಿಗಳು ಈ ರೀತಿ ವರ್ತಿಸಿದರೆ ಜನ ಸಾಮಾನ್ಯರ ಪಾಡೇನು ಎಂದು ಪ್ರಶ್ನಿಸಿ ಖಂಡನ ನಿರ್ಣಯ ಕೈಗೊಳ್ಳಲು ಆಗ್ರಹಿಸಿ ದರು. ಇಷ್ಟರಲ್ಲಿ ಅಬಕಾರಿ ನಿರೀಕ್ಷಕಿ ಸಭೆಗೆ ಮತ್ತೆ ಹಾಜರಾದರು. ಮಧ್ಯ ಪ್ರವೇಶಿಸಿದ ತಾ.ಪಂ. ಇ.ಒ. ಕೆ.ಇ. ಜಯರಾಮ್‌ ಹಾಗೂ ಅಧ್ಯಕ್ಷೆ ದಿವ್ಯಜ್ಯೋತಿ, ಅಭಿವೃದ್ಧಿ ವಿಷಯದಲ್ಲಾ ಗುವ ಚರ್ಚೆಗಳಿಗೆ ಸಮರ್ಪಕ ಉತ್ತರ ನೀಡುವ ಇಚ್ಛಾಶಕ್ತಿ ಇಲ್ಲದೇ ಹೋದಲ್ಲಿ ಸಭೆಯಿಂದ ಹೊರ ನಡೆಯ ಬಹುದು ಎಂದು ತಿಳಿಸಿದರು.

ವಿದ್ಯುತ್‌, ಬಸ್‌ ಸೌಕರ್ಯಕ್ಕೆ ಆಗ್ರಹ
ಅರಣ್ಯ ಭಾಗದಲ್ಲಿ ವಾಸಿಸುವ ಕುಟುಂ ಬಗಳಿಗೆ ವಿದ್ಯುತ್‌ ಸಂಪರ್ಕ/ಸೋಲಾರ್‌ ನೀಡಬೇಕೆಂಬ ಆಗ್ರಹ ಕೇಳಿಬಂತು. ಕಲ್ಲೇರಿ, ಬಾಜಾರು, ಉಪ್ಪಿನಂಗಡಿಗೆ ಹೋಗುವ ಶಾಲಾ ಮಕ್ಕಳ ಹಿತದೃಷ್ಟಿಯಿಂದ ಸಮಯಕ್ಕೆ ಸರಿಯಾಗಿ ಕೆಎಸ್‌ಆರ್‌ಟಿಸಿ ಬಸ್‌ ಓಡಿಸುವಂತೆ ಸಭೆಯಲ್ಲಿ ನಿರ್ಣಯ ಕೈಗೊಂಡು ತಾ.ಪಂ. 3 ಪತ್ರ ಬರೆದರೂ ಪಾಲನ ವರದಿ ಕೊಡ ದಿರುವ ಬಗ್ಗೆ ಅಧ್ಯಕ್ಷರು ಕೆ.ಎಸ್‌.ಆರ್‌.ಟಿ.ಸಿ ಅಧಿಕಾರಿಗಳ ವಿರುದ್ಧ ಅಸ ಮಾಧಾನ ವ್ಯಕ್ತಪಡಿಸಿದರು. ಮೇಲಧಿ ಕಾರಿಗಳಿಗೆ ಕ್ರಮಕ್ಕೆ ಪತ್ರ ಬರೆಯಲಾಗು ವುದು ಎಂದು ತಿಳಿಸಿದರು.

ಪಡಿತರ ದಂಡ ವಾಪಸಾತಿಗೆ ಒತ್ತಡ
ಸರಕಾರದ ಆದೇಶದಂತೆ ಬಿ.ಪಿ.ಎಲ್‌. ಕಾರ್ಡ್‌ಗಳನ್ನು ರದ್ದು ಮಾಡಲಾಗುತ್ತಿದ್ದು, ದುಬಾರಿ ದಂಡ ವಿಧಿಸಲಾಗಿದೆ. ಇದೀಗ ದಂಡ ವಿಧಿಸುವುದನ್ನು ಸಡಿಲಿಕೆ ಮಾಡಿದ್ದು, ಈಗಾಗಲೇ ದಂಡ ಕಟ್ಟಿದವರಿಗೆ ಮರು ಪಾವತಿ ಮಾಡುವಂತೆ ಸದಸ್ಯರು ಆಗ್ರಹಿಸಿದರು.

Advertisement

ಕೊಕ್ಕಡ ಪೇಟೆಯಲ್ಲಿ ರಸ್ತೆಗೆ ತಾಗಿ ಕೊಂಡೇ ಅನಧಿಕೃತ ಅಂಗಡಿ ಇದ್ದು, ಇದನ್ನು ರಸ್ತೆಯ ಅಂತರದಿಂದ 2 ಮೀ. ದೂರ ಸರಿಸುವಂತೆ ಪಿಡಬ್ಲ್ಯುಡಿ ಕ್ರಮ ಕೈಗೊಳ್ಳಬೇಕೆಂದು ಸದಸ್ಯ ಲಕ್ಷ್ಮೀನಾರಾಯಣ ಆಗ್ರಹಿಸಿದರು.

ಸಭೆಯಲ್ಲಿ ತಾ.ಪಂ. ಉಪಾಧ್ಯಕ್ಷೆ ವೇದಾವತಿ, ಸ್ಥಾಯೀ ಸಮಿತಿ ಅಧ್ಯಕ್ಷ ಶಶಿಧರ ಎಂ. ಕಲ್ಮಂಜ, ಉಪಸ್ಥಿತರಿದ್ದರು. ಇತ್ತೀಚೆಗೆ ನಿಧನ ಹೊಂದಿದ ಪೇಜಾವರ ಶ್ರೀಗಳಿಗೆ ಸಂತಾಪ ಸೂಚಿಸಲಾಯಿತು. ತಾ.ಪಂ. ಮ್ಯಾನೇಜರ್‌ ಸುವರ್ಣ ಹೆಗ್ಡೆ ಸಹಕರಿಸಿದರು. ಸಹಾಯಕ ಲೆಕ್ಕಾಧಿಕಾರಿ ಗಣೇಶ್‌, ತಾ.ಪಂ. ಸಂಯೋಜಕ ಜಯಾನಂದ ನಿರೂಪಿಸಿದರು.

ಅನಾರು: 37 ಮನೆಗಳು ಅತಂತ್ರ
ಚಾರ್ಮಾಡಿ ಅನಾರು ಪ್ರದೇಶದಲ್ಲಿ ಪ್ರವಾಹದಿಂದ ಸೇತುವೆ ಕುಸಿದು 37 ಮನೆಗಳು ಅತಂತ್ರವಾಗಿವೆ. ತಾತ್ಕಾಲಿಕ ಕ್ರಮ ಕೈಗೊಂಡಿಲ್ಲ. ಕೃಷಿ ಹಾನಿ ಯಾಗಿದ್ದು, ಮರಳು ತೆರವು ಗೊಳಿಸಬೇಕು. ತೋಟಗಾರಿಕ ಇಲಾಖಾ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಪ.ಜಾ., ಪ.ಪಂ. ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂದು ತಾ.ಪಂ. ಸದಸ್ಯ ಕೊರಗಪ್ಪ ಗೌಡ ಆಗ್ರಹಿಸಿದರು. ತೋಟಗಾರಿಕ ನಿರ್ದೇಶಕ ಶಿವಪ್ರಸಾದ್‌ ಉತ್ತರಿಸಿ, 936 ಅರ್ಜಿಗಳನ್ನು ಪರಿಶೀಲಿಸಿ ಪರಿಹಾರಕ್ಕಾಗಿ ಕಂದಾಯ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದರು.

ಪ್ರೇತದ ಮರಕ್ಕೆ ಮುಕ್ತಿ !
ಶಿರ್ಲಾಲು ರಸ್ತೆ ಬದಿಯಲ್ಲಿರುವ ಅಪಾಯಕಾರಿ ಮರ ತೆರವಿಗೆ ತಾ.ಪಂ. ಸಭೆಯಲ್ಲಿ ಅನೇಕ ಬಾರಿ ನಿರ್ಣಯವಾದರೂ ಕ್ರಮ ಕೈಗೊಂಡಿಲ್ಲ ಎಂದು ತಾ.ಪಂ. ಸದಸ್ಯೆ ಜಯಶೀಲಾ ಆರೋಪಿಸಿದರು. ಅರಣ್ಯಅಧಿಕಾರಿ ಪ್ರಶಾಂತ್‌ ಪ್ರತಿಕ್ರಿಯಿಸಿ, ಪ್ರೇತ ಬಾಧೆ ಇದೆ ಎಂದು ನಂಬಿ ಯಾರೂ ಮರ ಕಡಿಯಲು ಮುಂದೆ ಬರುತ್ತಿಲ್ಲ. ತೆರವಿಗೂ ವೆಚ್ಚ ತಗಲಲಿದೆ ಎಂದರು. ಅರಣ್ಯ ಇಲಾಖೆಯಿಂದ ಅನುಮತಿ ಕೊಡಿ ಪಂ.ನಿಂದ ತೆರವುಗೊಳಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಇ.ಒ. ತಿಳಿಸಿದರು. ಅರಣ್ಯ ಇಲಾಖೆಯಿಂದ ಅನುಮತಿ ಕೊಡುವ ಬಗ್ಗೆ ಅಧಿಕಾರಿಗಳು ಭರವಸೆ ನೀಡಿದ್ದರಿಂದ ಮರದ ಪ್ರಸ್ತಾವ ಸುಖಾಂತ್ಯಗೊಳಿಸಲಾಯಿತು.

ರಾಜ್ಯಮಟ್ಟದಲ್ಲಿ ತನಿಖೆ
ಬೆಳ್ತಂಗಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅವ್ಯವಹಾರ ನಡೆದ ವಿಚಾರವಾಗಿ ಕ್ರಮ ಕೈಗೊಳ್ಳದಿರುವ ಬಗ್ಗೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಪ್ರಕರಣ ರಾಜ್ಯಮಟ್ಟದಲ್ಲಿ ತನಿಖೆ ನಡೆಸುವ ಕುರಿತು ಪತ್ರ ಬರೆಯಲಾಗಿದೆ ಎಂದು ಇಒ ಜಯರಾಮ್‌ ಸಭೆಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next